Advertisement

ತಲಪಾಡಿ ಮಕ್ಕಳ ಗ್ರಾಮ ಸಭೆ

11:39 AM Dec 30, 2017 | |

ತಲಪಾಡಿ: ವಿದ್ಯಾರ್ಥಿನಿಯರಿಗೆ ರಸ್ತೆಯಲ್ಲಿ ಯುವಕರ ಕಿರುಕುಳ, ಅಡ್ಡಾದಿಡ್ಡಿ ಲಾರಿಯಿಂದ ರಸ್ತೆ ದಾಟುವ ಸಮಸ್ಯೆ, ಬಸ್‌ಗಳ ಅವ್ಯವಸ್ಥೆ ಸಹಿತ ವಿದ್ಯಾರ್ಥಿಯೊಬ್ಬ ಆರ್ಥಿಕ ಸಮಸ್ಯೆಯಿಂದ ಅರ್ಧದಲ್ಲಿ ಶಾಲೆ ಬಿಟ್ಟು ಕೂಲಿ ಕೆಲಸ ಮಾಡುತ್ತಿರುವ ಬಗ್ಗೆ ಶುಕ್ರವಾರ ತಲಪಾಡಿಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಪಂಚಾಯತ್‌ ಆಡಳಿತದ ಗಮನ ಸೆಳೆದರು.

Advertisement

ತಲಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್‌ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ತಲಪಾಡಿ ಪ್ರದೇಶದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಆಹವಾಲು ಸಲ್ಲಿಸಿದರು. ತಲಪಾಡಿಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾತನಾಡಿ, ತಲಪಾಡಿ ಕೆ.ಸಿ. ರೋಡ್‌ ಬಳಿ ಯುವಕರ ತಂಡವೊಂದು ಕಿರುಕುಳ ನೀಡುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದಳು.

ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್‌ ಆಳ್ವ, ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಗೆ ಪಂಚಾಯತ್‌ ವತಿಯಿಂದ ದೂರು
ಸಲ್ಲಿಸಲಾಗುವುದು. ಯುವಕರ ತಂಡದ ಮುಖಚರ್ಯೆ ಗೊತ್ತಿದ್ದರೆ ಶಾಲಾ ಶಿಕ್ಷಕಿಯ ಮೂಲಕ ಮಾಹಿತಿ ಪಡೆದು
ಕ್ರಮ ಕೈಗೊಳ್ಳುವಂತೆ ಉಳ್ಳಾಲ ಪೊಲೀಸ್‌ ಅಧಿಕಾರಿಗೆ ತಿಳಿಸಲಾಗುವುದು ಎಂದರು.

ಆರ್ಥಿಕ ಸಮಸ್ಯೆ: ಶಾಲೆಗೆ ಬರುತ್ತಿಲ್ಲ
ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಕಲಿಯುತ್ತಿರುವ ತನ್ನ ಸಹಪಾಠಿ ಶಾಲೆ ಬಿಟ್ಟು ಕೇರಳಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಈ ವಿದ್ಯಾರ್ಥಿಯನ್ನು ಶಾಲೆಗೆ ಕರೆತರಲು ಪಂಚಾಯತ್‌ ಮುಂದಾಗಬೇಕು ಎಂದು ಆತನ ಸಹಪಾಠಿ ನಿಶ್ಮಾ ತಿಳಿಸಿದಾಗ, ಶಾಲಾ ಮುಖ್ಯೋಪಾಧ್ಯಾಯಿನಿ ಮಾತನಾಡಿ, ವಿದ್ಯಾರ್ಥಿ ಮನೆಗೆ ಹಲವು ಭಾರಿ ಭೇಟಿ ನೀಡಿ ಹೆತ್ತವರಲ್ಲಿ ಶಾಲೆಗೆ ಕಳುಹಿಸುವಂತೆ ಒತ್ತಾಯಿಸಲಾಗಿದೆ. ಆದರೂ ಹೆತ್ತವರು ಶಾಲೆಗೆ ಕಳುಹಿಸಲು ಹೆಚ್ಚಿನ ಒಲವು
ತೋರದೇ ಇರುವುದರಿಂದ ವಿದ್ಯಾರ್ಥಿ ಶಾಲೆಗೆ ಬರುತ್ತಿಲ್ಲ. ಉತ್ತಮ ಅಂಕವನ್ನು ಪಡೆಯುತ್ತಿದ್ದ, ಶಾಲೆ ಕಲಿತಲ್ಲಿ ಉನ್ನತ ವ್ಯಾಸಾಂಗವನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಪಂಚಾಯತ್‌ ಗಮನಹರಿಸಿದಲ್ಲಿ ವಾಪಸ್‌ ಶಾಲೆಗೆ ಬರಲು ಸಾಧ್ಯ ಎಂದು ತಿಳಿಸಿದರು.

ಬಸ್‌ಗಳ ಅವ್ಯವಸ್ಥೆಯಿಂದ ತಲಪಾಡಿ ಅನುದಾನಿತ ದುರ್ಗಾಪರಮೇಶ್ವರಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ
ತೊಂದರೆಯಾಗುತ್ತಿದೆ ಎಂದು ಶಾಲಾ ವಿದ್ಯಾರ್ಥಿನಿ ಶಿವಾನಿ ಆರೋಪಿಸಿದರು. ಬೆರಳೆಣಿಕೆಯ ಬಸ್‌ಗಳು ಮಾತ್ರ ಈ ಭಾಗದಲ್ಲಿ ಸಂಚರಿಸುತ್ತಿರುವುದರಿಂದ ದೂರದಿಂದ ಬರುವ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಿದೆ ಎಂದರು. ತಲಪಾಡಿ ಪಟ್ನ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಗೆ ಶಿಕ್ಷಕರು, ಆಟವಾಡಲು ಮೈದಾನ, ಇಂಗು ಗುಂಡಿ ಮತ್ತು ಕಸ ಹಾಕಲು ಕಾಂಪೋಸ್ಟ್‌ ವ್ಯವಸ್ಥೆ ಮಾಡಿಕೊಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.

Advertisement

ತಲಪಾಡಿ ಗ್ರಾ.ಪಂ. ಉಪಾಧ್ಯಕ್ಷೆ ಜಯಲಕ್ಷ್ಮೀ , ಮಕ್ಕಳ ಪ್ರತಿನಿಧಿಯಾಗಿ ಮಹಮ್ಮದ್‌ ರಿಫಾಜ್‌ ಮತ್ತು ಅನನ್ಯಾ
ಕುಲಾಲ್‌, ತಲಪಾಡಿ ಪಟ್ನ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್‌ ರಹಿಮಾನ್‌, ದೇವಿಪುರ ಸ.ಹಿ.ಪ್ರಾ. ಶಾಲೆಯ ಸುಜಾತಾ, ಆರೋಗ್ಯಾಧಿಕಾರಿ ಗೋಪಿ ಪ್ರಕಾಶ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಾರದ, ಸ.ಪ್ರೌ. ಶಾಲೆ ಪಟ್ನದ ಮುಖ್ಯಶಿಕ್ಷಕಿ ಶರ್ಮಿಳಾ ಉಚ್ಚಿಲ್‌, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ ನಿರೂಪಿಸಿದರು. ಶಾಂತಿ ವಂದಿಸಿದರು.

ರಸ್ತೆ ದಾಟಲು ತೊಂದರೆ 
ತಲಪಾಡಿ ಚೆಕ್‌ಪೋಸ್ಟ್‌ ಸಮೀಪ ಲಾರಿಗಳು ಅಡ್ಡಾದಿಡ್ಡಿ ನಿಲ್ಲಿಸು ವುದಲ್ಲದೆ, ಝೀಬ್ರಾ ಕ್ರಾಸ್‌ ಅಳವಡಿಸಲಾಗಿದ್ದರೂ ಅತಿವೇಗವಾಗಿ ವಾಹನಗಳು ಸಂಚರಿಸುವುದರಿಂದ ರಸ್ತೆ ದಾಟಲು ತೊಂದರೆಯಾಗುತ್ತಿದೆ. ಹಿಂದಿನ ಗ್ರಾಮಸಭೆಯಲ್ಲೂ ಈ ಬಗ್ಗೆ ತಿಳಿಸಲಾಗಿತ್ತು ಎಂದು ಪಟ್ನ ಶಾಲೆ ವಿದ್ಯಾರ್ಥಿಗಳು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ. ಅಧ್ಯಕ್ಷ ಸುರೇಶ್‌ ಆಳ್ವ, ಹಿಂದೆ ಕೈಗೊಂಡ ನಿರ್ಣಯದಂತೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ವೇಳೆ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಆದರೂ ತೊಂದರೆ ನಿವಾರಣೆ ಯಾಗದಿದ್ದಲ್ಲಿ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸುವಂತೆ ಪೊಲೀಸ್‌ ಇಲಾಖೆಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.

ಬಾಲಕರ ಮೇಲೂ ಲೈಂಗಿಕ ದೌರ್ಜನ್ಯ
ದೈಹಿಕ ಹಿಂಸೆಯಿಂದ ಮಕ್ಕಳನ್ನು ಸರಿಪಡಿಸಲು ಸಾಧ್ಯವಿಲ್ಲ. ಬಾಲಕಿಯ ರಂತೆ ಬಾಲಕರು ಕೂಡ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಆದರೆ ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿಲ್ಲ. ಪಂಚಾಯತ್‌ಗಳಲ್ಲಿ ಮಕ್ಕಳ ಸಂರಕ್ಷಣ ಸಮಿತಿ ಕ್ರಿಯಾಶೀಲವಾಗಿದ್ದಲ್ಲಿ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಲು ಸಾಧ್ಯ.
ಯೋಗೀಶ್‌ ಮಲ್ಲಿಗೆಮಾಡು,
   ಮಕ್ಕಳ ಸಹಾಯವಾಣಿ

Advertisement

Udayavani is now on Telegram. Click here to join our channel and stay updated with the latest news.

Next