Advertisement

ಉಳಿತಾಯಕ್ಕೆ ತೆಗೆದಿಡಿ ಉಳಿದ ಹಣದಲ್ಲಿ ಬದುಕಿ!

09:38 PM May 05, 2019 | Sriram |

ಇಂದು ಸ್ವಲ್ಪ ಹಣ ಉಳಿಸಿ; ನಾಳೆ ಸುಖವಾಗಿ ಜೀವಿಸಿ ಎಂಬ ಮಾತಿನಂತೆ ಉಳಿತಾಯ ಮಾಡುವ ಗುಣವನ್ನು ಸಣ್ಣ ವಯಸ್ಸಿನಿಂದಲೇ ಬೆಳೆಸಿಕೊಂಡು ಹೋದರೆ ಜೀವನವೀಡಿ ಸುಖವಾಗಿ ಬಾಳಲು ಸಾಧ್ಯವಿದೆ. ಕೇವಲ 2,000 ರೂ. ಗಳನ್ನು ಪ್ರತೀ ತಿಂಗಳೂ ಆರ್‌ಡಿ ಅಥವಾ ಇನ್ನಿತರ ಠೇವಣಿಯಲ್ಲಿ ಹೂಡುತ್ತಾ ಬಂದರೆ ಹೆಚ್ಚಾ ಕಡಿಮೆ 30 ವರ್ಷಗಳ ಅಂತರದಲ್ಲಿ ಈ ಹಣ ಎಷ್ಟೋ ಲಕ್ಷ ದಾಟಿರುತ್ತದೆ. ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ಕೇವಲ 30 ವರ್ಷದಲ್ಲಿ ಹಣ ದುಪ್ಪಟ್ಟು ಮೀರಿರುತ್ತದೆ.

Advertisement

ಉಳಿತಾಯ ವಿಷಯದಲ್ಲಿ ನಾವು ಮಕ್ಕಳಾಗಬೇಕು. ಅಂದರೆ ಮಕ್ಕಳ ಮನಸ್ಥಿತಿಯನ್ನು ಅಳವಡಿಸಿಕೊಳ್ಳಬೇಕು. ಪುಡಿಗಾಸನ್ನು ತೆಗೆದಿಡುತ್ತಾ ಬರಬೇಕಿದೆ. ಪ್ರತೀ ದಿನವೂ ಇಂತಹ ಅಭ್ಯಾಸ ಬೆಳೆಸಿಕೊಳ್ಳಬೇಕು. ತಿಂಗಳ ಆರಂಭದಲ್ಲಿಯೇ ಉಳಿತಾಯಕ್ಕೆ ಹಣ ತೆಗೆದಿಟ್ಟು ಉಳಿದ ಹಣದಲ್ಲಿ ಇಡೀ ತಿಂಗಳು ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕಿದೆ. ಇದರಿಂದ ಹಣಕಾಸಿನ ಶಿಸ್ತು ಬೆಳೆಸಿಕೊಳ್ಳಬೇಕು. ಇದು ಭವಿಷ್ಯಕ್ಕೆ ಒಂದಷ್ಟು ಆಸರೆಯಾದಂತಾಗುತ್ತದೆ.

ಹೆಸರಾಂತ ಹೂಡಿಕೆದಾರ ವಾರನ್‌ ಬಫೆಟ್‌ ಸಲಹೆಯ ಪ್ರಕಾರ “ಬರುವ ಮಾಸಿಕ ಆದಾಯದಲ್ಲಿ ಉಳಿತಾಯಕ್ಕೆ ಮೊದಲು ತೆಗೆದಿಡಿ. ಅನಂತರ ಉಳಿದ ಹಣದಲ್ಲಿ ಬದುಕಿ’. ನಿಜಕ್ಕೂ ಈ ಮಾತು ಎಷ್ಟು ಅರ್ಥಗರ್ಭಿತವಲ್ಲವೇ..

ಉಳಿತಾಯ ಅಂದರೆ ಮಾಸಿಕ 5,000 ರೂ. ದುಡಿಯುವ ವ್ಯಕ್ತಿಯೊಬ್ಬ ಪ್ರತೀ ತಿಂಗಳು 2,000 ರೂ. ಉಳಿಸುವುದು ಅಸಾಧ್ಯ. ಆದರೆ ಸಣ್ಣ ಮೊತ್ತವನ್ನು ಉಳಿಸಲು ಸಾಧ್ಯ ಎಂಬ ಅಂಶವನ್ನು ಮನಗಾಣಬೇಕು. ಇಂತಹ ಅಭ್ಯಾಸದಿಂದ ಕಾಲಕ್ರಮೇಣ ಹೆಚ್ಚಿನ ಮೊತ್ತ ಕೂಡಿಡಲು ಸಾಧ್ಯ. ಜತೆಗೆ ಹಣಕಾಸಿನ ಮೇಲೆ ಸಂಪೂರ್ಣ ಹಿಡಿತ ಸಿಗಲು ಸಾಧ್ಯ.

ಸಣ್ಣ ಸಂಬಳ ಅಥವಾ ಕಡಿಮೆ ಆದಾಯ ಇರುವವರು ಹಣ ಉಳಿತಾಯ ಮಾಡುವುದು ಕಷ್ಟ ಎನ್ನುವ ಬಗ್ಗೆ ಮಾತಿದೆ. ಪ್ಲ್ಯಾನ್‌ ಸರಿಯಾಗಿದ್ದಲ್ಲಿ ಉಳಿತಾಯ ಮಾಡಲು ಕೂಡ ಸುಲಭ. ಈ ಬಗ್ಗೆ ಆಸಕ್ತಿ ಬೇಕು. 15,000 ರೂ. ಸಂಬಳ ಪಡೆಯುವ ವ್ಯಕ್ತಿಗಳು ತಿಂಗಳಿಗೆ ಕನಿಷ್ಠ 8000 ರೂ. ನಿಂದ 10,000 ರೂ. ವರೆಗೆ ಉಳಿಸಲೇಬೇಕು. ಅಂದರೆ ತಿಂಗಳಿಗೆ 4,000 ರೂ. ಗಳಿಂದ 5,000 ರೂ. ವರೆಗೆ ತಿಂಗಳ ವೆಚ್ಚ ನಿಭಾಯಿಸುವಂತೆ ಯೋಜನೆ ಹಾಕಿಕೊಂಡರೆ ಉತ್ತಮ.

Advertisement

ಜೀವವಿಮೆ ಯೋಜನೆಯಲ್ಲಿ ಹಣ ತೊಡಗಿಸಿಕೊಂಡರೆ ಉತ್ತಮ. ಸಂಬಳದಿಂದ ಪ್ರತೀ ತಿಂಗಳು ಕಡಿತವಾಗುವಂತೆ ಎಲ್‌ಐಸಿಯ ವಿವಿಧ ಸ್ಕೀಮ್‌ನಲ್ಲಿ ತೊಡಗಿಸಿಕೊಂಡರೆ ಕೆಲವು ವರ್ಷದ ಅನಂತರ ಉಳಿತಾಯದ ಮೊತ್ತ ಹೆಚ್ಚಾಗಲಿದೆ.

ಸುರಕ್ಷಿತ ಸಣ್ಣ ಉಳಿತಾಯ ಯೋಜನೆಗಳು
ಮಾಸಿಕ ವರಮಾನ ಹೊಂದಿದವರಿಗೆ ಭವಿಷ್ಯನಿಧಿ ಹೂಡಿಕೆ ಉತ್ತಮ ಸಣ್ಣ ಉಳಿತಾಯ ಸಾಧನ. ಪ್ರತೀ ತಿಂಗಳು ಉದ್ಯೋಗದಾತರು ನೌಕರರ ವೇತನದಲ್ಲಿ ಮುರಿದುಕೊಳ್ಳುವ ಭವಿಷ್ಯನಿಧಿ ಹಣ ನಿಯಮಿತವಾಗಿ ಪಾವತಿಯಾಗುತ್ತಿರುತ್ತದೆ. ಉದ್ಯೋಗದಾತರು ತಮ್ಮ ಪಾಲಿನ ಹಣವನ್ನು ಈ ನಿಧಿಗೆ ಹಾಕುತ್ತಾರೆ. ಅಂಚೆ ಕಚೇರಿಯಲ್ಲಿಯೂ ಸಣ್ಣ ಉಳಿತಾಯದ ಹಲವು ಯೋಜನೆಗಳಿವೆ. ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಪಾಲಿಗೆ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳು ಸುರಕ್ಷಿತ ಹಾಗೂ ನಿಶ್ಚಿತ ಆದಾಯ ತಂದುಕೊಡುತ್ತವೆ.

ಆವರ್ತಕ ಠೇವಣಿ (ಆರ್‌ಡಿ), ಉಳಿತಾಯ ಖಾತೆ, ನಿಗದಿತ ಠೇವಣಿ (ಟೈಮ್‌ ಡಿಪಾಸಿಟ್‌), ಅಂಚೆ ಮಾಸಿಕ ವರಮಾನ ಖಾತೆ, ಹಿರಿಯ ನಾಗರಿಕರ ಖಾತೆ, ಸಾರ್ವಜನಿಕ ಪ್ರಾವಿಂಡೆಂಟ್‌ ಫಂಡ್‌, ರಾಷ್ಟ್ರೀಯ ಉಳಿತಾಯ ಪತ್ರದಂತಹ ಒಟ್ಟು 8 ಉಳಿತಾಯ ಯೋಜನೆಗಳು ಭಾರತೀಯ ಅಂಚೆ ಕಚೇರಿಯಲ್ಲಿ ಲಭ್ಯವಿವೆ. ಕೇವಲ 10 ರೂ. ಗಳಿಂದ ಗರಿಷ್ಠ ಎಷ್ಟು ಬೇಕಾದರೂ ಉಳಿತಾಯ ಮಾಡಲು ಇಲ್ಲಿ ಅವಕಾಶವಿದೆ.
ಸಣ್ಣ ಉಳಿತಾಯ ಯೋಜನೆಗಳು ಸಾರ್ವಜನಿಕರಲ್ಲಿ ಉಳಿತಾಯ ಪ್ರವೃತ್ತಿ ರೂಢಿಸುವ ಜತೆಗೆ ಇಳಿಗಾಲದ ಬದುಕಿಗೆ ಆಸರೆಯಾಗುತ್ತಿದೆ. ಹಣಕಾಸಿನ ಶಿಸ್ತು ಕೂಡ ಕಲಿಸುತ್ತದೆ. ಉಳಿತಾಯ ಖಾತೆಯನ್ನು ಆರಂಭಿಸುವುದೇ ಉಳಿತಾಯದ ಮೊದಲ ಪಾಠ.

ಬ್ಯಾಂಕಿನಲ್ಲಿ ಉಳಿತಾಯಕ್ಕೆ ಸಂಬಂಧಿಸಿ ಬೇರೆ ಬೇರೆ ಖಾತೆಗಳು ಇರುವ ಹಿನ್ನೆಲೆಯಲ್ಲಿ ಅಲ್ಲಿ ಬೇರೆ ಬೇರೆ ದಾರಿಗಳಿವೆ. ಬೇರೆ ಬೇರೆ ಬ್ಯಾಂಕ್‌ಗಳು ಸದ್ಯ ಇರುವ ಹಿನ್ನೆಲೆಯಲ್ಲಿ ಅಲ್ಲಿನ ಉಳಿತಾಯ ಸೂತ್ರವನ್ನು ಸರಿಯಾಗಿ ತಿಳಿದುಕೊಂಡು ಮುಂದಡಿ ಇಟ್ಟರೆ ಉತ್ತಮ. ರಿಯಾಯಿತಿಯ ಪ್ರಪಂಚದಲ್ಲಿ, ಉಚಿತಗಳ ಅಬ್ಬರದಲ್ಲಿ, ಬಗೆ ಬಗೆಯ ವಸ್ತುಗಳ ಲೋಕದಲ್ಲಿ ಖರೀದಿ ಮಾಡುವ ಎಂಬ ಮನಸ್ಸಿನಲ್ಲಿ ಹಲವರಿರುವಾಗ ಉಳಿತಾಯ ಕಲ್ಪನೆ ಅವರಿಗೆ ಸರಿಹೊಂದುವುದಿಲ್ಲ. ಹೀಗಾಗಿ ಆವಶ್ಯಕತೆ, ಅಗತ್ಯ, ಅನಿವಾರ್ಯಗಳ ಲಕ್ಷ್ಮಣ ರೇಖೆಯನ್ನು ಸ್ಥೂಲವಾಗಿ ಪರಿಶೀಲಿಸಿ, ಉಳಿತಾಯ ಮನೋಭೂಮಿಕೆ ಬೆಳೆಸಬೇಕಿದೆ.

ಗೃಹಸಾಲ ಹಾಗೂ ಶಿಕ್ಷಣ ಸಾಲ ಹೊರತುಪಡಿಸಿ ಇತರ ಕಾರಣಗಳಿಗೆ ಸಾಲ ಮಾಡುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ಉತ್ತಮ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಸಿ ಆಧಾರದ ಮೇಲೆ ಉಳಿತಾಯ ಮಾಡಿ ತೆರಿಗೆ ವಿನಾಯಿತಿ ಪಡೆಯಬಹುದು. ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಗರಿಷ್ಠ 10,000 ರೂ. ಮಾತ್ರ ಇಟ್ಟು ಉಳಿದ ಹಣವನ್ನು ಅವಧಿ ಠೇವಣಿಗೆ ವರ್ಗಾಯಿಸಿದರೆ ಉತ್ತಮ.

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next