Advertisement

ಟೀಂ ಸಿನ್ಮಾ ಮಹೇಶ್‌ಗೆ ಭರ್ಜರಿ ಆಫ‌ರ್‌

11:59 AM May 31, 2017 | Team Udayavani |

ಒಬ್ಬ ನಿರ್ದೇಶಕನಿಗೆ ಒಂದು ಸಿನಿಮಾ ಸಿಗೋದು ಕಷ್ಟ. ಹೀಗಿರುವಾಗ ಒಬ್ಬನೇ ನಿರ್ಮಾಪಕ, ನಿರ್ದೇಶಕನೊಬ್ಬನಿಗೆ ಬರೋಬ್ಬರಿ ಐದು ಸಿನಿಮಾಗಳನ್ನು ಕೊಟ್ಟರೆ! 
ಖಂಡಿತಾ ನಂಬೋದು ಕಷ್ಟ ಆಗುತ್ತೆ ಅಲ್ವಾ? ನಂಬಲೇಬೇಕು. ಈಗಾಗಲೇ ಮೂರು ಸಿನಿಮಾಗಳನ್ನು ಆ ನಿರ್ದೇಶಕನ ಕೈಗಿಟ್ಟ ನಿರ್ಮಾಪಕ, ಮುಂದಿನ ದಿನಗಳಲ್ಲಿ ಮತ್ತೆರಡು ಸಿನಿಮಾಗಳನ್ನು ಕೊಡುವುದಾಗಿ ಹೇಳಿದ್ದಾರೆ. ಹೀಗೆ ಹೇಳಿದ ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ. ಭರ್ಜರಿ ಅವಕಾಶ ಪಡೆದುಕೊಂಡ ನಿರ್ದೇಶಕ ಮುಸ್ಸಂಜೆ ಮಹೇಶ್‌.

Advertisement

ಹೌದು, ಈಗಾಗಲೇ ಮಹೇಶ್‌ ನಿರ್ದೇಶನದಲ್ಲಿ “ಜಿಂದಾ’ ಎಂಬ ಚಿತ್ರ ತಯಾರಾಗಿದೆ. ಈ ಚಿತ್ರವನ್ನು ನಿರ್ಮಿಸುತ್ತಿರುವವರು ದತ್ತಾತ್ರೇಯ ಬಚ್ಚೇಗೌಡ. ಇತ್ತೀಚೆಗೆ ಒಂದೇ ದಿನ ಕಂಠೀರವ ಸ್ಟುಡಿಯೋದಲ್ಲಿ ಎರಡು ಚಿತ್ರಗಳಿಗೆ ಅದ್ಧೂರಿಯಾಗಿ ಮುಹೂರ್ತವಾಗಿದೆ.  ಪ್ರೊಡಕ್ಷನ್‌ ನಂ 6 ಮತ್ತು 7 ಹೆಸರಿನಡಿ ಮುಹೂರ್ತವಾದ ಈ ಚಿತ್ರಗಳನ್ನು ಬಚ್ಚೇಗೌಡ ನಿರ್ಮಿಸಿದರೆ, ಮಹೇಶ್‌ ನಿರ್ದೇಶಿಸುತ್ತಿದ್ದಾರೆ. ಸಹಜವಾಗಿಯೇ ಮಹೇಶ್‌ ಖುಷಿಯಾಗಿದ್ದಾರೆ. “ಒಬ್ಬ ನಿರ್ಮಾಪಕ ಒಂದು ಸಿನಿಮಾ ರಿಲೀಸ್‌ ಮಾಡುವ ಹೊತ್ತಿಗೆ ಆ ತಂಡದ ಸಂಬಂಧ ಕಳೆದುಕೊಂಡಿರುತ್ತಾನೆ.

ಆದರೆ, ದತ್ತಾತ್ರೇಯ ಅವರು “ಜಿಂದಾ’ ರಿಲೀಸ್‌ಗೆ ಮುನ್ನವೇ, ನನಗೆ ಎರಡು ಸಿನಿಮಾ ನಿರ್ದೇಶಿಸುವ ಅವಕಾಶ ಕೊಟ್ಟಿದ್ದಾರೆ. ಮೊದಲ ಸಿನಿಮಾ ರಿಲೀಸ್‌ ಆಗದೆಯೇ ಎರಡು ಸಿನಿಮಾ ಕೊಟ್ಟಿದ್ದೀರಲ್ಲ ಅಂದಿದ್ದಕ್ಕೆ, ಆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಒಳ್ಳೇ ಸಿನಿಮಾ ಮಾಡಿ ಎಂದಷ್ಟೇ ಹೇಳಿದ್ದಾರೆ’ ಎನ್ನುತ್ತಾರೆ. ಅದಕ್ಕೆ ಪ್ರತಿಯಾಗಿ ನಿರ್ಮಾಪಕ ಬಚ್ಚೇಗೌಡ ಮತ್ತೆರಡು ಸಿನಿಮಾಗಳ ಆಫ‌ರ್‌ ನೀಡಿದ್ದಾರೆ. “ಮಹೇಶ್‌ ಅವರನ್ನು ಸದ್ಯಕ್ಕೆ ಬಿಡುವುದಿಲ್ಲ.

ಈ ಎರಡು ಸಿನಿಮಾಗಳು ಮುಗಿಯುತ್ತಿದ್ದಂತೆ ಅವರೊಂದಿಗೆ ಪ್ರೊಡಕ್ಷನ್‌ ನಂ. 8 ಮತ್ತು 9 ಸಿನಿಮಾ ಮಾಡುತ್ತೇನೆ’ ಎಂದು ಘೋಷಿಸಿದರು ದತ್ತಾತ್ರೇಯ. ಇತ್ತೀಚೆಗೆ ಮುಹೂರ್ತವಾದ  ಪ್ರೊಡಕ್ಷನ್‌ ನಂ 6 ಮತ್ತು 7 ಚಿತ್ರಗಳಲ್ಲಿ ಆದಿತ್ಯ ನಾಯಕರಾಗಿ ನಟಿಸುತ್ತಿದ್ದು, ಪ್ರೊಡಕ್ಷನ್‌ ನಂ 6ರಲ್ಲಿ ರಾಗಿಣಿ ನಾಯಕಿ. ಶ್ರಾವ್ಯಾ ಕೂಡಾ ಪಾತ್ರವೊಂದರಲ್ಲಿ ಕಾಣಿಸುತ್ತಿದ್ದಾರೆ. ಉಳಿದಂತೆ ಹಿರಿಯ ನಟರಾದ ಶ್ರೀನಿವಾಸ ಮೂರ್ತಿ, ಸುಂದರರಾಜ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next