Advertisement

ಸಾವಿರ ಪಂದ್ಯದ ಗುಂಗಿನಲ್ಲಿ ಭಾರತ; ವಿಂಡೀಸ್‌ ವಿರುದ್ಧ ಮೊದಲ ಏಕದಿನ

11:08 PM Feb 05, 2022 | Team Udayavani |

ಅಹ್ಮದಾಬಾದ್‌: “ನ್ಯೂ ಲೀಡರ್‌’ ರೋಹಿತ್‌ ಶರ್ಮ “ಮಿಡ್ಲ್ ಆರ್ಡರ್‌’ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬ ವಿಪರೀತ ನಿರೀಕ್ಷೆಯೊಂದಿಗೆ ಭಾರತ ತಂಡ ಐತಿಹಾಸಿಕ ಒಂದು ಸಾವಿರದ ಏಕದಿನ ಪಂದ್ಯವಾಡಲು ವೆಸ್ಟ್‌ ಇಂಡೀಸ್‌ ವಿರುದ್ಧ ರವಿವಾರ ಕಣಕ್ಕಿಳಿಯಲಿದೆ.

Advertisement

ಇದಕ್ಕೆ ಸಾಕ್ಷಿಯಾಗಲಿರುವ ತಾಣ ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’.

ವಿಷಾದದ ಸಂಗತಿಯೆಂದರೆ, ಈ ಸಾವಿರ ಪಂದ್ಯದ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲು ಪ್ರೇಕ್ಷಕರೇ ಇಲ್ಲದಿರುವುದು!

ರೋಹಿತ್‌ ಶರ್ಮ ಗೈರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಗೈದಿದ್ದ ಭಾರತ, ಅಲ್ಲಿ 3-0 ವೈಟ್‌ವಾಶ್‌ ಅವಮಾನಕ್ಕೆ ಸಿಲುಕಿದ ಸಂಕಟ ಇನ್ನೂ ದೂರಾಗಿಲ್ಲ. ಮುಂದಿನ ವರ್ಷದ ಏಕದಿನ ವಿಶ್ವಕಪ್‌ ಪಂದ್ಯಾ ವಳಿಯ ಹಿನ್ನೆಲೆಯಲ್ಲಿ ತಂಡದ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬೇಕೆಂಬ ಮೊದಲ ಹಂತದ ಯೋಜನೆ ಕೂಡ ಅಲ್ಲಿ ಸಾಕಾರಗೊಂಡಿರಲಿಲ್ಲ. ಬದಲಿಗೆ, ಸಮಸ್ಯೆಯ ಸರಮಾಲೆ ಇನ್ನಷ್ಟು ಬೆಳೆಯಿತು. ರಾಹುಲ್‌ದ್ವಯರ ನಾಯಕತ್ವ ಹಾಗೂ ಕೋಚಿಂಗ್‌ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಟೀಮ್‌ ಇಂಡಿಯಾದ ಸಮಸ್ಯೆಗಳ ಪರಿಹಾರಕ್ಕೆ ವಿಂಡೀಸ್‌ ಎದುರಿನ ಈ 3 ಪಂದ್ಯಗಳ ಸರಣಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕಿದೆ.

ರೋಹಿತ್‌ಗೆ ನಾಯಕತ್ವದ ಸವಾಲು
ರೋಹಿತ್‌ ಶರ್ಮ ಇದೇ ಮೊದಲ ಸಲ ಪೂರ್ಣ ಪ್ರಮಾಣದ ನಾಯಕನಾಗಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಇದು ನೂತನ ಯುಗವೊಂದಕ್ಕೆ ಮುನ್ನುಡಿಯಾದೀತೇ ಎಂಬುದೊಂದು ನಿರೀಕ್ಷೆ. ರೋಹಿತ್‌ ಅವರ ನಾಯಕತ್ವದ ಯಶಸ್ಸಿಗೆ ಐಪಿಎಲ್‌ ಪಂದ್ಯಾವಳಿಗಿಂತ ಉತ್ತಮ ನಿದರ್ಶನ ಬೇಕಿಲ್ಲ. ಮುಂಬೈ ಇಂಡಿಯನ್ಸ್‌ ತಂಡವನ್ನು ಅವರು ದಾಖಲೆ 5 ಸಲ ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಬ್ಯಾಟಿಂಗ್‌ ಕೂಡ ಉತ್ತಮ ಲಯದಲ್ಲಿತ್ತು.

Advertisement

ಏಕದಿನ ಪಂದ್ಯದಲ್ಲಿ ವಿಶ್ವದಾಖಲೆಯ ಮೊತ್ತ ಪೇರಿಸುವ ಜತೆಗೆ 3 ದ್ವಿಶತಕ ಬಾರಿಸಿದ ವಿಶ್ವದ ಏಕೈಕ ಕ್ರಿಕೆಟಿಗನೆಂಬ ಅಸಾಮಾನ್ಯ ದಾಖಲೆಯ ಒಡೆಯ ಈ ರೋಹಿತ್‌ ಶರ್ಮ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಇವರ ಬ್ಯಾಟಿಂಗ್‌ ಹಾಗೂ ಕ್ಯಾಪ್ಟನ್ಸಿ ಯಶಸ್ಸು ಕಂಡೀತೆಂಬ ನಿರೀಕ್ಷೆ ಎಲ್ಲರದು.

ಇಶಾನ್‌ ಕಿಶನ್‌ ಓಪನರ್‌
ರೋಹಿತ್‌ ಶರ್ಮ ಅವರೊಂದಿಗೆ ಯುವ ಕ್ರಿಕೆಟಿಗ ಇಶಾನ್‌ ಕಿಶನ್‌ ಭಾರತದ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಶಿಖರ್‌ ಧವನ್‌, ಋತುರಾಜ್‌ ಗಾಯಕ್ವಾಡ್‌ ಅವರು ಕೋವಿಡ್‌ನಿಂದಾಗಿ ಐಸೊಲೇಶನ್‌ನಲ್ಲಿ ಇದ್ದಾರೆ. ಕೆ.ಎಲ್‌. ರಾಹುಲ್‌ ಕೌಟುಂಬಿಕ ಕಾರಣಗಳಿಂದ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಮಾಯಾಂಕ್‌ ಅಗರ್ವಾಲ್‌ ಅವರನ್ನು ಸೇರ್ಪಡೆ ಗೊಳಿಸಿದರೂ ಕ್ವಾರಂಟೈನ್‌ ಮುಗಿಸದ ಕಾರಣ ಅಭ್ಯಾಸವನ್ನೇ ನಡೆಸಿಲ್ಲ. ಹೀಗಾಗಿ ಇಶಾನ್‌ ಕಿಶನ್‌ ಒಬ್ಬರೇ ಲಭ್ಯವಿರುವ ಆಯ್ಕೆ ಎಂಬುದಾಗಿ ರೋಹಿತ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ವಿಜಯ್‌ ಹಜಾರೆ ಟ್ರೋಫಿಯಲ್ಲಿ ಮಿಂಚಿದ ಹಾರ್ಡ್‌ ಹಿಟ್ಟರ್‌ ದೀಪಕ್‌ ಹೂಡಾ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬಬೇಕಿದೆ. ಅಂದಮಾತ್ರಕ್ಕೆ ಪಂತ್‌ ಅವರಿಗೆ ಬ್ಯಾಟಿಂಗ್‌ ಪ್ರಮೋಶನ್‌ ನೀಡಬೇಕಾದ ಅಗತ್ಯವಿಲ್ಲ. ಮೀಸಲು ಆಟಗಾರ ಶಾರೂಖ್‌ ಖಾನ್‌ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಯುವ ವೇಗಿಗಳ ಪಡೆ
ಅನುಭವಿಗಳಾದ ಬುಮ್ರಾ, ಶಮಿ ಗೈರಲ್ಲಿ ಭಾರತದ ಯುವ ಪಡೆ ವೇಗದ ಬೌಲಿಂಗ್‌ ಭಾರವನ್ನು ಹೊರ ಬೇಕಿದೆ. ಶಾದೂìಲ್‌, ಸಿರಾಜ್‌, ಚಹರ್‌ ಮೊದಲ ಆಯ್ಕೆಯಾಗಲಿದ್ದಾರೆ. ಸ್ಪಿನ್‌ ವಿಭಾಗದಲ್ಲಿ ಚಹಲ್‌-ಕುಲದೀಪ್‌ ಯಾದವ್‌ ಜೋಡಿ ದಾಳಿಗಿಳಿಯುವ ಸಾಧ್ಯತೆ ಹೆಚ್ಚು. ಚೈನಾಮನ್‌ ಬೌಲರ್‌ ಕುಲದೀಪ್‌ 2021ರ ಜುಲೈಯಲ್ಲಿ ಕೊನೆಯ ಸಲ ಭಾರತವನ್ನು ಪ್ರತಿನಿಧಿಸಿದ್ದರು. ಜೋಧ್‌ಪುರದ ಯುವ ಸ್ಪಿನ್ನರ್‌ ರವಿ ಬಿಷ್ಣೋಯಿ ಕೂಡ ರೇಸ್‌ನಲ್ಲಿದ್ದಾರೆ.

ವಿಂಡೀಸ್‌ ಸ್ಪೆಷಲಿಸ್ಟ್‌ ಟೀಮ್‌
ವೆಸ್ಟ್‌ ಇಂಡೀಸ್‌ ಏಕದಿನಕ್ಕೆ ಹೇಳಿ ಮಾಡಿಸಿದ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಪೊಲಾರ್ಡ್‌, ಹೋಲ್ಡರ್‌, ಪೂರಣ್‌, ಹೋಪ್‌, ಚೇಸ್‌, ಶೆಫ‌ರ್ಡ್‌, ಬ್ರಾವೊ… ಎಲ್ಲರೂ ದೈತ್ಯರೇ. ಆದರೆ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ಬದ್ಧತೆ ತೋರದಿರುವುದು ಕೆರಿಬಿಯನ್ನರ ಬಹು ದೊಡ್ಡ ದೌರ್ಬಲ್ಯ.

ಇಂಗ್ಲೆಂಡ್‌ ಎದುರಿನ ತವರಿನ ಟಿ20 ಸರಣಿಯನ್ನು 3-2 ಅಂತರದಿಂದ ಗೆದ್ದ ವಿಂಡೀಸ್‌ ತಂಡ ಭಾರತಕ್ಕೆ ಆಗಮಿಸಿದೆ. ಇದೇ ಲಯದಲ್ಲಿ ಸಾಗುವುದು ಪೊಲಾರ್ಡ್‌ ಪಡೆಯ ಯೋಜನೆ. ಆದರೆ ಸವಾಲು ಸುಲಭದ್ದಲ್ಲ.

ದಾಖಲೆಯ ಹಾದಿಯಲ್ಲಿ..
– ಯಜುವೇಂದ್ರ ಚಹಲ್‌ ಇನ್ನೊಂದು ವಿಕೆಟ್‌ ಕೆಡವಿದರೆ ಏಕದಿನದಲ್ಲಿ 100 ವಿಕೆಟ್‌ ಪೂರ್ತಿಗೊಳಿಸಲಿದ್ದಾರೆ.
– ರೋಹಿತ್‌ ಶರ್ಮ-ವಿರಾಟ್‌ ಕೊಹ್ಲಿ ಈವರೆಗೆ 4,906 ರನ್ನುಗಳ ಜತೆಯಾಟ ನಿಭಾಯಿಸಿದ್ದಾರೆ. ಇನ್ನು 94 ರನ್‌ ಪೇರಿಸಿದರೆ 5 ಸಾವಿರ ರನ್‌ ಪೂರ್ತಿಗೊಳಿಸಲಿದ್ದಾರೆ.
– ವಿರಾಟ್‌ ಕೊಹ್ಲಿ ಇನ್ನು 6 ರನ್‌ ಮಾಡಿದರೆ ತವರಿನ ಏಕದಿನ ಪಂದ್ಯಗಳಲ್ಲಿ 5 ಸಾವಿರ ರನ್‌ ಪೂರ್ತಿಗೊಳಿಸಲಿದ್ದಾರೆ.
– ಏಕದಿನದಲ್ಲಿ 300 ಬೌಂಡರಿ ಪೂರ್ತಿಗೊಳಿಸಲು ಶೈ ಹೋಪ್‌ಗೆ ಇನ್ನು ಕೇವಲ 2 ಬೌಂಡರಿಗಳ ಅಗತ್ಯವಿದೆ.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಇಶಾನ್‌ ಕಿಶನ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ದೀಪಕ್‌ ಹೂಡಾ, ಶಾರ್ದೂಲ್ ಠಾಕೂರ್, ದೀಪಕ್‌ ಚಹರ್‌, ಕುಲದೀಪ್‌, ಸಿರಾಜ್‌, ಚಹಲ್‌.
ವೆಸ್ಟ್‌ ಇಂಡೀಸ್‌: ಶೈ ಹೋಪ್‌, ಬ್ರ್ಯಾಂಡನ್‌ ಕಿಂಗ್‌, ಪೂರಣ್‌, ಶಮರ್‌ ಬ್ರೂಕ್ಸ್‌, ಕೈರನ್‌ ಪೊಲಾರ್ಡ್‌ (ನಾಯಕ), ಹೋಲ್ಡರ್‌, ಅಖೀಲ್‌ ಹೊಸೇನ್‌, ಅಲೆನ್‌, ಅಲ್ಜಾರಿ ಜೋಸೆಫ್, ರೊಮಾರಿಯೊ ಶೆಫ‌ರ್ಡ್‌, ಓಡೀನ್‌ ಸ್ಮಿತ್‌.
ಆರಂಭ: ಅ.1.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

 

Advertisement

Udayavani is now on Telegram. Click here to join our channel and stay updated with the latest news.

Next