ಬೆಂಗಳೂರು: ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದೆ ಡಾ.ತೇಜಸ್ವಿನಿ ಗೌಡ; ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಅದನ್ನು ಅಂಗೀಕರಿಸಿದ್ದಾರೆ. ಅವರ ದಿಢೀರ್ ನಡೆ ಅಚ್ಚರಿ ಹುಟ್ಟಿಸಿದೆ.
ಮೂಲಗಳ ಪ್ರಕಾರ ಅವರು ಕಾಂಗ್ರೆಸ್ ಸೇರಲಿದ್ದು, ಬಿಜೆಪಿಗೂ ರಾಜೀನಾಮೆ ನೀಡಿದ್ದಾರೆನ್ನಲಾಗಿದೆ.
ತೇಜಸ್ವಿನಿ ಬುಧವಾರ ಬೆಳಗ್ಗೆ 11.30ಕ್ಕೆ ಸಭಾಪತಿಗಳನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಅವರ ಪರಿಷತ್ ಸದಸ್ಯತ್ವದ ಅವಧಿ ಜೂನ್ವರೆಗೂ ಇತ್ತು. ಆದಾಗಿಯೂ ಅವರ ಈ ಹಠಾತ್ ರಾಜೀನಾಮೆ ಬಿಜೆಪಿಯಲ್ಲಿ ಅಚ್ಚರಿಗೆ ಕಾರಣವಾಗಿದೆ.
ರಾಜೀನಾಮೆ ಅಂಗೀಕರಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಹೊರಟ್ಟಿ, ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ನಿರ್ಧಾರ ಪರಿಶೀಲಿಸುವಂತೆ ನಾನು ಸಾಕಷ್ಟು ಮನವರಿಕೆ ಮಾಡಲು ಪ್ರಯತ್ನಿಸಿದೆ. ಅವರು ನಿಲುವು ಬದಲಿಸದೇ ಇದ್ದುದರಿಂದ ಅನಿವಾರ್ಯವಾಗಿ ಅಂಗೀಕರಿಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಸೇರ್ಪಡೆ ?: ತೇಜಸ್ವಿನಿಯವರ ಮುಂದಿನ ನಡೆ ಏನೆಂಬುದು ತಿಳಿದು ಬಂದಿಲ್ಲ. ಕೆಲವರ ಪ್ರಕಾರ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ ಅಥವಾ ಮೈಸೂರು ಲೋಕಸಭಾ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡುವಂತೆ ಅವರು ಬಿಜೆಪಿ ವರಿಷ್ಠರಿಗೆ ಹಾಗೂ ರಾಜ್ಯ ನಾಯಕರಿಗೆ ಮನವಿ ಮಾಡಿದ್ದರು. ಆದರೆ ಯಾರೂ ಸ್ಪಂದಿಸದೇ ಇರುವುದರಿಂದ ಬೇಸರಗೊಂಡು ಪಕ್ಷ ಹಾಗೂ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.