Advertisement

ಹೆಣ್ಣಿನ ಚಿಂತನೆಯ ಎತ್ತರವನ್ನು ಪರಿಚಯಿಸಿದ ಸೂರ್ಯಪ್ರಭೆ

05:48 PM Apr 11, 2019 | mahesh |

ನಾಟಕದ ಉತ್ತರಾರ್ಧ ಮಹಾಭಾರತದ ಕಥೆಯನ್ನು ಆಧರಿಸಿದ ಸನ್ನಿವೇಶ. ಆದರೆ ಪೂರ್ವಾರ್ಧವನ್ನು ಸಹ ಮೂಲ ಕಥೆ ಬರೆದವರು ತಮ್ಮ ಚಿಂತನಾ ಲಹರಿಯಿಂದ ಮಹಾಭಾರತದ ಕಥೆಗೆ ಹೊಂದಿಕೆಯಾಗುವಂತೆ ಅಳವಡಿಸಿಕೊಂಡಿರುವುದು ಕಥೆಗಾರನ ಸೂಕ್ಷ್ಮತೆ.
ವಿಷ್ಣು ಭಟ್‌ ಹೊಸ್ಮನೆ ಆತ್ರಾಡಿಯವರ ಪೌರಾಣಿಕ ಕಥೆ “ಸೂರ್ಯಪ್ರಭೆ’ಯನ್ನು ನಾಟಕವಾಗಿ ರೂಪಾಂತರಿಸಿದವರು ವಿಶ್ವನಾಥ ದೊಡ್ಮನೆ. ಅದನ್ನು ನಿರ್ದೇಶಿಸಿ ರಂಗಕ್ಕೆ ತಂದವರು ಅಶೋಕ ಕುಮಾರ್‌ ಕೋಡ್ಯಡ್ಕ.

Advertisement

ಹಿರಿಯ ನಟಿ ಪ್ರಿಯಾ ಸರೋಜಾದೇವಿ, ಅಶೋಕ್‌ ಮಾರ್ನಾಡ್‌, ಅನಿಲ್‌ ಕುಮಾರ್‌ ಸಸಿಹಿತ್ಲು, ಪ್ರಭಾಕರ್‌ ನಾಯಕ್‌, ದೀಪಕ್‌ ಪೂಜಾರಿ, ಕರುಣಾಕರ ಪೂಜಾರಿ ತಂಡ ತಮ್ಮ ಮಾತು ಹಾಗೂ ಅಭಿನಯದಿಂದ ನಾಟಕಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದೆ. ಮುಂಬಯಿಯ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ವಾರ್ಷಿಕ ಮಹೋತ್ಸವದ ಸಂದರ್ಭ ಶ್ರೀ ಗೀತಾಂಬಿಕ ಸಭಾಗೃಹ ಅಸಲ# ಇಲ್ಲಿ ಪ್ರದರ್ಶನ ಕಂಡಿತು”ಸೂರ್ಯಪ್ರಭೆ’.

ಪ್ರಾರಂಭದಿಂದ ಕೊನೆಯವರೆಗೂ ಕಥಾನಾಯಕಿ ತನ್ನ ಎತ್ತರದ ಬೌದ್ಧಿಕ ಚಿಂತನೆಯನ್ನು ಸಮರ್ಥಿಸುವಲ್ಲಿ ಯಶಸ್ವಿಯಾದದ್ದು ಕಥೆಯ ಸಾರಾಂಶ. ಕೌಟುಂಬಿಕ ಕಲಹದಿಂದಾಗಿ ಉಂಟಾದ ಯುದ್ಧದಿಂದ ತನ್ನ ಪತಿಯನ್ನು ಕಳೆದುಕೊಂಡ ಅಗಸನ ಪತ್ನಿ ತನ್ನ ಮುಂದಿನ ಬಾಳಿನ ಕುರಿತು ಯೋಚಿಸುವುದಕ್ಕಿಂತ ಈ ಯುದ್ಧದಿಂದ ಇನ್ನಷ್ಟು ಜನರಿಗೆ ತನ್ನಂತೆ ಸ್ಥಿತಿ ಬರಬಹುದು ಎನ್ನುವತ್ತ ಯೋಚಿಸಿ ಯುದ್ಧ ನಿಲ್ಲಿಸುವಂತೆ ಭೀಷ್ಮಾಚಾರ್ಯರಲ್ಲಿ ಕೇಳಿಕೊಳ್ಳುವ ದೃಶ್ಯ. ಹೆಣ್ಣೊಬ್ಬಳ ಧೈರ್ಯ, ದೂರದೃಷ್ಟಿ , ವಿಶಾಲ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ.

ಭೀಷ್ಮಾಚಾರ್ಯರಾಗಿ ನಟಿಸಿದ ಅನಿಲ್‌ ಕುಮಾರ್‌ ಸಸಿಹಿತ್ಲು ಅವರ ಅಭಿನಯವು ಒಂದು ಕ್ಷಣ ಮಹಾಭಾರತದತ್ತ ಕೊಂಡೊಯ್ದದ್ದು ನಿಜ. ಅಲ್ಲದೇ ಮುಂಬಯಿಯ ಕಲಾವಿದರ ಪ್ರೌಢಿಮೆಯನ್ನು ಕಾಣುವಂತಾಯಿತು. ಮಧುಬಾಹುವಾಗಿ (ಅಗಸ) ನಟಿಸಿದ ಅಶೋಕ್‌ ಕಾರ್ನಾಡ್‌ ಕೌರವರ ಮನೆಯ ಅಗಸ ಪಾತ್ರವನ್ನು ಪ್ರಬುದ್ಧವಾಗಿ ನಿರ್ವಹಿಸಿರುವರು. ರಾಜ ಮನೆತನದ ಘನ – ಗಾಂಭೀರ್ಯದೊಂದಿಗೆ ಯುದ್ಧಕ್ಕೆ ಹೋಗುವ ಸಂದರ್ಭ ಬಂದಾಗ ಪತ್ನಿಯನ್ನು ಸಮಾಧಾನಿಸಿ ನಿರ್ಗಮಿಸುವುದು ಕರ್ತವ್ಯ ಪ್ರಜ್ಞೆಯನ್ನು ತೋರಿಸುವ ಸನ್ನಿವೇಶ ದೇಶಪ್ರೇಮವನ್ನು ಸಾರುವಂತಿತ್ತು.

ಇನ್ನು ದ್ರೋಣಾಚಾರ್ಯರ ಪಾತ್ರವನ್ನು ನಿರ್ವಹಿಸಿದ ಪ್ರಭಾಕರ್‌ ನಾಯಕ್‌ ಕಲಾಪ್ರೌಢಿಮೆ ತೋರಿಸುವಲ್ಲಿ ಹಿಂದೆ ಬೀಳಲಿಲ್ಲ. ಕೃಷ್ಣನ ಪಾತ್ರ ನಿರ್ವಹಿಸಿದ ದೀಪಕ್‌ ಪೂಜಾರಿ ಮುಂಬಯಿಯಲ್ಲೇ ಶಿಕ್ಷಣ ಪೂರೈಸಿದವರು. ತುಳು ನಾಟಕಗಳಲ್ಲಿ ಸಾಕಷ್ಟು ಅಭಿನಯಿಸಿದ್ದರು. ಕನ್ನಡ ನಾಟಕದಲ್ಲಿ ಅದೂ ಪೌರಾಣಿಕ ನಾಟಕದಲ್ಲಿ ಕೃಷ್ಣನ ಪಾತ್ರ ನಿರ್ವಹಿಸಿ ಭವಿಷ್ಯದಲ್ಲಿ ಭರವಸೆ ಮೂಡಿಸಿದರು.

Advertisement

ಸೂತ್ರಧಾರನ ಪಾತ್ರ ನಿರ್ವಹಿಸಿದ ಪ್ರಿಯಾ ಸರೋಜಾದೇವಿ ಪತಿ ಮಧುಬಾಹುವನ್ನು ಯುದ್ಧಕ್ಕೆ ಕಳುಹಿಸಿ ಕೊಡುವ ಸನ್ನಿವೇಶ, ನಂತರ ಪತಿ ಅಗಲುವಿಕೆ ಮುಂದೆ ಯುದ್ಧದಿಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂಬ ಹಂಬಲದಿಂದ ಏಕಾಂಗಿಯಾಗಿ ಪ್ರಯತ್ನಿಸಿದ ಸನ್ನಿವೇಶಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಪತಿಯನ್ನು ಕಳೆದುಕೊಂಡ “ಸೂರ್ಯಪ್ರಭೆ’ ಧೈರ್ಯಗೆಡದೇ ಭೀಷ್ಮರಲ್ಲಿಗೆ ಹೋಗಿ ಯುದ್ಧ ನಿಲ್ಲಿಸುವಂತೆ ಕೇಳಿಕೊಳ್ಳುವುದು, ಭೀಷ್ಮಚಾರ್ಯರು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ದ್ರೋಣಾಚಾರ್ಯರಲ್ಲಿಗೆ ಹೋಗಿ ಯುದ್ಧದಿಂದಾಗುವ ತೊಂದರೆಗಳನ್ನು ವಿವರಿಸುವ ಸನ್ನಿವೇಶ ಹಾಗೆ ಕೃಷ್ಣನಲ್ಲಿಗೆ ಹೋಗಿ ಧೈರ್ಯದಿಂದ ಸಮಸ್ಯೆ ಹೇಳಿಕೊಳ್ಳುವ ದೃಶ್ಯಗಳಿಗೆ ವಿಶೇಷ ಕಳೆ ತುಂಬುವಲ್ಲಿ ಯಶಸ್ವಿಯಾದದ್ದು ಅವರ ಪ್ರಬುದ್ಧತೆಗೆ ಸಾಕ್ಷಿಯಾಯಿತು.

ಶಾಂತಿಲಕ್ಷ್ಮಿ ಎಸ್‌. ಉಡುಪ

Advertisement

Udayavani is now on Telegram. Click here to join our channel and stay updated with the latest news.

Next