ಬೆಳಗಾವಿ: ನನ್ನ ಸಿ.ಡಿ ಪ್ರಕರಣದಲ್ಲಿದ್ದ ಮಹಾನಾಯಕನ ತಂಡವೇ ಸಂತೋಷ ಪಾಟೀಲ ಅವರ ಆತ್ಮಹತ್ಯೆಯ ಹಿಂದಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.
ಗುರುವಾರ ಬಡಸ ಗ್ರಾಮದಲ್ಲಿನ ಸಂತೋಷ ಪಾಟೀಲ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ನನ್ನ ಸಿ.ಡಿ ತಯಾರಿಸಿದ ಮಹಾನಾಯಕ ಹಾಗೂ ಅವರ ತಂಡ ಸಂತೋಷ ಪಾಟೀಲ ಪ್ರಕರಣದ ಹಿಂದಿದೆ ಎಂದು ಗಂಭೀರ ಆರೋಪ ಮಾಡಿದರು.
ಮಹಾನಾಯಕನ ತಂಡದ ಕುತಂತ್ರದ ಎಲ್ಲ ದಾಖಲೆಗಳು ನನ್ನ ಬಳಿಯಿವೆ. ಇದರ ಬಗ್ಗೆ ಪಕ್ಷದ ವರಿಷ್ಠರ ಜೊತೆಗೆ ಚರ್ಚೆ ಮಾಡುತ್ತೇನೆ. ಅವರು ಸಮ್ಮತಿ ನೀಡಿದರೆ ಸೋಮವಾರ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಪಡಿಸುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದರು.
ಇದನ್ನೂ ಓದಿ:‘ಕರೆಪ್ಷನ್ ಮುಕ್ತ ಕರ್ನಾಟಕ ಮಿಷನ್’ ಕಾಂಗ್ರೆಸ್ ಯಾತ್ರೆ ಆರಂಭ : ಸುರ್ಜೇವಾಲ
ಸಂತೋಷ ಪಾಟೀಲ ನನಗೆ ಗೊತ್ತು. ಆತ ನನ್ನ ಹಳೆಯ ಕಾರ್ಯಕರ್ತ. ಸಂತೋಷ ಹಾಗೂ ನನ್ನ ಸಿ.ಡಿ ಪ್ರಕರಣಗಳನ್ನು ಸಿಬಿಐ ಗೆ ವಹಿಸಲಿ ಎಂದು ರಮೇಶ ಜಾರಕಿಹೊಳಿ ಒತ್ತಾಯಿಸಿದರು.
ಸಂತೋಷ ಪ್ರಕರಣದ ವಿಚಾರದಲ್ಲಿ ಈಶ್ವರಪ್ಪ ಅವರು ರಾಜೀನಾಮೆ ಕೊಡಬಾರದು. ಇದರ ಹಿಂದೆ ಮಹಾನಾಯಕ ಇದ್ದಾನೆ. ಒಂದೇ ತಂಡದಿಂದ ಎಲ್ಲ ಕುತಂತ್ರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು