Advertisement

ಅದಿರು ಇ-ಹರಾಜು ರದ್ದು ಮಾಡಲು ಸುಪ್ರೀಂ ನಕಾರ

11:26 AM Aug 29, 2017 | Team Udayavani |

ನವದೆಹಲಿ: ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ಇ-ಟೆಂಡರ್‌ ರದ್ದುಗೊಳಿಸುವಂತೆ ಕೋರಿ ಫೆಡರೇಷನ್‌ ಆಫ್ ಇಂಡಿಯನ್‌ ಮಿನರಲ್‌ ಇಂಡಸ್ಟ್ರೀಸ್‌ (ಎಫ್ಐಎಂಐ) ಹಾಗೂ ವೇದಾಂತ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿದೆ.

Advertisement

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ರಂಜನ್‌ ಗೊಗೋಯ್‌ ಮತ್ತು ನ್ಯಾ. ನವೀನ್‌ ಸಿನ್ಹಾ ಅವರಿದ್ದ ನ್ಯಾಯಪೀಠ, “ಇ-ಟೆಂಡರ್‌ ರದ್ದು ಕೋರಿ ಎಫ್ ಐಎಂಐ ಸಲ್ಲಿಸಿದ್ದ ಅರ್ಜಿ ಹಾಗೂ ವೇದಾಂತ ಸಂಸ್ಥೆ ನೀಡಿದ್ದ ಇ-ಟೆಂಡರ್‌ಗೆ ಪರ್ಯಾಯ ವಿಧಾನಗಳನ್ನು ಅನುಸರಿಸುವ ಸಲಹೆಯನ್ನು ನ್ಯಾಯಪೀಠ
ತಿರಸ್ಕರಿಸಿದೆ,’ ಎಂದು ತೀರ್ಪು ನೀಡಿದೆ.  ಕೇಂದ್ರ ಅಧಿಕಾರ ಸಮಿತಿ 2017ರ ಏಪ್ರಿಲ್‌ ನಲ್ಲಿ ನೀಡಿದ ವರದಿ ಆಧರಿಸಿ, ಇ-ಟೆಂಡರ್‌ಗೆ ಬದಲಾಗಿ ಉತ್ಪಾದಕರು ಹಾಗೂ ಖರೀದಿದಾರರ ನಡುವೆ ದೀರ್ಘ‌ ಕಾಲಿಕ ಒಪ್ಪಂದ ಏರ್ಪಡಿಸಿ ವ್ಯವಹರಿಸಲು ಅವಕಾಶ ಕಲ್ಪಿಸುವಂತೆ ಎಫ್ ಐಎಂಐ ಕೋರಿತ್ತು. ಆದರೆ, ಇದಕ್ಕೆ ವಿರುದ್ಧವಾಗಿ ವಾದ ಮಂಡಿಸಿದ್ದ ಎನ್‌ಜಿಒ ಸಮಾಜ ಪರಿವರ್ತನಾ ಸಮುದಾಯ, “ಇ-ಹರಾಜು ನಡೆದರೆ ಒಳ್ಳೆಯ ದರ ಮತ್ತು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ರಾಯಧನ ಸಿಗುತ್ತದೆ’ ಎಂದು ಹೇಳಿತ್ತು.

ಸೋಮವಾರ ವಿಚಾರಣೆ ವೇಳೆ, ಹಿಂದಿನ ಘಟನೆಗಳನ್ನು ಪ್ರಸ್ತಾಪಿಸಿದ ನ್ಯಾಯಪೀಠ, “ಈ ಹಿಂದೆ ಕಬ್ಬಿಣದ ಅದಿರಿನ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯನ್ನು ಅತ್ಯಂತ ಕೆಟ್ಟದಾಗಿ ನಡೆಸಲಾಗಿದೆ. ಇದರಿಂದಾಗಿ ಭಾರೀ ಪ್ರಮಾಣದ ಸಾರ್ವಜನಿಕ ಆದಾಯವು ನಷ್ಟವಾಗಿ ಹೋಗಿದೆ. ಇಂತಹ
“ಭಯಾನಕ’ ಅನುಭವ ನಮ್ಮ ಮುಂದಿರುವಾಗ ಇ-ಹರಾಜು ರದ್ದು ಮಾಡಬೇಕೆಂಬ ಮನವಿಯನ್ನು ಒಪ್ಪಲು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ, ಇದೇ ಕಾರಣಕ್ಕಾಗಿ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ) ಮತ್ತು ಕರ್ನಾಟಕ ರಾಜ್ಯದ ಅಫಿಡವಿಟ್‌ನಲ್ಲಿನ ಸಲಹೆಗಳನ್ನೂ ಒಪ್ಪುತ್ತಿಲ್ಲ,’ ಎಂದಿತು. 

“ಅತ್ಯುತ್ತಮ ದರ ದೊರೆಯಲಿ ಎಂಬ ಉದ್ದೇಶದಿಂದ ಇ-ಹರಾಜು ಪ್ರಕ್ರಿಯೆ ನಡೆಸಲೇಬೇಕು,’ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಪೀಠ, ರಾಜ್ಯದ ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿ 2013ರ ಏಪ್ರಿಲ್‌ 18ರಂದು ಆದೇಶಿಸಿತ್ತು. ಆದರೆ ವರ್ಷಕ್ಕೆ 3 ಕೋಟಿ ಟನ್‌ (30 ಮಿಲಿಯನ್‌) ಅದಿರನ್ನು ಮಾತ್ರ ತೆಗೆಯಬೇಕು ಎಂದು ನಿರ್ಬಂಧ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next