Advertisement

ತಾ|ಕಚೇರಿ ಝೆರಾಕ್ಸ್‌ ಯಂತ್ರಗಳು ಸ್ತಬ್ಧ!

01:47 AM Jan 13, 2022 | Team Udayavani |

ಕುಂದಾಪುರ: ತಾಲೂಕು ಕಚೇರಿಯ ಕಂದಾಯ ಶಾಖೆ, ಚುನಾವಣೆ ಶಾಖೆ, ಆಹಾರ ಖಾತೆ ಸೇರಿದಂತೆ ವಿವಿಧೆಡೆಯ ಐದಕ್ಕೂ ಹೆಚ್ಚು ಝೆರಾಕ್ಸ್‌ ಯಂತ್ರಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

Advertisement

ದುರಸ್ತಿಯಾಗಿಲ್ಲ
ಕೆಲವು ವರ್ಷಗಳ ಹಿಂದಿನವರೆಗೆ ಕಡತದ ಛಾಯಾಪ್ರತಿ ತೆಗೆಸಲು, ನಕಲು ತೆಗೆಸಲು ಕಚೇರಿ ಸಿಬಂದಿ ಅಂಗಡಿಗೆ ಹೋಗಿ ಪ್ರತಿ ಮಾಡಿಸುತ್ತಿದ್ದರು. ಆದರೆ ಸರಕಾರದ ಪಾಲಿಗೆ ದೈನಂದಿನ ಖರ್ಚು ಹೆಚ್ಚಾದಾಗ ಝೆರಾಕ್ಸ್‌ ಯಂತ್ರಗಳನ್ನೇ ನೀಡಲಾಯಿತು. ಆರಂಭದಲ್ಲಿ ಒಂದು ಯಂತ್ರ ನೀಡಿ ಅನಂತರ ವಿವಿಧ ಕಾರ್ಯನಿರ್ವಹಣೆ ಶಾಖೆಗಳಿಗೆ ಪ್ರತ್ಯೇಕ ಯಂತ್ರಗಳ ಆಗಮನವಾಯಿತು. ಆದರೆ ಯಂತ್ರ ಪೂರೈಸಿದ ಗುತ್ತಿಗೆದಾರ ಸಂಸ್ಥೆ ಅದನ್ನು ನಿರ್ವಹಣೆ ಮಾಡಲೇ ಇಲ್ಲ. ಪರಿಣಾಮ ಯಂತ್ರಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದವು. ಸಣ್ಣಪುಟ್ಟ ದುರಸ್ತಿಯನ್ನು ಸಿಬಂದಿ, ಅಧಿಕಾರಿ ಹಣ ಹಾಕಿ ಮಾಡಿಸುತ್ತಿದ್ದರು. ಆದರೆ ದೊಡ್ಡ ಮೊತ್ತದ ದುರಸ್ತಿ ಈ ಹಿಂದೊಮ್ಮೆ ಮಾಡಿಸಿದ್ದೂ ಇನ್ನೂ ಸರಕಾರದಿಂದ ಅನುದಾನ ಬಾರದೆ ಸಂಸ್ಥೆಗೆ ಪಾವತಿ ಆಗಿಲ್ಲ.

ಕಚೇರಿಗೆ ಅವಶ್ಯವಿದೆ
ನಾಗರಿಕರಿಗಷ್ಟೇ ಅಲ್ಲ, ತಾಲೂಕು ಕಚೇರಿಯ ಕೆಲಸ ಕಾರ್ಯಗಳಿಗೂ ಝೆರಾಕ್ಸ್‌ ಯಂತ್ರದ ಅಗತ್ಯವಿದೆ. ಅನೇಕ ಕಡತಗಳು, ದಾಖಲೆಗಳ ಪ್ರತಿ ತೆಗೆಯಲು ಅವಶ್ಯವಿದೆ. ಆದರೆ ಎಲ್ಲ ಕೆಲಸ ಕಾರ್ಯಗಳಿಗೂ ಖಾಸಗಿಯವರ ಮೊರೆ ಹೋಗುವುದು ಅನಿವಾರ್ಯ ಆಗಿದೆ.

ಸಾರ್ವಜನಿಕರು ಕೂಡ ಕಡತದ ನಕಲಿಗೆ ಬೇಡಿಕೆ ಸಲ್ಲಿಸಿದಾಗ ಖಾಸಗಿಯವರ ಮೂಲಕವೇ ನಕಲು ಮಾಡಿಸಿ ಕೊಡಬೇಕಾದ್ದು ಅನಿವಾರ್ಯ ಆಗಿದೆ. ಅಷ್ಟೂ ಯಂತ್ರಗಳನ್ನು ದುರಸ್ತಿ ಮಾಡಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹ.

ಕಡತಗಳು ಹೊರಗೆ
ತಾಲೂಕು ಕಚೇರಿಯಲ್ಲಿ ಇರಬೇಕಾದ ಅಮೂಲ್ಯ ಕಡತಗಳ ನಕಲು ಪ್ರತಿ ಹೆಸರಿನಲ್ಲಿ ಹೊರಗೆ ಅಂಗಡಿಯಲ್ಲಿ ಕಾಣಿಸಿಕೊಳ್ಳತೊಡಗಿದೆ. ಈ ಬಗ್ಗೆ ಸಾರ್ವಜನಿಕರು ಆರೋಪಗಳನ್ನು ಕೂಡ ಮಾಡುತ್ತಿದ್ದಾರೆ. ಇಷ್ಟಲ್ಲದೇ ಈ ಅಮೂಲ್ಯ ಕಡತಗಳಿಂದ ಕಾಗದ ಪತ್ರಗಳು ಕಾಣೆಯಾದರೆ ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಾರೆ. ಝೆರಾಕ್ಸ್‌ ಯಂತ್ರಗಳು ಇಲ್ಲ ಎಂಬ ಕಾರಣದಿಂದ ಕೆಲವೊಂದು ಕೆಲಸ ಕಾರ್ಯಗಳೂ ವಿಳಂಬವಾಗುತ್ತಿವೆ ಎನ್ನುವ ಆರೋಪಗಳಿವೆ. ದಾಖಲೆಗಳ ನಕಲು ಪ್ರತಿಗಾಗಿ ಅರ್ಜಿ ಸಲ್ಲಿಸಿ ತಿಂಗಳಾನುಗಟ್ಟಲೆಯಿಂದ ಕಾಯುತ್ತಿರುವವರೂ ಇದ್ದಾರೆ. ಅದೇ ಒಳನುಸುಳುವ ಬಲದಿಂದ ತತ್‌ಕ್ಷಣ ನಕಲು ಪ್ರತಿ ಪಡೆಯುವವರೂ ಇದ್ದಾರೆ. ಜನಸಾಮಾನ್ಯರಿಗೆ ಇಂತಹ ನುಸುಳುವ ಒಳಸುಳಿಗಳು ಗೊತ್ತಿಲ್ಲ. ಆದ್ದರಿಂದ ತಿಂಗಳುಗಳು ಕಳೆದರೂ ಕಡತದ ಪ್ರತಿ ಸಿಗುತ್ತಿಲ್ಲ ಎಂಬ ಅಳಲು ಕೇಳಿ ಬರುತ್ತಿದೆ.

Advertisement

ಕಡತ ಕಾಣೆ ಭಯ
ಅಮೂಲ್ಯ ಕಡತಗಳು ಕಚೇರಿಯಿಂದ ಹೊರಗೆ ಬಂದು ಖಾಸಗಿಯವರ ಬಳಿ ಇದ್ದರೆ ಅದರಿಂದ ದಾಖಲೆಗಳು, ಹಾಳೆಗಳು ಕಾಣೆಯಾದರೆ ಯಾರು ಜವಾಬ್ದಾರಿ. ಸಾರ್ವಜನಿಕರ ದಾಖಲೆ ಹಾಗೂ ಸರಕಾರಿ ದಾಖಲೆಗಳು ಅನ್ಯರ ವಶದಲ್ಲಿ ಇರಬಾರದು. ಎಲ್ಲೆಂದರಲ್ಲಿ, ಯಾರೆಂದರೆ ಯಾರಧ್ದೋ ಬಳಿ ಕಡತಗಳು ಕಾಣಿಸುತ್ತಿವೆ. ಒಂದು ಝೆರಾಕ್ಸ್‌ ಯಂತ್ರ ದುರಸ್ತಿ ಮಾಡಿಸದಷ್ಟು ಸಮಸ್ಯೆಯಲ್ಲಿದೆಯೇ ಕಂದಾಯ ಇಲಾಖೆ?
-ಸತೀಶ್ಚಂದ್ರ ಶೆಟ್ಟಿ ವಕ್ವಾಡಿ, ಸಾರ್ವಜನಿಕರು

ಅನ್ಯರ ಕೈಗಿಲ್ಲ ಕಡತ
ಝೆರಾಕ್ಸ್‌ ಯಂತ್ರಗಳು ಹಾಳಾಗಿದ್ದು ಈ ಹಿಂದೆ ದುರಸ್ತಿ ಮಾಡಿಸಿದ ಅನುದಾನವೇ ಬಂದಿಲ್ಲ. ದುರಸ್ತಿಗೆ ಅನುದಾನಕ್ಕೆ ಬರೆಯಲಾಗಿದೆ. ಒಂದು ತಿಂಗಳಲ್ಲಿ ಸರಿಯಾಗಲಿದೆ. ಕಚೇರಿಯ ಯಾವುದೇ ಕಡತಗಳನ್ನು ಅನ್ಯರ ಕೈಗೆ ನೀಡುತ್ತಿಲ್ಲ. ಸರಿಯಾದ ವ್ಯಕ್ತಿಗಳೇ ನಿರ್ವಹಣೆ ಮಾಡುತ್ತಾರೆ. ಅಧಿಕೃತರ ಬಳಿ ಮಾತ್ರ ಇರುತ್ತವೆ. ಸಾರ್ವಜನಿಕರಿಗೆ ನಕಲು ನೀಡಬೇಕಾದ ಸರಕಾರಿ ಸಿಬಂದಿಯೇ ಅಂಗಡಿಗೆ ತೆರಳಿ ನಕಲು ಮಾಡಿಸಿ ಹಸ್ತಾಂತರಿಸುತ್ತಾರೆ ವಿನಾ ಕಡತ ಹಸ್ತಾಂತರಿಸುವುದಿಲ್ಲ.
-ಕಿರಣ್‌ ಗೌರಯ್ಯ, ತಹಶೀಲ್ದಾರ್‌, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next