Advertisement

ಅತ್ತ್ಬಿಡ್ತೀನಿ..!

12:30 AM Jan 30, 2019 | |

ಕಣ್ಣೀರಿಗಿರುವ ಶಕ್ತಿಯೇ ಅಪಾರ. ಅದು ಅಮೃತಕ್ಕೆ ಸಮಾನ. ನೋವಿನ ಅಭಿವ್ಯಕ್ತಿಯೆಂದು ಅದನ್ನು ತಿರಸ್ಕಾರದಿಂದ ಕಾಣುವುದು ಸರಿಯಲ್ಲ. ಕಣ್ಣೀರು ಕೇವಲ ದುಃಖಸೂಚಕವಷ್ಟೇ ಅಲ್ಲ. ಅಭಿಮಾನ, ಸಂತೋಷ, ಪ್ರೀತಿ, ಪಶ್ಚಾತ್ತಾಪಗಳೂ ಕಣ್ಣೀರಿನ ರೂಪದಲ್ಲಿ ವ್ಯಕ್ತವಾಗುತ್ತವೆ. ಭಾವನೆ ಯಾವುದೇ ಇರಲಿ, ಅದರ ಅಭಿವ್ಯಕ್ತಿಯ ಪರಾಕಾಷ್ಠೆಯಲ್ಲಿ ಎರಡು ಹನಿ ಕಣ್ಣೀರು ಇದ್ದೇ ಇರುತ್ತದೆ. ಸಂತೋಷದ ಕ್ಷಿತಿಜವು ಆನಂದಾಶ್ರುವಿನ ರೂಪದಲ್ಲಿ ದರುಶನ ಕೊಡುತ್ತದೆ…

Advertisement

ನಾನು ಸೋತೆ, ನಾನು ಅಸಹಾಯಕಳಾಗಿದ್ದೇನೆ, ನನ್ನಿಂದ ಏನೂ ಮಾಡಲಾಗುತ್ತಿಲ್ಲ- ಆ ದಿನಗಳಲ್ಲಿ ಇಂಥದ್ದೇ ಋಣಾತ್ಮಕ ಭಾವನೆಗಳು ನನ್ನಲ್ಲಿ ತುಂಬಿಕೊಂಡಿದ್ದವು. ಈ ನೋವಿಗೆ ಕಾರಣಗಳು ಹಲವಿದ್ದವು. ತೀವ್ರ ಅನಾರೋಗ್ಯದಿಂದ ನನ್ನ ಅಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಥೆಟಿಸ್‌ನಿಂದ ಮೊಣಕಾಲು ಗಂಟು ಸವೆದು, ಆ ನೋವಿನಿಂದಾಗಿ ನಡೆದಾಡಲೂ ಕಷ್ಟಪಡುವ ನನ್ನ ಅಮ್ಮನೇ ಅವರ ಚಾಕರಿ ಮಾಡಬೇಕಾಗಿತ್ತು. ಅದೇ ಅವಧಿಯಲ್ಲಿ ನನ್ನ ಅಕ್ಕ ಹಾಗೂ ಅಕ್ಕನ ಮಗಳು ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲಾದರು. ಇವರಲ್ಲಿ ಯಾರಿಗೂ ನಾನು ಸಹಾಯ ಮಾಡಲಾಗುತ್ತಿಲ್ಲ; ಅಂದರೆ ಅವರ ಜೊತೆ ಹೋಗಿ ನಿಲ್ಲಲಾಗುತ್ತಿಲ್ಲ ಎಂಬ ಕೊರಗು ನನ್ನನ್ನು ಕಾಡುತ್ತಿತ್ತು. ನನ್ನ ಮನೆಕೆಲಸ, ಶಾಲೆಯ ಕೆಲಸ, ನನ್ನ ಸಣ್ಣ ಮಕ್ಕಳನ್ನು ನೋಡಿಕೊಳ್ಳುವುದು… ಹೀಗೆ ನನ್ನದೇ ನೂರಾರು ಚಿಂತೆ, ಒತ್ತಡಗಳು. ಸುಮನೆ ಕುಳಿತಾಗ ಚಿಂತೆ ನನ್ನ ಮೇಲೆ ದಾಳಿ ಮಾಡುತ್ತಿತ್ತು. ದುಃಖ ಒತ್ತರಿಸಿ ಬರುತ್ತಿತ್ತು. ನನ್ನ ಅಸಹಾಯಕತೆಯ ಬಗ್ಗೆ ನನಗೇ ಸಿಟ್ಟು. ಸೋತು ಹೋದೆ ಎಂದು ನನ್ನ ಮನಸ್ಸೇ ನನ್ನನ್ನು ಅಣಕಿಸುತ್ತಿರುವಂಥ ಭಾವ.

ಕೆಲಸದ ಒತ್ತಡವಿದ್ದರೆ ಚಿಂತೆಗೆ ಸಮಯವಿರುವುದಿಲ್ಲ. ಆದರೆ, ಅಂದು ರವಿವಾರ. ಕೊನೆಗೆ ಇಂಥ ಮಾನಸಿಕ ಒತ್ತಡದಿಂದ ಬಿಡುಗಡೆ ಕೊಡುವ ಆಪ್ತಮಿತ್ರನ ನೆನಪಾಯ್ತು. ಅದೇ… ಕಣ್ಣೀರು! ಆದರೆ, ಅಳುವಿಗೊಂದು ನೆಪ ಬೇಕಲ್ಲ? ಒಂದು ಸಣ್ಣ ನಿ¨ªೆಯ ನಂತರ ಮನಸ್ಸು ಶಾಂತವಾಗಬಹುದು ಅಂತನ್ನಿಸಿ ಮಲಗಿಬಿಟ್ಟೆ. ಹೊರಗೆ ವಿಪರೀತ ಸೆಖೆ. ಮನಸ್ಸಿನ ಒಳಗೂ ಕಾವು. ಹೇಗೆ ತಾನೇ ನಿದ್ದೆ ಬಂದೀತು? ಎದ್ದು ಬಂದೆ. ಟಿ.ವಿ.ಯಲ್ಲಿ ಮಮ್ಮೂಟ್ಟಿ ಅಭಿನಯದ ಮಲಯಾಳಂ ಸಿನಿಮಾವೊಂದು ಮೂಡಿಬರುತ್ತಿತ್ತು. ಮೊದಲಿನಿಂದ ಕೊನೆಯವರೆಗೆ ದುಃಖಸಾಂದ್ರವಾಗಿದ್ದ ಆ ಸಿನಿಮಾ ನನ್ನ ಕಣ್ಣೀರಿಗೊಂದು ನೆಪವಾಯಿತು. ನಾನು ಯಾವುದೇ ನಿರ್ಬಂಧ ಹೇರದ ಕಾರಣ ಧಾರಾಕಾರ ಕಣ್ಣೀರು. ಕೊನೆಗೆ, ಸಿನಿಮಾ ಸುಖಾಂತ್ಯಗೊಂಡಾಗ ನನ್ನ ಕಣ್ಣೀರೂ ನಿಂತಿತ್ತು. ಮನಸ್ಸಲ್ಲಿ ಹೆಪ್ಪುಗಟ್ಟಿದ್ದ ನೋವೆಲ್ಲ ಕರಗಿ ಹೋದಂತೆ… ಮನಸ್ಸು ಶಾಂತವಾದಂತೆ… ಅಂತೂ ನಾನು ನಿರಾಳವಾಗಿ¨ªೆ.

ಕಣ್ಣೀರು ದುಃಖಸೂಚಕವಲ್ಲ… ನೋವಿಗೆ ತೆರವು
ಕಣ್ಣೀರಿಗಿರುವ ಶಕ್ತಿಯೇ ಅಪಾರ. ಅದು ಅಮೃತಕ್ಕೆ ಸಮಾನ. ನೋವಿನ ಅಭಿವ್ಯಕ್ತಿಯೆಂದು ಅದನ್ನು ತಿರಸ್ಕಾರದಿಂದ ಕಾಣುವುದು ಸರಿಯಲ್ಲ. ಕಣ್ಣೀರು ಕೇವಲ ದುಃಖಸೂಚಕವಷ್ಟೇ ಅಲ್ಲ. ಅಭಿಮಾನ, ಸಂತೋಷ, ಪ್ರೀತಿ, ಪಶ್ಚಾತ್ತಾಪಗಳೂ ಕಣ್ಣೀರಿನ ರೂಪದಲ್ಲಿ ವ್ಯಕ್ತವಾಗುತ್ತವೆ. ಭಾವನೆ ಯಾವುದೇ ಇರಲಿ, ಅದರ ಅಭಿವ್ಯಕ್ತಿಯ ಪರಾಕಾಷ್ಠೆಯಲ್ಲಿ ಎರಡು ಹನಿ ಕಣ್ಣೀರು ಇದ್ದೇ ಇರುತ್ತದೆ. ಸಂತೋಷದ ಕ್ಷಿತಿಜವು ಆನಂದಾಶ್ರುವಿನ ರೂಪದಲ್ಲಿ ದರುಶನ ಕೊಡುತ್ತದೆ. ಅಭಿಮಾನ ಮನದುಂಬಿದಾಗ ಕಣ್ಣೀರಿಂದ ದೃಷ್ಟಿ ಮಂಜಾಗುತ್ತದೆ. ದುಃಖದ ಅಣೆಕಟ್ಟು ಭರ್ತಿಯಾದಾಗ ಕಣ್ಣುಗಳೆಂಬ ತೂಬುಗಳ ಮೂಲಕ ಅದು ಹೊರಹರಿಯಲೇ ಬೇಕು. ಇಲ್ಲದಿದ್ದರೆ ಮನಸ್ಸೆಂಬ ಅಣೆಕಟ್ಟು ಒಡೆದು ಅನಾಹುತವಾದೀತು.

 ಸಂತೋಷ ಹಾಗೂ ಅಭಿಮಾನಗಳ ಕಣ್ಣೀರು ಮೊದಲ ಮಳೆಯ ಸಿಂಚನದಂತೆ. ಮೊದಲ ಮಳೆಗೆ ಮಲ್ಲಿಗೆ ಹೂಗಳು ಅರಳುವಂತೆ, ಕಾಫಿ ಗಿಡ ಹೂಗಳಿಂದ ತುಂಬುವಂತೆ ತನ್ನ ಸುತ್ತಲೂ ಕಂಪು ಬೀರುತ್ತದೆ. ಅಂದರೆ, ಆ ಕಣ್ಣೀರಿನ ಸಂಪರ್ಕಕ್ಕೆ ಬರುವ ಇತರರಿಗೂ ಖುಷಿಯನ್ನು ಬಿತ್ತರಿಸುತ್ತದೆ. ಆದುದರಿಂದ ಕಣ್ಣುಗಳಲ್ಲಿ ಅಡಗಿದ್ದು ಹೊರಬರಲು ಹವಣಿಸುವ ಹನಿಗಳನ್ನು ಯಾವತ್ತೂ ತಡೆಯಬಾರದು. ಭಾವನೆಗಳಿಗೆ ಜತೆಯಾಗಲು ಅದಕ್ಕೆ ಮುಕ್ತ ಅವಕಾಶ ನೀಡಬೇಕು. ಆಗ ನಮ್ಮ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. 

Advertisement

 ಅತ್ಯಂತ ಆಪ್ತರಾದವರ ಅಗಲಿಕೆ ವೇಳೆ ಅತಿಯಾಗಿ ದುಃಖೀಸಿ ಅಳುವವರನ್ನು ಕೆಲವರು ಅಳದಂತೆ ತಡೆಯುತ್ತಾರೆ. ಅವರು ಅಳು ನಿಲ್ಲಿಸಿದರೆ ತಾವೇನೋ ಮಹದುಪಕಾರ ಮಾಡಿದಂತೆ ಎಂಬುದು ಅವರ ಭಾವನೆ. ಆದರೆ, ಆಗುವುದೇ ಬೇರೆ. ಅವರ ದುಃಖದ ಅಭಿವ್ಯಕ್ತಿ ತುಂಡರಿಸಲ್ಪಡುತ್ತದೆ. ಶರೀರದೊಳಗೆ ಸೇರಿಕೊಂಡ ಮುಳ್ಳಿನಂತೆ ಅದು ಹೊರಹೋಗುವವರೆಗೂ ಚುಚ್ಚುತ್ತಿರುತ್ತದೆ. ಯಾವಾಗ ವ್ಯಕ್ತಿ ತೃಪ್ತಿಯಾಗುವವರೆಗೂ ಅತ್ತು ತಾನಾಗಿ ಅಳು ನಿಲ್ಲಿಸುತ್ತಾನೋ ಆಗ ಅವನು ವಾಸ್ತವಕ್ಕೆ ಒಗ್ಗಿಕೊಳ್ಳಲು ತಯಾರಾಗುತ್ತಾನೆ. ನೆನಪುಗಳು ಶಾಶ್ವತವಾಗಿದ್ದರೂ ತೀವ್ರ ದುಃಖದಿಂದ ಹೊರಬಂದು ನಿರಾಳವಾಗುತ್ತಾನೆ. ಆದರೆ, ತಡೆದು ನಿಲ್ಲಿಸಿ ದುಃಖ, ಕಣ್ಣೀರಾಗಿ ಹರಿಯದ ದುಃಖ ನಕಾರಾತ್ಮಕ ಭಾವಗಳನ್ನು ಹುಟ್ಟುಹಾಕುತ್ತದೆ. ಆತ್ಮಹತ್ಯೆಗೂ ಅದು ಪ್ರೇರೇಪಿಸುವ ಅಪಾಯವಿರುತ್ತದೆ. ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಬಹುದು. ಕಣ್ಣೀರೆಂಬ ದಿವೌಷಧವನ್ನು, ಮನಸ್ಸನ್ನು ಪುನರುಜ್ಜೀವನಗೊಳಿಸುವ ಸಂಜೀವಿನಿಯನ್ನು ನಿಕೃಷ್ಟವಾಗಿ ಪರಿಗಣಿಸಬಾರದು. ಕಣ್ಣೀರಿಂದ ತೊಳೆಯಲ್ಪಟ್ಟರೆ ಉಳಿದೆಲ್ಲಾ ಭಾವನೆಗಳೂ ಪರಿಶುದ್ಧವಾಗುತ್ತವೆ. ಮನಸ್ಸು ಶುಭ್ರವಾಗಿ, ಪ್ರಫ‌ುಲ್ಲವಾಗುತ್ತದೆ.

ಗಂಡಸರೇಕೆ ಅಳಬಾರದು?
ಕಣ್ಣೀರು ಸ್ತ್ರೀಯರಿಗೊಂದು ಅಸ್ತ್ರ ಎಂದು ಹಂಗಿಸುವವರಿದ್ದಾರೆ. ಸ್ವಭಾವತಃ ಹೆಚ್ಚು ಭಾವುಕಳಾದ ಸ್ತ್ರೀ ಬೇಗ ಕಣ್ಣೀರು ಹಾಕುತ್ತಾಳೆ. ಸ್ತ್ರೀಯರ ಈ ಸ್ವಭಾವದ ದುರ್ಲಾಭ ಪಡೆದುಕೊಳ್ಳುವ ಹೆಂಗಸರೂ ಇದ್ದಾರೆ. ಆದರೆ, ಎಲ್ಲರೂ ಅಂಥವರಲ್ಲ. ಅಳುವ ಗಂಡಸರನ್ನು ನಂಬಬಾರದು ಎನ್ನುತ್ತಾರೆ. ಇದರಲ್ಲಿ ವೈಜ್ಞಾನಿಕವಾಗಿ ಸತ್ಯಾಂಶವಿಲ್ಲ. ನಮ್ಮ ಸಮಾಜ ಪುರುಷರನ್ನು ಗಟ್ಟಿತನದ ಪ್ರತೀಕವಾಗಿ ಬಿಂಬಿಸುವುದರ ಪರಿಣಾಮವಾಗಿ ಹೀಗೊಂದು ಮಾತನ್ನು ಹಿಂದಿನವರು ಹೇಳಿರಬಹುದು. ಆದರೆ, ಭಾವನೆಗಳ ಪ್ರಾಮಾಣಿಕ ಅಭಿವ್ಯಕ್ತಿ ಮಾಡಲು ಬಯಸುವವರು, ತಮಗೆ ತಾವೇ ಮೋಸ ಮಾಡಲು ಆಗದವರು ಕಣ್ಣೀರಿನ ಕುರಿತಾದ ಈ ಲಿಂಗ ತಾರತಮ್ಯವನ್ನು ತೊಡೆದು ಹಾಕಬಹುದು. ನಿಜವಾಗಿಯೂ ನಿರಾಳವಾಗಲು ಬಯಸುವವರು ಮನಸ್ಸು ಭಾರವಾದಾಗ ಕಣ್ಣೀರಿನ ಮೊರೆ ಹೋಗುವುದು ಉತ್ತಮ. ಕಣ್ಣೀರು ಪಶ್ಚಾತ್ತಾಪದ ಕುರುಹೂ ಹೌದು. ನೈಜ ಕಣ್ಣೀರಿನಿಂದ ಕೂಡಿದ ತಪ್ಪೊಪ್ಪಿಗೆ, ಬಿರುಕುಗಳನ್ನು ಬೆಸೆಯುತ್ತದೆ. ಎಂಥ ಅಪರಾಧವನ್ನೂ ಕ್ಷಮಿಸಿಬಿಡುವಂತೆ ಮಾಡುತ್ತದೆ. ಮಳೆಗೆ ಕೊಳೆಯೆಲ್ಲವೂ ಕೊಚ್ಚಿ ಹೋಗುವಂತೆ ಕಣ್ಣೀರು ಎಲ್ಲಾ ಚಿಂತೆ, ದುಗುಡಗಳನ್ನೂ, ದುಃಖ- ನೋವುಗಳನ್ನೂ ಹೊತ್ತೂಯ್ಯುತ್ತದೆ. ಸಂದರ್ಭ ಬಂದಾಗ ಒಬ್ಬರೇ ಕುಳಿತು ಅತ್ತು ಹಗುರಾಗೋಣ.

 ಜೆಸ್ಸಿ ಪಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next