Advertisement

ಹಲವು ಯಶಸ್ಸುಗಳ ರಾಯಭಾರಿ ಟಿ.ಸುನೀಲ್‌ಕುಮಾರ್‌

01:31 AM Jun 18, 2019 | Team Udayavani |

ಬೆಂಗಳೂರು: “ಪೊಲೀಸರಿಗೆ ಗನ್‌ ನೀಡಿರುವುದು ಜೇಬಿನಲ್ಲಿ ಇಟ್ಟುಕೊಳ್ಳಲು ಅಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಸಂಧರ್ಭದಲ್ಲಿ ತಿರುಗಿ ಬೀಳುವ ಪುಂಡರಿಗೆ ಗುಂಡೇಟಿನ ರುಚಿ ತೋರಿಸಲು…’ ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಹೊಸತರಲ್ಲಿ ಟಿ.ಸುನೀಲ್‌ಕುಮಾರ್‌, ಅಧೀನ ಅಧಿಕಾರಿಗಳಿಗೆ ಕೊಟ್ಟ ಖಡಕ್‌ ಸೂಚನೆಯಿದು.

Advertisement

ಇಂತಹದ್ದೊಂದು ಸೂಚನೆ ಬಂದಿದ್ದೇ ತಡ ನಗರದ ಎಂಟು ಪೊಲೀಸ್‌ ವಿಭಾಗಗಳ ಪೊಲೀಸರ ಬಂದೂಕುಗಳು 2018ರಲ್ಲಿ ಹೆಚ್ಚಾಗಿಯೇ ಮಾತನಾಡಿದವು. ಕುಖ್ಯಾತ ಸರಗಳ್ಳರು, ದರೋಡೆಕೋರರು, ಕೊಲೆಗಡುಕರು ತಣ್ಣಗಾದರು. ಸರಗಳ್ಳರು, ಡ್ರಗ್ಸ್‌ ದಂಧೆಕೋರರ ವಿರುದ್ಧವೂ ಗೂಂಡಾಸ್ತ್ರ ಪ್ರಯೋಗ ಸೇರಿದಂತೆ ಹಲವು ನಿರ್ಧಾರಗಳ ಪರಿಣಾಮ ಎರಡು ವರ್ಷದ ಅವಧಿಯಲ್ಲಿ ನಗರದ ಅಪರಾಧ ಪ್ರಮಾಣವೂ ಇಳಿಮುಖವಾಯಿತು.

ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಸೋಮವಾರ ನಿರ್ಗಮಿತಗೊಂಡ ಹಿರಿಯ ಐಪಿಎಸ್‌ ಅಧಿಕಾರಿ ಟಿ. ಸುನೀಲ್‌ ಕುಮಾರ್‌ ಕಾರ್ಯವೈಖರಿಯ ಮತ್ತೂಂದು ಆಯಾಮವಿದು. ಒಂದು ವರ್ಷ 11 ತಿಂಗಳು ನಗರ ಪೊಲೀಸ್‌ ಆಯುಕ್ತರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಸುನೀಲ್‌ಕುಮಾರ್‌, ಅಧಿಕಾರವಧಿಯಲ್ಲಿ ಪೊಲೀಸರ ಕಾರ್ಯಶೈಲಿಯಲ್ಲಿ ಹಲವು ಬದಲಾವಣೆ.

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಬಲವರ್ಧನೆ, ಕೆಳಹಂತದ ಆಧಿಕಾರಿಗಳ ಕೈಗೆ ಶಸ್ತ್ರಾಸ್ತ್ರ, ಎರಡು ಚುನಾವಣೆ ಹೀಗೆ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಹೆಗ್ಗಳಿಕೆಯನ್ನು ತಮ್ಮ ಸೇವಾಖಾತೆಗೆ ಸೇರಿಸಿಕೊಂಡಿದ್ದಾರೆ.

ಕಪ್ಪುಚುಕ್ಕೆ ಅಳಿಸಿದ ಖ್ಯಾತಿ: 2016ರ ಹೊಸ ವರ್ಷಾಚರಣೆ ವೇಳೆ ಎಂ.ಜಿ.ರಸ್ತೆಯಲ್ಲಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಸುದ್ದಿಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಕಪ್ಪುಚುಕ್ಕೆ ಬರುವಂತಾಗಿತ್ತು. ಈ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿದ ಸುನೀಲ್‌ ಕುಮಾರ್‌, 2018, 2019ರ ಹೊಸವರ್ಷಾಚರಣೆ ವೇಳೆ ಪೂರ್ವಯೋಜನೆ, ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡುವ ಮೂಲಕ ಯಶಸ್ವಿಯಾಗಿದ್ದರು.

Advertisement

ಎರಡು ಚುನಾವಣೆಗಳಲ್ಲಿ ಯಶಸ್ವಿ ನಾಯಕತ್ವ!: 2018ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಗೊಳಿಸಿದ ಖ್ಯಾತಿಯೂ ಸುನೀಲ್‌ಕುಮಾರ್‌ ನಾಯಕತ್ವಕ್ಕೆ ಸಲ್ಲುತ್ತದೆ. ಇದಲ್ಲದೆ ಹಿರಿಯ ನಟ ಅಂಬರೀಶ್‌ ನಿಧನದ ದಿನ ಹಾಗೂ ಅಂತ್ಯ ಸಂಸ್ಕಾರದ ವೇಳೆ ಎಲ್ಲಿಯೂ ಕಾನೂನ ಸುವ್ಯವಸ್ಥೆ ಉಲ್ಲಂಘನೆಯಾಗದಂತೆ ಜವಾಬ್ದಾರಿ ನಿರ್ವಹಿಸಿದರು.

ಲಕ್ಷಾಂತರ ರೂ.ಜನ ಬೆಂಗಳೂರಿಗೆ ಆಗಮಿಸಿದ್ದರು ಸಾರ್ವಜನಿಕರಿಗೂ ಅಂಬರೀಶ್‌ ಅಂತಿಮ ನಮನಕ್ಕೆ ಅವಕಾಶ ನೀಡಿ ಕಾನೂನು ಹಳಿತಪ್ಪದಂತೆ ಅಧೀನ ಆಧಿಕಾರಿಗಳಿಗೆ ಸಲಹೆ, ಮಾರ್ಗದರ್ಶನ ನೀಡಿ ಯಶಸ್ವಿಯಾದರು. ಅವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು. ಇಲಾಖೆಯನ್ನು ಸಧೃಡಗೊಳಿಸಲು ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ (ಎಎಸ್‌ಐ)ಗಳಿಗೆ ಪಿಸ್ತೂಲು ಬಳಸಲು ಅವಕಾಶ ನೀಡಿದರು.

ಜತೆಗೆ, ಮೊದಲ ಹಂತವಾಗಿ ತರಬೇತಿ ಕೊಡಿಸಿ ಕೆಳಹಂತದ ಸಿಬ್ಬಂದಿಗೂ ಶಸ್ತ್ರಾಸ್ತ್ರ ಬಳಸಲು ಅವಕಾಶ ನೀಡಿದ್ದು. ನಮ್ಮ 100 ಮತ್ತಷ್ಟು ಪ್ರಚುರಪಡಿಸಿದ್ದು, ಹೊಸದಾಗಿ ನಗರ ಪೊಲೀಸ್‌ ಠಾಣೆಗಳಿಗೆ 700 ಚೀತಾವಾಹನಗಳನ್ನು ನೀಡಿದರು. ಸಮುದಾಯ ಪೊಲೀಸ್‌ ವ್ಯವಸ್ಥೆಯನ್ನು ಸಧೃಡಗೊಳಿಸಲು ಶ್ರಮಿಸಿದರು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಅಭಿಪ್ರಾಯ ಹಂಚಿಕೊಂಡರು.

ಬಾಲಕನಿಗೆ ಸೆಲ್ಯೂಟ್‌ ಹೊಡೆದ ಕಮಿಷನರ್‌!: 2018ರ ಮೇ ತಿಂಗಳಿನಲ್ಲಿ ಕಾರ್ಯನಿಮಿತ್ತ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಹೊರಬರುತ್ತಿದ್ದಾಗ ಸೆಲ್ಯೂಟ್‌ ಹೊಡೆದ ಶಾಲಾ ಬಾಲಕನಿಗೆ ಪ್ರತಿ ಸೆಲ್ಯೂಟ್‌ ಹೊಡೆದ ಸುನೀಲ್‌ಕುಮಾರ್‌ ಗೌರವ ಸೂಚಿಸಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಹೀಗಿರಬೇಕು ಎಂದು ಮೇಲ್ತಂಕಿ ಹಾಕಿಕೊಟ್ಟರು. ಇದಲ್ಲದೆ ಹೊಸವರ್ಷಾಚರಣೆ ದಿನದ ರಾತ್ರಿ ನಗರದಲ್ಲಿ ಸರ, ಚಿನ್ನಾಭರಣ ಕಳೆದುಕೊಂಡ ಮನೆಗಳಿಗೆ ಖುದ್ದುಭೇಟಿ ನೀಡಿ ಅವರ ವಸ್ತುಗಳನ್ನು ವಾಪಾಸ್‌ ಕೊಟ್ಟು ಅಚ್ಚರಿ ಮೂಡಿಸಿದ್ದರು.

ಅವರ ವಿಶೇಷ ಉಡುಗೊರೆ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಶ್ರೀಲಂಕಾದಲ್ಲಿ ಬಾಂಬ್‌ ಸ್ಫೋಟ ಬಳಿಕ ಎಚ್ಚೆತ್ತುಕೊಂಡ ಅವರು, ಬೆಂಗಳೂರಿನ ಮಾಲ್‌ಗ‌ಳ ಸಿಬ್ಬಂದಿ, ಹೋಟೆಲ್‌ ಸಿಬ್ಬಂದಿ, ಧರ್ಮಗುರುಗಳು ಸೇರಿದಂತೆ ಸಾರ್ವಜನಿಕರ ಸಭೆಗಳನ್ನು ನಡೆಸಿ ಯಾವುದೇ ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬಿದರು. ಜತೆಗೆ, ಅಹಿತಕರ ಘಟನೆ ನಡೆಯದಂಗೆ ಹೇಗೆ ಎಚ್ಚರಿಕೆ ವಹಿಸಬೇಕು ಪೊಲೀಸರಿಗೆ ಹೇಗೆ ಸಹಕರಿಸಬೇಕು ಎಂಬುದರ ಬಗ್ಗೆಯೂ ಸಲಹೆ ನೀಡಿದ್ದು ವಿಶೇಷವಾಗಿದೆ.

“ಸೇವಾ ಅವಧಿಯಲ್ಲಿ ಎರಡು ವರ್ಷವೂ ಅಪರಾಧ ಪ್ರಮಾಣ ಕಡಿಮೆ ಮಾಡಲು ಪ್ರಯತ್ನ ಮಾಡಿದ್ದೇನೆ. ಬೆಂಗಳೂರು ನಗರ ಆಯುಕ್ತರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಸಂತೃಪ್ತಿಯಿದೆ. ಇದಕ್ಕೆ ಸಹಕರಿಸಿದ ಇಲಾಖೆಯ ಸಿಬ್ಬಂದಿಗೆ ಹಾಗೂ ಸರ್ಕಾರ, ಬೆಂಗಳೂರು ಜನರಿಗೆ ಧನ್ಯವಾದ ತಿಳಿಸುತ್ತೇನೆ. ಬೆಂಗಳೂರು ನಗರ ಆಯುಕ್ತರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಸಂತೃಪ್ತಿಯಿದೆ.
-ಟಿ.ಸುನೀಲ್‌ಕುಮಾರ್‌, ಎಡಿಜಿಪಿ

*  ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next