Advertisement

ಠಾಣೆ ಮೆಟ್ಟಿಲೇರಿದ ಪೆಟ್ರೋಲ್‌ ಬಂಕ್‌ ಮೇಲಿನ ಅನುಮಾನ: ಇತ್ಯರ್ಥ

10:26 AM May 29, 2018 | Team Udayavani |

ಮಂಗಳೂರು: ಕಾರಿನ ಮಾಲಕರೊಬ್ಬರು ಪೆಟ್ರೋಲ್‌ ಪಂಪ್‌ನಲ್ಲಿ ಡೀಸೆಲ್‌ ಕಡಿಮೆ ತುಂಬಿಸಿ ಹೆಚ್ಚು ಹಣ ಪಡೆದು ಮೋಸ ಮಾಡುತ್ತಾರೆಂದು ಶಂಕಿಸಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿ, ಬಳಿಕ ತನ್ನ ಅನುಮಾನವೇ ಸುಳ್ಳೆಂದು ಒಪ್ಪಿಕೊಂಡಿರುವುದು ಸೋಮವಾರ ಬೆಳಕಿಗೆ ಬಂದಿದೆ. 

Advertisement

ಡಾ| ಅಬ್ದುಲ್‌ ಮನ್ಸೂರ್‌ ಎಂಬ ವ್ಯಕ್ತಿ ಸೋಮವಾರ ನಗರದ ಬಲ್ಮಠ ಬಳಿ ಇರುವ ಮ್ಯಾಕೊ ಪೆಟ್ರೋಲ್‌ ಬಂಕ್‌ನಲ್ಲಿ ತಮ್ಮ ಕಾರಿನ ಕೀ ಕೊಟ್ಟು, ಟ್ಯಾಂಕ್‌ ಫುಲ್‌ ಡೀಸೆಲ್‌ ತುಂಬುವಂತೆ ತಿಳಿಸಿದ್ದಾರೆ. ಟ್ಯಾಂಕ್‌ ತುಂಬಿದ ಬಳಿಕ ಬಿಲ್‌ ಕೊಡುವಾಗ ಮನ್ಸೂರ್‌ ಅವರಿಗೆ ಅಚ್ಚರಿ ಕಾದಿತ್ತು. ಏಕೆಂದರೆ, ಡೀಸೆಲ್‌ ತುಂಬಿಸಿದಾತ ಮನ್ಸೂರ್‌ ಅವರ ಕಾರಿಗೆ 50 ಲೀಟರ್‌ ಡೀಸೆಲ್‌ ತುಂಬಲಾಗಿದೆ ಎಂದು ಹೇಳಿ ಬಿಲ್‌ ನೀಡಿದ್ದ.  ಆದರೆ, ಮನ್ಸೂರ್‌ ಅವರಿಗೆ ತಿಳಿದಿರುವ ಪ್ರಕಾರ ಅವರ ಕಾರಿನ  ಇಂಧನ ಟ್ಯಾಂಕ್‌ನ ಒಟ್ಟು  ಸಾಮರ್ಥ್ಯವೇ 42 ಲೀಟರ್‌. ಹಾಗಿದ್ದರೆ 50 ಲೀ. ತುಂಬುವುದು ಹೇಗೆ ಎಂದು ಕ್ಯಾತೆ ತೆಗೆದು ಅವರು ಪೆಟ್ರೋಲ್‌ ಬಂಕ್‌ನವರನ್ನು ತರಾಟೆಗೆ ತೆಗೆದುಕೊಂಡರು. ಪೆಟ್ರೋಲ್‌ ಬಂಕ್‌ನವರು ಎಷ್ಟೇ ಹೇಳಿದರೂ ಮನ್ಸೂರ್‌ ಕೇಳುವ ಸ್ಥಿತಿಯಲ್ಲಿರಲಿಲ್ಲ. ಬಳಿಕ ಮನ್ಸೂರ್‌ ನ್ಯಾಯ ಕೇಳಲು ಕದ್ರಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದರು.   

ದೂರು ದಾಖಲಿಸಿದ ಕದ್ರಿ ಪೊಲೀಸರು  ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಪೆಟ್ರೋಲ್‌ ಬಂಕ್‌ನ ಡೀಸೆಲ್‌ ಡಿಸ್‌ಪೆನ್ಸಿಂಗ್‌ ಯುನಿಟ್‌ನ ಸರಕಾರಿ ಮುದ್ರೆಗಳು ಹಾಗೂ ಕ್ಯಾಲಿಬರೇಶನ್‌ ಯುನಿಟ್‌ ಸರಿ ಇದೆಯೇ ಎಂದು ಪರಿಶೀಲಿಸಿದರು. ಆದರೆ ಅಧಿಕಾರಿಗಳಿಗೆ ಯಾವುದೇ ನ್ಯೂನತೆ ಕಂಡುಬರಲಿಲ್ಲ. ಮತ್ತೆಯೂ ಮನ್ಸೂರ್‌ನ ಶಂಕೆ ನಿವಾರಣೆ ಅಗದ ಹಿನ್ನೆಲೆಯಲ್ಲಿ ಕಾರನ್ನು ಸನಿಹದ ಮಾಂಡವಿ ಮೋಟರ್ಗೆ ತೆಗೆದುಕೊಂಡು ಹೋಗಿ ಡೀಸೆಲ್‌ ಸಂಪೂರ್ಣ ಖಾಲಿ ಮಾಡಿಸಿ, ಮತ್ತೆ  ಪೆಟ್ರೋಲ್‌ ಬಂಕ್‌ಗೆ ಬಂದು ಡೀಸೆಲ್‌ ತುಂಬಿದಾಗ ಅದರಲ್ಲಿ 51.36 ಲೀಟರ್‌ ತುಂಬಿದೆ. ಆಗ ಮನ್ಸೂರ್‌ ತನ್ನ ಅನುಮಾನವೇ ಸುಳ್ಳೆಂದು ತಿಳಿದು  ಕ್ಷಮೆ ಯಾಚಿಸಿದರು ಎಂದು ತಿಳಿದು ಬಂದಿದೆ.  

Advertisement

Udayavani is now on Telegram. Click here to join our channel and stay updated with the latest news.

Next