Advertisement

ಶಾರ್ಪ್‌ ಶೂಟರ್‌ಗಳ ಕಣ್ಗಾವಲು

06:46 AM Feb 19, 2019 | Team Udayavani |

ಬೆಂಗಳೂರು: ನಗರದಲ್ಲಿ  ಫೆ.20ರಿಂದ ಫೆ.24ರವರೆಗೆ ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ “ವೈಮಾನಿಕ ಪ್ರದರ್ಶನ-2019’ಕ್ಕೆ ಭಾರೀ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿದೆ.

Advertisement

ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌, ಏರ್‌ ಶೋಗೆ ಗಣ್ಯರು, ಅತೀ ಗಣ್ಯರು, ವಿದೇಶಿ ಗಣ್ಯರು ಸೇರಿ ಲಕ್ಷಾಂತರ ಮಂದಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದು, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರು ಸೇರಿ ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಮೂರು ಹಂತದಲ್ಲಿ ಭದ್ರತೆಗೆ ಕ್ರಮವಹಿಸಲಾಗಿದ್ದು, ವಾಯು ನೆಲೆಯ ಹೊರಾಂಗಣದ ಸುತ್ತಮುತ್ತ ನಗರ ಪೊಲೀಸ್‌ ಸಿಬ್ಬಂದಿ, ಎರಡನೇ ಹಂತದಲ್ಲಿ ಸಿಐಎಸ್‌ಎಫ್ ಹಾಗೂ ಮೂರನೇ ಹಂತದಲ್ಲಿ ವಾಯಸೇನಾ ಹಾಗೂ ಮಿಲಿಟರಿ ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ. 10 ಮಂದಿ ಡಿಸಿಪಿಗಳು, 27 ಮಂದಿ ಎಸಿಪಿ, 123 ಇನ್ಸ್‌ಪೆಕ್ಟರ್‌ಗಳು, 298 ಪಿಎಸ್‌ಐ, 3,205 ಎಎಸ್‌ಐ, ಹೆಡ್‌ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ಗ‌ಳು, 11 ಕೆಎಸ್‌ಆರ್‌ಪಿ ತುಕಡಿಗಳು, ಐದು ಸಿಎಆರ್‌ ತುಕಡಿಗಳು, ಎರಡು ಕ್ಯೂಆರ್‌ಟಿ, ಎರಡು ಡಿ-ಸ್ವಾಟ್‌ ಹಾಗೂ ಗರುಡ ಪಡೆಗಳು ಕರ್ತವ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ವಾಯು ನೆಲೆಯ ಹೊರಾಂಗಣದ ಸುತ್ತಮುತ್ತಲೂ ಭದ್ರತೆ ಸಲುವಾಗಿ ಪೊಲೀಸ್‌ ಟೆಂಟ್‌ಗಳು ನಿರ್ಮಿಸಿ, ಪಾಳಿ ಕರ್ತವ್ಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಜತೆಗೆ ಚಿತಾ ಮತ್ತು ಹೊಯ್ಸಳ ವಾಹನಗಳು ಕೂಡ ಗಸ್ತು ತಿರುಗಲಿವೆ. ವಾಯು ನೆಲೆಯ ಎಲ್ಲ 12 ಪ್ರವೇಶ ದ್ವಾರಗಳಲ್ಲಿ ಅತೀ ಸೂಕ್ಷ್ಮವಾಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ವಾಯು ನೆಲೆಯ ಸುತ್ತಲೂ 15 ವೀಕ್ಷಣಾ ಕೇಂದ್ರಗಳನ್ನು ನಿರ್ಮಿಸಿ, ನಗರ ಪೊಲೀಸ್‌ ಸಿಬ್ಬಂದಿಯೊಂದಿಗೆ ಶಸ್ತ್ರ ಸಜ್ಜಿತ ಗರುಡ ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲದೆ, ಸುತ್ತ-ಮುತ್ತಲಿನ ಕಟ್ಟಡಗಳ ಮೇಲೆ ಕಣ್ಗಾವಲಿಗೂ ಶಸ್ತ್ರ ಸಜ್ಜಿತ ಪೊಲೀಸ್‌ ಸಿಬ್ಬಂದಿ ಇರಲಿದ್ದಾರೆ.

Advertisement

ವಾಯುನೆಲೆ ಒಳಗಡೆ, ಹೊರಗಡೆ ಮತ್ತು ಏರ್‌ ಡಿಫೆನ್ಸ್‌ಗಳಲ್ಲಿ ಮೂರು ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಒಂದು ಕಂಬೈಂಡ್‌ ನಿಯಂತ್ರಣ ಕೊಠಡಿಯಿದ್ದು, ವಾಯುಸೇನೆ, ಸಿಎಸ್‌ಎಫ್, ಡಿಸಾರ್ಟರ್‌ ಮ್ಯಾನೆಜ್‌ಮೆಂಟ್‌ ಸಿಬ್ಬಂದಿ ಸಹಯೋಗದೊಂದಿಗೆ ಕರ್ತವ್ಯ ನಿರ್ವಹಿಸುತ್ತಾರೆ. ಯಾವುದೇ ರೀತಿಯ ಅವಘಡ ನಡೆಯದಂತೆ ಕ್ರಮವಹಿಸಲು ನಾಲ್ಕು ತುರ್ತು ನಿರ್ವಹಣಾ ದಳ ನಿಯೋಜಿಸಲಾಗಿದೆ. 

ವಾಯುನೆಲೆಯ ಸುತ್ತಲಿನ ಗ್ರಾಮ ಮತ್ತು ಇತರೆ ಸ್ಥಳಗಳಲ್ಲಿ ಕಣ್ಗಾವಲು ಪೊಲೀಸ್‌ ತಂಡ ಅನುಮಾನಸ್ಪದ ವ್ಯಕ್ತಿಗಳನ್ನು ನಿರಂತರವಾಗಿ ತಪಾಸಣೆ ನಡೆಸಲಿದೆ. ಬಾಂಬ್‌ ನಿಷ್ಕ್ರಿಯ ದಳ, ಎ.ಎಸ್‌.ಚೆಕ್‌ ಮತ್ತು ಶ್ವಾನ ದಳಗಳು ಕೂಡ ತಪಾಸಣೆ ನಡೆಸಲಿವೆ. ಜತೆಗೆ ಏರ್‌ ಶೋ ವೀಕ್ಷಣೆಗೆ ಸುಮಾರು 250ಕ್ಕೂ ಹೆಚ್ಚು ಗಣ್ಯರು, ವಿದೇಶಿ ಗಣ್ಯರು ಆಗಮಿಸುವ ನಿರೀಕ್ಷೆಯಿದ್ದು, ಅವರ ವಾಸ್ತವ್ಯದ ಸ್ಥಳಗಳಲ್ಲೂ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಶಾರ್ಪ್‌ಶೂಟರ್‌ಗಳ ನಿಯೋಜನೆ: ವಾಯುನೆಲೆಯ ಸುತ್ತ-ಮುತ್ತಲ 30 ಸ್ಥಳಗಳಲ್ಲಿ ಗರುಡ ಪಡೆಯ ಶಾರ್ಪ್‌ಶೂಟರ್‌ಗಳನ್ನು ನಿಯೋಜಿಸಲಾಗಿದೆ. ಈ ಸಿಬ್ಬಂದಿ ರಾಡರ್‌ಗಳಿಗೆ ಸಿಗದಂತಹ ವಸ್ತುಗಳು ಆಗಸದಲ್ಲಿ ಹಾರಾಟ ನಡೆಸುತ್ತಿದ್ದರೆ, ನಿಷ್ಕ್ರಿಯಗೊಳಿಸುವುದರ ಜತೆಗೆ ನಾಶ ಕೂಡ ಮಾಡಲಿದ್ದಾರೆ.

ಅಲ್ಲದೆ, ಸೋಲದೇವನಹಳ್ಳಿಯಲ್ಲಿ ಏರ್‌ಡಿಫೆನ್ಸ್‌ ಇದ್ದು, ಇಲ್ಲಿನ ಸಿಬ್ಬಂದಿ ರಾಡರ್‌ಗೆ ಸಿಗುವಂತಹ ಯಾವುದೇ ವಸ್ತುಗಳು ಅನಧಿಕೃತವಾಗಿ ಆಕಾಶದಲ್ಲಿ ಹಾರಾಟ ನಡೆಸಿದರೂ ನಿಷ್ಕ್ರಿಯಗೊಳಿಸಲಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಹೇಳಿದರು.

ಅನಧಿಕೃತ ವಿಮಾನ ಹಾರಾಟ ನಿಷೇಧ: ಫೆ.20ರಿಂದ ಫೆ.24ರವೆರೆಗೆ ಯಲಹಂಕದಲ್ಲಿ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರಾದ್ಯಂತ ಅನಧಿಕೃತ ವೈಮಾನಿಕ ಹಾರಾಟ ನಿಷೇಧಿಸಿ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ಫೆ.20ರಿಂದ ಫೆ.24ರವೆರೆಗೆ ಅಧಿಕೃತ ವಿಮಾನಗಳು ಹೊರತುಪಡಿಸಿ ಡ್ರೋಣ್‌, ಬಲೂನ್‌ಗಳು ಮತ್ತು ಮಾನವ ರಹಿತ ಹಾಗೂ ಇತರೆ ಯಾವುದೇ ವೈಮಾನಿಕ ವಸ್ತುಗಳು ಹಾರಾಟ ನಡೆಸುವಂತಿಲ್ಲ. ಒಂದು ವೇಳೆ ಅನಧಿಕೃತವಾಗಿ ಹಾರಾಟ ನಡೆಸಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next