Advertisement

ಸಿಂಡಿಕೇಟ್‌ ಬ್ಯಾಂಕ್‌ ಒಟ್ಟಾರೆ ವಹಿವಾಟು 5 ಲಕ್ಷ ಕೋಟಿ ರೂಪಾಯಿಗೆ ಏರಿಕೆ

11:19 PM Feb 11, 2020 | Lakshmi GovindaRaj |

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ತ್ತೈಮಾಸಿಕದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ 435 ಕೋಟಿ ರೂ.ನಿವ್ವಳ ಲಾಭ ಗಳಿಸಿದ್ದಲ್ಲದೇ, ಬ್ಯಾಂಕ್‌ನ ಒಟ್ಟಾರೆ ವಹಿವಾಟನ್ನು ಐದು ಲಕ್ಷ ಕೋಟಿ ರೂ.ಗೆ ಏರಿಸಿ ದಾಖಲೆ ಮಾಡಿದೆ.

Advertisement

ಗಾಂಧಿನಗರದ ಸಿಂಡಿಕೇಟ್‌ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕದ ಫ‌ಲಿತಾಂಶ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ ಮಹಾಪಾತ್ರ, 2019-20ನೇ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕದ ಅಂತ್ಯಕ್ಕೆ ಸಿಂಡಿಕೇಟ್‌ ಬ್ಯಾಂಕ್‌ ಐದು ಲಕ್ಷ ಕೋಟಿ ರೂ. ವಹಿವಾಟು ನಡೆಸಿ ದಾಖಲೆ ಮಾಡಿದೆ ಎಂದರು.

ಕಳೆದ ಆರ್ಥಿಕ ವರ್ಷದ (2018-19)ಮೂರನೇ ತ್ತೈಮಾಸಿಕದಲ್ಲಿ 108 ಕೋಟಿ ರೂ. ಇದ್ದ ನಿವ್ವಳ ಲಾಭವು ಈ ಬಾರಿ 435 ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರಮುಖವಾಗಿ ಒಟ್ಟು ಅನುತ್ಪಾದಕ ಆಸ್ತಿ ಪ್ರಮಾಣ ಅನುಪಾತವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.54 ರಿಂದ 11.33ಕ್ಕೆ ಇಳಿಕೆಯಾಗಿದೆ. ಅಂತೆಯೇ ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣ ಅನುಪಾತ ಕೂಡ 6.75 ರಿಂದ 5.94 ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದರು.

ಅಂತೆಯೇ 2018-19ರ ಮೂರನೇ ತ್ತೈಮಾಸಿಕಕ್ಕಿಂತ ಈ ಬಾರಿ ನಿರ್ವಹಣಾ ಲಾಭ ಪ್ರಮಾಣವು ಶೇ.111 ರಷ್ಟು ಏರಿಕೆಯಾಗಿದ್ದು, 1336 ಕೋಟಿ ರೂ. ತಲುಪಿದೆ. ಜತೆಗೆ ಬಡ್ಡಿಯಿಂದ ಬರುವ ನಿವ್ವಳ ಬಡ್ಡಿ ಆದಾಯವು ಶೇ.16 ರಷ್ಟು ಏರಿಕೆಯಾಗಿದ್ದು, 1871 ರೂ.ಗೆ ತಲುಪಿದೆ. ಚಾಲ್ತಿ ಹಾಗೂ ಉಳಿತಾಯ ಖಾತೆಯ ಠೇವಣಿ ಪ್ರಮಾಣವು ಶೇ 8.19 ಏರಿಕೆಯಾಗಿದೆ.

ಕಳೆದ ಡಿಸೆಂಬರ್‌ನಲ್ಲಿದ್ದ ಶೇ.64.81 ನಿಬಂಧನೆ ವ್ಯಾಪ್ತಿ ಅನುಪಾತವು 2019 ಡಿಸೆಂಬರ್‌ನಲ್ಲಿ ಶೇ.69.28 ಸುಧಾರಿಸಿದೆ. ಒಟ್ಟಾರೆ ಸಿಬ್ಬಂದಿ ಶ್ರಮದಿಂದ ಮೂರನೇ ತ್ತೈಮಾಸಿಕದಲ್ಲಿ ಬ್ಯಾಂಕ್‌ ಅತ್ಯುತ್ತಮ ವಹಿವಾಟು ನಡೆಸಿದ್ದು, ನಾಲ್ಕನೇ ತ್ತೈಮಾಸಿಕದಲ್ಲಿಯೂ ಮುಂದುವರೆಸುವ ಭರವಸೆ ಇದೆ ಎಂದರು.

Advertisement

ಒಟ್ಟು ವ್ಯವಹಾರ ಶೇ.7ರಷ್ಟು ಹೆಚ್ಚಳ: 2018ರ ಡಿಸೆಂಬರ್‌ನಲ್ಲಿ ರೂ. 4,67,911 ಕೋಟಿ ರೂ. ಇದ್ದ ವಹಿವಾಟು ಶೇ.7ರಷ್ಟು ಹೆಚ್ಚಳವಾಗಿ 5,00,971 ಕೋಟಿ ರೂ.ಗೆ ತಲುಪಿದೆ. ಈ ದಾಖಲೆಯ ವಹಿವಾಟಿಗೆ ಮೂರನೇ ತ್ತೈಮಾಸಿಕದಲ್ಲಿ ಠೇವಣಿ ಹೆಚ್ಚಳವು ಪ್ರಮುಖ ಕಾರಣವಾಗಿದೆ. ಚಿಲ್ಲರೆ ಮತ್ತು ಕೃಷಿ ಕ್ಷೇತ್ರದಲ್ಲಿ ಕ್ರಮವಾಗಿ ಶೇ.7 ಮತ್ತು ಶೇ.10ರಷ್ಟು ಬೆಳವಣಿಗೆ ಕಂಡು ಬಂದಿದೆ ಎಂದು ಹೇಳಿದರು.

ಗ್ರಾಹಕರ ಅನುಕೂಲವನ್ನು ಹೆಚ್ಚಿಸಲು ಮೊಬೈಲ್ ಬ್ಯಾಂಕಿಂಗ್‌ ಅಪ್ಲಿಕೇಶನ್‌ನ ಪರಿಷ್ಕೃತ ಆವೃತ್ತಿಯಲ್ಲಿ ಬ್ಯಾಂಕ್‌ ಹಿಂದಿ, ಇಂಗ್ಲಿಷ್‌ ಭಾಷೆಗಳ ಜತೆಗೆ 9 ಪ್ರಾದೇಶಿಕ ಭಾಷೆಗಳನ್ನು ಸಕ್ರಿಯಗೊಳಿಸಿದೆ. ಆಕಸ್ಮಿಕ ಮರಣ ವಿಮೆ, ಮೈಕ್ರೋ ಲೈಫ್‌, ಇನುರೆನ್ಸ್‌ ಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗೆ ದಾಖಲಾತಿ, ನೆಫ್ಟ್‌, ಸಾಲ ಖಾತೆಗಳಿಗೆ ಬಡ್ಡಿ ಪ್ರಮಾಣ ಪತ್ರ ವಿತರಣೆ,

ಟಿಡಿಎಸ್‌, ಫಾರ್ಮ್ 16 ಪ್ರಮಾಣಪತ್ರ ವಿತರಣೆ ಮತ್ತು ಇತರ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಇನ್ನು ಬ್ಯಾಂಕ್‌ ವಿಲೀನ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಎಸ್‌.ಕೃಷ್ಣನ್‌, ಅಜಯ್‌ ಕೆ.ಕುರಾನಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next