Advertisement

ಗೆಲುವಿನ ನಿರೀಕ್ಷೆಯಲ್ಲಿ  ತಮಿಳ್‌

09:07 AM Sep 26, 2017 | |

ಹೊಸದಿಲ್ಲಿ: ಪ್ರೊ ಕಬಡ್ಡಿ ಲೀಗ್‌ನ ದಿಲ್ಲಿ ಚರಣದಲ್ಲಿ ಮಂಗಳವಾರ ನಡೆಯುವ ಎರಡೂ ಪಂದ್ಯಗಳು ಅಂತರ್‌ ವಲಯಗಳ ನಡುವಣ ಸ್ಪರ್ಧೆಯಾಗಿವೆ. ಮೊದಲ ಪಂದ್ಯದಲ್ಲಿ “ಬಿ’ ವಲಯದ ಕೊನೆಯ ಸ್ಥಾನಿ ತಮಿಳ್‌ ತಲೈವಾಸ್‌ ತಂಡವು “ಎ’ ವಲಯದ ದ್ವಿತೀಯ ಸ್ಥಾನಿ ಗುಜರಾತ್‌ ತಂಡವನ್ನು ಎದುರಿಸಲಿದೆ. ದ್ವಿತೀಯ ಪಂದ್ಯದಲ್ಲಿ ಆತಿಥೇಯ ದಬಾಂಗ್‌ ಡೆಲ್ಲಿ ತಂಡವು “ಬಿ’ ವಲಯದ ಅಗ್ರಸ್ಥಾನಿ ಹಾಗೂ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವನ್ನು ಎದುರಿಸಲಿದೆ.

Advertisement

ರವಿವಾರದ ಪಂದ್ಯದಲ್ಲಿ ಅಂತಿಮ ರೈಡ್‌ನ‌ಲ್ಲಿ ಎರಡಂಕ ಗಳಿಸುವ ಮೂಲಕ ಬೆಂಗಾಲ್‌ ವಾರಿಯರ್ ವಿರುದ್ಧ ರೋಚಕ ಜಯ ಸಾಧಿಸಿ ಸಂಭ್ರಮ ಆಚರಿಸಿದ ತಮಿಳ್‌ ತಲೈವಾಸ್‌ ಆಕ್ರಮಣಕಾರಿ ಆಟದಿಂದ ಗಮನ ಸೆಳೆಯುತ್ತಿದೆ. ಒಟ್ಟಾರೆ ಆಡಿದ 12 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಜಯ ಸಾಧಿಸಿದ್ದರೂ ಹೆಚ್ಚಿನ ಪಂದ್ಯಗಳಲ್ಲಿ ತೀವ್ರ ಪೈಪೋಟಿ ನೀಡಿದೆ. ಪ್ರಚಂಡ ಫಾರ್ಮ್ನಲ್ಲಿರುವ ಗುಜರಾತ್‌ ಕೂಡ ಆಕ್ರಮಣಕಾರಿಯಾಗಿ ಆಡುತ್ತಿರುವ ತಂಡಗಳಲ್ಲಿ ಒಂದಾಗಿದೆ. ಹಾಗಾಗಿ ಈ ಪಂದ್ಯ ಪ್ರಬಲ ಹೋರಾಟದಿಂದ ಸಾಗುವ ನಿರೀಕ್ಷೆಯಿದೆ. 

ಯುವ ಆಟಗಾರರನ್ನು ಒಳಗೊಂಡ ತಮಿಳ್‌ ತಲೈವಾಸ್‌ ಮುಂದಿನ ಶುಕ್ರವಾರದಿಂದ ತವರಿನಲ್ಲಿ ಆಡಲಿದೆ. ತವರಿನಲ್ಲಿ ಒಟ್ಟು ಆರು ಪಂದ್ಯ ಆಡುವ ಕಾರಣ ತಮಿಳ್‌ ತಂಡಕ್ಕೂ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆಯಿದೆ. ಗುಜರಾತ್‌ ಬಿಟ್ಟರೆ ಇನ್ನುಳಿದ ತಂಡಗಳು ತವರಿನಲ್ಲಿ ಪರಿಣಾಮಕಾರಿ ಆಟ ಪ್ರದರ್ಶಿಸಿಲ್ಲ. ಒಂದು ವೇಳೆ ತಮಿಳ್‌ ತವರಿನಲ್ಲಿ ಭರ್ಜರಿ ಆಟವಾಡಿ ಗರಿಷ್ಠ ಸಂಖ್ಯೆಯ ಗೆಲುವು ದಾಖಲಿಸಿ ಮುನ್ನಡೆಯಲು ಪ್ರಯತ್ನಿಸಬಹುದು.

ತವರಿನಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತಿರುವ ದಬಾಂಗ್‌ ಡೆಲ್ಲಿ ತಂಡ ಮಂಗಳವಾರದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಾಟ್ನಾದ ಸವಾಲನ್ನು ಎದುರಿಸಬೇಕಾಗಿದೆ. ಸದ್ಯ ಡೆಲ್ಲಿ “ಎ’ ಬಣದ ಕೊನೆಯ ಸ್ಥಾನದಲ್ಲಿದೆ. ತವರಿನಲ್ಲಿ ಇನ್ನೂ ಗೆಲುವು ಕಾಣದಿದ್ದರೆ ಡೆಲ್ಲಿ ಪ್ಲೇ ಆಫ್ಗೆ ತೇರ್ಗಡೆಯಾಗುವುದು ಕಠಿನವೆಂದು ಹೇಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next