Advertisement

ಕೃಷಿಯಲ್ಲಿ ಖುಷಿ ಕಾಣುತ್ತಿರುವ ಟೆಕ್ಕಿ

07:12 PM Aug 28, 2020 | Suhan S |

ಕಲಬುರಗಿ: ಎಂಬಿಎ ಓದಿ ಸಾಫ್ಟ್‌ ವೇರ್‌ ಇಂಜಿನಿಯರ್‌ ಆಗಿ ತಿಂಗಳಿಗೆ ಲಕ್ಷಾಂತರ ರೂ. ಗಳಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಖುಷಿಯನ್ನೋದೆ ಮಯಾವಾಗಿತ್ತು. ಈಗ ಅದೇ ವ್ಯಕ್ತಿ ಕೈತುಂಬಾ ಹಣದೊಂದಿಗೆ ಖುಷಿ ಹಾಗೂ ನೆಮ್ಮದಿ ಕಾಣುತ್ತಿದ್ದಾರೆ. ಕೃಷಿ ಕೈಹಿಡಿದು ಖುಷಿಯಾಗಿ ಜೀವಿಸುತ್ತಿದ್ದಾರೆ.

Advertisement

ಬೆಂಗಳೂರು, ಪುಣೆ, ಅಮೆರಿಕಾ, ದುಬೈನಲ್ಲಿ ಕಳೆದ 13 ವರ್ಷಗಳಿಂದ ಸಾಫ್ಟ್‌ವೇರ್‌ ಇಂಜಿನಿಯರ್‌ ಕೆಲಸಮಾಡುತ್ತಿದ್ದ ಇಲ್ಲಿನ ಬಸವೇಶ್ವರ ನಗರದ ಸತೀಶಕುಮಾರ ಹುಡುಗಿ ಈಗ ಅಪ್ಪಟ ಕೃಷಿಕ. ಕಳೆದ ಎರಡು ವರ್ಷಗಳ ಹಿಂದೆ ದುಬೈನಿಂದ ಮರಳಿರುವ ಸತೀಶ ಸದ್ಯ ತಮ್ಮದೇ ಹೊಲದಲ್ಲಿ ಬೆವರು ಹರಿಸಿ ದುಡಿಯುತ್ತಿದ್ದಾರೆ. ಕಮಲಾಪುರ ತಾಲೂಕಿನ ಹೊಳಕುಂದಾ ಗ್ರಾಮದಲ್ಲಿ 12 ಎಕರೆ ಸ್ವಂತ ಹೊಲದಲ್ಲಿ ಕೃಷಿ ಮಾಡುತ್ತಿರುವ ಇವರು, ಎರಡು ವರ್ಷಗಳಲ್ಲಿ ತೊಗರಿ, ಈರುಳ್ಳಿ, ಕಲ್ಲಂಗಡಿ, ಮೆಕ್ಕೆಜೋಳ ಬೆಳೆದಿದ್ದಾರೆ. ಈಗ ಹೆಸರು ಫಸಲಾಗುವ ಹಂತದಲ್ಲಿ ಇದೆ. ಒಂದು ಎಕರೆಯಲ್ಲಿ ನಿಂಬೆ ಗಿಡಗಳ ನಾಟಿ ಮಾಡಿದ್ದಾರೆ. ಜತೆಗೆ ಪಕ್ಕದ 10 ಎಕರೆ ಹೊಲವನ್ನು ಸತೀಶ ಲೀಸ್‌ಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಓದು ಮುಗಿದ ನಂತರ ಕೆಲಸ ಸಿಕ್ಕ ಆರಂಭದಲ್ಲಿ ಜೀವನ ಇಷ್ಟಿದ್ದರೆ ಸಾಕು. ಇದೇ ಜೀವನ ಎಂದುಕೊಂಡಿದ್ದೆ. ಆದರೆ, ಎಸಿಯಲ್ಲಿ ಕುಳಿತು ಮಾಡುವ ಕೆಲಸವಾಗಿದ್ದರೂ ನೆಮ್ಮದಿ ಇರುತ್ತಿರಲಿಲ್ಲ. ಕಣ್ಣು ತುಂಬಾ ನಿದ್ದೆಯೂ ಆಗುತ್ತಿರಲಿಲ್ಲ. ಮನೆ-ಕಚೇರಿ ಎರಡೇ ಪ್ರಪಂಚ ಎನ್ನುವಂತೆ ಆಗಿತ್ತು. ಹೀಗಾಗಿ ಊರಿಗೆ ಬಂದು ಇಲ್ಲೇ ಏನಾದರೂ ಮಾಡೋಣ ಎನ್ನುವ ಯೋಚನೆಯ ಫಲವೇ ಈ ಕೃಷಿ

ಕಾಯಕ ಎನ್ನುತ್ತಾರೆ ಸತೀಶ. ಇವರು ಅಮೆರಿಕಾದಲ್ಲಿ ಎರಡು ಹಾಗೂ ದುಬೈನಲ್ಲಿ ಒಂದು ವರ್ಷ ಕೆಲಸ ಮಾಡಿದ್ದಾರೆ. ದುಬೈನಲ್ಲಿ ಉದ್ಯೋಗದಲ್ಲಿ ಇದ್ದಾಗ ಇವರಿಗೆ 5.20 ಲಕ್ಷ ರೂ. ಸಂಬಳ ಇತ್ತು. ಆದರೆ, ನೆಮ್ಮದಿಯೇ ಇರಲಿಲ್ಲ. 2018ರಲ್ಲಿ ಕೆಲಸ ಬಿಟ್ಟು ಊರಿಗೆ ಬಂದಾಗ ಸಾಮಾನ್ಯವಾಗಿ ಏನು ಮಾಡಬೇಕೆಂಬ ಗೊಂದಲಕ್ಕೆ ಸಿಲುಕಿದ್ದರು. ಮೊದಲು ಸ್ವಂತ ಉದ್ದಿಮೆ ಆರಂಭಿಸಬೇಕು ಎಂದುಕೊಂಡಿದ್ದರು. ಕೊನೆಗೆ ಕೃಷಿಯೇ ಉತ್ತಮ ಎನ್ನುವ ನಿರ್ಧಾರಕ್ಕೆ ಬಂದರು.

ಕೃಷಿ ಮಾಡಬೇಕು ಎನ್ನುವಾಗ ಕೆಲ ಗೆಳೆಯರು ಅದೆಲ್ಲ ಆಗುವುದಿಲ್ಲ. ಬೇರೆ ಏನಾದರೂ ಮಾಡು ಎಂದು ಸಲಹೆ ನೀಡಿದರು. ಆದರೂ, ನಾನು ಕೃಷಿ ಮಾಡಿ ನೋಡೋಣ ಎನ್ನುವ ದೃಢ ನಿರ್ಧಾರ ಮಾಡಿ ಬಿಟ್ಟಿದ್ದೆ. ಕಳೆದ ಹತ್ತು ವರ್ಷಗಳಿಂದ ತೊಗರಿಯನ್ನೇ ನಮ್ಮ ತಂದೆ ಬೆಳೆಯುತ್ತಿದ್ದರು. ಹೊಲಫಲವತ್ತು ಕಳೆದುಕೊಂಡಿತ್ತು. ಹೀಗಾಗಿ ಕೃಷಿಗೆ ಕೈ ಹಾಕುತ್ತಲೇ ಹೊಲದಲ್ಲಿ ಎರಡು ಬೋರ್‌ವೆಲ್‌ಗ‌ಳನ್ನು ಕೊರೆಸಿದೆ. ತಜ್ಞರ ಸಲಹೆ ಪಡೆದು ಗೊಬ್ಬರ ಹಾಕಿ ಹೊಲ ಫಲವತ್ತು ಮಾಡಿದೆ. ಇದಕ್ಕೆಲ್ಲ 8ರಿಂದ 10 ಲಕ್ಷ ರೂ. ಖರ್ಚು ಮಾಡಲಾಯಿತು. ದೀರ್ಘಾವಧಿ ಬೆಳೆಗಳ ಜೊತೆಗೆ ವಾಣಿಜ್ಯ ಮತ್ತು ತೋಟಗಾರಿಕೆ ಕೃಷಿ ಮಾಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ಮೂರು ಎಕರೆ ಈರುಳ್ಳಿ ಹಾಗೂ ಒಂದು ಎಕರೆ ಕಲ್ಲಂಗಡಿ ನಾಟಿ ಮಾಡಿದೆ. ಜತೆಗೆ ಎಂಟು ಎಕರೆ ತೊಗರಿ ಬಿತ್ತನೆ ಮಾಡಿದೆ ಎನ್ನುತ್ತಾರೆ ಅವರು.

ಮೊದಲ ಸಲ ಈರುಳ್ಳಿ ಹಾಗೂ ಕಲ್ಲಂಗಡಿಯಲ್ಲಿ ನಿರೀಕ್ಷೆಯಷ್ಟು ಫಲ ಸಿಗಲಿಲ್ಲ. ಮತ್ತೂಮ್ಮೆ ಈರುಳ್ಳಿ ಹಾಗೂ ಕಲ್ಲಂಗಡಿಯನ್ನೇ ನಾಟಿ ಮಾಡಿದೆ. ಎರಡು ಫಸಲು ಉತ್ತಮ ಬಂತು. 15 ಟನ್‌ ಈರುಳ್ಳಿ ಹಾಗೂ 60 ಟನ್‌ ಕಲ್ಲಂಗಡಿ ಇಳುವರಿ ಬಂದು ಲಾಭ ಬಂತು. ಆರಂಭದಲ್ಲಿ ಕೃಷಿಗೆ ಹೂಡಿಕೆ ಮಾಡಿದ್ದ ಎಲ್ಲ ಹಣ ವಾಪಸ್‌ ಬಂದಿದೆ. ದೀರ್ಘಾವಧಿ ಬೆಳೆಗಳಿಂತ ಅಲ್ಪಾವಧಿ ಬೆಳೆಗಳತ್ತ ಹೆಚ್ಚಿನ ಚಿತ್ತ ಇದೆ. ಕೃಷಿಯಲ್ಲಿ ನೆಮ್ಮದಿಯ ನಗು ಬೀರುತ್ತಿದ್ದೇನೆ ಎನ್ನುತ್ತಾರೆ ಸತೀಶ

Advertisement

ಕೃಷಿ ಕಾಯಕ ಜೀವನದಲ್ಲಿ ಹೊಸ ಉತ್ಸಾಹ ತುಂಬಿದೆ. ಕೃಷಿ ಸ್ವಾವಲಂಬನೆ ಉದ್ಯೋಗದೊಂದಿಗೆ ಲಾಭದಾಯಕವೂ ಆಗಿದೆ. ಅಲ್ಪಾವಧಿ ಬೆಳೆಗಳನ್ನು ಬೆಳೆಯುವುದರಿಂದ ನಮಗೆ ಹಣ ಬೇಗ ಸಿಗುತ್ತದೆ. ಬೆಳೆಗಳಿಗೆ ಯಾವ ಹಂತದಲ್ಲಿ ಎಷ್ಟು ನೀರು, ಗೊಬ್ಬರ ಬಳಸಬೇಕೆಂಬ ವೈಜ್ಞಾನಿಕ ಕ್ರಮವೇ ಕೃಷಿಯ ಯಶಸ್ಸಿನ ಗುಟ್ಟಾಗಿದೆ. – ಸತೀಶ ಕುಮಾರ ಹುಡುಗಿ, ಕೃಷಿಕ

ಕೃಷಿ ಸಹ ಲಾಭದಾಯಕ ಕ್ಷೇತ್ರ ಎನ್ನುವುದನ್ನು ಸಾಕಷ್ಟು ವಿದ್ಯಾವಂತರು ಮನಗಾಣುತ್ತಿದ್ದಾರೆ. ವಾಣಿಜ್ಯ ಮತ್ತು ತೋಟಗಾರಿಕೆ ಕೃಷಿಯತ್ತ ಹೆಚ್ಚಿನ ಒಲವು ಹೊಂದಿದ್ದಾರೆ. ಕಳೆದ ಎರಡೂ¾ರು ವರ್ಷಗಳಿಂದ ಕೃಷಿ ಬಗ್ಗೆ ಮಾಹಿತಿ ಪಡೆಯುವರಲ್ಲಿ ನೌಕರಸ್ಥರ ಸಂಖ್ಯೆಯೂ ಹೆಚ್ಚುತ್ತಿದೆ. ವಿಜ್ಞಾನ ಕೇಂದ್ರದಿಂದ ಈ ಬಾರಿ ಸಬ್ಸಿಡಿ ದರದಲ್ಲಿ 10 ಸಾವಿರ ಸಸಿಗಳನ್ನು ರೈತರಿಗೆ ವಿತರಿಸಲಾಗಿದೆ.  –ಡಾ| ವಾಸುದೇವ ನಾಯ್ಕ, ತೋಟಗಾರಿಕೆ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ

 

-ರಂಗಪ್ಪ ಗಧಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next