Advertisement

ತೌಕ್ತೇ ಶಾಂತ; ಕಿನಾರೆ ಜನತೆ ನಿಟ್ಟುಸಿರು

04:29 PM May 18, 2021 | Team Udayavani |

ಕುಮಟಾ: ತೌಕ್ತೇ ಚಂಡಮಾರುತದ ಪ್ರಭಾವದಿಂದಾಗಿ ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಬೀಸುತ್ತಿರುವ ವಿಪರೀತ ಗಾಳಿ ಹಾಗೂ ಧಾರಾಕಾರ ಮಳೆಯ ಆರ್ಭಟ ಸೋಮವಾರ ಶಾಂತಗೊಂಡಿದೆ.

Advertisement

ಕಡಲ ಅಲೆಗಳ ರಭಸ ಕೊಂಚ ಕ್ಷೀಣಿಸಿದ್ದು, ಕಿನಾರೆಯ ಜನರು ಕಾಳಜಿ ಕೇಂದ್ರಗಳಿಂದ ನಿಟ್ಟುಸಿರು ಬಿಟ್ಟು ಮರಳಿ ಮನೆಗಳತ್ತ ಮುಖ ಮಾಡುತ್ತಿದ್ದಾರೆ. ತೌಕ್ತೇ ಚಂಡಮಾರುತವು ಕೊರೊನಾ ನಡುವೆಯೇ ಅಪ್ಪಳಿಸಿದ್ದು, ತಾಲೂಕಿನಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿಸಿವೆ. ಮೀನುಗಾರರು ಹಾಗೂ ರೈತರಿಗೆ ಅಪಾರ ಹಾನಿಯುಂಟು ಮಾಡಿದೆ. ಹಲವು ಮನೆಗಳು ಅಲೆಗಳ ಹಾಗೂ ಗಾಳಿಯ ರಭಸಕ್ಕೆ ಹಾನಿಗೊಳಗಾಗಿವೆ.

ಮೀನುಗಾರರ ದೋಣಿ ಸೇರಿದಂತೆ ಸಲಕರಣೆಗಳು ಸಮುದ್ರದ ಪಾಲಾಗಿವೆ. ಫಲವತ್ತಾದ ಕೃಷಿ ಭೂಮಿ ಸಮುದ್ರದ ನೀರಿನಿಂದ ಫಲವತ್ತತೆ ಕಳೆದುಕೊಂಡಿದೆ. ಹಲವೆಡೆ ಮೂಲಸೌಕರ್ಯ ಪುನಃ ಕಲ್ಪಿಸುವಂತಾಗಿದೆ.

ಮನೆಗಳತ್ತ ಕಿನಾರೆ ಜನ: ಕಳೆದೆರಡು ದಿನಗಳಿಂದ ಸುರಿದ ಮಳೆ ಹಾಗೂ ಕಡಲ ಅಲೆಗಳ ರಭಸಕ್ಕೆ ವಾಸವಿದ್ದ ಮನೆಗಳು ಜಲಾವೃತಗೊಂಡ ಕಾರಣ ತಾಲೂಕಾಡಳಿತ ಸ್ಥಾಪಿಸಿದ್ದ ಕಾಳಜಿ ಕೇಂದ್ರಗಳಲ್ಲಿ ವಾಸ್ತವ್ಯವಿದ್ದ ಜನರು ತಮ್ಮ ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ಮನೆಯ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ. ಎರಡೇ ದಿನದಲ್ಲಿ ದುರಸ್ತಿ: ವಿಪರೀತ ಗಾಳಿ-ಮಳೆಯಿಂದ ತಾಲೂಕಿನಲ್ಲಿ 120ಕ್ಕೂ ಅಧಿ ಕ ವಿದ್ಯುತ್‌ ಕಂಬಗಳು ಮುರಿದಿದ್ದವು. ತಂತಿಗಳು ಹರಿದಿದ್ದವು. ಹೆಸ್ಕಾಂ ಇಲಾಖೆ ಸಿಬ್ಬಂದಿ ಎಸ್‌ಡಿಆರ್‌ಎಫ್‌ ತಂಡದ ಸಹಕಾರದೊಂದಿಗೆ ಎರಡೇ ದಿನದಲ್ಲಿ ದುರಸ್ತಿ ಕಾರ್ಯ ನಡೆಸಿ, ತಾಲೂಕಿಗೆ ವಿದ್ಯುತ್‌ ಕಲ್ಪಿಸಿದೆ.

ವಿದ್ಯುತ್‌ ಸರಬರಾಜು: ವಿದ್ಯುತ್‌ ವ್ಯತ್ಯಯವಾದ ಕಾರಣ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಒದಗಿಸುತ್ತಿರುವ ತಾಲೂಕಾಸ್ಪತ್ರೆ ಹಾಗೂ ಬೆಟುRಳಿಯ ಆಕ್ಸಿಜನ್‌ ಉತ್ಪಾದನಾ ಘಟಕಕ್ಕೆ ಕೊಂಚ ಸಮಸ್ಯೆಯುಂಟಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ತಾಲೂಕಾಡಳಿತ, ಹೆಸ್ಕಾಂ ಇಲಾಖೆ ಹಾಗೂ ಎಸ್‌ಡಿಆರ್‌ಎಫ್‌ ತಂಡವು ಆ ಮಾರ್ಗವನ್ನು ದುರಸ್ತಿಗೊಳಿಸಿ ಕೂಡಲೇ ವಿದ್ಯುತ್‌ ಕಲ್ಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next