ನವದೆಹಲಿ: ತ್ರಿವಳಿ ತಲಾಖ್ ಮತ್ತು ಬಹುಪತ್ನಿತ್ವದಂತಹ ಪದ್ಧತಿಗಳಿಗೆ ಸಂವಿಧಾನದ ರಕ್ಷೆಯಿದೆಯೇ? ಇಂಥದೊಂದು ಪ್ರಶ್ನೆಯನ್ನು ಸುಪೀಂ ಕೋರ್ಟ್ನ ಮುಂದಿಟ್ಟಿದ್ದು ಕೇಂದ್ರ ಸರ್ಕಾರ. ತ್ರಿವಳಿ ತಲಾಖ್ ಕುರಿತ ವಿಚಾರಣೆ ವೇಳೆ ಸರ್ಕಾರವು ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟಿದೆ.
ತಲಾಖ್, ನಿಕಾಹ್ ಹಲಾಲ್, ಬಹುಪತ್ನಿತ್ವದಂತಹ ಪದ್ಧತಿ ಗಳಿಗೆ ಸಂವಿಧಾನದಲ್ಲಿ ರಕ್ಷಣೆಯಿದೆಯೇ, ಭಾರತವು ಸಹಿ ಹಾಕಿರುವ ಅಂತಾರಾಷ್ಟ್ರೀಯ ಒಪ್ಪಂದಗಳೊಂದಿಗೆ ಈ ಪದ್ಧತಿಗಳು ಹೊಂದಿಕೊಳ್ಳುತ್ತವೆ ಎಂದು ಅನಿಸುತ್ತದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಸರ್ಕಾರವು ನ್ಯಾಯಾಲಯದ ಮುಂದಿಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರೂ ತಮಗೆ ಕೇಳಬೇಕೆಂದೆನಿಸಿದ ಪ್ರಶ್ನೆಗಳನ್ನು ಸಿದ್ಧಪಡಿಸಿ ಕೊಡಿ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು. ಅದರಂತೆ, ಸರ್ಕಾರವು ತನ್ನ ಪ್ರಶ್ನೆಗಳ ಪಟ್ಟಿಯನ್ನು ಸಲ್ಲಿಸಿದೆ. ಫೆ.14ರಂದು ನಡೆದ ವಿಚಾರಣೆ ವೇಳೆ, ತಲಾಖ್ಗೆ ಸಂಬಂಧಿಸಿದ ಕಾನೂನಾತ್ಮಕ ವಿಚಾರಗಳ ಬಗ್ಗೆ ಮಾತ್ರ ನಾವು ವಿಚಾರಣೆ ನಡೆಸುತ್ತೇವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು.
ಸಂವಿಧಾನ ಪೀಠಕ್ಕೆ ವರ್ಗ: ಇದೇ ವೇಳೆ, ತ್ರಿವಳಿ ತಲಾಖ್, ನಿಕಾಹ್ ಹಲಾಲ್, ಬಹುಪತ್ನಿತ್ವಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗಾಗಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವನ್ನು ಸುಪ್ರೀಂ ಕೋರ್ಟ್ ರಚಿಸಿದೆ. ಅರ್ಜಿಗಳಲ್ಲಿ ಪ್ರಸ್ತಾಪವಾಗಿರುವ ವಿಚಾರ ಅತ್ಯಂತ ಮಹತ್ವದ್ದು. ಅವುಗಳನ್ನು ನಿರ್ಲಕ್ಷ್ಯ ವಹಿಸಲಾಗದು. ಸಂವಿಧಾನಾತ್ಮಕ ವಿಚಾರಗಳೂ ಒಳಗೊಂಡಿರುವುದರಿಂದ ಇದನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವುದಾಗಿ ಪೀಠ ತಿಳಿಸಿದೆ.