Advertisement

ಶರಣ ಧರ್ಮದಲ್ಲಿದೆ ವೈಚಾರಿಕ, ಸಾಮಾಜಿಕ ಕಳಕಳಿ

08:51 PM Feb 16, 2020 | Lakshmi GovindaRaj |

ಹನೂರು: ಶರಣ ಧರ್ಮವು ಉದಾರ ವೈಚಾರಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿದೆ. ಸಕಲ ಜೀವಜಂತುಗಳಿಗೂ ಒಳಿತನ್ನೇ ಬಯಸುವ ಧರ್ಮವಾಗಿದೆ. ಇದನ್ನು ಕತ್ತಲೆ ನಾಡಾದ ಈ ನೆಲಕ್ಕೆ ತಂದು ಅನುಷ್ಠಾನ ಗೈದವರು ಶರಣ ಮಲೆ ಮಹದೇಶ್ವರರು ಎಂದು ಕೂಡಲ ಸಂಗಮ ಬಸವ ಧರ್ಮ ಪೀಠದ ಪೂಜ್ಯ ಶ್ರೀಮಹದೇಶ್ವರ ಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ಮಲೈ ಮಹದೇಶ್ವರ ಬೆಟ್ಟದಲ್ಲಿ ಜೆಎಸ್‌ಬಿ ಪ್ರತಿಷ್ಠಾನ ವತಿಯಿಂದ ಶ್ರೀಸಾಲೂರು ಸ್ವಾಮಿ ಸ್ಮಾರಕ ಭವನದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ಮಹದೇಶ್ವರ ಸ್ವಾಮಿ ಸಮಾನವಾಗಿ ಕಾಣುವ, ಸರ್ವರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವ ಧರ್ಮ – ಶರಣ ಧರ್ಮವಾಗಿದೆ. ಜಗಜ್ಯೋತಿ ಶ್ರೀಬಸವೇಶ್ವರರು ಇದರ ಸ್ಥಾಪಕರು. ಎಲ್ಲಾ ಜಾತಿಯ ಜನರು, ಮೇಲ್ವರ್ಗ – ಕೆಳವರ್ಗದವರೆಲ್ಲಾ ಒಟ್ಟಿಗೆ ಸೇರಿ ಸಾಮಾಜಿಕ ಸಮಾನತೆಗೆ ಹೋರಾಡಿದರು. ಅವರೆಲ್ಲರ ಕ್ರಾಂತಿಯ ಕಿಡಿ ಶ್ರೀ ಮಲೆ ಮಹದೇಶ್ವರರು ಎಂದು ಹೇಳಿದರು.

ಡಾ.ಫ‌.ಗು. ಹಳಕಟ್ಟಿ ಆದರ್ಶವಾಗಲಿ: ಉಪನ್ಯಾಸಕ ದೇವರಾಜು ಪಿ. ಚಿಕ್ಕಹಳ್ಳಿ ಮಾತನಾಡಿ, ಶರಣರ ಮನಗಳು ತುಪ್ಪದಂತೆ ಶ್ರೇಷ್ಠ. ಯಾವಾಗಲೂ ಕೆಡುವುದಿಲ್ಲ. ಇವತ್ತಿನ ದಿನಗಳಲ್ಲಿ ಮನುಷ್ಯನ ಮನಸ್ಸಿನಲ್ಲಿ ನಾನು ಎಂಬ ಭಾವ ಶಾಶ್ವತವಾಗಿ ಇಳಿದುಬಿಟ್ಟಿದೆ. ನಾನು ಅದನ್ನು ಮಾಡಿದೆ, ನಾನು ಇದನ್ನು ಮಾಡಿದೆ, ನನಗೆ ಆ ಪ್ರಶಸ್ತಿ ಕೊಡಬೇಕು, ನನಗೆ ಈ ತರಹದ ಸನ್ಮಾನ ಆಗಬೇಕು ಇತ್ಯಾದಿ ಆಸೆ, ಆಕಾಂಕ್ಷೆಗಳು ಸಹಜವಾಗಿ ಜನರಲ್ಲಿ ಬೇರೂರಿದೆ. ಇವತ್ತಿನ ದಿನಗಳಲ್ಲಿ ನಾವು ಗೌರವ ಡಾಕ್ಟರೇಟ್‌ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಡಾ.ಫ‌.ಗು. ಹಳಕಟ್ಟಿ ಅವರಿಗೆ ಡಾಕ್ಟರೇಟ್‌ ನೀಡಲು ಹಂಪಿ ವಿವಿ ಕರೆದಾಗ, ಅವರು ತಮ್ಮ ಬಳಿ ಇದ್ದ ಒಂದು ಹರಿದ ಕೊಟನ್ನು ತೊಟ್ಟು ಹೋಗಿದ್ದರು. ಇಂತಹ ಮಹಾನುಭಾವರು ನಮಗೆ ಆದರ್ಶವಾಗಬೇಕೆ ಹೊರತು, ಬರಿ ಪ್ರಶಸ್ತಿ ಹಿಂದೆ ಬಿದ್ದವರಲ್ಲ ಎಂದು ತಿಳಿಸಿದರು.

ಪೂಜಾ ಕಾರ್ಯದಿಂದ ಮನಸ್ಸು ನಿಗ್ರಹಿಸಲು ಸಾಧ್ಯ: ದ.ರಾ.ಬೇಂದ್ರ ಒಂದು ಕಡೆ ಹೇಳುತ್ತಾರೆ, ನಮ್ಮ ಎಲ್ಲಾ ಪ್ರಶಸ್ತಿ ಬಸವಾದಿ ಶರಣರಿಗೆ ಸಲ್ಲಬೇಕು. ಯಾಕೆಂದರೆ, ನಮ್ಮ ಎಲ್ಲಾ ಸಾಹಿತ್ಯಗಳು ಅವರಿಂದ ಎರವಲು ಪಡೆದವೆ ಆಗಿವೆ. ನೀನು, ನಾನು, ತಾನು, ಆನು ಎಂಬ ನಾಲ್ಕು ಮನಸ್ಥಿತಿಯನ್ನು ಅವರು ತಮ್ಮ ನಾಕುತಂತಿ ಕವನ ಸಂಕಲನದಲ್ಲಿ ಹೇಳಿದ್ದಾರೆ. ಭಕ್ತಿ ಎಂಬ ಸುಮವನ್ನು ಯಾವ ವ್ಯಕ್ತಿ ಭಗವಂತನಿಗೆ ಅರ್ಪಿಸುತ್ತಾನೋ ಅವನಲ್ಲಿ ನಾನು ಅಳಿದು ಆನು ರೂಪಗೊಳ್ಳುತ್ತದೆ. ಅಕ್ಕಮಹಾದೇವಿ ಅಂತಹ ಒಂದು ಘನ ವ್ಯಕ್ತಿತ್ವದ ಉದಾಹರಣೆ.

ಬಸವಣ್ಣನವರು ನಮಗೆ ಇಷ್ಟಲಿಂಗವನ್ನು ಕೊಟ್ಟದ್ದು, ನಮ್ಮೊಳಗಿನ ಅರಿವನ್ನು ತಿಳಿಯುವುದಕ್ಕಾಗಿ. ಇಷ್ಟಲಿಂಗವನ್ನು ಪೂಜೆ ಮಾಡುವ ಕ್ರಿಯೆಯಿಂದ ನಮಗೆ ಮನಸ್ಸಿನ ನಿಗ್ರಹಿಸಲು ಸಾಧ್ಯವಿದೆ. ಪರಮಾತ್ಮನೊಡನೆ ಅನುಸಂಧಾನ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳದ ಶಾರದಮ್ಮ, ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಶಶಿಕುಮಾರ್‌, ಜಾಗತಿಕ ಲಿಂಗಾಯತ ಮಹಾಸಭಾದ ಸುಂದ್ರಪ್ಪ, ರಾಷ್ಟ್ರೀಯ ಬಸವ ದಳದ ದಿಲೀಪ್‌, ಶಿವಲಿಂಗ ಪ್ರಸಾದ, ರವಿಶಂಕರ್‌, ಮುಡಿಗುಂಡ ಪ್ರಸಾದ ಹಾಜರಿದ್ದರು.

Advertisement

ಪಡೆದದ್ದನ್ನು ಸಮಾಜಕ್ಕೆ ನೀಡುವುದು ಧರ್ಮ: ಕಾಯಕ ಮತ್ತು ದಾಸೋಹ ಶರಣ ಧರ್ಮದ ತಳಹದಿಯಾಗಿದೆ. ಅಂತಹ ಧರ್ಮದ ಸಾರವನ್ನು ನಾವು ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾಣುತ್ತಿದ್ದೇವೆ. ಇಲ್ಲಿಗೆ ಬಂದಂತಹ ಭಕ್ತರು ಕಸಗೂಡಿಸುವುದರ ಆದಿಯಾಗಿ ವಿವಿಧ ರೀತಿಯ ಕಾಯಕವನ್ನು ಮಾಡುತ್ತಾರೆ. ನಾಡಿನ ವಿವಿಧ ಭಾಗಗಳಿಂದ ಜನರು ತಾವು ಬೆಳೆದ ಧವಸ ಧಾನ್ಯಗಳನ್ನು ಇಲ್ಲಿನ ದಾಸೋಹಕ್ಕೆ ಅರ್ಪಿಸುತ್ತಾರೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವುದೇ ನಿಜವಾದ ಶರಣ ಧರ್ಮ ಎಂದು ಚಿಕ್ಕಮಗಳೂರಿನ ಬಸವ ಕೇಂದ್ರದ ಪೂಜ್ಯ ಶ್ರೀ ಬಸವಯೋಗಿಪ್ರಭು ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next