Advertisement

ಚಿತ್ತಾಕರ್ಷಕ ಹೆಮ್ಮಡಗಿ ಸರಕಾರಿ ಶಾಲೆ

05:15 PM Sep 23, 2019 | Naveen |

„ಸಿದ್ದಯ್ಯ ಪಾಟೀಲ

Advertisement

ಸುರಪುರ: ತಾಲೂಕಿನ ರುಕ್ಮಾಪುರ ಕಸ್ಟರ್‌ನ ಹೆಮ್ಮಡಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು, ಪೋಷಕರು, ದೂರದೂರಿನ ಶಿಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. 1964ರಲ್ಲಿ ಏಕೋಪಧ್ಯಾಯ ಶಿಕ್ಷಕರಿಂದ ಆರಂಭವಾದ ಶಾಲೆ ಇದುವರೆಗೂ ಹಲವಾರು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದ ಕೀರ್ತಿಗೆ ಭಾಜನವಾಗಿದೆ. ಬದಲಾದ ಕಾಲಘಟ್ಟದಲ್ಲಿ ಯಾರಿಗೂ ಬೇಡವಾಗಿದ್ದ ಶಾಲೆ ಈಗ ತಾಲೂಕಿನ ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಹೆಮ್ಮಡಗಿಯಲ್ಲಿ ಅಕ್ಷರ ಕ್ರಾಂತಿ: ತಾಲೂಕಿನಲ್ಲಿಯೇ ಹೆಮ್ಮಡಗಿ ಅತ್ಯಂತ ಹಿಂದುಳಿದ ಗ್ರಾಮ. ಇಲ್ಲಿ ಬಡತನ, ದಾರಿದ್ರ್ಯ. ಮೂಢನಂಬಿಕೆ, ಅನಕ್ಷರತೆ ತಾಂಡವಾಡುತ್ತಿತ್ತು. ಇಲ್ಲಿ ಕೃಷಿ ಚಟುವಟಿಕೆ ಮುಖ್ಯ ಉದ್ಯೋಗವಾಗಿದೆ. ಅಕ್ಷರ ಕಲಿಕೆಯಲ್ಲಿ ಗ್ರಾಮ ಬಹಳ ದೂರ ಉಳಿದಿತ್ತು.
ಹೀಗಾಗಿ ತಾಲೂಕಿನಲ್ಲಿಯೇ ಇದೊಂದು ಕುಗ್ರಾಮವಾಗಿ ಮಾರ್ಪಟ್ಟಿತ್ತು. ಇಂತಹ ಸಂದರ್ಭದಲ್ಲಿ ಅಕ್ಷರ ಕ್ರಾಂತಿ ಮೂಡಿಸಿ ಮನೆಮನೆಗೂ ಶಿಕ್ಷಣ ತಲುಪಿಸಿದ ಹೆಗ್ಗಳಿಕೆ ಶಾಲೆ ಮುಖ್ಯ ಶಿಕ್ಷಕರಿಗೆ ಸಲ್ಲುತ್ತದೆ.

ಶಿಕ್ಷಕರ ಕಾಳಜಿ: ಕಳೆದ 17 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ ಅವರ ಶೈಕ್ಷಣಿಕ ಕಾಳಜಿಯೇ ಶಾಲೆ ಪ್ರಗತಿ ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ. ಇಬ್ಬರೇ ಶಿಕ್ಷಕರಿದ್ದು, 1ರಿಂದ 5ನೇ ತರಗತಿವರೆಗೆ ಒಟ್ಟು 103 ಮಕ್ಕಳ ದಾಖಲಾತಿಯಿದೆ. ಕಲಿಕೆ ಬಗ್ಗೆ ಮುಖ್ಯಶಿಕ್ಷಕ ಹಾಗೂ ಸಹ ಶಿಕ್ಷಕ ಅಪಾರ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ. ಶಾಲೆ ಚಿತ್ತಾಕರ್ಷಕ: ಮಕ್ಕಳನ್ನು ಆಕರ್ಷಿಸಲು ಶಾಲೆ ಸೌಂದರೀಕರಣ ಹೆಚ್ಚಿಸಲಾಗಿದೆ. ಶಾಲೆಯೊಳಗಿನ ಮತ್ತು ಹೊರಗಿನ ಪ್ರತಿ ಗೋಡೆಗಳ ಮೇಲೆ ಚಿತ್ತಾಕರ್ಷಕವಾದ ವಿವಿಧ ಚಿತ್ರ ಬಿಡಿಸಲಾಗಿದೆ. ಇವು ನೋಡುಗರನ್ನು ತಮ್ಮತ್ತ ಸೆಳೆಯುತ್ತಿವೆ.

ಕಲಾವಿದರಾದ ಶಿಕ್ಷಕರು: ಶಾಲೆ ಅಂದಗೊಳಿಸಬೇಕು ಎಂಬ ಹಿನ್ನೆಲೆಯಲ್ಲಿ ಯೋಜನೆ ರೂಪಿಸಿ ಸ್ವಂತ ಹಣ ವಿನಿಯೋಗಿಸಿ ಎಲ್ಲ ಗೋಡೆಗಳ ಮೇಲೆ ನಲಿಕಲಿಗೆ ಸಂಬಂಧಿಸಿದ ಚಿತ್ರಗಳನ್ನು ಶಿಕ್ಷಕರೇ ಬಿಡಿಸಿದ್ದಾರೆ. ಶಿಕ್ಷಕರ ಈ ಯೋಜನೆಗೆ ಪಕ್ಕದ ಚೌಡೇಶ್ವರಿಹಾಳ ಗ್ರಾಮದ ಶಿಕ್ಷಕಿ ಶಿವಲೀಲಾ ಅವರು ಕೈಜೋಡಿಸಿ ಚಿತ್ರಗಳ ನಕ್ಷೆ ಬಿಡಿಸಿಕೊಟ್ಟರು. ಇದಕ್ಕೆ ಶಿಕ್ಷಕರು ಬಣ್ಣ ತುಂಬಿ ಜೀವ ಕಳೆ ನೀಡಿದ್ದಾರೆ.

Advertisement

ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕಿನ ನಕಾಶೆ, ನಲಿಕಲಿಗೆ ಸಂಬಂಧಪಟ್ಟ ಕಾಗುಣಿತಾಕ್ಷರಗಳು, ವರ್ಣಮಾಲೆ, ವ್ಯಂಜನಾಕ್ಷರಗಳು, ಸಂಖ್ಯೆಗಳ ಚಿತ್ರಪಟಗಳನ್ನು ನೇತು ಹಾಕಲಾಗಿದೆ. ಇತಿಹಾಸಕಾರರು, ಸಾಹಿತಿಗಳು, ವಿಜ್ಞಾನಿಗಳು, ದಾರ್ಶನಿಕರು, ಹೋರಾಟಗಾರರು, ಶರಣ-ಸಂತರ ಚಿತ್ರಗಳನ್ನು ಬಿಡಿಸಲಾಗಿದೆ. ಕಲಿಕೆಗೆ ಚಿತ್ರ ಪೂರಕ: ಶಾಲೆಯಲ್ಲಿ ಬಿಡಿಸಿರುವ ಪ್ರತಿ ಚಿತ್ರವೂ ಕಲಿಕೆಗೆ ಪೂರಕವಾಗಿದೆ. ಟಾಮಂಜರಿ, ಸಂಗೀತ ನುಡಿಸುವುದು. ಸಂಗೀತ ಆಲಿಸುವುದು, ಶಾಲೆಯತ್ತ ಹೆಜ್ಜೆ, ಪರಿಸರ ಜಾಗೃತಿ, ಜಲ ಸರಂಕ್ಷಣೆ, ಮಿತ ನೀರು ಬಳಕೆ, ಆರೋಗ್ಯ ರಕ್ಷಣೆ, ಶಿಕ್ಷಣದ ಮಹತ್ವ, ಶಿಸ್ತು, ಸಂಯಮ, ಸಮವಸ್ತ್ರ, ಮನೆಯೇ ಮೊದಲ ಪಾಠಶಾಲೆ, ಶುಚಿತ್ವ, ಶೌಚಾಲಯ ಮಹತ್ವ, ಇತಿಹಾಸ ಸೇರಿದಂತೆ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಬಿಡಿಸಲಾಗಿದೆ. ಈ ಎಲ್ಲವುಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೇರಕವಾಗಿದೆ.

ಶಾಲೆ ಹೆಗ್ಗಳಿಕೆ: 2008-09ರಲ್ಲಿ ಅಂದಿನ ರಾಜ್ಯ ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಜಿ. ಕುಮಾರನಾಯಕ ಶಾಲೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಾಲೆ ಮಾದರಿಯಾಗಿಟ್ಟುಕೊಂಡು ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೂ ನಲಿಕಲಿ ಅಳವಡಿಸಿರುವುದು
ಇದರ ಹೆಗ್ಗಳಿಕೆ. ನಂತರ ಆಗಸ್ಟ್‌ 2009ರಂದು ಶಿಕ್ಷಣ ಯೋಜನಾ ನಿರ್ದೇಶಕ ಸೆಲ್ವಕುಮಾರ್‌ ಮತ್ತು ಅಜೀಂ ಪ್ರೇಮ್‌ಜೀ ಸಂಸ್ಥಾಪಕ ಅಜೀಂ ಪ್ರೇಮ್‌ಜೀ ಜಂಟಿಯಾಗಿ ಭೇಟಿ ನೀಡಿ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಶಾಲೆ ಅಭಿವೃದ್ಧಿ ಹಿನ್ನೋಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬೇಕಿದೆ ಮೂಲಸೌಲಭ್ಯ: ಗ್ರಾಮದ ಒಬ್ಬ ವಿದ್ಯಾರ್ಥಿಯೂ ಖಾಸಗಿ ಶಾಲೆ ಕಡೆಗೆ ಮುಖಮಾಡಿಲ್ಲ. ಗ್ರಾಮದ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸುತ್ತಾರೆ. ಕಳೆದೆರಡು ವರ್ಷಗಳಿಂದ ಶಾಲೆ ವಿದ್ಯಾರ್ಥಿಗಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗುತ್ತಿರುವುದು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕಲಿತ ಅನೇಕರು
ಉನ್ನತ ಹುದ್ದೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next