Advertisement

ಕಾವೇರಿ ಸಭೆಯಲ್ಲೂ ತಮಿಳುನಾಡು ತಕರಾರು

09:59 AM Dec 04, 2018 | Team Udayavani |

ಹೊಸದಿಲ್ಲಿ: ಮೇಕೆದಾಟು ಯೋಜನೆಗೆ ಸಂಬಂಧಿಸಿ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು ಸರಕಾರ, ಸೋಮವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲೂ ಕ್ಯಾತೆ ತೆಗೆದಿದೆ. ಮೇಕೆದಾಟು ಅಣೆ ಕಟ್ಟೆಗೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸುವಂತೆ ಕರ್ನಾಟಕ ಸರಕಾರಕ್ಕೆ ಕೇಂದ್ರ ಜಲ ಆಯೋಗ ಅನುಮತಿ ನೀಡಿರುವುದರಿಂದ ಕೆಂಡಾಮಂಡಲವಾಗಿರುವ ನೆರೆರಾಜ್ಯವು ಸೋಮವಾರದ ಸಭೆಯಲ್ಲಿ ಅದನ್ನು ಪ್ರಶ್ನಿಸಿ ಗದ್ದಲ ಉಂಟುಮಾಡಿದೆ.

Advertisement

ಇದಕ್ಕೆ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಮುಖ್ಯಸ್ಥ ಮಸೂದ್‌ ಹುಸೇನ್‌, ‘ಕರ್ನಾಟಕ ಸರಕಾರಕ್ಕೆ ಡಿಪಿಆರ್‌ ಸಲ್ಲಿಸಲು ಅನುಮತಿ ನೀಡಲಾಗಿದೆಯೇ ವಿನಾ, ಅಣೆಕಟ್ಟು ನಿರ್ಮಾಣಕ್ಕಲ್ಲ. ಅದಿನ್ನೂ ಆರಂಭಿಕ ಹಂತದಲ್ಲಿದೆ. ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ಪರಿಶೀಲಿಸುವ ಮೊದಲು ಅದಕ್ಕೆ ಪ್ರಾಧಿಕಾರ ಒಪ್ಪಿಗೆ ನೀಡಬೇಕಿದೆ’ ಎಂದು ಹೇಳಿದರು. ಈ ವರ್ಷ ಉತ್ತಮ ಮಳೆಯಾಗಿರುವ ಕಾರಣ ತಮಿಳುನಾಡಿನ ಕಾವೇರಿ ನೀರಿನ ಪಾಲು ಬಂದಾಗಿದೆ ಎಂದೂ ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ, ಮೇಕೆದಾಟು ವಿಚಾರವನ್ನು ವಿವರವಾಗಿ ಚರ್ಚಿಸಿಲ್ಲ ವಾದ ಕಾರಣ ಪ್ರಾಧಿಕಾರದ ಸದಸ್ಯರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅದನ್ನು ಪ್ರಸ್ತಾವಿಸಲಾಯಿತು. ಆದರೆ ಅಷ್ಟರಲ್ಲೇ ತಮಿಳುನಾಡು ಸರಕಾರವು ಡಿಪಿಆರ್‌ ವಿಚಾರವನ್ನೆತ್ತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಕೊನೆಗೆ ತಮಿಳುನಾಡಿನ ಆಕ್ಷೇಪಗಳು ಹಾಗೂ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು ಎಂದೂ ತಿಳಿಸಿದರು. ಪ್ರಾಧಿಕಾರದ ಮುಂದಿನ ಸಭೆ ಜನವರಿಯಲ್ಲಿ ನಡೆಯಲಿದೆ.

ಮೇಕೆದಾಟು ಅಣೆಕಟ್ಟು ಯೋಜನೆಯ ವಿಸ್ತೃತ ವರದಿ ಸಲ್ಲಿಸು ವಂತೆ ಬೆಂಗಳೂರಿನ ಕಾವೇರಿ ನೀರಾವರಿ ನಿಗಮಕ್ಕೆ ಕೇಂದ್ರ ಅನುಮತಿ ಕೊಟ್ಟ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ತಮಿಳುನಾಡು ಸರಕಾರ, ಕರ್ನಾಟಕಕ್ಕೆ ನೀಡಿದ ಅನುಮತಿಯನ್ನು ರದ್ದು ಮಾಡಿ ಎಂದು ಕೋರಿತ್ತು. ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next