Advertisement

ಮಳೆಗಾಲದಲ್ಲಿ ಬೀಚ್‌ ಗಳ ಬಗ್ಗೆ ಪ್ರವಾಸಿಗರಿಗೆ ಇರಲಿ ಎಚ್ಚರ!

04:10 AM May 24, 2018 | Karthik A |

ಇನ್ನು ಎರಡು ವಾರಗಳೊಳಗೆ ಮುಂಗಾರು ಮಳೆ ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ ಪಾಲಿಕೆಯು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಎಲ್ಲೆಲ್ಲಿ ಯಾವ ರೀತಿಯ ಕ್ರಮ ಕೈಗೊಂಡಿದೆ. ಇನ್ನೂ ಕೈಗೊಳ್ಳಬೇಕಾದ ಕ್ರಮಗಳೇನು ಇತ್ಯಾದಿ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಸದುದ್ದೇಶ ಈ ‘ಮುಂಗಾರು ಮುಂಜಾಗ್ರತೆೆ’ ಸುದಿನ ಅಭಿಯಾನದ್ದು. ಮಳೆಗಾಲದ ಸಮಸ್ಯೆಗಳ ಬಗ್ಗೆ ಸುದಿನ ವ್ಯಾಟ್ಸಪ್‌ ಗೆ ಮಾಹಿತಿ ನೀಡಿ: 9900567000

Advertisement

ಮಹಾನಗರ: ಮಂಗಳೂರು ಅಂದಾಕ್ಷಣಕ್ಕೆ ದೂರದ ಊರಿನಲ್ಲಿರುವವರಿಗೆ ನೆನಪಾಗುವುದು ಇಲ್ಲಿನ ಆಕರ್ಷಣೀಯ ಬೀಚ್‌ ಗಳು. ಈ ಕಾರಣಕ್ಕೆ ಬೀಚ್‌-ಸಮುದ್ರ ನೋಡಲು ಮಳೆಗಾಲದಲ್ಲಿಯೂ ಮಂಗಳೂರು ವ್ಯಾಪ್ತಿಯಲ್ಲಿರುವ ಪಣಂಬೂರು, ತಣ್ಣೀರುಬಾವಿ ಹಾಗೂ ಸೋಮೇಶ್ವರ ಬೀಚ್‌ ಗೆ ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ ಮಳೆಗಾಲ ಶುರುವಾದರೆ, ಸಮುದ್ರಕ್ಕೆ ಇಳಿಯುವುದು ಅಥವಾ ನೀರಿನಲ್ಲಿ ಆಟವಾಡುವುದು ಹೆಚ್ಚು ಅಪಾಯವಾಗಿದ್ದು, ಜನರು ಈ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. 

ಮಳೆಗಾಲ ಶುರುವಾಗುವುದಕ್ಕೆ ಇನ್ನು ಒಂದೆರಡು ವಾರಗಳಷ್ಟೇ ಬಾಕಿಯಿರುವ ಹಿನ್ನೆಲೆಯಲ್ಲಿ ಸಮುದ್ರ ತೀರದತ್ತ ತೆರಳುವ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಪಣಂಬೂರು, ಸೋಮೇಶ್ವರ, ತಣ್ಣೀರುಬಾವಿ ಬೀಚ್‌ ಗಳಲ್ಲಿ ಮಳೆಗಾಲ ಆರಂಭಕ್ಕೂ ಮುನ್ನವೇ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ. ಅದರಲ್ಲಿಯೂ ಮಳೆಗಾಲದಲ್ಲಂತೂ  ತೆರೆಗಳ ಅಬ್ಬರ ಜೋರಾಗಿದ್ದು, ಸಮುದ್ರಕ್ಕೆ ಇಳಿಯುವುದು ಬಹಳ ಅಪಾಯಕಾರಿ.

ಮುಂಗಾರು ಪೂರ್ವ ಮಳೆಯ ಸಮಯದಲ್ಲೇ ಅಪಾಯಕಾರಿ ಭಾಗಗಳಲ್ಲಿ  ನೀರಿಗೆ ಇಳಿಯದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತಿದ್ದು, ಇದನ್ನು  ಗಮನಿಸಲು ಲೈಫ್‌ ಗಾರ್ಡ್‌ಗಳನ್ನು ನಿಯೋಜಿಸಲಾಗುತ್ತಿದೆ. ಮಳೆಗಾಲದಲ್ಲಿ ಪ್ರವಾಸಿಗರು ಸಮುದ್ರ ಕಿನಾರೆಗೆ ತೆರಳಲು ಅವಕಾಶ ಕಲ್ಪಿಸಲಾಗುತ್ತಾದರೂ ನೀರಿಗೆ ಇಳಿಯಲು ಅವಕಾಶ ಇರುವುದಿಲ್ಲ. ಸಮುದ್ರದ ಹೆಚ್ಚು ಅಪಾಯಕಾರಿ ಪ್ರದೇಶಗಳಲ್ಲಿ ಜೀವರಕ್ಷಕರ ಸಂಖ್ಯೆ ಹೆಚ್ಚಿಸಲಾಗಿದೆ. ಈ ಮೂಲಕ ಮಳೆಗಾಲದಲ್ಲಿ ಯಾವುದೇ ಅಪಘಾತಗಳಗದಂತೆ ನಿಗಾ ವಹಿಸಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.

ಜೀವರಕ್ಷಕರ ಸಂಖ್ಯೆ ಏರಿಕೆ
ಈಗ ತಣ್ಣೀರುಬಾವಿ ಬೀಚ್‌ನಲ್ಲಿ 6 ಜನ ಜೀವರಕ್ಷಕರಿದ್ದು, ಮಳೆಗಾಲದಲ್ಲಿ 10 ಜನ ಜೀವರಕ್ಷಕರು ಕಾರ್ಯಾಚರಿಸಲಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಬೀಚ್‌ನ ಬದಿಗಳಿಗೆ ಕೆಂಪು ಬಾವುಟ, ಹಗ್ಗಗಳನ್ನು ಕಟ್ಟಿ  ಪ್ರವಾಸಿಗರು ನೀರಿಗಿಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ ಎಂದು ತಣ್ಣೀರುಬಾವಿ ಬೀಚ್‌ ನ ಯೋಜನ ಸಂಯೋಜನ ಕೆ .ಪದ್ಮನಾಭ ಪಣೀಕ್ಕರ್‌ ಅವರು ಉದಯವಾಣಿಗೆ ತಿಳಿಸಿದ್ದಾರೆ.

Advertisement

ಪಣಂಬೂರು ಬೀಚ್‌ ನಲ್ಲಿ 8, ಕಾಪು ಬೀಚ್‌ ನಲ್ಲಿ 4, ಸೋಮೇಶ್ವರದಲ್ಲಿ 4 ಮಂದಿ ಜೀವರಕ್ಷಕರು ಕೆಲಸ ಮಾಡುತ್ತಿದ್ದು, ಮಳೆಗಾಲದ ಆರಂಭವಾದಾಗ ಬೋಟಿಂಗ್‌ ವಿಭಾಗದ  26 ಮಂದಿಯೂ ಜೀವರಕ್ಷಕರೊಂದಿಗೆ ಕೈ ಜೋಡಿಸಲಿದ್ದಾರೆ. ಅಲ್ಲದೆ ರಕ್ಷಣೆಗಾಗಿ ಬಳಸುವ ಬೋಯಿಂಗ್‌, ರಿಂಗ್ಸ್‌, ರೂಫ್‌, ಲೈಫ್‌ ಜಾಕೆಟ್ಸ್‌ಗಳಂತಹ ಪರಿಕರಗಳಿಗೆ ಹೆಚ್ಚಿನ ಮಹತ್ವ ನೀಡಿ ಹೆಚ್ಚುವರಿ ದಾಸ್ತಾನು ಮಾಡಲಾಗುತ್ತದೆ.

ಮೇ 31 ಬೋಟಿಂಗ್‌ ಸ್ಥಗಿತ
ಪಣಂಬೂರು ಬೀಚ್‌, ಕಾಪು, ಮಲ್ಪೆ ಸೇರಿದಂತೆ ಕೆಲವು ಪ್ರದೇಶಗಳ ನದಿ ತೀರಗಳಲ್ಲಿ ಈವರೆಗೆ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೇ 31ರಿಂದ ಬೋಟಿಂಗ್‌ ಸ್ಥಗಿತಗೊಳ್ಳಲಿದೆ. ಮಳೆಗಾಲದಲ್ಲಿ ಬೋಟಿಂಗ್‌ ಮಾಡುವುದು ಅಪಾಯಕಾರಿ ಎನ್ನುವ ಕಾರಣಕ್ಕೆ ಈಗಾಗಲೇ ಬೋಟಿಂಗ್‌ ನಡೆಸುತ್ತಿದ್ದ ಜಾಗಗಳಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ. 

ಜೀವರಕ್ಷಕರ ಸೂಚನೆ ಪಾಲಿಸಿ
ಸಮುದ್ರ ಕಿನಾರೆಗಳಲ್ಲಿ ಮುಂಗಾರು ಪೂರ್ವದಲ್ಲೇ ನಿಯಮಗಳನ್ನು  ಹೇರಲಾಗಿದ್ದು, ಅವರು ನೀಡಿದ ಸೂಚನೆಯನ್ನು ಪಾಲಿಸುವಂತೆ ಅಧಿಕಾರಿಗಳು ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ. ಪ್ರವಾಸಿಗರು ಜೀವರಕ್ಷಕರು ನೀಡುವ ಸೂಚನೆಗಳನ್ನು ಮನನ ಮಾಡಿಕೊಂಡು ಸಮುದ್ರಕ್ಕೆ ಇಳಿಯದಿರುವುದು ಉತ್ತಮ.  

ಟ್ರಕ್ಕಿಂಗ್‌, ನದಿ ದಡಕ್ಕೆ ತೆರಳುವಾಗ ಎಚ್ಚರಿಕೆ
ಟ್ರಕ್ಕಿಂಗ್‌ ತೆರಳುವ ಬಗ್ಗೆ ಆಸಕ್ತಿ ಇರುವ ಜನರು ಮಳೆಗಾಲದಲ್ಲಿ ಬೆಟ್ಟ ಗುಡ್ಡ ಹತ್ತಲು ಸಿದ್ಧರಾಗುತ್ತಾರೆ. ಈ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಆವಶ್ಯಕತೆ ಇದೆ. ಮಳೆಗಾಲ ಆದ್ದರಿಂದ ಟ್ರಕ್ಕಿಂಗ್‌ ತೆರಳುವ ಜಾಗದಲ್ಲಿ ತಿಳಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಉತ್ತಮ. ಅಪಾಯಕಾರಿ ಸ್ಥಳಗಳಿಗೆ ತೆರಳುವ ಮುನ್ನ ಯೋಚಿಸಬೇಕು. ಮಳೆಗಾಲದಲ್ಲಿ ನೀರಿನಲ್ಲಿ ಈಜಾಡುವುದು ಸಾಹಸಕ್ಕೆ ಕೈ ಹಾಕದಿರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಸೆಲ್ಫಿ ಅತಿರೇಕಕ್ಕೆ ಹೋಗದಿರಲಿ
ಯಾವುದೇ ಪ್ರವಾಸಿತಾಣಗಳಿಗೆ ತೆರಳಿದಾಗ ಸೆಲ್ಫಿ ತೆಗೆಯುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ  ಪ್ರವಾಸ ತೆರಳುವಾಗ ತೆಗೆಯುವ ಸೆಲ್ಫಿಯ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಮುದ್ರ ಕಿನಾರೆ, ನದಿ ತೀರ, ಜಲಪಾತ ಸೇರಿದಂತೆ ಎತ್ತರದ ಭಾಗಗಳಲ್ಲಿ ಸೆಲ್ಫಿ ತೆಗೆಯುವಾಗ ಜಾಗೃತರಾಗಬೇಕಾಗಿದೆ. 

ಪ್ರವಾಸಿಗರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ
ಮಳೆಗಾಲದಲ್ಲಿ ಸಮುದ್ರಕ್ಕಿಳಿಯದಂತೆ ಪ್ರವಾಸಿಗರಿಗೆ ಪದೇಪದೇ ಸೂಚನೆ ನೀಡಲಾಗುತ್ತದೆ. ಆದರೆ ಈ ಸೂಚನೆಯನ್ನು ಮೀರಿ ಎಷ್ಟೋ ಕಡೆಗಳಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಇದನ್ನು ಪ್ರವಾಸಿಗರು ಅರ್ಥ ಮಾಡಿಕೊಂಡು ನಮ್ಮೊಂದಿಗೆ ಸಹಕರಿಸಬೇಕು. ಇದರೊಂದಿಗೆ ಮಳೆಗಾಲದ  ರಜಾ ದಿನಗಳಲ್ಲಿ  ಸಮುದ್ರ ಕಿನಾರೆಯಲ್ಲಿ ಜೀವರಕ್ಷಕರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಬೇಕಾದರ ರಕ್ಷಣಾ ಪರಿಕರಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ.  
– ಯತೀಶ್‌ ಬೈಕಂಪಾಡಿ, ಪಣಂಬೂರು ಬೀಚ್‌ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಸಿಇಒ

 ಪ್ರವಾಸಿಗರ ರಕ್ಷಣೆ ನಮ್ಮ ಹೊಣೆ
ಮಳೆಗಾಲದಲ್ಲಿ ಯಾವುದೇ ಅಪಘಾತಗಳು ಸಂಭವಿಸದಂತೆ ಎಚ್ಚರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಬೀಚ್‌ ಬದಿಗೆ ಬರಬೇಡಿ ಎಂದು ಪ್ರವಾಸಿಗರಿಗೆ ನಿರಾಸೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ  ಮುಂಜಾಗೃತ ಕ್ರಮಗಳನ್ನು ಈಗಾಗಲೇ ಮಾಡಲಾಗಿದೆ. ಪ್ರವಾಸಿಗರು ನಮ್ಮೊಂದಿಗೆ ಕೈ ಜೋಡಿಸಬೇಕು.
– ವಸಂತ, ಜೀವ ರಕ್ಷಕದಳದ ಆಡಳಿತ ಮುಖ್ಯಸ್ಥ ಪಣಂಬೂರು ಬೀಚ್‌

— ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next