Advertisement

ಟಿಡಿಎಸ್‌ ಸುತ್ತ ಮುತ್ತ…

03:45 AM Mar 06, 2017 | Team Udayavani |

ಸರಕಾರಕ್ಕೆ ತೆರುವ ತೆರಿಗೆಯ ವಿಚಾರದಲ್ಲಿ ನಾವು ಅತಿಹೆಚ್ಚು ತಲೆಕೆಡಿಸಿಕೊಳ್ಳುವುದು ಪ್ರಾಯಃ ಟಿಡಿಎಸ್‌ ಬಗ್ಗೆ. ಇದರ ಬಗ್ಗೆ ಅನಗತ್ಯ ಗೊಂದಲಗಳನ್ನು ಮಾಡಿಕೊಳ್ಳಲಾಗಿದೆ. ಸರಕಾರಕ್ಕೆ ಕಟ್ಟಬೇಕಾದ ಟ್ಯಾಕ್ಸ್‌ ವಿಷಯದಲ್ಲಿ ಮುಕ್ತವಾಗಿ ಕಾನೂನುಬದ್ಧವಾಗಿ ವ್ಯವಹರಿಸುವುದೇ ಸುಲಭ ಮತ್ತು ಒಳ್ಳೆಯದು.

Advertisement

ಗುರುಗುಂಟಿ ರಾಯರು ತಮ್ಮ ಪೆನ್ಶನ್‌ ದುಡ್ಡನ್ನು ಇಪ್ಪತ್ತೈದು ಬ್ಯಾಂಕಿನಲ್ಲಿ ಇಡಲು ಅಲೆದಾಡುವುದನ್ನುಕಂಡು ಬಹೂರಾಣಿಗೆ ನಗು ಬಂತು. “”ಯಾಕೆ ಮಾವಾ ಈ ದ್ರಾವಿಡ ಪ್ರಾಣಾಯಾಮ? ಎಲ್ಲ ಒಂದೇ ಕಡೆ ಹಾಕ್ಬಾರ್ದೇ?” ಅಂತ ನೆಗೆಯಾಡಿದಳು. 

“”ಇಲ್ಲ ಮಗೂ ಎಲ್ಲ ಒಂದೇ ಕಡೆ ಹಾಕಿದ್ರೆ ಟಿಡಿಎಸ್‌ ಕಟ್‌ ಆಗ್ತದೆ. ಟ್ಯಾಕ್ಸ್‌ ಉಳಿಸ್ಲಿಕ್ಕೆ ಸ್ಪ್ಲಿಟ್‌ ಮಾಡಿ ಬೇರೆ ಬೇರೆ ಕಡೆ ಎಫ್ಡಿ ಮಾಡ್ಬೇಕು- ಬಡ್ಡಿ ಹತ್ಸಾವ್ರ ದಾಟದ ಹಾಗೆ’… ಸಮಜಾಯಿಷಿ ನೀಡಿದರು ರಾಯರು.
***
ಟಿಡಿಎಸ್‌ ಅಥವಾ ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌ ಎಂಬುದು ಬಹುತೇಕರಿಗೆ ಒಂದು ಮೂರಕ್ಷರದ ಭೂತವೇ ಆಗಿ ಪರಿಣಮಿಸಿದೆ. ನನಗೆ ಬರುವ ಫೋನ್‌ ಕಾಲ್‌ಗ‌ಳಲ್ಲಿ ಸುಮಾರು ಕಾಲುವಾಶಿ ಈ ಒಂದೇ ವಿಚಾರದ ಬಗ್ಗೆ ಇರುತ್ತದೆ. ಹೀಗೆ ಮಾಡಿದರೆ ಅಥವಾ ಹಾಗೆ ಮಾಡಿದರೆ ಟಿಡಿಎಸ್‌ಡಿಡಕ್ಟ್ ಮಾಡ್ತಾರಾ? ಮತ್ತು ಟಿಡಿಎಸ್‌ ಡಿಡಕ್ಟ್ ಮಾಡದೆ ಇರುವ ಹಾಗೆ ಎಂತ ಮಾಡಬೇಕು? ಸುತ್ತಿ ಬಳಸಿ ಮತ್ತೆ ಕೊನೆಗೆ ಬರುವುದು ಇಲ್ಲಿಗೇ.

ಈ ಟಿಡಿಎಸ್‌ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮತ್ತು ಈ ಭೂತದ ಉಚ್ಚಾಟನೆಗಾಗಿ ಯಾವುದೇ ಮಂತ್ರವಾದಿಯನ್ನು ಕಂಡು ಉರ್ಕು ಕಟ್ಟಿಸಿಕೊಳ್ಳುವ ಅಗತ್ಯವೂ ಇಲ್ಲ. ಅಸಲಿನಲ್ಲಿ ಟಿಡಿಎಸ್‌ ಎನ್ನುವುದು ಅಂತಿಮವಾದ ಟ್ಯಾಕ್ಸ್‌ ಅಲ್ಲವೇ ಅಲ್ಲ. ಅದು ಏನಿದ್ದರೇ ಬರೇ ಒಂದು ಟೆಂಪರವರಿ ಏರ್ಪಾಡು ಮಾತ್ರ. 

ಮೊತ್ತ ಮೊದಲಾಗಿ ನಾವು ಟಿಡಿಎಸ್‌ ಮತ್ತು ಟಾಕ್ಸ್‌ ಮಧ್ಯೆ ವ್ಯತ್ಯಾಸವನ್ನು ಅರಿತುಕೊಳ್ಳಬೇಕು. ಓರ್ವ ವ್ಯಕ್ತಿಗೆ ನಿಗದಿತ ರಿಯಾಯಿತಿಗಳ ಬಳಿಕ (ಸೆಕ್ಷನ್‌ 80 ಸಿ ಅಡಿಯಲ್ಲಿ 1.5 ಲಕ್ಷ, ಇತ್ಯಾದಿ) ಬರುವ ಆದಾಯವು ಕನಿಷ್ಠ ಆದಾಯ ತೆರಿಗೆ ಮಿತಿಯನ್ನು ಮೀರಿದರೆ ತೆರಿಗೆ ಕಟ್ಟತಕ್ಕದ್ದು. ಈ ಮಿತಿಯು ಸಾಮಾನ್ಯ ನಾಗರಿಕರಿಗೆ ರೂ. 2.5 ಲಕ್ಷ, ಹಿರಿಯ ನಾಗರಿಕರಿಗೆ (ವಯಸ್ಸು 60-80) ರೂ. 3 ಲಕ್ಷ ಹಾಗೂ ಅತಿಹಿರಿಯ ನಾಗರಿಕರಿಗೆ (ವಯಸ್ಸು 80 ಮೀರಿ) 5 ಲಕ್ಷ ಆಗಿದೆ. ಇದು ಮತ್ತು ಇದು ಮಾತ್ರ ಅಂತಿಮವಾಗಿ ನಮಗೆ ಭಾದಿಸುವ ತೆರಿಗೆ ಕಾನೂನು. 

Advertisement

ಬದಲಿಗೆ, ಟಿಡಿಎಸ್‌ ಅಥವಾ ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌ ಎಂಬುದು ಮೂಲದಲ್ಲಿಯೇ ಸ್ವಲ್ಪ ತೆರಿಗೆ ಸಂಗ್ರಹ ಮಾಡಲು ಸರಕಾರವು ಮಾಡಿಕೊಂಡ ಒಂದು ಆಡಳಿತಾತ್ಮಕ ವ್ಯವಸ್ಥೆ ಮಾತ್ರ. ಅದುವೇ ಅಂತಿಮವಲ್ಲ. ಜನತೆ ಕರ ತಪ್ಪಿಸುವುದಕ್ಕೆ ಉತ್ತರವಾಗಿ ಆರಂಭಿಸಿರುವ ಆಡಳಿತಾತ್ಮಕ ಹೆಜ್ಜೆ. ಉದಾಹರಣೆಗೆ, ಬ್ಯಾಂಕ್‌ ಬಡ್ಡಿಯ ಮೇಲೆ ರೂ. 10,000 ವಾರ್ಷಿಕ ಆದಾಯ ಮೀರಿದರೆ ಆ ಬ್ಯಾಂಕ್‌ ಕಾನೂನು ಪ್ರಕಾರ 10% ಲೆಕ್ಕದಲ್ಲಿ ಟಿಡಿಎಸ್‌ ಕಳೆಯುತ್ತದೆ. (ಪ್ಯಾನ್‌ಕಾರ್ಡ್‌ ಸಲ್ಲಿಸದೆ ಇದ್ದವರಿಗೆ ಇದು 20%). ಆದರೆ ಇದೊಂದು ತಾತ್ಕಾಲಿಕ ವ್ಯವಸ್ಥೆ. ವರ್ಷಾಂತ್ಯದಲ್ಲಿ ಆದಾಯ ನಿಮ್ಮ ಒಟ್ಟು ಆದಾಯ ತೆರಿಗೆ ಮಿತಿಯೊಳಗಿದ್ದರೆ ಈ ಮೊತ್ತವನ್ನು ರಿಟರ್ನ್ ಸಲ್ಲಿಸಿ ವಾಪಾಸು ಪಡಕೊಳ್ಳಬಹುದು.

ಬದಲಿಗೆ ಒಟ್ಟು ತೆರಿಗೆ ತಮ್ಮ ಹೆಚ್ಚುವರಿ ಸ್ಲಾಬಿನ ಕಾರಣ ಟಿಡಿಎಸ್‌ ಮೊತ್ತಕ್ಕಿಂತ ಜಾಸ್ತಿ ಬಂದಲ್ಲಿ ಉಳಿದ ಬಾಕಿಯನ್ನು ನಿಗದಿತ ಸಮಯದ ಒಳಗೆ ಪಾವತಿ ಮಾಡತಕ್ಕದ್ದು. ಹೀಗೆ ಅಂತಿಮವಾಗಿ ಎಲ್ಲ ಆದಾಯನ್ನೂ ಸೇರಿಸಿ ನೋಡಿ ಸಲ್ಲಬೇಕಾದ ತೆರಿಗೆ ಮತ್ತು ಈಗಾಗಲೇ ಕಟ್ಟಲ್ಪಟ್ಟ ತೆರಿಗೆಯ ನಡುವಿನ ವ್ಯತ್ಯಾಸವನ್ನು ಭರಿಸಿಕೊಳ್ಳಬೇಕು. ಆದಕಾರಣ ಟಿಡಿಎಸ್ಸೇ ಅಂತಿಮವಲ್ಲ. ಅದೊಂದು ಹಂತ ಮಾತ್ರ. ಹಾಗಾಗಿ ಅದರ ಬಗ್ಗೆ ಸಿಕ್ಕಾಪಟ್ಟೆ ಟೆನ್ಶನ್‌ ತಗೊಳ್ಳುವ ಅಗತ್ಯ ಇಲ್ಲ. ಒಟ್ಟು ಆದಾಯದ ಮೇಲೆ ಅಂತಿಮ ತೆರಿಗೆ ಎಷ್ಟು ಬರಬಹುದು ಎನ್ನುವುದರ ಮೇಲೆ ವರ್ಷಪೂರ್ತಿ ಒಂದು ಕಣ್ಣು ಇಟ್ಟಿರಲೇ ಬೇಕು. 

ಆದಾಗ್ಯೂ, ಒಟ್ಟು ಆದಾಯದ ಮೇರೆಗೆ ಏನೂ ತೆರಿಗೆ ಬಾರದೇ ಇದ್ದಲ್ಲಿ ಸುಖಾ ಸುಮ್ಮನೆ ಟಿಡಿಎಸ್‌ ಕಡಿಸಿಕೊಂಡು ಆಮೇಲೆ ಅದನ್ನೇ ರಿಫ‌ಂಡ್‌ ಪಡೆಯುವ ಕೆಲಸ ಯಾಕೆ ಬೇಕು? ಅದೊಂದು ಅನಗತ್ಯ ಕೆಲಸವಲ್ಲವೇ? ಅದೃಷ್ಟವಶಾತ್‌, ಸರಕಾರ ಇದನ್ನು ಒಪ್ಪುತ್ತದೆ ಮತ್ತು ಅಂತಹ ಅರ್ಥಹೀನ ಕೆಲಸ ಮಾಡುವುದರಿಂದ ನಮಗೆ ವಿನಾಯಿತಿ ಕೂಡ ನೀಡುತ್ತದೆ. ಅಂದರೆ ಯಾರು ಅಂತಿಮವಾಗಿ ಕರಾರ್ಹರಲ್ಲವೋ ಅವರಿಗೆ ಈ ಟಿಡಿಎಸ್‌ ಪ್ರಕ್ರಿಯೆಯಿಂದ ವಿನಾಯಿತಿಯನ್ನು ನೀಡಲಾಗಿದೆ. ಅಂತೆಯೇ ಯಾರು ಅಂತಿಮವಾಗಿ ಕರಾರ್ಹರೋ ಅವರು ಟಿಡಿಎಸ್‌ ಪ್ರಕ್ರಿಯೆಗೆ ತಲೆ ಒಡ್ಡಲೇ ಬೇಕು. 

ಅದು ಸರಿ. ಆದರೆ ಕರಾರ್ಹರಲ್ಲದವರಿಗೆ ಟಿಡಿಎಸ್‌ನಿಂದ ಮುಕ್ತಿ ಹೇಗೆ? ಒಂದು ಬ್ಯಾಂಕು ರೂ. 10,000 ಮೀರಿ ಬಡ್ಡಿ ಆದಾಯವಿದ್ದವರಿಂದ 10% ಟಿಡಿಎಸ್‌ ಮಾಡುವುದು ಕಾನೂನು. ಆದರೆ ತಾವು ಅಂತಿಮವಾಗಿಯೂ ಕರಾರ್ಹರಲ್ಲದೆ ಇದ್ದಲ್ಲಿ ಫಾರ್ಮ್ 15ಜಿ ಭರ್ತಿಗೊಳಿಸಿ ಬ್ಯಾಂಕಿನಲ್ಲಿ ನೀಡತಕ್ಕದ್ದು. 15ಜಿ ಎನ್ನುವುದು ತಾನು ಕರಾರ್ಹನಲ್ಲ, ನನ್ನ ಡೆಪಾಸಿಟ್‌ ಮೇಲೆ ಟಿಡಿಎಸ್‌ ಕಡಿಯಬೇಡಿ ಎಂದು ಸ್ವಯಂ-ಹೇಳಿಕೆ ಕೊಡುವ ಡಿಕ್ಲರೇಶನ್‌. ಹಿರಿಯ ನಾಗರಿಕರಿಗೆ ಈ ಫಾರ್ಮ್ ಸ್ವಲ್ಪ ಬದಲಾವಣೆಗಳೊಂದಿಗೆ 15 ಎಚ್‌ ರೂಪದಲ್ಲಿ ಬರುತ್ತದೆ.

ಆದರೆ ನೆನಪಿರಲಿ. ಈ ಫಾರ್ಮುಗಳನ್ನು ಅವಕ್ಕೆ ಅರ್ಹರಾದವರು ಮಾತ್ರ ಸಲ್ಲಿಸತಕ್ಕದ್ದು. ಕರಭಾರ ಇರುವ ಜನತೆ ಇವನ್ನು ತುಂಬಿ ಕೊಟ್ಟರೆ ಅಪರಾಧವಾಗುತ್ತದೆ. ಕರಾರ್ಹ ತೆರಿಗೆ ಇಲ್ಲದವರು ಮಾತ್ರವೇ ಇವನ್ನು ಭರ್ತಿ ಮಾಡಲು ಅರ್ಹರು. 

15 ಜಿ: ಇದು ಕರಾರ್ಹ ಆದಾಯ ಇರದ 60 ವಯಸ್ಸಿನ ಒಳಗಿನ ಸಾಮಾನ್ಯ ಜನರು ತುಂಬಬಹುದಾದ ಡಿಕ್ಲರೇಶನ್‌. ಇದನ್ನು ತುಂಬಲು ಎಲ್ಲ ಮೂಲಗಳಿಂದ ಬರುವ ಒಟ್ಟು ಆದಾಯ ಎಲ್ಲ ಕರ ರಿಯಾಯಿತಿಗಳನ್ನು ಕಳೆದ ಬಳಿಕ ರೂ. 2.5 ಲಕ್ಷದ ಕರಾರ್ಹ ಮಿತಿಯನ್ನು ಮೀರಿರಬಾರದು. ಅದಲ್ಲದೆ ಇನ್ನೊಂದು ನಿಯಮವೂ ಇದೆ. ಅದೇನೆಂದರೆ ಕೇವಲ ಬಡ್ಡಿ ಆದಾಯವೂ ರೂ. 2.5 ಲಕ್ಷದ ಮಿತಿಯನ್ನು ಮೀರಿರಬಾರದು. ಈ ಎರಡೂ ನಿಯಮಗಳಡಿ ಅರ್ಹರಾದವರು ಮಾತ್ರ ಇದನ್ನು ತುಂಬಿ ಬ್ಯಾಂಕಿಗೆ ನೀಡಬಹುದು. ಅದರ ಆಧಾರದಲ್ಲಿ ಬ್ಯಾಂಕು ರೂ. 10000 ಮೀರಿದರೂ ಬಡ್ಡಿಯ ಮೇಲೆ ಟಿಡಿಎಸ್‌ ಕಳೆಯುವುದಿಲ್ಲ. 

15ಎಚ್‌: ಇದು ಕರಾರ್ಹ ಆದಾಯ ಇರದ 60 ವಯಸ್ಸು ಮೀರಿದ ಹಿರಿಯ ನಾಗರಿಕರು ಮಾತ್ರ ತುಂಬಬಹುದಾದ ಡಿಕ್ಲರೇಶನ್‌. ಇದನ್ನು ತುಂಬಲು ಪ್ರಸ್ತುತ ತೆರಿಗೆ ದರ ಪ್ರಕಾರ 60-80 ವಯಸ್ಸಿನವರಿಗೆ ರೂ. 3 ಲಕ್ಷ ಹಾಗೂ 80ರಿಂದ ಹೆಚ್ಚಿನ ವಯಸ್ಸಿನವರಿಗೆ ರೂ. 5 ಲಕ್ಷ ಮೀರದ ಕರಾರ್ಹ ಆದಾಯವಿರಬೇಕು. ಬಡ್ಡಿ ಆದಾಯದ ಬಗ್ಗೆ ಪ್ರತ್ಯೇಕ ನಿಯಮ ಈ ವರ್ಗದವರಿಗೆ ಇಲ್ಲ. ಹಾಗಾಗಿ ಎಲ್ಲ ರಿಯಾಯತಿಗಳ ಬಳಿಕದ ಕರಾರ್ಹ ಆದಾಯ ಈ ಮಿತಿಗಳೊಳಗೆ ಇದ್ದುಕೊಂಡು ಈ ಹೇಳಿಕೆ ಸಲ್ಲಿಸಿದವರಿಗೆ ಟಿಡಿಎಸ್‌ ಕಡಿತವಾಗುವುದಿಲ್ಲ. 

ಈ ರೀತಿ ಟಿಡಿಎಸ್‌ ಮತ್ತು ಟ್ಯಾಕ್ಸ್‌ ಮಧ್ಯೆ ಇರುವ ವ್ಯತ್ಯಾಸವನ್ನು ಸರಿಯಾಗಿ ಅರಿತುಕೊಂಡು ಅಂತಿಮವಾಗಿ ಕರಾರ್ಹ ಆದಾಯ ಇಲ್ಲದವರು ಮಾತ್ರ 15ಜಿ/ಎಚ್‌ ಫಾರ್ಮುಗಳನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಟಿಡಿಎಸ್‌ ಕಡಿತವನ್ನು ತಪ್ಪಿಸಿಕೊಳ್ಳಬಹುದು. ಕರಾರ್ಹ ಆದಾಯ ಇರುವವರು ಯಾವುದೇ ಫಾರ್ಮ್ ಉಪಯೋಗಿಸಿಕೊಂಡು ಈ ಟಿಡಿಎಸ್‌ ನಿಂದ ತಪ್ಪಿಸಿಕೊಳ್ಳುವಂತಿಲ್ಲ. ಅದೂ ಅಲ್ಲದೆ ಟಿಡಿಎಸ್‌ ಕಡಿತವಾಗಿರಲಿ, ಕಡಿತವಾಗದೇ ಇರಲಿ; ಅಂತಿಮ ಕರ ಸಂದಾಯ ಪ್ರತ್ಯೇಕವಾಗಿಯೇ ಸ್ಲಾಬಾನುಸಾರ ನಿರ್ಣಯವಾಗುತ್ತದೆ ಹಾಗೂ ಆ ಕರಭಾರದಿಂದ ಟಿಡಿಎಸ್‌ ಮೊತ್ತವನ್ನು ಕಳೆದು ಉಳಿದ ಕರವನ್ನು ಕಟ್ಟುವುದು/ ರಿಫ‌ಂಡ್‌ ಪಡೆಯುವುದನ್ನು ಮಾಡಬಹುದು. 

ಇನ್ನು ಕೆಲವರು ಟಿಡಿಎಸ್‌ ತಪ್ಪಿಸುವ ಏಕೈಕ ಉದ್ದೇಶದಿಂದ ಬೇರೆ ಬೇರೆ ಬ್ಯಾಂಕುಗಳಲ್ಲಿ ಎಫ್ಡಿ ಇಡುತ್ತಾರೆ. ಇದರಿಂದ ನೈಜವಾಗಿ ಟ್ಯಾಕ್ಸ್‌ ಇಲ್ಲದವರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಆದರೆ ನೈಜವಾಗಿ ಟ್ಯಾಕ್ಸ್‌ ಕಟ್ಟಬೇಕಾಗಿದ್ದು, ಅದನ್ನು ಸರಕಾರದಿಂದ ಕಣ್ತಪ್ಪಿಸುವ ಯೋಜನೆ ಇರುವವರು ಮಾತ್ರ ಇಂತಹ ಕೃತ್ಯಗಳಿಂದ ದುರ್ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಅದರೆ ತೆರಿಗೆ ತಪ್ಪಿಸುವುದು ಕಾನೂನುಬಾಹಿರ ಹಾಗೂ ಸಿಕ್ಕಿ ಬಿದ್ದವರಿಗೆ ಬಡ್ಡಿ ಹಾಗೂ ತಪ್ಪುದಂಡ ವಿಧಿಸುತ್ತಾರೆ. ಟ್ಯಾಕ್ಸ್‌ ಕಟ್ಟುವಲ್ಲಿ ಕಟ್ಟಲೇ ಬೇಕು. ಇತ್ತೀಚೆಗೆ ಕರ ಇಲಾಖೆ ಎಲ್ಲವನ್ನೂ ಪ್ಯಾನ್‌ ನಂಬರ್‌ ಮೂಲಕ ಜಾಡು ಹಿಡಿಯುವ ಕಾರಣ ಸರಕಾರಕ್ಕೆ ಎಲ್ಲ ವ್ಯವಹಾರವೂ ಗೊತ್ತಾಗಿಯೇ ಆಗುತ್ತದೆ. ಇದನ್ನೂ ಗಮನದಲ್ಲಿ ಇಟ್ಟುಕೊಳ್ಳುವುದು ಮುಖ್ಯ. 

ಪ್ಯಾನ್‌ ಕೊಡದ ಕಾರಣಕ್ಕೋ 15 ಜಿ/ಎಚ್‌ ಅಥವಾ ಇನ್ಯಾವುದೇ ಕಾರಣಕ್ಕೆ ಅಗತ್ಯಕ್ಕಿಂತ ಜಾಸ್ತಿ ಟಿಡಿಎಸ್‌ ಕಟ್ಟಿಹೋದಲ್ಲಿ ಅದನ್ನು ರಿಟರ್ನ್ ಫೈಲಿಂಗ್‌ ಮೂಲಕ ರಿಫ‌ಂಡ್‌ ಪಡೆಯಬಹುದಾಗಿದೆ. ಆನ್‌-ಲೈನ್‌ ರಿಟರ್ನ್ ಫೈಲಿಂಗ್‌ ಮಾಡುವುದರಿಂದ ರಿಫ‌ಂಡ್‌ ಪ್ರಕ್ರಿಯೆ ಸುಲಭ ಮತ್ತು ಖಚಿತವೂ ಆಗಿದೆ. ಬಡ್ಡಿ ಸಹಿತ ನಿಮ್ಮ ದುಡ್ಡು ನಿಮಗೆ ವಾಪಾಸ್‌ ಬರುತ್ತದೆ.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next