Advertisement

Tata Passes away: ಖ್ಯಾತ ಕೈಗಾರಿಕೋದ್ಯಮಿ ರತನ್‌ ಟಾಟಾ ವಿಧಿವಶ!

06:03 AM Oct 10, 2024 | Team Udayavani |

ಮುಂಬೈ: ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ (86 ವರ್ಷ) (Ratan Tata) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡರಾತ್ರಿ ನಗರದ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

Advertisement

ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ರತನ್‌ ಟಾಟಾ  ಬಳಲುತ್ತಿದ್ದರು. ರಕ್ತದೊತ್ತಡದಲ್ಲಿ ಕುಸಿತದ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಸೋಮವಾರ ರತನ್‌ ಟಾಟಾ ಮುಂಬಯಿಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಆಳವಾದ ದುಃಖ ಭಾವನೆಯೊಂದಿಗೆ ನಾವು ರತನ್‌ ನೇವಲ್‌ ಟಾಟಾ ಅವರಿಗೆ ವಿದಾಯ ಹೇಳುತ್ತೇವೆ. ಅವರ ಅಗಾಧ ಕೊಡುಗೆಗಳು ಟಾಟಾ ಗ್ರೂಪ್‌ ಅನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರವನ್ನು ರೂಪಿಸಿವೆ ಎಂದು ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಹೇಳಿದರು.

ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣಕ್ಕಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರೂ, ಬಳಿಕ ಈ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಿದ್ದರು. ಆದರೆ, ಬುಧವಾರದ ವೇಳೆಗೆ ಮತ್ತೊಮ್ಮೆ ಗಂಭೀರ ಸ್ಥಿತಿಯಲ್ಲಿ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ತಡರಾತ್ರಿ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

1991ರಲ್ಲಿ ಟಾಟಾ ಸನ್ಸ್‌ನ ಚೇರ್ಮನ್‌ ಆಗಿದ್ದ ರತನ್‌ ಟಾಟಾ, 2012ರವರೆಗೂ ಈ ಹುದ್ದೆಯಲ್ಲಿದ್ದರು. ತಮ್ಮ ಮರಿ ಮುತ್ತಜ್ಜ ಸ್ಥಾಪನೆ ಮಾಡಿದ್ದ ಗ್ರೂಪ್‌ ಅನ್ನು ದೊಡ್ಡ ಮಟ್ಟದಲ್ಲಿ ಯಶಸ್ಸಿನ ಪಥದಲ್ಲಿ ಸಾಗಿಸಿದ್ದರು. 1996ರಲ್ಲಿ ಟಾಟಾ ಟೆಲಿ ಸರ್ವೀಸಸ್‌ ಕಂಪನಿ ಸ್ಥಾಪನೆ ಬಳಿಕ  2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಕಂಪನಿ ಸಾರ್ವಜನಿಕ ಪಾಲುದಾರ ಕಂಪನಿಯಾಗಿ ಮಾಡಿದ್ದರು.


ರತನ್ ಟಾಟಾ ಭಾರತೀಯ ಉದ್ಯಮದಲ್ಲಿ ಅಪ್ರತಿಮ ವ್ಯಕ್ತಿ.  ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್ ಜಾಗತಿಕವಾಗಿ ವಿಸ್ತರಿಸಿತು, ಟೆಟ್ಲಿ, ಕೋರಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್‌ನಂತಹ ಪ್ರಮುಖ ಕಂಪನಿಗಳ ಸ್ವಾಧೀನಪಡಿಸಿಕೊಂಡಿತು. ಬಹುಮಟ್ಟಿಗೆ ದೇಶೀಯ ಸಂಸ್ಥೆಯಿಂದ ಜಾಗತಿಕ ಶಕ್ತಿಶಾಲಿಯಾಗಿ ಟಾಟಾ ಬೆಳೆಯಿತು. ಟಾಟಾದ ನಾಯಕತ್ವದಲ್ಲಿ, ಸಮೂಹವು ವಿಶ್ವದ ಅತ್ಯಂತ ಅಗ್ಗದ ಕಾರು ಟಾಟಾ ನ್ಯಾನೊವನ್ನು ಬಿಡುಗಡೆ ಮಾಡಿತು ಮತ್ತು ಅದರ ಸಾಫ್ಟ್‌ವೇರ್ ಸೇವೆಗಳ ವಿಭಾಗವಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸನ್ನು ಜಾಗತಿಕ ಐಟಿ ಲೀಡರ್ ಆಗಿ ಮಾಡಿತು.

Advertisement

ಟಾಟಾ 2012 ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ನಂತರ ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್ ಮತ್ತು ಟಾಟಾ ಸ್ಟೀಲ್ ಸೇರಿದಂತೆ ಇತರ ಸಮೂಹ ಕಂಪನಿಗಳ ಗೌರವಾನ್ವಿತ ಅಧ್ಯಕ್ಷರಾಗಿ ಆಗಿ ನೇಮಕಗೊಂಡರು. ನಾಯಕತ್ವದ ವಿವಾದದ ಸಂದರ್ಭದಲ್ಲಿ ಅವರು 2016 ರಲ್ಲಿ ಅವರು ಅಲ್ಪಾವಧಿ ಅಧ್ಯಕ್ಷ ಸ್ಥಾನ ವಹಿಸಿದ್ದರು.

ಪದ್ಮವಿಭೂಷಣ ರತನ್‌ ಟಾಟಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ,  ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಾಟಾ ಸನ್ಸ್‌ ಚೇರ್‌ಮನ್‌ ಎನ್‌.ಚಂದ್ರಶೇಖರನ್‌, ಗೂಗಲ್‌ ಸಿಇಒ ಸುಂದರ್‌ ಪಿಚಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಮಂದಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಜನರ ಉದ್ಯಮಿ ರತನ್‌ ಟಾಟಾ
ಜನರ ಉದ್ಯಮಿ ಎಂದೇ ಜಗತ್ತಿನಾದ್ಯಂತ ಖ್ಯಾತರಾಗಿದ್ದ ಟಾಟಾ ಗ್ರೂಪ್‌ ಮಾಜಿ ಚೇರ್ಮನ್‌ ರತನ್‌ ನೇವ ಲ್‌ ಟಾಟಾ ಅವರು ಬುಧವಾರ ರಾತ್ರಿ ಅಸ್ತಂಗತರಾಗಿದ್ದಾರೆ. ಉದ್ಯಮ ಕ್ಷೇತ್ರದ ಅದ್ವಿತೀಯ ಸಾಧನೆಗಾಗಿ ಅವರು 2000ದಲ್ಲಿ ಪದ್ಮಭೂಷಣ, 2008ರಲ್ಲಿ ಪದ್ಮವಿಭೂಷಣ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದರು.

1991ರಲ್ಲಿ ಟಾಟಾದ ನಾಯಕತ್ವದಲ್ಲಿ ಟಾಟಾ ಗ್ರೂಪ್‌ ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸಿಕೊಂಡಿತು. ಯಾವಾಗಲೂ ತನ್ನ ನೈತಿಕ ದಿಕ್ಸೂಚಿಗೆ ಬದ್ಧವಾಗಿದೆ. ಲೋಕೋಪಕಾರ ಮತ್ತು ಸಮಾಜದ ಅಭಿವೃದ್ಧಿಗೆ ರತನ್‌ ಟಾಟಾ ಅವರ ಸಮರ್ಪಣೆ ಲಕ್ಷಾಂತರ ಜನರ ಜೀವನವನ್ನು ಮುಟ್ಟಿದೆ ಮತ್ತು ಮುಂದಿನ ಪೀಳಿಗೆಗೆ ಪ್ರಯೋಜನ ವಾಗಲಿದೆ ಎಂದು ಚಂದ್ರಶೇಖರನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next