Advertisement

ತಡರಾತ್ರಿ ನೆರವಿಗೆ ಧಾವಿಸಿದ ತಹಶೀಲ್ದಾರ್‌ ಭೋಗಾವತಿ

12:45 PM Mar 23, 2022 | Team Udayavani |

ಸಿಂಧನೂರು: ತುರ್ತು ಚಿಕಿತ್ಸೆ ಅಗತ್ಯವಿದ್ದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಈ ಬಗ್ಗೆ ಮಾಹಿತಿ ತಿಳಿದು ತಹಶೀಲ್ದಾರ್‌ ಮಂಜುನಾಥ ಭೋಗಾವತಿ ಆಸ್ಪತ್ರೆಗೆ ಧಾವಿಸಿ, ಸಿಬ್ಬಂದಿಯನ್ನು ಎಚ್ಚರಿಸಿದ್ದಾರೆ.

Advertisement

ಅಲಬನೂರು ಗ್ರಾಮದ ಮಂಜುಳಾ ಗಂಡ ರಾಜಶೇಖರ (24) ಹೆರಿಗೆಗೆಂದು ದಾಖಲಾಗಿದ್ದರು. ಸೋಮವಾರ ಮಧ್ಯಾಹ್ನ ಹೆರಿಗೆಯಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ತಡರಾತ್ರಿಯಲ್ಲಿ ರಕ್ತಸ್ರಾವವಾಗಿದ್ದು, ಈ ಸಂದರ್ಭದಲ್ಲಿ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಕರೆಯಲು ಹೋದಾಗ ಯಾರೂ ಬಂದಿಲ್ಲ. ಆಸ್ಪತ್ರೆ ಸಿಬ್ಬಂದಿ ಕೊಠಡಿಗಳಲ್ಲಿ ಚಿಲಕ ಹಾಕಿಕೊಂಡು ನಿದ್ರೆಗೆ ಜಾರಿದ್ದಾರೆ. ಇದರಿಂದ ಗಾಬರಿಬಿದ್ದ ಮಹಿಳೆ ಸಂಬಂಧಿಕರು, ತಹಶೀಲ್ದಾರ್‌ ಅವರನ್ನು ಸಂಪರ್ಕಿಸಿ ಸಮಸ್ಯೆ ಹೇಳಿಕೊಂಡಿದ್ದಾರೆ. ಕಾಲುವೆ ನೀರಿನ ಗಸ್ತಿಗೆ ಹೋಗಿದ್ದ ಮಂಜುನಾಥ ಬೋಗಾವತಿ, ನೇರವಾಗಿ ಆಸ್ಪತ್ರೆಗೆ ತೆರಳಿ, ಸಿಎಂಒ ಹನುಮಂತರೆಡ್ಡಿ ಅವರನ್ನು ಸಂಪರ್ಕಿಸಿದ್ದಾರೆ. ನಂತರದಲ್ಲಿ ಸಿಬ್ಬಂದಿ ನೆರವಿಗೆ ಧಾವಿಸಿದ್ದಾರೆ.

ನಿರ್ಲಕ್ಷ್ಯದ ನಡೆಗೆ ಆಕ್ರೋಶ

ದಿನದ 24 ಗಂಟೆಯೂ ಕರ್ತವ್ಯಕ್ಕೆ ವೈದ್ಯರು ಸೇರಿದಂತೆ ಸಿಬ್ಬಂದಿ ನಿಯೋಜಿಸಲಾಗಿರುತ್ತದೆ. 10 ಜನ ವೈದ್ಯರಿದ್ದಾರೆ. ಆದರೂ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ. ಡಿಎಚ್‌ಒ ರಾಮಕೃಷ್ಣ ಮಂಗಳವಾರ ಭೇಟಿ ನೀಡಿದ ವೇಳೆ ಘಟನೆ ಕುರಿತು ಮಾಹಿತಿ ಪಡೆದು, ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ತವ್ಯನಿರತ ವೈದ್ಯ ಡಾ| ವಿನಯ್‌, ತುರ್ತು ಚಿಕಿತ್ಸೆಗಾಗಿ ಬೇರೆ ರೋಗಿ ನೋಡುತ್ತಿದ್ದಾಗ ಸ್ವಲ್ಪ ಗಾಬರಿಯಾಗಿದ್ದಾರೆ. ಮಾಹಿತಿ ಗೊತ್ತಾದ ಮೇಲೆ ಸರಿಪಡಿಸಲಾಗಿದೆ. ಯಾವುದೇ ಸಮಸ್ಯೆ ಆಗಿಲ್ಲ ಎಂದು ಮುಖ್ಯ ವೈದ್ಯಾಧಿಕಾರಿ ಡಾ| ಹನುಮಂತರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next