Advertisement

ಬಾಲಿವುಡ್‌ ಆಲ್ಬಂ ಸಾಂಗ್‌ಗೆ ಟಗರು ಪುಟ್ಟಿ ಸ್ಟೆಪ್ಪು

09:07 AM Jun 18, 2019 | Lakshmi GovindaRaj |

“ಟಗರು’ ಪುಟ್ಟಿ ಅಂತಾನೇ ಕರೆಸಿಕೊಳ್ಳುವ ಮಾನ್ವಿತಾ ಹರೀಶ್‌, ತಮ್ಮ ಹೆಸರಲ್ಲೊಂದು ಸಣ್ಣ ಬದಲಾವಣೆ ಮಾಡಿಕೊಂಡು ಮಾನ್ವಿತಾ ಕಾಮತ್‌ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. “ಟಗರು’ ಬಳಿಕ ಮಾನ್ವಿತಾ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಚಿತ್ರದಲ್ಲಿ ನಟಿಸಿದ್ದಾಗಿದೆ. ಆ ಬಳಿಕ ಮಾನ್ವಿತಾ ಕನ್ನಡದ ಯಾವ ಚಿತ್ರದಲ್ಲೂ ನಟಿಸುವ ಕುರಿತು ಸುದ್ದಿ ಹೊರಬೀಳಲಿಲ್ಲ.

Advertisement

ಅತ್ತ, ಮರಾಠಿ ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಸ್ವತಃ ಮಾನ್ವಿತಾ ಅವರೇ ಹೇಳಿಕೊಂಡಿದ್ದರು. ಮರಾಠಿ ಚಿತ್ರದಲ್ಲಿ ನಟಿಸುತ್ತಲೇ ಅವರೀಗ ಬಾಲಿವುಡ್‌ ಅಂಗಳಕ್ಕೂ ಜಿಗಿದಿದ್ದಾರೆ. ಹಾಗಂತ, ಮಾನ್ವಿತಾ ಬಾಲಿವುಡ್‌ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿಲ್ಲ. ಬದಲಾಗಿ ಅವರು ಹಿಂದಿ ಆಲ್ಬಂ ಸಾಂಗ್‌ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಮಾನ್ವಿತಾ ಅವರು ಇತ್ತೀಚೆಗೆ ಬಾಲಿವುಡ್‌ ಆಲ್ಬಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಅವರ ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವುದು ಬಾಲಿವುಡ್‌ನ‌ ಟಾಪ್‌ ಡ್ಯಾನ್ಸ್‌ ಮಾಸ್ಟರ್‌ ಗಣೇಶ್‌ ಆಚಾರ್ಯ. ಅವರೊಂದಿಗೆ ಕೆಲಸ ಮಾಡಿರುವ ಮಾನ್ವಿತಾ ಅವರಿಗಂತೂ ಎಲ್ಲಿಲ್ಲದ ಖುಷಿ. ಬಾಲಿವುಡ್‌ ಅಂಗಳಕ್ಕೆ ಹೋಗುವುದಿರಲಿ, ಅಲ್ಲಿನ ಹಿಂದಿ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ,

ಗಣೇಶ್‌ ಆಚಾರ್ಯ ಅವರು ಸ್ಟೆಪ್‌ ಹೇಳಿಕೊಡುತ್ತಾರೆ ಅಂತ ಸ್ವತಃ ಮಾನ್ವಿತಾ ಅವರಿಗೇ ಗೊತ್ತಿರಲಿಲ್ಲ. ಈಗ ಅದು ನಿಜವಾಗಿದೆ. ಈ ಖುಷಿ ಹಂಚಿಕೊಂಡಿರುವ ಮಾನ್ವಿತಾ, ಪುಲ್ವಾಮ ದಾಳಿಯಲ್ಲಿ ವೀರಮರಣ ಹೊಂದಿದ ನಮ್ಮ ಯೋಧರಿಗೆ ಆ ಹಾಡನ್ನು ಅರ್ಪಿಸಲಾಗಿದೆ. ಅದೊಂದು ವಿಶೇಷವಾಗಿರುವಂತಹ ಹಾಡು. ಆ ಹಾಡಿಗೆ ಗಣೇಶ್‌ ಆಚಾರ್ಯ ಅವರು ನೃತ್ಯ ನಿರ್ದೇಶಿಸಿದ್ದಾರೆ.

ಅವರೊಂದಿಗೆ ಕೆಲಸ ಮಾಡಿದ ಅನುಭವ ಅನನ್ಯ. ಇನ್ನು, ಕೃಷ್ಣ ಅಭಿಷೇಕ್‌ ಜೊತೆ ಹಾಡಲ್ಲಿ ಕಾಣಿಸಿಕೊಂಡಿರುವುದಾಗಿ ಮಾನ್ವಿತಾ ಹೇಳಿಕೊಂಡಿದ್ದಾರೆ. ಅದೇನೆ ಇರಲಿ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಾನ್ವಿತಾ, ಅತ್ತ ಟಾಲಿವುಡ್‌ ಮಂದಿಯ ಕಣ್ಣಿಗೂ ಬಿದ್ದಿದ್ದಾರೆ.

Advertisement

ಈ ಹಿಂದೆ ರಾಮ್‌ಗೋಪಾಲ್‌ ವರ್ಮ ಅವರೇ “ಟಗರು’ ಚಿತ್ರದಲ್ಲಿ ಮಾನ್ವಿತಾ ಅವರ ನಟನೆ ನೋಡಿ, ಸ್ವತಃ ಮುಂದಿನ ನನ್ನ ಚಿತ್ರದಲ್ಲಿ ನಟಿಸಬೇಕು ಅಂತ ಅಡ್ವಾನ್ಸ್‌ ಮಾಡಿದ್ದರು. ಅದೇ ಖುಷಿಯಲ್ಲಿದ್ದ ಮಾನ್ವಿತಾ, ಮರಾಠಿ ಚಿತ್ರರಂಗಕ್ಕೂ ಕಾಲಿಟ್ಟರು. ಈಗ ಬಾಲಿವುಡ್‌ ಆಲ್ಬಂ ಸಾಂಗ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನದಲ್ಲಿ ಹಿಂದಿ ಚಿತ್ರದಲ್ಲೂ ಕಾಣಿಸಿಕೊಂಡರೆ ಅಚ್ಚರಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next