Advertisement

ಪ್ರಸಕ್ತ ಶೈಕ್ಷಣಿಕ ವರ್ಷ ವಿಸ್ತರಣೆ ಬೇಡ

01:13 PM Oct 28, 2020 | Suhan S |

ರಾಮನಗರ: ಅನ್‌ಲಾಕ್‌ 5ರನ್ವಯ ಇದೇ ನವೆಂಬರ್‌ 17ರಿಂದ ಪದವಿ ತರಗತಿಗಳು ಆರಂಭವಾಗುತ್ತಿವೆ. ಈ ಬೆನ್ನಲ್ಲೆ ಎಸ್‌ಎಸ್‌ಎಲ್‌ಸಿ ತರಗತಿಗಳು ಆರಂಭವಾದರೆ, ಎದುರಾಗುವ ಸವಾಲುಗಳ ಬಗ್ಗೆ ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

Advertisement

ಎಸ್‌ಎಸ್‌ಎಲ್‌ಸಿ ಬೋಧಕರಿಗೆ “ಉದಯವಾಣಿ’ ಕೆಲವೊಂದಿಷ್ಟು ಪ್ರಶ್ನೆಗಳನ್ನು ಇಟ್ಟಿತ್ತು. ಇನ್ನುಳಿದ ಐದಾರು ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸಲು ಸಾಧ್ಯವೆ, ಪಠ್ಯ ಕಡಿತ ಎಷ್ಟಾಗಬೇಕು, ಪರೀಕ್ಷೆಗೆ ಬೇಕಾದ ಸಿದ್ಧತೆಗಳು, ಶೈಕ್ಷ ಣಿಕ ವರ್ಷದ ವಿಸ್ತರಣೆ ಇತ್ಯಾದಿ ಬಗ್ಗೆ ಮಾಹಿತಿ ಅಪೇಕ್ಷಿಸಿದ್ದು, ಶಿಕ್ಷಕರು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಶೇ.30 ರಿಂದ ಶೇ.50ರವರೆಗೆ ಪಠ್ಯ ಕಡಿತ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಯಲ್ಲಿ ಅಗತ್ಯ ಬದಲಾವಣೆ, ಸರಳೀಕರಣದ ಬಗ್ಗೆ ಶಿಕ್ಷಕರು ಒಲವು ತೋರಿದ್ದಾರೆ. ಬಹುತೇಕರು ಶೈಕ್ಷಣಿಕ ವರ್ಷ ವಿಸ್ತರಣೆ ಬೇಡ ಎಂದಿದ್ದಾರೆ.

ತಡವಾದಷ್ಟು ಪಠ್ಯಕ್ರಮ ಹೊರೆ!: ಅನ್‌ಲಾಕ್‌ 5ರನ್ವಯ ಕೇಂದ್ರ ಸರ್ಕಾರ ಶೈಕ್ಷಣಿಕ ವ್ಯವಸ್ಥೆಯನ್ನು ತೆರೆಯಲು ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಈ ಮಾರ್ಗದರ್ಶನದಅನ್ವಯ ಮೊದಲು ಪದವಿ ತರಗತಿ, ನಂತರ ಪ್ರೌಢಶಾಲಾ ತರಗತಿಗಳ ಆರಂಭಕ್ಕೆ ನಿರ್ಧರಿಸಿದೆ. ಆದರೆ, ತಡವಾದಷ್ಟು ಪಠ್ಯಕ್ರಮದ ಹೊರೆ ಹೆಚ್ಚಾಗುತ್ತದೆ ಎಂಬುದು ಪ್ರೌಢಶಾಲಾ ಶಿಕ್ಷಕರ ಅಭಿಪ್ರಾಯ. ನವೆಂಬರ್‌ ಅಂತ್ಯದ ವೇಳೆಗೆ ಎಸ್‌ಎಸ್‌ಎಲ್‌ಸಿ ತರಗತಿಗಳು ಆರಂಭವಾಗುತ್ತವೆ ಎಂಬ ನಿರೀಕ್ಷೆಇದೆ. ಮುಂದಿನ ಏಪ್ರಿಲ್‌ನಲ್ಲಿ ಪರೀಕ್ಷೆ ಎನ್ನುವುದಾದರೆ, ಬೋಧನೆ ಮತ್ತು ಪರೀಕ್ಷಾ ತಯಾರಿಗೆ ಸಿಗುವುದು ಕೇವಲ 4 ತಿಂಗಳು. ಈ ಅವಧಿಯಲ್ಲಿ ಹಾಲಿ ಪಠ್ಯಕ್ರಮದಲ್ಲಿರುವ ಬೋಧನೆ ಸಾಧ್ಯವೇ ಇಲ್ಲ. ಹೀಗಾಗಿ ಪಠ್ಯ ಕ್ರಮದಲ್ಲಿ ಶೇ. 30 ರಿಂದ ಶೇ.50ರಷ್ಟು ಕಡಿತವಾಗಬೇಕು ಎಂದು ಶಿಕ್ಷಕರು ಅಭಿ ಪ್ರಾಯ ವ್ಯಕ್ತಪಡಿಸಿದ್ದು, ಪಠ್ಯ ಕಡಿತದ ಪ್ರಮಾಣದ ಬಗ್ಗೆ ಶಿಕ್ಷಕರಲ್ಲೇ ಗೊಂದಲಗಳಿರುವುದು ಸ್ಪಷ್ಟವಾಗಿದೆ.

 ಪ್ರಶ್ನೆ ಪತ್ರಿಕೆಯೂ ಸರಳವಾಗಲಿ: ಚಂದನ ವಾಹಿನಿಯಲ್ಲಿ ವಿಷಯವಾರು ಪಠ್ಯ ಬೋಧನೆಯಾಗಿದೆ. ಅಧ್ಯಯನಕ್ಕೆ ವರ್ಕ್‌ ಶೀಟುಗಳು ಸರ್ಕಾರಿ ಶಾಲೆಮಕ್ಕಳ ಕೈ ಸೇರಿದೆ. ಘಟಕ ಪರೀಕ್ಷೆ ಮತ್ತು ವಿದ್ಯಾಗಮ ಮೂಲಕ ಮಾರ್ಗದರ್ಶನ ನೀಡಲಾಗಿದೆ. ಪಠ್ಯ ಕಡಿತದ ವೇಳೆ ಈಗಾಗಲೇ ಬೋಧನೆಯಾಗಿರುವ ಪಾಠಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ಬಹುತೇಕ ಶಿಕ್ಷಕರ ಅಭಿಪ್ರಾಯ.

ಶಾಲೆ ಆರಂಭವಾದರೆ?: ತರಗತಿಗಳು ಆರಂಭವಾದರೆ ಮಕ್ಕಳ ಸುರಕ್ಷತೆ ಬಗ್ಗೆ ಮಾತನಾಡಿರುವ ಶಿಕ್ಷಕರು ಸರ್ಕಾರವೇ ಮಕ್ಕಳಿಗೆ ವಾರಕ್ಕೆ 2-3 ಮಾಸ್ಕ್, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು. ಕೆಲವೆಡೆ ಶೌಚಾಲಯ ವ್ಯವಸ್ಥೆ ಸುಧಾರಣೆಯಾಗ ಬೇಕು. ವೈಯಕ್ತಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುವಂತೆ ಮೂಲ ಸೌಕರ್ಯಗಳನ್ನು ವೃದ್ಧಿಸಬೇಕಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

Advertisement

ಪಠ್ಯ ಕ್ರಮ ಕಡಿತ ಮಾಡುವುದಾದರೆ, ಇಡೀ ಪಾಠವನ್ನು ಕಡಿತಗೊಳಿಸಬೇಕು. ಈಗಲೇ ಈ ಬಗ್ಗೆ ಶಿಕ್ಷಕರಿಗೆ ಮಾಹಿತಿ ದೊರೆಯಬೇಕು. ನಾಲ್ಕು ಪುಟಗಳ ಪಾಠದಲ್ಲಿ 2 ಪುಟ ಬೋಧನೆ ಮಾಡಿ ಎನ್ನುವುದು ಸರಿಯಲ್ಲ. ವಾರ್ಷಿಕ ಪರೀಕ್ಷಾ ಪತ್ರಿಕೆಯಲ್ಲಿ 4-5 ಅಂಕಗಳ ಪ್ರಶ್ನೆಗಳು ಬೇಡವೇ ಬೇಡ, ಮಕ್ಕಳ  ಅಷ್ಟೆಲ್ಲ ಅಧ್ಯಯನ ಮಾಡಲು ಸಮಯವಿಲ್ಲ. ಬಹು ಆಯ್ಕೆಯ ಪ್ರಶ್ನೆ, ಸಂಕ್ಷಿಪ್ತ ಉತ್ತರದ ಪ್ರಶ್ನೆಗಳಿಗೆ ಆದ್ಯತೆ ಕೊಡಬೇಕು. ಸಿ.ವಿ.ಜಯಣ್ಣ, ಸಹ ಶಿಕ್ಷಕ (ಹಿರಿಯ), ಶೈಕ್ಷಣಿಕ ಪುಸ್ತಕಗಳ ಲೇಖಕರು, ರಾಮನಗರ ಟೌನ್‌

ಪಠ್ಯ ಕ್ರಮದಲ್ಲಿ ಕನಿಷ್ಠ ಶೇ.30 ರಷ್ಟು ಕಡಿತಗೊಳಿಸಿದರೆ, ಇನ್ನುಳಿದ ತಿಂಗಳುಗಳಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಲು ಸಾಧ್ಯವಿದೆ. ಶೈಕ್ಷಣಿಕ ವರ್ಷವನ್ನು 2 ತಿಂಗಳ ಕಾಲ ವಿಸ್ತರಣೆ ಮಾಡಿದರೆ ಬೋಧನೆಗೆ ಸಹಕಾರಿ. ಶೈಲ ಶ್ರೀನಿವಾಸ್‌, ಮು.ಶಿ., ಕೈಲಾಂಚ ಪ್ರೌಢಶಾಲೆ, ರಾಮನಗರ

ಪಠ್ಯಕ್ರಮವನ್ನು ಶೇ.40- 50ಕ್ಕೆ ಕಡಿತವಾಗಬೇಕು. ಇಲ್ಲದಿದ್ದರೆ, ಮಕ್ಕಳ ಮೇಲೆ ಹೊರೆ ಖಂಡಿತ. ಶೈಕ್ಷಣಿಕ ವರ್ಷವನ್ನು ವಿಸ್ತರಣೆ ಮಾಡುವ ಅವಶ್ಯಕತೆ ಇಲ್ಲ. ಮಾಡಿದರೆ, ಇನ್ನೊಂದು ಶೈಕ್ಷಣಿಕ ವರ್ಷಕ್ಕೆ ತೊಂದರೆಯಾಗಲಿದೆ. ಮಕ್ಕಳನ್ನು ಪರೀಕ್ಷೆಗೆ ತಯಾರಿಗೊಳಿಸಲು ಶಿಕ್ಷಕರು ಸಿದ್ಧರಿದ್ದೇವೆ. ಆರ್‌.ಸಿ. ಹೊನ್ನಗಂಗಪ್ಪ, ಮು.ಶಿ, ಗಾಣಕಲ್‌ ಪ್ರೌಢಶಾಲೆ, ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next