ಕಾಸರಗೋಡು: ತೋಟಗಾರಿಕಾ ನಿಗಮದ ಗೇರು ತೋಟಗಳಿಗೆ ಹೆಲಿಕಾಪ್ಟರ್ನಲ್ಲಿ ಮಾರಕ ಕೀಟನಾಶಕ ಎಂಡೋಸಲ್ಫಾನ್ ಸಿಂಪಡಣೆಯ ದುಷ್ಪರಿಣಾಮದಿಂದ ಕಾಸರಗೋಡು ಜಿಲ್ಲೆಯ 11 ಗ್ರಾಮ ಪಂಚಾಯತ್ಗಳಲ್ಲಿ ನೂರಾರು ಮಂದಿ ಸಾವಿಗೀಡಾಗಿ, ಸಾವಿರಾರು ಮಂದಿ ವಿವಿಧ ಮಾರಕ ರೋಗಗಳಿಗೆ ತುತ್ತಾಗಿ ನರಕ ಯಾತನೆ ಅನುಭವಿಸುವಂತಾದ ದುರಂತ ಸ್ಮಾರಕವಾಗಿ ನಿರ್ಮಾಣಗೊಳ್ಳುತ್ತಿರುವ ಎಂಡೋ ಶಿಲ್ಪ ಹತ್ತು ವರ್ಷಗಳೇ ಸಂದರೂ ಇನ್ನೂ ಪೂರ್ಣಗೊಂಡಿಲ್ಲ.
ಕಾಸರಗೋಡು ಜಿಲ್ಲಾ ಪಂಚಾಯತ್ ಕಾರ್ಯಾಲಯದ ಮುಂಭಾಗದಲ್ಲಿ ನಿರ್ಮಾಣ ಉದ್ದೇಶಿಸಿದ ತಾಯಿ-ಮಗು ಮತ್ತು ಸ್ವಾತಂತ್ರÂ ಹೋರಾಟ ಬಿಂಬಿಸುವ ಶಿಲ್ಪ ನಿರ್ಮಾಣ ಅರ್ಧದಲ್ಲೇ ಸ್ಥಗಿತಗೊಂಡು 10 ವರ್ಷಗಳೇ ಸಂದವು. ಈಗಾಗಲೇ 17 ಲಕ್ಷ ರೂ. ವೆಚ್ಚ ಮಾಡಿದ್ದರೂ ಎಂಡೋ ಶಿಲ್ಪ ಇನ್ನೂ ಪೂರ್ಣಗೊಂಡಿಲ್ಲ. ಖ್ಯಾತ ಶಿಲ್ಪಿ ಕಾಸರಗೋಡಿನ ಕಾನಾಯಿ ಕುಂಞಿರಾಮನ್ ಅವರ ನೇತೃತ್ವದಲ್ಲಿ ಶಿಲ್ಪ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರೂ, ಅರ್ಧದಲ್ಲೇ ನಿರ್ಮಾಣ ಮೊಟಕುಗೊಂಡಿತ್ತು.
ಶಿಲ್ಪ ನಿರ್ಮಾಣ ಕೆಲಸ ಅರ್ಧದಲ್ಲಿ ಮೊಟಕು ಗೊಂಡು ಹತ್ತು ವರ್ಷಗಳು ಕಳೆದವು.2005-2009 ರ ಅವಧಿಯಲ್ಲಿ ಸಿಪಿಎಂನ ಎಂ.ವಿ.ಬಾಲಕೃಷ್ಣನ್ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ, ಎಂಡೋ ಸಂತ್ರಸ್ತರ ಸಮಸ್ಯೆ, ದುರಂತ ಇತ್ಯಾದಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಶಿಲ್ಪ ನಿರ್ಮಿಸುವ ಯೋಜನೆ ಸಿದ್ಧಪಡಿಸಲಾಗಿತ್ತು. ಈ ಯೋಜನೆಗೆ 20 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿತ್ತು. ಈಗಾಗಲೇ ಶಿಲ್ಪ ನಿರ್ಮಾಣಕ್ಕೆ 17 ಲಕ್ಷ ರೂ. ವೆಚ್ಚವಾಗಿದೆ. ಶಿಲ್ಪ ನಿರ್ಮಾಣ ಕೆಲಸ ಆರಂಭಗೊಂಡ ಬಳಿಕ ಮಂಜೂರುಗೊಳಿಸಿದ ಹಣ ಸಾಲದು ಎಂಬ ಕಾರಣ ನೀಡಿ ನಿರ್ಮಾಣ ಕೆಲಸ ಅರ್ಧದಲ್ಲೇ ಮೊಟಕುಗೊಂಡಿತ್ತು.
2006ರ ಸೆಪ್ಟಂಬರ್ 1ರಂದು ಈ ಯೋಜನೆಗೆ ಡಿ.ಪಿ.ಸಿ. ಅಂಗೀಕಾರ ನೀಡಿತ್ತು. ನಿರ್ಮಾಣ ಕೆಲಸವನ್ನು ಕಾನಾಯಿ ಕುಂಞಿರಾಮನ್ ಅವರಿಗೆ ನೀಡಲಾಗಿತ್ತು. ಅಂದು ಆಡಳಿತ ಪಕ್ಷದಲ್ಲಿದ್ದ ಐ.ಎನ್.ಎಲ್. ನ ವಿಭಾಗವೊಂದು ಇಂಡಿಯನ್ ಮುಸ್ಲಿಂ ಲೀಗ್ನಲ್ಲಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಬಹುಮತ ನಷ್ಟವಾದುದರಿಂದ ಅಂದಿನ ಆಡಳಿತ ಸಮಿತಿ ರಾಜೀನಾಮೆ ನೀಡಿತ್ತು. ಶಿಲ್ಪ ನಿರ್ಮಾಣವೂ ಮೊಟಕುಗೊಂಡಿತ್ತು. ಕೆಲವೇ ತಿಂಗಳು ಮುಸ್ಲಿಂ ಲೀಗ್ನ ಪಿ.ಬಿ.ಅಬ್ದುಲ್ ರಝಾಕ್ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದರೂ ಶಿಲ್ಪ ನಿರ್ಮಾಣ ಪ್ರಕ್ರಿಯೆ ನಡೆದಿರಲಿಲ್ಲ.
2010ರಲ್ಲಿ ಸಿಪಿಎಂನ ನ್ಯಾಯವಾದಿ ಪಿ. ಶ್ಯಾಮಲಾದೇವಿ ಜಿ. ಪಂ.ಅಧ್ಯಕ್ಷರಾದರೂ ಶಿಲ್ಪ ನಿರ್ಮಾಣ ಕಾರ್ಯಕ್ಕೆ ಮುಂದಾಗಲಿಲ್ಲ. ಶಿಲ್ಪ ನಿರ್ಮಾಣ ಆರಂಭಿಸಿದ ಬಳಿಕ ನಾಲ್ಕನೇ ಆಡಳಿತ ಸಮಿತಿ ಜಿಲ್ಲಾ ಪಂಚಾಯತ್ನಲ್ಲಿದೆ. 2009 ರಲ್ಲಿ ನಿಲುಗಡೆಗೊಂಡ ಶಿಲ್ಪ ನಿರ್ಮಾಣ ಕೆಲಸ 10 ವರ್ಷಗಳ ಬಳಿಕ 2019 ರಲ್ಲಿ ನಿರ್ಮಾಣವನ್ನು ಪೂರ್ತಿಗೊಳಿಸುವ ಬಗ್ಗೆ ಕೇಳಿ ಬರುತ್ತಿದೆ.
ಶಿಲ್ಪ ಅಗತ್ಯವಿತ್ತೆ ?
ಎಂಡೋ ದುರಂತದ ಹಿನ್ನೆಲೆಯಲ್ಲಿ ಸ್ಮಾರಕವಾಗಿ ನಿರ್ಮಾಣಗೊಳ್ಳಲಿರುವ ಶಿಲ್ಪ ಅಗತ್ಯವಿದೆಯೇ ? ಎಂಬ ಪ್ರಶ್ನೆ ಆರಂಭದ ದಿನಗಳಲ್ಲಿ ಸಾರ್ವತ್ರಿಕವಾಗಿ ಕೇಳಿ ಬಂದಿತ್ತು. ಎಂಡೋಸಲ್ಫಾನ್ ಕೀಟನಾಶಕ ಸಿಂಪಡಣೆ ಯಿಂದಾಗಿ ನೂರಾರು ಮಂದಿ ಸಾವಿ ಗೀಡಾಗಿ ಸಾವಿರಾರು ಮಂದಿ ವಿವಿಧ ರೋಗಗಳಿಂದ ನರಕ ಯಾತನೆ ಅನುಭವಿಸುತ್ತಿರುವಾಗ ಶಿಲ್ಪ ನಿರ್ಮಾಣಕ್ಕೆ ಅಗತ್ಯವಿರುವ ಹಣವನ್ನು ಎಂಡೋ ಸಂತ್ರಸ್ತರಿಗಾಗಿ ಬಳಸಬಹುದಿತ್ತು. ಲಕ್ಷಾಂತರ ರೂಪಾಯಿ ಶಿಲ್ಪಕ್ಕಾಗಿ ವೆಚ್ಚ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬುದು ಸಾರ್ವತ್ರಿಕ ಅಭಿಪ್ರಾಯ.
ಶೀಘ್ರ ಆರಂಭ
ಇದೀಗ ಮಲಂಬುಳದಲ್ಲಿ ಶಿಲ್ಪ ನಿರ್ಮಾಣದಲ್ಲಿದ್ದೇನೆ. ಈ ಶಿಲ್ಪ ಎರಡು ವಾರಗಳೊಳಗೆ ಪೂರ್ತಿಗೊಳ್ಳಲಿದೆ. ಆ ಬಳಿಕ ಕಾಸರಗೋಡಿನಲ್ಲಿ ಅರ್ಧದಲ್ಲೇ ಮೊಟಕುಗೊಂಡಿರುವ ಶಿಲ್ಪದ ಕೆಲಸವನ್ನು ಆರಂಭಿಸಲು ಉದ್ದೇಶಿಸಲಾಗಿದೆ.
– ಶಿಲ್ಪಿ ಕಾನಾಯಿ ಕುಂಞಿರಾಮನ್
ನೂರು ದಿನಗಳಲ್ಲಿ ಪೂರ್ಣ
ಎಂಡೋ ಶಿಲ್ಪ ನಿರ್ಮಾಣ ಕೆಲಸ ಫೆಬ್ರವರಿ ತಿಂಗಳಲ್ಲಿ ಪುನರಾರಂಭಿಸಲಾಗುವುದು. ಶಿಲ್ಪ ವನ್ನು ಪೂರ್ತಿಗೊಳಿಸುವ ಬಗ್ಗೆ ಕಾನಾಯಿ ಕುಂಞಿರಾಮನ್ ಅವ ರೊಂದಿಗೆ ಜ. 5ರಂದು ಚರ್ಚಿಸ ಲಾಗಿದೆ.ಫೆಬ್ರವರಿ ತಿಂಗಳಿಂದ ನಾಲ್ಕು ತಿಂಗಳಲ್ಲಿ ಅಂದರೆ ನೂರು ದಿನಗಳೊಳಗೆ ಶಿಲ್ಪ ನಿರ್ಮಾಣವನ್ನು ಪೂರ್ತಿಗೊಳಿಸಲಾಗುವುದು. ಇದಕ್ಕಾಗಿ 20 ಲ.ರೂ. ಕಾಾದಿರಿಸಲಾಗಿದೆ.
–
ಎ.ಜಿ.ಸಿ.ಬಶೀರ್
ಅಧ್ಯಕ್ಷರು, ಕಾಸರಗೋಡು ಜಿ.ಪಂ.