Advertisement

ದಿಗ್ಗಾಂವ ಮಠದ ಬಾವಿಯಲ್ಲಿ ಬಿದ್ದು ಶಿಕ್ಷಕಿ ಸಾವು

11:29 AM Mar 27, 2022 | Team Udayavani |

ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿನ ಬಾವಿಯಲ್ಲಿ ಬಿದ್ದು ಅತಿಥಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ.

Advertisement

ಭೂಮಿಕಾ ಶರಣಪ್ಪ ಊಡಗಿ (26) ಮೃತಪಟ್ಟ ಮಹಿಳೆ. ದಿಗ್ಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದ ಭೂಮಿಕಾ ಅವರು, ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯರ ಆಪ್ತಸಹಾಯಕರಾಗಿ ಕೆಲಸ ಮಾಡುತ್ತಿದ್ದ ಶರಣಪ್ಪ ಊಡಗಿ ಎನ್ನುವರ ಪತ್ನಿ ಎಂದು ತಿಳಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಹೋದ ಭೂಮಿಕಾ ವಾಪಸ್‌ ಬರಲಿಲ್ಲ. ಅತ್ತ ಶಾಲೆಗೂ ಹೋಗಿರಲಿಲ್ಲ. ಈ ಬಗ್ಗೆ ಮನೆಯ ಅಕ್ಕಪಕ್ಕದವರನ್ನು ವಿಚಾರಿಸಿದಾಗ, ಮಠದ ಹತ್ತಿರ ಹೋಗಿರುವ ವಿಷಯ ತಿಳಿಯಿತು. ಮಠದ ಆವರಣದಲ್ಲಿರುವ ಬಾವಿ ಬಳಿ ಅವರ ಚಪ್ಪಲಿಗಳು ಪತ್ತೆಯಾದವು. ಅಲ್ಲದೇ ಬಾವಿಗೆ ಅಳವಡಿಸಿದ್ದ ತಂತಿ ಜಾಲಿ ಕೂಡ ತೆರೆದುಕೊಂಡಿತ್ತು. ಇದರಿಂದ ಅನುಮಾನಗೊಂಡು ಹುಡುಕಿದಾಗ ಭೂಮಿಕಾ ಅವರ ಶವ ದೊರೆಯಿತು ಎಂದು ಚಿತ್ತಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಭೂಮಿಕಾ ಅವರ ತವರು ಮನೆಯವರು ಬರುವವರೆಗೂ ಕಾಯ್ದ ಪೊಲೀಸರು, ನಂತರ ಮರಣೋತ್ತರ ಪರೀಕ್ಷೆಗೆ ದಿಗ್ಗಾಂವನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ತದನಂತರ ಬೀದರ್‌ ಜಿಲ್ಲೆಯ ಹಾರಕೂಡದಿಂದ ದಿಗ್ಗಾಂವ ಗ್ರಾಮಕ್ಕೆ ಬಂದ ಪಾಲಕರು ಮಗಳ ಶವ ಪಡೆದರು.

ಭೂಮಿಕಾ ಅವರಿಗೆ ಮದುವೆಯಾಗಿ ಆರು ವರ್ಷವಾಗಿತ್ತು. ಆದರೆ ಮಕ್ಕಳು ಆಗಿರಲಿಲ್ಲ. ಚಿತ್ತಾಪುರ ಪೊಲೀಸ್‌ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next