Advertisement

ತೂತುಕುಡಿ :ಪೊಲೀಸರ ಗೋಲಿಬಾರ್‌ 9 ಬಲಿ

06:00 AM May 23, 2018 | Team Udayavani |

ಚೆನ್ನೈ/ತೂತುಕುಡಿ: ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಕಂಪೆನಿ ಸ್ಟಲೈಟ್‌ ತ್ರಾಮ ಉತ್ಪಾದನಾ ಘಟಕ ಮುಚ್ಚುವಂತೆ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗುಂಡಿನ ದಾಳಿಗೆ 9 ಮಂದಿ ಅಸುನೀಗಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಹಿತ ಪ್ರಮುಖ ರಾಜಕೀಯ ನಾಯಕರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸ್ಥಳೀಯವಾಗಿ ಇರುವ ನೀರಿನ ಮೂಲಗಳನ್ನು ಕಲುಷಿತ ಗೊಳಿಸುತ್ತಿರುವ  ವೇದಾಂತ ಕಂಪೆನಿ ಸ್ಟಲೈìಟ್‌ ತಾಮ್ರ ಉತ್ಪಾದನಾ ಘಟಕ ಮುಚ್ಚಬೇಕೆಂದು 100 ದಿನಗಳಿಂದ ಟ್ಯುಟಿಕಾರಿನ್‌ನ ಜನರು ಪ್ರತಿಭಟನೆ ನಡೆಸುತ್ತಿದ್ದು. ಮಂಗಳವಾರ ಸ್ಥಳೀಯರೆಲ್ಲರೂ ಜಿಲ್ಲಾಧಿಕಾರಿ ಕಚೇರಿಯತ್ತ ಪ್ರತಿಭಟನ ಮೆರವಣಿಗೆ ನಡೆಸಲು ಸ್ಥಳೀಯ ಚರ್ಚ್‌ ಮುಂಭಾಗದಲ್ಲಿ ಸೇರಿದ್ದರು. ಪೊಲೀಸರು ಅದಕ್ಕೆ ಅನುಮತಿ ನೀಡದೆ ಸೆಕ್ಷನ್‌ ಜಾರಿ ಮಾಡಿದ್ದರು. ಇದರ ಹೊರತಾಗಿಯೂ 5 ಸಾವಿರಕ್ಕೂ ಹೆಚ್ಚು ಮಂದಿ ಜಿಲ್ಲಾಧಿಕಾರಿ ಕಚೇರಿಯತ್ತ ಧಾವಿಸಿದರು. ಮೊದಲು  ತಳ್ಳಾಟ ಶುರುವಾಯಿತು. ಬಳಿಕ ಜನರ ಗುಂಪಿನಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಯಿತು. ಗುಂಪೊಂದು ಪೊಲೀಸ್‌ ವಾಹನವನ್ನು ಎತ್ತಿ ಬುಡಮೇಲು ಮಾಡಿತು. ಪೊಲೀಸರು ಈ ಘಟನೆಗಳೆಲ್ಲ ತಡೆಯಲು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿದರೂ ಪ್ರಯೋಜನವಾಗಲಿಲ್ಲ. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಹಲವಾರು ಮಂದಿ ಸಾರ್ವಜನಿಕ ಆಸ್ತಿಗೆ ಬೆಂಕಿ ಹಚ್ಚಿ ದಾಂಧಲೆ ಎಬ್ಬಿಸಿದರು. ಹೀಗಾಗಿ ಪೊಲೀಸರು ಗುಂಡು ಹಾರಿಸಿದ್ದರಿಂದ 9 ಮಂದಿ ಸಾವಿಗೀಡಾಗಿ, 20 ಮಂದಿಗೆ ಗಾಯಗಳಾಗಿವೆ.

ನ್ಯಾಯಾಂಗ ತನಿಖೆ: ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮುಖ್ಯಮಂತ್ರಿ ಪಳನಿಸ್ವಾಮಿ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವ ಘೋಷಣೆ ಮಾಡಿದ್ದಾರೆ. ಅಸುನೀಗಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ 10 ಲಕ್ಷ ರೂ. ಜತೆಗೆ ಶೈಕ್ಷಣಿಕ ಅರ್ಹತೆಗೆ ಅನುಸಾರವಾಗಿ ಸರ್ಕಾರಿ ಉದ್ಯೋಗ, ಗಂಭೀರ ಗಾಯಗೊಂಡವರಿಗೆ 3 ಲಕ್ಷ ರೂ., ಅಲ್ಪಪ್ರಮಾಣದಲ್ಲಿ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next