Advertisement

ಘನತ್ಯಾಜ್ಯ ನಿರ್ವಹಣೆಗೆ ತಂತ್ರಜ್ಞಾನ; ಬ್ಲಾಕ್‌ಸ್ಪಾಟ್‌ಗಳಲ್ಲಿ ಸಿಸಿ ಕ್ಯಾಮರಾ

05:55 PM Feb 10, 2022 | Team Udayavani |

ಹುಬ್ಬಳ್ಳಿ: ಮಹಾನಗರದ ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಸ್ಮಾರ್ಟ್‌ಸಿಟಿ ಕಂಪನಿ ಮೂಲಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಆಟೋ ಟಿಪ್ಪರ್‌ಗಳಿಗೆ ಜಿಪಿಎಸ್‌, ಮನೆಗಳಿಗೆ ಆರ್‌ಎಫ್‌ಐಡಿ ಕಾರ್ಡ್‌, ಜಿಯೋ ಫಿನಿಷಿಂಗ್‌, ಬ್ಲಾಕ್‌ ಸ್ಪಾಟ್‌ಗಳಲ್ಲಿ ಸಿಸಿ ಕ್ಯಾಮರಾ ಸೇರಿದಂತೆ ತಂತ್ರಜ್ಞಾನ ಅಳವಡಿಸಲಾಗಿದೆ.

Advertisement

ಈ ಎಲ್ಲಾ ಕಾರ್ಯಗಳನ್ನು ಒಂದೇ ಸೂರಿನಡಿ ತರಬೇಕೆನ್ನುವ ಪ್ರಯತ್ನಗಳು ಕೈಗೂಡದ ಪರಿಣಾಮ ಪಾಲಿಕೆ ಅಧಿಕಾರಿಗಳ ಪಾಲಿಗೆ ಇದೊಂದು ಸವಾಲಿನ ಕಾರ್ಯವಾಗಿದ್ದು, ಬಳಕೆದಾರರ ಸ್ನೇಹಿಯಾಗಬೇಕಿದೆ.

ಮಹಾನಗರಕ್ಕೆ ಸ್ಮಾರ್ಟ್‌ಸಿಟಿ ಸ್ಪರ್ಶ ನೀಡುವ ಹಿನ್ನೆಲೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಒಂದು ಸ್ಪಷ್ಟ ರೂಪ ನೀಡಲಾಗಿದೆ. ಮತ್ತಷ್ಟು ಪರಿಣಾಮಕಾರಿಯಾಗಿ ಇದನ್ನು ನಿರ್ವಹಿಸುವ ನಿಟ್ಟಿನಲ್ಲಿ ಹಲವು ಉಪಕ್ರಮ ಕೈಗೊಳ್ಳಲಾಗುತ್ತಿದೆ. ಸ್ಮಾರ್ಟ್‌ಸಿಟಿ ಕಂಪನಿ ಯೋಜನೆಯಡಿಲ್ಲಿ 191 ಆಟೋ ಟಿಪ್ಪರ್‌ಗಳಿಗೆ ಜಿಪಿಎಸ್‌ ಅಳವಡಿಸಿ ಜಿಯೋ ಫಿನಿಷಿಂಗ್‌ ಮಾಡಲಾಗಿದೆ. ಪ್ರತಿಯೊಂದು ಆಟೋ ಟಿಪ್ಪರ್‌ಗಳ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತಿದೆ. ಇದರೊಂದಿಗೆ ಮಹಾನಗರ
ವ್ಯಾಪ್ತಿಯಲ್ಲಿ 2.10 ಲಕ್ಷ ಮನೆಗಳಿಗೆ ಆರ್‌ಎಫ್‌ ಐಡಿ ಟ್ಯಾಗ್‌ ಅಳವಡಿಸಲಾಗಿದೆ. ಪೌರ ಕಾರ್ಮಿಕರು ಪ್ರತಿ ಮನೆಯ ಕಸ ಸಂಗ್ರಹಿಸಿದ ನಂತರ ಟ್ಯಾಗ್‌ ರೀಡ್‌ ಮಾಡಬೇಕು. ಇದರಿಂದ ಆಟೋ ಟಿಪ್ಪರ್‌ಗೆ ನೀಡಿದ ಮಾರ್ಗ, ಟಿಪ್ಪರ್‌ನ ಸಹಾಯಕ ಕಸ ಸಂಗ್ರಹ ಖಾತರಿಯಾಗಲಿದೆ. ಸ್ವತ್ಛ ಸರ್ವೇಕ್ಷಣಾ ಹಿನ್ನೆಲೆಯಲ್ಲಿ ಮಹಾನಗರ ವ್ಯಾಪ್ತಿಯಲ್ಲಿ ಬ್ಲಾಕ್‌ ಸ್ಪಾರ್ಟ್‌ಗಳನ್ನು ಗುರುತಿಸಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಆಟೋ ಟಿಪ್ಪರ್‌, ಆರ್‌ಐಎಫ್‌ಐಡಿ ಕಾರ್ಡ್‌ ರೀಡಿಂಗ್‌, ಸಿಸಿ ಕ್ಯಾಮರಾ ಎಲ್ಲವನ್ನೂ ಕಾಟನ್‌ ಮಾರ್ಕೇಟ್‌ನಲ್ಲಿರುವ ಸಾಂಸ್ಕೃತಿಕ ಭವನದ ಮೇಲೆ ನಿರ್ಮಿಸಿರುವ ಸ್ಮಾರ್ಟ್‌ಸಿಟಿಯ ಕಮಾಂಡಿಂಗ್‌ ಕಂಟ್ರೋಲ್‌ ಮೂಲಕ ನಿರ್ವಹಿಸಲಾಗುತ್ತಿದೆ. ಆಟೋ ಟಿಪ್ಪರ್‌ ತಡವಾದರೆ, ಹೋಗದಿದ್ದರೆ, ಆರ್‌ಎಫ್‌ ಐಡಿ ಕಾರ್ಡು ರೀಡ್‌, ನಿತ್ಯದ ವರದಿಯನ್ನು ವಾಟ್ಸ್ ಆ್ಯಪ್‌ ಮೂಲಕ ಘನತ್ಯಾಜ್ಯ ವಿಲೇವಾರಿ ವಿಭಾಗದ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ನಿತ್ಯ ಮೂರ್‍ನಾಲ್ಕು ಬಾರಿ ಮಾಹಿತಿಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಇದರಿಂದ ಪ್ರತಿಯೊಂದು ವಾರ್ಡ್‌ನ ಆರೋಗ್ಯ ನಿರೀಕ್ಷಕರು, ವಲಯ ಉಸ್ತುವಾರಿ ಅಧಿಕಾರಿಗಳಿಗೆ ಸಕಾಲಕ್ಕೆ ಪರಿಶೀಲನೆ, ಆಗಿರುವ ತಪ್ಪುಗಳು, ದೂರುಗಳಿಗೆ ಪರಿಹಾರ ಕಲ್ಪಿಸುವುದು ಸವಾಲಾಗಿದೆ.

ಪ್ರಾಯೋಗಿಕ ತೊಂದರೆ
ಒಂದು ಮನೆಯಿಂದ ಇಂತಿಷ್ಟು ಕಸ ಸಂಗ್ರಹವಾಗುವ ಹಸಿ ಹಾಗೂ ಒಣ ತ್ಯಾಜ್ಯದ ಅಂದಾಜು ಪ್ರಮಾಣದವಿದೆ. 5ನೇ ವಲಯ ವ್ಯಾಪ್ತಿಯೊಂದರಲ್ಲಿ 100 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿವೆ. ಇಡೀ ಅಪಾರ್ಟ್‌ಮೆಂಟ್‌ ಗೆ ಒಂದು ಟ್ಯಾಗ್‌ ಅಳವಡಿಸಲಾಗಿದೆ. ಇಡೀ ಅಪಾರ್ಟ್‌ಮೆಂಟ್‌ ಕಸಕ್ಕೆ ಒಂದು ಆಟೋ ಟಿಪ್ಪರ್‌ ಬೇಕಾಗುತ್ತದೆ. ಹೀಗಿರುವಾಗಿ ಆಟೋ ಟಿಪ್ಪರ್‌ ಗಳ ಮೇಲೆ ಒತ್ತಡ ಹೆಚ್ಚು.ಸಕಾಲದಲ್ಲಿ ಎಲ್ಲಾ ಮನೆಗಳನ್ನು ತಲುಪಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಕಮಾಂಡಿಂಗ್‌ ಕಂಟ್ರೋಲ್‌ ಸಿಬ್ಬಂದಿ ಆಟೋ ಟಿಪ್ಪರ್‌ ಸಕಾಲದಲ್ಲಿ ಕಸ ಸಂಗ್ರಹ ಮಾಡಿಲ್ಲ ಎನ್ನುವ ಅಂಕಿ ಅಂಶಗಳನ್ನು ರವಾನೆ ಮಾಡುತ್ತಿದೆ. ಇಂತಹ ಪ್ರಾಯೋಗಿಕ ಸಮಸ್ಯೆಗಳು ಸಾಕಷ್ಟಿವೆ. ವ್ಯವಸ್ಥೆಯ ನಿರ್ವಹಣೆ ಸ್ಮಾರ್ಟ್‌ಸಿಟಿ, ಇದರ ಬಳಕೆ ಪಾಲಿಕೆಯಾಗಿರುವುದರಿಂದ ಸಣ್ಣಪುಟ್ಟ ಪ್ರಾಯೋಗಿಕ ತೊಂದರೆಗಳಿಗೆ ಪರಿಹಾರ ಇಲ್ಲದಂತಾಗಿದೆ.

Advertisement

ಒಂದೇ ಸೂರಿನಡಿ ಅಗತ್ಯ
ಎಲ್ಲವನ್ನು ಒಂದೇ ಸೂರಿನಡಿ ತಂದು ಪ್ರತ್ಯೇಕ ಆ್ಯಪ್‌ ಸಿದ್ಧಪಡಿಸಿದರೆ ಆಯಾ ವಲಯ, ವಾರ್ಡುಗಳ ಮೇಲ್ವಿಚಾರಣೆ ಮಾಡುವ ಅಧಿಕಾರಿಗಳಿಗೆ ಸರಳವಾಗಲಿದೆ. ನೇರವಾಗಿ ತಮಗೆ ಸಂಬಂಧಿಸಿದ ಮಾಹಿತಿಯನ್ನು ಆಗಾಗ ಪರಿಶೀಲಿಸಬಹುದಾಗಿದೆ ಎನ್ನುವ ಪ್ರಸ್ತಾಪ ಪಾಲಿಕೆಯದ್ದಾಗಿತ್ತು. ಇದಕ್ಕೆ ಪರಿಹಾರ ರೂಪವಾಗಿ ಒಂದು ಆ್ಯಪ್‌ ಸಿದ್ಧಪಡಿಸುವ ಭರವಸೆ ಈಡೇರದ ಪರಿಣಾಮ ಇಷ್ಟೆಲ್ಲಾ ಖರ್ಚು ಮಾಡಿದರೂ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಒಂದು ಆ್ಯಪ್‌ ಸಿದ್ಧಪಡಿಸಿ ಕಾರ್ಯರೂಪಕ್ಕೆ ತಂದರೆ ಪ್ರತಿಯೊಬ್ಬ ಅಧಿಕಾರಿಗೆ ಹೊಣೆಗಾರಿಕೆ ಹೆಚ್ಚಾಗಲಿದೆ. ಇದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.

ತಾಂತ್ರಿಕ ಸಮಸ್ಯೆ ಹೇಳ್ಳೋದು ಎಲ್ಲಿ ?
ಈಗಾಗಲೇ ನೀಡಿರುವ ಆರ್‌ಎಫ್‌ಐಡಿ ಕಾರ್ಡು ರೀಡರ್‌ಗಳ ಬ್ಯಾಟರಿ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ನೆಟ್‌ವರ್ಕ್‌ ಸಮಸ್ಯೆ ಹೀಗೆ ಹಲವು ತಾಂತ್ರಿಕ ತೊಂದರೆಗಳಿಗೆ ಇಂತಹ ಸಂದರ್ಭದಲ್ಲಿ ಅಂತಹ ಮನೆಗಳಿಂದ ಕಸ ಸಂಗ್ರಹಿಸಿದರೂ ಕಂಟ್ರೋಲ್‌ ರೂಂ ಪ್ರಕಾರ ಸಂಗ್ರಹಿಸಿಲ್ಲ ಎನ್ನುವಂತಾಗುತ್ತದೆ. ಇಂತಹ ಕಾರಣದಿಂದ ಹಲವೆಡೆ ರೀಡಿಂಗ್‌ ಆಗುತ್ತಿಲ್ಲ. ಈ ತಾಂತ್ರಿಕ ಸಮಸ್ಯೆಯ ದೂರು ದಾಖಲಿಸಲು ಕ್ಷೇತ್ರದಲ್ಲಿರುವ ಆರೋಗ್ಯ ನಿರೀಕ್ಷಕರು, ಘನತ್ಯಾಜ್ಯ ವಿಲೇವಾರಿ ಅಧಿಕಾರಿಗಳಿಗೆ ಅವಕಾಶವಿಲ್ಲ.

ಆದರೆ ಕಮಾಂಡಿಂಗ್‌ ಕಂಟ್ರೋಲ್‌ ರೂಂನಿಂದ ನೀಡುವ ಅಂಕಿ ಅಂಶಗಳು ಕ್ಷೇತ್ರದಲ್ಲಿರುವ ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಎದುರಾಗುತ್ತದೆ. ಆಟೋ ಟಿಪ್ಪರ್‌ಗಳು ಪ್ರತಿ ಮನೆಗಳಿಗೆ ಹೋಗುತ್ತಿದ್ದರೂ ರಸ್ತೆಯ ಅಕ್ಕಪಕ್ಕದಲ್ಲಿ ಕಸ ಹಾಕಲಾಗುತ್ತದೆ. ಅಂತಹ ಸ್ಥಳಗಳನ್ನು ಗುರುತಿಸಿ ರಂಗೋಲಿ ಹಾಕಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಕೆಲವೆಡೆ ನಿರಂತರವಾಗಿ ಕಸ ಹಾಕಲಾಗುತ್ತಿದ್ದು, ಇಂತಹ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಹಾಕಲಾಗಿದೆ. ಕಸ ಹಾಕಿದ ನಂತರ ಆ ಫೋಟೋಗಳನ್ನು ಕಮಾಂಡಿಂಗ್‌ ಕೇಂದ್ರದಿಂದ ಘನ ತ್ಯಾಜ್ಯ ವಿಲೇವಾರಿ ವಿಭಾಗದ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ನಿಯಮ ಉಲ್ಲಂಘನೆ ಮಾಡುವವರ ಫೋಟೋ ಸಮೇತ ಕಳುಹಿಸಿದರೆ ಅಂಥವರ ಮೇಲೆ ದಂಡ ಇನ್ನಿತರೆ ಕ್ರಮ ಕೈಗೊಳ್ಳಬಹುದಾಗಿದೆ. ಇದರಿಂದ ಬೇಕಾಬಿಟ್ಟಿಯಾಗಿ ಕಸ ಹಾಕುವ ಘಟನೆಗಳಿಗೆ ಕಡಿವಾಣ ಬೀಳಬಹುದು ಎನ್ನುವುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ.

ಮಹಾನಗರದ ಸ್ವತ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಘನ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುವಂತೆ ಸೂಚನೆ ನೀಡಲಾಗಿದೆ. ಆಟೋ ಟಿಪ್ಪರ್‌, ಆರ್‌ಎಫ್‌ಐಡಿ ಟ್ಯಾಗ್‌ ರೀಡಿಂಗ್‌ ಸೇರಿದಂತೆ ಪ್ರತಿ ಮಾಹಿತಿಯನ್ನು ಕಮಾಂಡಿಂಗ್‌ ಕಂಟ್ರೋಲ್‌ ಕೊಠಡಿಯಿಂದ ಸಂಬಂಧಿಸಿದ ಅಧಿಕಾರಿಗಳಿಗೆ ದೊರೆಯುತ್ತಿದೆ. ಇವೆಲ್ಲವನ್ನು ಆ್ಯಪ್‌ ಮೂಲಕ ಒಂದೇ ಸೂರಿನಡಿ ತರಬೇಕೆನ್ನುವ ಕುರಿತಾದ ಹಿಂದಿನ ಚರ್ಚೆಗಳು ಗಮನಕ್ಕಿಲ್ಲ.
ಡಾ|ಬಿ.ಗೋಪಾಲಕೃಷ್ಣ,
ಆಯುಕ್ತ, ಮಹಾನಗರ ಪಾಲಿಕೆ

*ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next