Advertisement

ನಿರ್ದೇಶನಕ್ಕಿಳಿದ ಟೆನ್ನಿಸ್‌ ಕೃಷ್ಣ

05:47 PM Sep 24, 2017 | |

“ನಮಸ್ಕಾರ ಕಣಣ್ಣೋ…’
– ಸಾಮಾನ್ಯವಾಗಿ ಈ ಡೈಲಾಗ್‌ ಕೇಳದವರೇ ಇಲ್ಲ. ಅದರಲ್ಲೂ ಈ ಡೈಲಾಗ್‌ ಹೊರಬರುತ್ತಿದ್ದಂತೆಯೇ, ಕಣ್ಣ ಮುಂದೆ ಕಾಣಿಸೋದು ಹಾಸ್ಯ ಕಲಾವಿದ ಟೆನ್ನಿಸ್‌ ಕೃಷ್ಣ. ಹೌದು, ಟೈಗರ್‌ ಪ್ರಭಾಕರ್‌ ಅಭಿನಯದ “ತ್ರಿನೇತ್ರ’ ಸಿನಿಮಾದಲ್ಲಿ ಟೆನ್ನಿಸ್‌ ಕೃಷ್ಣ ಮಾಡಿದ ಪಾತ್ರ ಮತ್ತು ಅವರು ಹರಿಬಿಟ್ಟ ಡೈಲಾಗ್‌ ಸೂಪರ್‌ ಹಿಟ್‌ ಆಗಿತ್ತು. “ನಮಸ್ಕಾರ ಕಣಣ್ಣೋ …’ ಎಂದು ಹೇಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಬ್ಬ ಹಾಸ್ಯ ಕಲಾವಿದರಾಗಿ ಗಟ್ಟಿ ನೆಲೆಕಂಡುಕೊಂಡವರು ಟೆನ್ನಿಸ್‌ ಕೃಷ್ಣ. ಅದಷ್ಟೇ ಅಲ್ಲ, ಹಾಸ್ಯ ನಟ ಟೆನ್ನಿಸ್‌ ಕೃಷ್ಣ ಅಂದಾಕ್ಷಣ, “ಮತ್ತೆ ಮತ್ತೆ’ ನೆನಪಿಗೆ ಬರೋದೇ, “ನಂಜಪ್ಪನ ಮಗ ಗುಂಜಪ್ಪ’ ಎಂಬ ಡೈಲಾಗ್‌. ಇಷ್ಟಕ್ಕೂ ಟೆನ್ನಿಸ್‌ ಕೃಷ್ಣ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಅಂತೀರಾ? ವಿಷಯ ಇರೋದೇ ಇಲ್ಲಿ. ಸುಮಾರು ಮೂರು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿರುವ ಟೆನ್ನಿಸ್‌ಕೃಷ್ಣ ಈವರೆಗೆ ಸುಮಾರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟು ವರ್ಷದ ಅನುಭವದ ಮೇಲೆ ಅವರೀಗ ಒಂದು ಸಿನಿಮಾ ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ಹೌದು, ಟೆನ್ನಿಸ್‌ ಕೃಷ್ಣ ಈಗ ನಿರ್ದೇಶಕರಾಗುತ್ತಿದ್ದಾರೆ. ಆ ಸಿನಿಮಾಗೆ “ಮತ್ತೆ ಮತ್ತೆ’ ಎಂಬ ಹೆಸರಿಟ್ಟಿದ್ದಾರೆ.

Advertisement

ತಮ್ಮ ವೃತ್ತಿ ಜೀವನದದಲ್ಲಿ ಇದುವರೆಗೆ ನಟಿಸಿರುವ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ, ಹಾಸ್ಯ ಕಲಾವಿದೆ ರೇಖಾ ದಾಸ್‌ ಅವರೊಂದಿಗೆ ನೂರು ಚಿತ್ರಗಳಲ್ಲಿ ಪರದೆ ಹಂಚಿಕೊಂಡಿರುವ ಟೆನ್ನಿಸ್‌ ಕೃಷ್ಣ ಅವರು ಈ ಬಣ್ಣದ ಲೋಕಕ್ಕೆ ಬಂದಿದ್ದೇ ನಿರ್ದೇಶಕರಾಗಬೇಕು ಅಂತ. ಆದರೆ, ಅವರಿಗೆ ಸಿಕ್ಕಿದ್ದು ನಟಿಸೋ ಅವಕಾಶ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಟೆನ್ನಿಸ್‌ ಕೃಷ್ಣ ಈಗ ನಿರ್ದೇಶಕರಾಗುತ್ತಿದ್ದಾರೆ.

ನಿರ್ದೇಶನ ಎಂಬುದು ಅವರ ಬಹಳ ವರ್ಷಗಳ ಕನಸು. ಮೊದಲು ಅವರು ಕೆಲಸ ಮಾಡುತ್ತಿದ್ದದ್ದೇ ನಿರ್ದೇಶನ ವಿಭಾಗದಲ್ಲಿ. ಆರ್‌.ಎನ್‌ ಜಯಗೋಪಾಲ್‌ ನಿರ್ದೇಶನದ “ಹೃದಯ ಪಲ್ಲವಿ’ ಸಿನಿಮಾದಲ್ಲಿ ಟೆನ್ನಿಸ್‌ ಕೃಷ್ಣ ಸಹ ನಿರ್ದೇಶಕರಾಗಿ ದುಡಿದಿದ್ದಾರೆ. ಆ ಚಿತ್ರದಲ್ಲಿ ಶ್ರೀನಾಥ್‌, ಚರಣ್‌ರಾಜ್‌, ಗೀತಾ, ಸುದರ್ಶನ್‌ ನಟಿಸಿದ್ದರು.  ವೇಮಗಲ್‌ ಜಗನ್ನಾಥ್‌ ನಿರ್ದೇಶನದ “ತುಳಸಿದಳ’ ಹಾಗೂ ಸುನೀಲ್‌ಕುಮಾರ್‌ ದೇಸಾಯಿ ಅವರ “ತರ್ಕ’ ಚಿತ್ರದಲ್ಲೂ ಸಹ ನಿರ್ದೇಶನ ಕೆಲಸ ಮಾಡಿದ್ದರು. ಆಗಿನಿಂದಲೂ ನಿರ್ದೇಶನ ಮಾಡುವ ಆಸೆ ಇತ್ತಾದರೂ, ಅವರು ಸೆಟ್‌ನಲ್ಲಿ ಮಾಡುತ್ತಿದ್ದ ಕಾಮಿಡಿ, ಎಲ್ಲರಿಗೂ ಇಷ್ಟವಾಗುತ್ತಿತ್ತು. ನಿರ್ದೇಶಕರು ಒಂದೊಂದು ಪಾತ್ರ ಕೊಟ್ಟು ಮಾಡಿಸುತ್ತಿದ್ದರು. ಅದೇ ಅವರ ಬದುಕಿಗೆ ಆಸರೆಯಾಯ್ತು. ರಂಗಭೂಮಿ, ಬೀದಿನಾಟಕ, ವೇದಿಕೆ ನಾಟಕಗಳನ್ನು ಮಾಡುತ್ತಲೇ ನೂರಾರು ಚಿತ್ರಗಳಲಿ ನಟಿಸಿ ಸೈ ಎನಿಸಿಕೊಂಡ ಟೆನ್ನಿಸ್‌ ಕೃಷ್ಣ ಇದೀಗ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.

Advertisement

ನೈರುತ್ಯ ಆರ್ಟ್‌ ಮೀಡಿಯಾ ಬ್ಯಾನರ್‌ನಲ್ಲಿ “ಮತ್ತೆ ಮತ್ತೆ’ ಎಂಬ ಚಿತ್ರ ತಯಾರಾಗುತ್ತಿದೆ. ಈ ಚಿತ್ರಕ್ಕೆ ಡಾ. ಅರುಣ್‌ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಹೊಸ ಪ್ರತಿಭೆಗಳಿಗೆ ಇಲ್ಲಿ ಅವಕಾಶ ಕೊಡುತ್ತಿರುವ ಟೆನ್ನಿಸ್‌, ಅವರ ಸಮಕಾಲೀನದ ಕಲಾವಿದರು ಯಾರು ಸಂಕಷ್ಟದಲ್ಲಿದ್ದಾರೋ, ಅವರನ್ನು ಗುರುತಿಸಿ, ಈ ಚಿತ್ರದಿಂದ ಬರುವಂತಹ ಲಾಭದ ಶೇ.20 ರಷ್ಟು ಸಹಾಯ ಮಾಡುವ ಉದ್ದೇಶವೂ ಅವರಿಗಿದೆ. ಅಷ್ಟೇ ಅಲ್ಲ, ಹಿರಿಯ ಕಲಾವಿದರಿಗೂ ಇಲ್ಲಿ ಅವಕಾಶ ಕೊಡುತ್ತಿದ್ದಾರೆ.

ಬೆಂಗಳೂರು, ತೀರ್ಥಹಳ್ಳಿ ಸೇರಿದಂತೆ ಬಹುತೇಕ ಮಲೆನಾಡ ಸುತ್ತಮುತ್ತಲಿನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದಾರೆ. ಇಮಿಯಾಜ್‌ ಚಿತ್ರದ ಐದು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಮುಂಬೈನ ಛಾಯಾಗ್ರಾಹಕರೊಬ್ಬರು ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ. ಇದೊಂದು ಸಸ್ಪೆನ್ಸ್‌ ಕಾಮಿಡಿ ಸಿನಿಮಾ ಆಗಿದ್ದು, ಶ್ರಾವಣದಲ್ಲಿ ಸೆಟ್ಟೇರಲಿದೆ.
 

Advertisement

Udayavani is now on Telegram. Click here to join our channel and stay updated with the latest news.

Next