Advertisement

ಕಾವೇರುವ ಬೆಳಗಾವಿ

06:00 AM Dec 10, 2018 | Team Udayavani |

ಬೆಳಗಾವಿ: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗಲಿದೆ. ಅಭಿವೃದ್ಧಿಗಿಂತ ಹೆಚ್ಚಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ರಾಜಕೀಯ ಮೇಲಾಟಕ್ಕೆ ಉಭಯ ಸದನಗಳು ಸಾಕ್ಷಿಯಾಗುವ ಸಾಧ್ಯತೆ ಹೆಚ್ಚಾಗಿದೆ.

Advertisement

ಸಮ್ಮಿಶ್ರ ಸರ್ಕಾರ ಆರು ತಿಂಗಳು ಪೂರೈಸಿರುವುದರಿಂದ ಸಹಜವಾಗಿ ಸರ್ಕಾರದ ಸಾಧನೆ, ಉತ್ತರ ಕರ್ನಾಟಕದ ಭಾಗದ ಆಭಿವೃದ್ಧಿ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂಬ ನಿರೀಕ್ಷೆ ಹೆಚ್ಚಿದೆ. ಆದರೂ ಅಧಿವೇಶನಕ್ಕೂ ಮುನ್ನ ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ಹೇಳಿಕೆ ಗಮನಿಸಿದರೆ, ಆರೋಪ-ಪ್ರತ್ಯಾರೋಪಗಳ ಜಂಗೀಕುಸ್ತಿ ಸದನದ ಸಮಯ ನುಂಗಿಹಾಕುವ ಲಕ್ಷಣಗಳು ಕಂಡುಬರುತ್ತಿವೆ.

ರೈತರ ಸಾಲಮನ್ನಾ, ಕಬ್ಬು ಬೆಳೆಗಾರರ ಸಮಸ್ಯೆ, ಬರ ಪರಿಹಾರ, ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಹಣ ದುರುಪಯೋಗ ಕುರಿತ ಸಿಎಜಿ ವರದಿ ಮುಂದಿಟ್ಟುಕೊಂಡು ಸಮ್ಮಿಶ್ರ ಸರ್ಕಾರವನ್ನು ಹಣಿಯಲು ಪ್ರತಿಪಕ್ಷ ಬಿಜೆಪಿ ಸಜ್ಜಾಗಿದೆ. ಆದರೆ, ರೈತರಿಗೆ ಋಣಮುಕ್ತ ಪತ್ರ ವಿತರಿಸಿರುವುದು, ಕಬ್ಬು ಬೆಳೆಗಾರರ ಬಾಕಿ ಪಾವತಿಗೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿರುವುದು, ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿರುವುದು ಹಾಗೂ ಆರು ತಿಂಗಳಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗಳ ಮಾಹಿತಿ ನೀಡಿ ಪ್ರತಿಪಕ್ಷದ ಸದ್ದು ಆಡಗಿಸಲು ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌-ಕಾಂಗ್ರೆಸ್‌ ಪ್ರತಿತಂತ್ರ ರೂಪಿಸಿದೆ.

ಪ್ರತಿಭಟನೆ ಬಿಸಿ ತಪ್ಪಿದ್ದಲ್ಲ:
ಅಧಿವೇಶನಕ್ಕೆ ಮೊದಲ ದಿನವೇ ರೈತರ ಪ್ರತಿಭಟನೆಯ ಬಿಸಿ ತಾಕುವ ಸಾಧ್ಯತೆಯಿದೆ. ಒಂದೆಡೆ ಬಿಜೆಪಿಯವರು ರೈತರ ಸಮಾವೇಶ ಹಮ್ಮಿಕೊಂಡಿದ್ದರೆ, ಮತ್ತೂಂದೆಡೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಬ್ಬು ಬೆಳೆಗಾರರು ಬಾಕಿ ಪಾವತಿಗಾಗಿ ಆಗ್ರಹಿಸಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ. ಹೀಗಾಗಿ, ಸದನದ ಒಳಗೆ ಹಾಗೂ ಹೊರಗೆ ಕಾವೇರುವ ವಾತಾವರಣ ಇರಲಿದೆ.

ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರವೇ ಬೆಳಗಾವಿಗೆ ಆಗಮಿಸಿ ಪಕ್ಷದ ಪ್ರಮುಖ ನಾಯಕರ ಜತೆ ಸಮಾಲೋಚನೆ ನಡೆಸಿದ್ದಾರೆ. ರೈತರ ಸಮಾವೇಶ ಯಶಸ್ವಿಗೊಳಿಸಿ ಉಭಯ ಸದನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟದ ಕಾರ್ಯತಂತ್ರ ರೂಪಿಸಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸೋಮವಾರ ಬೆಳಗಾವಿಗೆ ಬರಲಿದ್ದು, ರೈತರ ಸಮಾವೇಶ, ರೈತರ ಪ್ರತಿಭಟನೆ ಸೇರಿ ಸದನದಲ್ಲಿ ಪ್ರತಿಪಕ್ಷ ಬಿಜೆಪಿಯ ಹೋರಾಟದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Advertisement

ಉತ್ಸಾಹವೇ ಇಲ್ಲ:
ಕಳೆದ ಅಧಿವೇಶನಗಳಿಗೆ ಹೋಲಿಸಿದರೆ ಈ ಬಾರಿಯ ಅಧಿವೇಶನಕ್ಕೆ ಜನಪ್ರತಿನಿಧಿಗಳಷ್ಟೇ ಅಲ್ಲದೆ, ಅಧಿವೇಶನದ ಬಗ್ಗೆ ಬೆಳಗಾವಿ ಜನತೆಯಲ್ಲೂ ಉತ್ಸಾಹವಿಲ್ಲ. ಪ್ರತಿವರ್ಷ ಅಧಿವೇಶನ ಮುನ್ನಾದಿನವೇ ಬೆಳಗಾವಿ ನಗರ ನವ ವಧುವಿನಂತೆ ಸಿಂಗಾರಗೊಂಡು ಸುವರ್ಣಸೌಧ ಅಲಂಕಾರಗೊಳ್ಳುತ್ತಿತ್ತು. ಆದರೆ, ಈ ಬಾರಿ ಹಿಂದಿನ ಉತ್ಸಾಹ ಕಂಡುಬರುತ್ತಿಲ್ಲ. ಭಾನುವಾರ ಮಧ್ಯಾಹ್ನದವರೆಗೂ ಸುವರ್ಣಸೌಧ ಬ ಣಗುಡುತ್ತಿತ್ತು.

ಹೊಣೆಗಾರಿಕೆ ಗೊಂದಲ:
ಈ ಮಧ್ಯೆ, ಹತ್ತು ದಿನಗಳ ಅಧಿವೇಶನದಲ್ಲಿ ಪ್ರಶ್ನೋತ್ತರ ಹೊರತುಪಡಿಸಿ ಇತರೆ ಕಲಾಪದ ಬಗ್ಗೆ ಭಾನುವಾರ ಸಂಜೆಯ ತನಕ ಅಧಿಕೃತ ಮಾಹಿತಿ ನೀಡಿಲ್ಲ. ವಿಧೇಯಕಗಳ ಮಂಡನೆ ಹಾಗೂ ಇತರೆ ವಿಚಾರಗಳ ಬಗ್ಗೆ ಸೋಮವಾರ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೂಂದೆಡೆ ಅಧಿವೇಶನದಲ್ಲಿ ವಿಧಾನಸಭೆ ಕಾರ್ಯದರ್ಶಿ ಹೊಣೆಗಾರಿಕೆ ಯಾರು ನಿಭಾಯಿಸಲಿದ್ದಾರೆ ಎಂಬ ಗೊಂದಲವೂ ಇದೆ. ತಾಂತ್ರಿಕವಾಗಿ ಮೂರ್ತಿ ವಿಧಾನಸಭೆ ಕಾರ್ಯದರ್ಶಿಯಾಗಿದ್ದಾರೆ. ಆದರೆ, ಕೆಲವು ಆರೋಪ ಹಿನ್ನೆಲೆಯಲ್ಲಿ ವಿಶಾಲಾಕ್ಷಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಮೂರ್ತಿ ಅವರು ಸಹ ಬೆಳಗಾವಿಗೆ ಬಂದಿದ್ದು, ಕಾರ್ಯದರ್ಶಿ ಸ್ಥಾನ ಯಾರು ನಿರ್ವಹಿಸಲಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.

ಸುವರ್ಣಸೌಧಕ್ಕೆ ಸರ್ಪಗಾವಲು
ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ಸೌಧಕ್ಕೆ  ಖಾಕಿ ಸರ್ಪಗಾವಲು ಹಾಕಲಾಗಿದೆ. ಸುವರ್ಣಸೌಧದ ಒಳ ಆವರಣ, ಹೊರ ಆವರಣ, ಪ್ರವೇಶ ದ್ವಾರಗಳಲ್ಲಿ ಭದ್ರತೆ ಹೊಣೆಗಾರಿಕೆಯನ್ನು ಪ್ರತ್ಯೇಕವಾಗಿ ಐಪಿಎಸ್‌ ಅಧಿಕಾರಿಗಳಿಗೆ ವಹಿಸಲಾಗಿದೆ. ಅಧಿವೇಶನ ಆರಂಭವಾಗುವ ಮುನ್ನಾದಿನವಾದ ಭಾನುವಾರ ಹಿರಿಯ ಅಧಿಕಾರಿಗಳು ತಮಗೆ ಸೂಚಿಸಿದ ವ್ಯಾಪ್ತಿಯಲ್ಲಿ ಬಹಳ ಹೊತ್ತು ಪರಿಶೀಲನೆ ನಡೆಸಿದರು. ವಿಧಾನಸಭೆ, ವಿಧಾನ ಪರಿಷತ್‌ ಸಭಾಂಗಣ, ಆಡಳಿತ, ಪ್ರತಿಪಕ್ಷಗಳ ಮೊಗಸಾಲೆ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಭಾಧ್ಯಕ್ಷರು, ಸಭಾಪತಿ, ಸಚಿವರು, ಹಿರಿಯ ಅಧಿಕಾರಿಗಳ ಕಚೇರಿ, ಇತರೆ ಪ್ರಮುಖ ಕಚೇರಿ, ಸಭಾಂಗಣಗಳನ್ನು ಪರಿಶೀಲಿಸಿದರು. ಸುವರ್ಣಸೌಧದ ಆವರಣದಲ್ಲಿರುವ ಹೆಲಿಪ್ಯಾಡ್‌ ಸೇರಿ ಪ್ರವೇಶ ದ್ವಾರ, ಹೊರ ಆವರಣದಲ್ಲೂ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಈ ಹಿಂದೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದವರು, ಅನುಭವಿ ಪೊಲೀಸ್‌ ಸಿಬ್ಬಂದಿಯನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.

ವೆಚ್ಚಕ್ಕೆ ಕಡಿವಾಣ
ಕಳೆದ ಆಧಿವೇಶನಕ್ಕೆ ಮೊದಲು 20 ಕೋಟಿ ರೂ. ನಂತರ 4 ಕೋಟಿ ರೂ. ಸೇರಿ ಒಟ್ಟು 24 ಕೋಟಿ ರೂ. ವೆಚ್ಚವಾಗಿತ್ತು. ಅಕ್ರಮದ ಆರೋಪವೂ ಕೇಳಿಬಂದಿತ್ತು. ಹೀಗಾಗಿ ಈ ಬಾರಿ ವೆಚ್ಚಕ್ಕೆ ಕಡಿವಾಣ ಹಾಕಲು ವಿಶೇಷ ಅಧಿಕಾರಿಯಾಗಿ ಉಜ್ವಲ್‌ ಕುಮಾರ್‌ ಘೋಷ್‌ ಅವರನ್ನು ನೇಮಿಸಿ 17.50 ಕೋಟಿ ರೂ. ಮುಂಗಡವಾಗಿ ನೀಡಲಾಗಿದೆ. ಕಳೆದ ವರ್ಷ 7 ಕೋಟಿ ರೂ. ಮುಂಗಡ ನೀಡಲಾಗಿತ್ತು ಎಂದು ಹೇಳಲಾಗಿದೆ.

ಸದನದಲ್ಲಿ ಸಿದ್ದು ಪಕ್ಕ ಎಚ್‌.ವಿಶ್ವನಾಥ್‌!
ಒಂದು ಕಾಲದ ಆತ್ಮೀಯ ಗೆಳೆಯರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ರಾಜಕೀಯ ಪಲ್ಲಟದಿಂದ ಹಾವು-ಮುಂಗುಸಿಗಳಂತಾಗಿದ್ದರು. ವಿಶ್ವನಾಥ್‌ ಅವರು ಪಕ್ಷ ಬದಾಲಾಯಿಸಿ, ವಿರುದ್ಧ ದಿಕ್ಕಿಗೆ ಮುಖ ಮಾಡಿದ್ದರು. ಈಗ  ಸಮ್ಮಿಶ್ರ ಸರ್ಕಾರದ ಮೊದಲ ಬೆಳಗಾವಿ ಅಧಿವೇಶನ ಅವರ ಸ್ನೇಹಕ್ಕೆ ಕಾರಣವಾಗಲಿದೆಯೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಕಾರಣ, ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗುವ 10 ದಿನಗಳ ಅಧಿವೇಶನದಲ್ಲಿ ಇಬ್ಬರು ನಾಯಕರಿಗೂ ಅಕ್ಕ ಪಕ್ಕದ ಆಸನ ನೀಡಲಾಗಿದೆ. ಸುವರ್ಣ ಸೌಧದ ವಿಧಾನಸಭೆಯಲ್ಲಿ ಮೂರನೇ ಸಾಲಿನಲ್ಲಿ ಸರ್ಕಾರದ ಮುಖ್ಯ ಸಚೇತಕ ಗಣೇಶ್‌ ಹುಕ್ಕೇರಿ ಕುಳಿತುಕೊಳ್ಳುವ ಆಸನದ ಪಕ್ಕದಲ್ಲೇ ಸಿದ್ದರಾಮಯ್ಯ ಅವರಿಗೆ ಸ್ಥಳ ನಿಯೋಜನೆ ಮಾಡಲಾಗಿದೆ. ಅವರ ಪಕ್ಕದಲ್ಲಿಯೇ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಅವರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ತಾವೇ ಬಯಸಿ ಸದನದ ಹಿಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದನ್ನು ಸ್ಮರಿಸಬಹುದಾಗಿದೆ. ಇವೆಲ್ಲದರ ನಡುವೆ, ಸಿದ್ದರಾಮಯ್ಯ ಮೊದಲ ವಾರ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿದು ಬಂದಿದ್ದು, ಎರಡನೇ ವಾರವಾದರೂ ತಮಗೆ ಮೀಸಲಿಟ್ಟ ಆಸನದಲ್ಲಿ ಕುಳಿತುಕೊಳ್ಳುತ್ತಾರಾ ಅಥವಾ ಆಸನ ಬದಲಾಯಿಸಿಕೊಳ್ಳುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಮುಂದಿನ ಸಾಲಿನಲ್ಲಿಯೂ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಕದಲ್ಲಿ ಸದನದ ಹಿರಿಯ ಸಚಿವರಾಗಿರುವ ಆರ್‌.ವಿ. ದೇಶಪಾಂಡೆ ಕುಳಿತುಕೊಳ್ಳುತ್ತಿದ್ದರು. ಆದರೆ, ಬೆಳಗಾವಿಯಲ್ಲಿ ಮುಖ್ಯಮಂತ್ರಿ ಪಕ್ಕದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಕುಳಿತುಕೊಳ್ಳಲು ಆಸನ ನಿಗದಿ ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next