Advertisement

ಶರಣರ ಸಮಾನತೆ ಕ್ರಾಂತಿ ಜಗತ್ತಿಗೆ ಮಾದರಿ

12:23 PM Jan 22, 2018 | |

ಬೀದರ: ಹನ್ನೇರಡನೆ ಶತಮಾನದಲ್ಲಿ ಬಸವಣ್ಣನ ನೇತೃತ್ವದ ಸಾಮಾಜಿಕ, ಧಾರ್ಮಿಕ ಕ್ರಾಂತಿ ಯಾವುದೇ ಅಧಿಕಾರ
ಅಥವಾ ಹೆಣ್ಣಿಗಾಗಿ ನಡೆಯಲಿಲ್ಲ. ಅಂದು ಸಮಾನತೆ ಕ್ರಾಂತಿ ಇಡೀ ಜಗತ್ತಿಗೆ ಮಾದರಿಯಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ರವಿವಾರ ನಗರದ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣ ಸಂಕುಲದಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದ ಚೌಡಯ್ಯ ಮೌಡ್ಯತೆ ವಿರುದ್ಧ ಹೋರಾಡಿದಧೀರರರು. ಕಠೊರ ಶಬ್ದಗಳ ಮೂಲಕವೇ ಅಂಧಾಕಾರ ತುಂಬಿಕೊಂಡಿದ್ದ ಸಮಾಜವನ್ನು ಬಡಿದೆಬ್ಬಿಸುವ ಕಾರ್ಯ ಮಾಡಿದ್ದರು. ಬಸವಕಲ್ಯಾಣದ ತ್ರಿಪುರಾಂತ ಕೆರೆಯಲ್ಲಿ ಸತ್ಯಶುದ್ಧ ಕಾಯಕ ಮಾಡಿ ಬಸವ ಕ್ರಾಂತಿಗೆ ಪ್ರೇರಣೆ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.

ಸಮಾಜ, ಲೋಕಕಲ್ಯಾಣಕ್ಕಾಗಿ ಕೆಲಸ ಮಾಡಿರುವ, ಶೋಷಣೆ ವಿರುದ್ಧ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದುಡಿದ
ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಮಹಾತ್ಮರು ತಮ್ಮ ಕಾರ್ಯಗಳಿಂದಾಗಿ ಈಗಾಗಲೇ ದೊಡ್ಡವರು ಎನಿಸಿಕೊಂಡವರು. ಜಯಂತಿ ಕೇವಲ ನೃತ್ಯ, ಘೋಷಣೆಗೆ ಸೀಮಿತಿಗೊಳಿಸದೇ ಅವರ ತತ್ವಾದರ್ಶ, ಸಿದ್ಧಾಂತಗಳನ್ನು
ಬದುಕಿನಲ್ಲಿ ಅನುಕರಣೆ ಮಾಡಿದರೆ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಆಗುತ್ತದೆ ಎಂದು ಕರೆ ನೀಡಿದರು.

ಬಲಿಷ್ಠ ಸಮಾಜ, ರಾಷ್ಟ್ರ ನಿರ್ಮಾಣವಾಗಬೇಕಾದರೆ ಎಲ್ಲ ಸಮುದಾಯಗಳು ಸರಿ ಸಮಾನವಾಗಿ ಅಭಿವೃದ್ಧಿ ಆಗಬೇಕಿದೆ. ಎಲ್ಲರಿಗೆ ಸಾಮಾಜಿಕ ನ್ಯಾಯ ಒದಗಿಸಿದರೆ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ. ಎಲ್ಲ ಸಮಾಜಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಮಾಜದ ಆಧಾರಸ್ಥಂಬವಾಗಿರುವ ಯುವ ಜನಾಂಗದಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಿ ಅವರನ್ನು ಒಳ್ಳೆಯ ನಾಗರಿಕರನ್ನಾಗಿ ರೂಪಿಸುವಂತೆ ಕಿವಿ ಮಾತು ಹೇಳಿದರು.

ಶರಣರ ಕೊಡುಗೆ ಮತ್ತು ಸಂದೇಶಗಳನ್ನು ಪ್ರಚುರಪಡಿಸುವ ಉದ್ದೇಶದಿಂದ ಬಸವಕಲ್ಯಾಣದಲ್ಲಿ 600 ಕೋಟಿ ರೂ.
ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆಯಾಗಲಿದೆ.
ನಗರದಲ್ಲಿ ಸಮಾಜದ ಭವನ ನಿರ್ಮಾಣ ಕಾರ್ಯಕ್ಕೆ ವಿಳಂಬವಾಗಿರುವುದು ನಿಜ. ಇದಕ್ಕೆ ಜಮೀನು ಅಲಭ್ಯತೆ,
ಖಟ್ಲೆಗಳ ಕಾರಣ ನಿವೇಶನ ಕೊರತೆ ಎದುರಾಗುತ್ತಿವೆ. ಜಾತಿ ಪ್ರಮಾಣ ವಿತರಣೆಯಲ್ಲಿನ ತೊಂದರೆಗಳು ಮತ್ತು ಭವನ
ನಿರ್ಮಾಣಕ್ಕೆ ಶೀಘ್ರ ಕ್ರಮ ವಹಿಸುವುದಾಗಿ ಸಚಿವ ಖಂಡ್ರೆ ಭರವಸೆ ನೀಡಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಅಂಬಿಗರು ವಚನಗಳ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದರು ಎಂದು ಹೇಳಿದರು. ಶಾಸಕ ರಹೀಮ್‌ ಖಾನ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಳ್ಳಿಖೇಡದ ಶ್ರೀಗಳು, ಕಂಠೀರವ ಸ್ಟುಡಿಯೋ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಸಹಾಯಕ ಆಯುಕ್ತೆ ಶಿವಕುಮಾರ ಶೀಲವಂತ, ಸಾಹಿತಿ ಪಾರ್ವತಿ ಸೋನಾರೆ, ಸಮಾಜದ ಮುಖಂಡ ಜಗನ್ನಾಥ ಜಮಾದಾರ
ಇದ್ದರು.

ಬುದ್ಧಿಗೆ ಬಡತನ ತಂದುಕೊಳ್ಳದಿರಿ
ಬೀದರ: ತಾರಾ ಬಲ, ಚಂದ್ರಬಲಕ್ಕಿಂತ ನಮ್ಮ ತೋಳ್ಬಲದ ಮೂಲಕ ದುಡಿಯುವತ್ತ ಮುಂದಾದದಲ್ಲಿ ನಮ್ಮ ಬಲ, ಸಮಯ ಅದ್ಭುತವಾಗಿ ಸಿರಿವಂತಿಕೆ ನಮ್ಮತ್ತ ಸುಳಿಯುತ್ತದೆ ಎಂಬುದನ್ನು ಅರಿಯಬೇಕಿದೆ. ಮೌಡ್ಯದಿಂದ ಹೊರಬಂದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾಥ್‌ ನೀಡಿ ಬುದ್ದಿಗೆ ಬಡತನ ತಂದುಕೊಳ್ಳದಿರಿ ಎಂದು ಕಥೆಗಾರ್ತಿ ಪಾರ್ವತಿ ಸೋನಾರೆ ಕಿವಿ ಮಾತು ಹೇಳಿದರು. 

ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನಾವು ನಮ್ಮ ಬುದ್ದಿಯನ್ನು ಮಾರಿಕೊಳ್ಳುತ್ತಿದ್ದೇವೆ. ಬೇರೆಯವರು ಆಡಿಸಿದಂತೆ ಆಡುತ್ತಿದ್ದೇವೆ. ಅಕ್ಷರ ಜ್ಞಾನದ ಮೂಲಕ ನಮ್ಮ ಬುದ್ದಿ ಮಟ್ಟವನ್ನು ಬೆಳೆಸಿಕೊಂಡು ಬೆಳೆಯಬೇಕಿದೆ. ಬುದ್ದಿಯನ್ನು ಒರೆಗೆ ಹಚ್ಚಿ ತಿಕ್ಕಬೇಕಿದೆ ಎಂದು ಹೇಳಿದರು.

ಸಮಾಜ ಬಾಂಧವರು ಕುಡಿತದ ಚಟಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿ. ನಿತ್ಯ ಕನಿಷ್ಠ 100 ರೂ. ಕುಡಿತಕ್ಕಾಗಿ ಖರ್ಚು ಮಾಡುವ ನಾವು ವರ್ಷಕ್ಕೆ 36 ಸಾವಿರ ರೂ ಖರ್ಚು ಮಾಡುತ್ತಿದ್ದೇವೆ. 70 ವರ್ಷದ ವರೆಗೆ
ಸುಮಾರು 25 ಲಕ್ಷ ರೂ. ಕುಡಿತಕ್ಕಾಗಿ ವ್ಯಯಿಸುತ್ತೇವೆ. ಸಾರಾಯಿ ಅಂಗಡಿ ಮುಂದೆ ಸಾಲು ನಿಲ್ಲುವ ಬದಲು ಮಕ್ಕಳ
ಶಾಲಾ ದಾಖಲಾತಿಗಾಗಿ ಶಾಲೆಗಳ ಮುಂದೆ ಸಾಲು ನಿಲ್ಲೋಣ. ಆಗ ಶೈಕ್ಷಣಿಕ ಕ್ರಾಂತಿಯಾಗಿ ನಾವು ನಮ್ಮ ಸಮಾಜ ಬದಲಾಗುತ್ತದೆ ಎಂದು ಹೇಳಿದರು.

ದೇವರ ಹೆಸರಿನಲ್ಲಿ ಸ್ವರ್ಗದ ಆಸೆ ತೋರಿಸುವುದು ಸುಳ್ಳು. ಇರುವವನೇ ಒಬ್ಬ ದೇವ. ಅವನೇ ಶಿವ ಎಂದು ತೋರಿಸಿದವರು ಅಂಬಿಗರ ಚೌಡಯ್ಯ. ಜಾತಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ಶರಣ. ಎಲ್ಲ ಶರಣರು ತಮ್ಮ ಆರಾಧ್ಯ ದೇವರನ್ನೇ ವಚನಾಂಕಿತವನ್ನಾಗಿ ಇಟ್ಟುಕೊಂಡರೆ ಚೌಡಯ್ಯನವರು ನಾನು ಹೇಳಿದ್ದು ಸತ್ಯ ಎಂದು ದಿಟ್ಟತನ ತೋರಿಸಲು ತಮ್ಮ ವಚನಗಳಿವೆ ತಮ್ಮದೇ ವಚನಾಂಕಿತ ಇಟ್ಟುಕೊಂಡು ನೇರ ನುಡಿಯ ಶರಣ ಎಂದೆನಿಸಿಕೊಂಡವರು ಎಂದು ಸ್ಮರಿಸಿದರು.

ಅಸಮಾನತೆ-ಅಸಹಿಷ್ಣುತೆ ಇದೆ ದೇಶದಲ್ಲಿ ಇಂದಿಗೂ ಅಸಮಾನತೆ, ಜಾತಿಯತೆ ನೆಲೆಯೂರಿದೆ. ಆಹಾರ ಪದ್ಧತಿ ಹೆಸರಿನಲ್ಲಿ ಶೋಷಣೆ, ದುರ್ಬಲ ವರ್ಗದವರ ಮೇಲೆ ದಬ್ಟಾಳಿಕೆ ಹೆಚ್ಚುತ್ತಿದ್ದು, ಪಟ್ಟಭದ್ರ ಹಿತಾಸಕ್ತಿಗಳು ಹುಚ್ಚೆದ್ದು ಕುಣಿಯುತ್ತಿವೆ. ಇದನ್ನು ವಿರೋಧಿಸುವ ಪ್ರಗತಿಪರ ಚಿಂತಕರ ಮೇಲೆ ದೌರ್ಜನ್ಯ, ಹಲ್ಲೆ ನಡೆಯುತ್ತಿವೆ. ಅಸಹಿಷ್ಣತೆ ಇದ್ದು, ಇದರ ನಿವಾರಣೆಗೆ ಕಾಲ ಈಗ ಕೂಡಿಬಂದಿದೆ.  
ಈಶ್ವರ ಖಂಡ್ರೆ, ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next