Advertisement

ಕೋಟ್ಯಂತರ ರೂ. ಆಸ್ತಿಕರ ಬಾಕಿ

10:16 AM Mar 17, 2022 | Team Udayavani |

ಹುಬ್ಬಳ್ಳಿ: ಆಸ್ತಿಕರ ಸಮರ್ಪಕ ಸಂಗ್ರಹಕ್ಕೆ ಮಹಾನಗರ ಪಾಲಿಕೆ ಮಹತ್ವದ ಹೆಜ್ಜೆ ಇರಿಸಿದೆ. ಆದರೆ ಸರಕಾರಿ ಕಚೇರಿಗಳು, ಸರಕಾರಿ ಸ್ವಾಮ್ಯ ಕಚೇರಿ-ಕಟ್ಟಡ, ಕೈಗಾರಿಕಾ ಪ್ರದೇಶಗಳ ಬಾಕಿ ದೊಡ್ಡ ಸವಾಲಾಗಿದೆ. ತಹಶೀಲ್ದಾರ್‌ ಕಚೇರಿ ಕಟ್ಟಡ, ಪಿಡಬ್ಲ್ಯುಡಿ, ಎಪಿಎಂಸಿ, ವಾಯವ್ಯ ಸಾರಿಗೆ ಸಂಸ್ಥೆ ಹಾಗೂ ಪಾಲಿಕೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶಗಳಿಂದ ಪಾಲಿಕೆಗೆ ಕೋಟ್ಯಂತರ ರೂ.ಆಸ್ತಿಕರ ಬಾಕಿ-ದಂಡ ಬರಬೇಕಾಗಿದೆ.

Advertisement

ಮಹಾನಗರ ಪಾಲಿಕೆಯ ಸ್ವಯಂ ಆದಾಯ ಮೂಲದಲ್ಲಿ ಆಸ್ತಿ ಕರವೇ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಜನರ ಮನೆ, ಕಟ್ಟಡ, ಖುಲ್ಲಾ ಜಾಗ ಸೇರಿದಂತೆ ವಿವಿಧ ಆಸ್ತಿ ಕರವನ್ನು ಬಹುತೇಕವಾಗಿ ಸಂಗ್ರಹಿಸಲಾಗುತ್ತದೆ. ಆದರೆ ಸರಕಾರಿ ಕಚೇರಿ, ಸರಕಾರಿ ಸ್ವಾಮ್ಯದ ಆಸ್ತಿ, ಕೈಗಾರಿಕಾ ಪ್ರದೇಶದ ಆಸ್ತಿಕರ ಪಾಲಿಕೆ ಪಾಲಿಗೆ ಸವಾಲು-ಸಮಸ್ಯೆಯಾಗಿ ಕಾಡತೊಡಗಿದೆ. ಬರುವ ಬಾಕಿ ಬರುತ್ತಿಲ್ಲ. ಇನ್ನು ಒಂದೆರಡು ಕಡೆ ದಂಡ ದೊಡ್ಡ ಗಂಟಾಗಿಯೇ ಮುಂದುವರಿದಿದೆ.

ಮಹಾನಗರ ಪಾಲಿಕೆ ಪ್ರತಿವರ್ಷ ಆಸ್ತಿ ಕರದ ಗುರಿಯಲ್ಲಿ ಸಾಮಾನ್ಯವಾಗಿ ಶೇ.80-85 ವಸೂಲಿ ಮಾಡುತ್ತದೆ. ಕೆಲವೊಮ್ಮೆ ಶೇ.90ಕ್ಕೂ ತಲುಪಿದ್ದು, ಇದೆ. ಆದರೆ ಸರಕಾರಿ ಕಚೇರಿಗಳಿರುವ ಕಟ್ಟಡ ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಬರಬೇಕಾದ ಬಾಕಿ ಪಾಲಿಕೆ ಆದಾಯ ಕುಗ್ಗಿಸಿದ್ದು, ಹಲವು ಅಭಿವೃದ್ಧಿ ಕಾರ್ಯಗಳಿಗೂ ಅಡ್ಡಿಯುಂಟು ಮಾಡುತ್ತಿದೆ. ಕೈಗಾರಿಕಾ ಪ್ರದೇಶ, ಎಪಿಎಂಸಿ ಆಸ್ತಿಕರ ವಿಚಾರದಲ್ಲಿ ಒಂದಿಷ್ಟು ಗೊಂದಲ ಇದೆ. ಆದರೆ ಆಸ್ತಿಕರ ಪಾವತಿಸಲೇಬೇಕೆಂದು ಸರಕಾರ ಸ್ಪಷ್ಟಪಡಿಸಿದ್ದು, ಪಾಲಿಕೆಯವರು ಚಲನ್‌ಗಳನ್ನು ನೀಡಿದ್ದರೂ, ನಿರೀಕ್ಷಿತ ರೀತಿಯಲ್ಲಿ ಆಸ್ತಿ ಕರ ಬಾಕಿ ಹಾಗೂ ದಂಡ ವಸೂಲಿ ಆಗದಿರುವುದು ಪಾಲಿಕೆಗೆ ತಲೆನೋವು ತರಿಸಿದೆ.

ಬರಬೇಕಿದೆ ಕೋಟಿ, ಕೋಟಿ ಬಾಕಿ: ಮಹಾನಗರ ಪಾಲಿಕೆಗೆ ಸರಕಾರಿ ಕಚೇರಿ ಹಾಗೂ ಸರಕಾರಿ ಸ್ವಾಮ್ಯ ಸಂಸ್ಥೆಗಳು, ಕೈಗಾರಿಕಾ ಪ್ರದೇಶಗಳಿಂದ ಕಳೆದ ಕೆಲ ವರ್ಷಗಳಿಂದ ಬರಬೇಕಾದ ಬಾಕಿ ಬಾರದಾಗಿದ್ದು, ಈಗಾಗಲೇ ಚಲನ್‌ಗಳನ್ನು ನೀಡಲಾಗಿದ್ದು, ಕರ ಪಾವತಿಸಿದ್ದರೆ ಕಟ್ಟಡಗಳಿಗೆ ಬೀಗಮುದ್ರೆಗೆ ಪಾಲಿಕೆ ಗಂಭೀರ ಚಿಂತನೆ ನಡೆಸಿದೆ.

ಪಾಲಿಕೆ ಅಂಕಿ-ಅಂಶಗಳ ಪ್ರಕಾರ ವಾಯವ್ಯ ಸಾರಿಗೆ ಸಂಸ್ಥೆಯಿಂದ ಸುಮಾರು 1.45 ಕೋಟಿ ರೂ. ಆಸ್ತಿ ಕರ ಶುಲ್ಕ-ದಂಡ ಬರಬೇಕಿದ್ದು, ಹುಬ್ಬಳ್ಳಿ ತಹಶೀಲ್ದಾರ್‌ ಕಚೇರಿ ಕಟ್ಟಡದಿಂದ 46 ಲಕ್ಷ ರೂ., ಲೋಕೋಪಯೋಗಿ ಇಲಾಖೆಯಿಂದ 46 ಲಕ್ಷ ರೂ., ವೇರ್‌ಹೌಸ್‌ನಿಂದ 74 ಲಕ್ಷ ರೂ., ಎಪಿಎಂಸಿಯಿಂದ ಆಸ್ತಿಕರ 3.40 ಕೋಟಿ ರೂ. ಬಾಕಿ, ಅಂದಾಜು 11 ಲಕ್ಷ ರೂ. ದಂಡ ಬರಬೇಕಾಗಿದೆ.

Advertisement

ಅದೇ ರೀತಿ ಪಾಲಿಕೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶಗಳಿಂದ ಆಸ್ತಿಕರ ಬಾಕಿ-ದಂಡ ಬರಬೇಕಾಗಿದೆ. ಆದರೆ ಕೈಗಾರಿಕಾ ಪ್ರದೇಶಗಳು ಪಾಲಿಕೆಗೆ ಹಸ್ತಾಂತರ ಆಗಿಲ್ಲ. ಈಗಾಗಲೇ ಕೆಎಸ್‌ಎಸ್‌ಐಡಿಸಿ, ಕೆಐಎಡಿಬಿಗೆ ಶುಲ್ಕ ಪಾವತಿಸಿದ್ದು, ಪಾಲಿಕೆಗೆ ಯಾಕೆ ಕರ ಪಾವತಿಸಬೇಕು, ಹಸ್ತಾಂತರ ಮಾಡಿಕೊಂಡ ನಂತರ ಹೊಸದಾಗಿ ಆಸ್ತಿಕರ ಪಾವತಿಸುತ್ತೇವೆ, ಹಸ್ತಾಂತರ ವೇಳೆ ನಾವು ಇಲ್ಲಿಯವರೆಗೆ ನಾವು ಪಾವತಿಸಿದ ಶುಲ್ಕವನ್ನು ಪಾಲಿಕೆ ಹಸ್ತಾಂತರ ಮಾಡಿಕೊಳ್ಳಲಿ ಎಂಬುದು ಉದ್ಯಮಿಗಳ ವಾದ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಇರುವುದರಿಂದ ಆಸ್ತಿಕರ ಪಾವತಿಸಬೇಕೆಂಬುದು ಪಾಲಿಕೆ ಅನಿಸಿಕೆಯಾಗಿದೆ.

ಕೆಎಸ್‌ಎಸ್‌ಐಡಿಸಿಗೆ ಸೇರಿದ ಸುಮಾರು 478 ಆಸ್ತಿ, ತಾರಿಹಾಳ ಇನ್ನಿತರೆ ಕಡೆ ಸುಮಾರು 300 ಆಸ್ತಿ ಇದ್ದು, ಇವುಗಳಿಂದ ಪಾಲಿಕೆಗೆ ಕರ, ದಂಡ ಸೇರಿ ಒಟ್ಟು 47 ಕೋಟಿ ರೂ. ಬರಬೇಕಾಗಿದೆ.

ಮಳಿಗೆಗಳಿಂದ ಸಂಗ್ರಹ ಉತ್ತಮ ಸಾಧನೆ: ಮಹಾನಗರ ಪಾಲಿಕೆ ಸಾರ್ವಜನಿಕರಿಂದ ಆಸ್ತಿ ಕರ ಹಾಗೂ ಪಾಲಿಕೆ ಒಡೆತನದ ಮಳಿಗೆಗಳಿಂದ ಕರ ವಸೂಲಿಯಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಇದುವರೆಗೆ ಆಸ್ತಿ ಕರದಲ್ಲಿ ಶೇ.68.68, ಮಳಿಗೆಗಳಿಂದ ಶೇ.83.97 ಕರ ಸಂಗ್ರಹವಾಗಿದ್ದು, ಮಾರ್ಚ್‌ ಅಂತ್ಯದೊಳಗೆ ಇನ್ನಷ್ಟು ಸಂಗ್ರಹ ನಿರೀಕ್ಷೆ ಇದೆ.

2021-22ನೇ ಸಾಲಿಗೆ ಆಸ್ತಿಕರ ರೂಪದಲ್ಲಿ ಒಟ್ಟು 118.98 ಕೋಟಿ ರೂ. ಆದಾಯ ಸಂಗ್ರಹ ಗುರಿ ಹೊಂದಲಾಗಿತ್ತು. ಮಾ.16ರವರೆಗೆ ಕರ-ದಂಡ ಸೇರಿ 95.06 ಕೋಟಿ ರೂ. ಸಂಗ್ರಹವಾಗಿದ್ದು, ಶೇ.68.68 ಆಗಿದೆ. 37.27 ಕೋಟಿ ರೂ. ಬಾಕಿ ಬರಬೇಕಾಗಿದೆ. ಪಾಲಿಕೆ ಒಡೆತನದಲ್ಲಿ ಒಟ್ಟು 2,468 ಮಳಿಗೆ ಹಾಗೂ ತೆರೆದ ಕಟ್ಟಡಗಳಿದ್ದು, ಇದರಲ್ಲಿ ಸುಮಾರು 165 ಮಳಿಗೆಗಳನ್ನು ತೆರವು ಮಾಡಲಾಗಿದೆ. ಪ್ರಸಕ್ತ ಸಾಲಿಗೆ ಮಳಿಗೆಗಳಿಂದ 4.70ಕೋಟಿ ರೂ. ಕರ ಸಂಗ್ರಹ ಗುರಿಯಲ್ಲಿ ಇದುವರೆಗೆ 3.95 ಕೋಟಿ ರೂ. ಸಂಗ್ರಹ ಮಾಡಿದ್ದು, ಶೇ.83.97 ಸಾಧನೆ ತೋರಲಾಗಿದೆ. 75.40 ಲಕ್ಷ ರೂ. ಬಾಕಿ ಬರಬೇಕಾಗಿದೆ.

ಜಾಹೀರಾತು ಮೂಲದಿಂದ 6.63ಕೋಟಿ ರೂ. ಕರ ಸಂಗ್ರಹ ಗುರಿಯಲ್ಲಿ ಇದುವರೆಗೆ 44.75 ಲಕ್ಷ ರೂ. ಸಂಗ್ರಹವಾಗಿದ್ದು, ಶೇ.6.75 ಸಾಧನೆಯಾಗಿದೆ. 6.18 ಕೋಟಿ ರೂ. ಬಾಕಿ ಬರಬೇಕಾಗಿದೆ.

ಆಸ್ತಿ ಕರದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಸುಮಾರು 10 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ. ಇದಕ್ಕೆ ಆಸ್ತಿ ಕರದಲ್ಲಿ ಶೇ.15 ಹೆಚ್ಚಳ ಮಾಡಿರುವುದು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಚಲನ್‌ ನೀಡಿಕೆ-ಬೀಗಮುದ್ರೆ ಕ್ರಮ: ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಆಸ್ತಿಕರ ಕುರಿತ ಚಲನ್‌ ನೀಡಿಕೆ ವಿಳಂಬ ಆಗುತ್ತಿತ್ತು. ಜನರು ವಲಯ ಕಚೇರಿ, ಮುಖ್ಯ ಕಚೇರಿಗೆ ಅಲೆದರೂ ಚಲನ್‌ ನೀಡದ ಸ್ಥಿತಿ ಇತ್ತು. ಇದರಿಂದ ಕರ ಸಂಗ್ರಹಕ್ಕೆ ಹಿನ್ನಡೆ ಆಗುತ್ತಿತ್ತು. ಇದೀಗ ಚಲನ್‌ ನೀಡಿಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಬಿಲ್‌ ಕಲೆಕ್ಟರ್‌ಗಳು ಮನೆ, ಮನೆಗೆ ತೆರಳಿ ಕರ ಸಂಗ್ರಹ ಕಾರ್ಯ ಮಾಡುತ್ತಿದ್ದಾರೆ. ಆಸ್ತಿಕರ ಪಾವತಿಸದ ಕಟ್ಟಡಗಳಿಗೆ ನೋಟಿಸ್‌ ನೀಡುವ, ಸ್ಪಂದನೆ ಇಲ್ಲವಾದರೆ ಬೀಗಮುದ್ರೆ ಹಾಕುವ ಕ್ರಮವನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next