Advertisement

ಭೂಮಿ ಪಡೆದ ಆಸ್ಪತ್ರೆ ಉಚಿತ ಚಿಕಿತ್ಸೆ ನೀಡಲಿ ; ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್‌

04:34 PM May 28, 2020 | Hari Prasad |

ಹೊಸದಿಲ್ಲಿ: ಸರಕಾರದಿಂದ ಉಚಿತವಾಗಿ ಭೂಮಿ ಪಡೆದ ಖಾಸಗಿ ಆಸ್ಪತ್ರೆಗಳೇಕೆ ಕೋವಿಡ್ ವೈರಸ್‌ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಪ್ರಶ್ನಿಸಿದೆ.

Advertisement

ಹಾಗೇ ಖಾಸಗಿ ಆಸ್ಪತ್ರೆಗಳು ಈ ರೀತಿ ಉಚಿತ ಚಿಕಿತ್ಸೆ ನೀಡದಿರಲು ಏನಾದರೂ ಕಾನೂನು ಅಥವಾ ಆಡಳಿತಾತ್ಮಕ ಅಡಚಣೆಗಳಿವೆಯೇ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

ಸಾಂಕ್ರಾಮಿಕ ಸೋಂಕಿನ ಪರಿಸ್ಥಿತಿಯನ್ನು ತಮ್ಮ ಆದಾಯ ವೃದ್ಧಿಗೆ ಬಳಸಿಕೊಳ್ಳುತ್ತಿರುವ ಖಾಸಗಿ ಆಸ್ಪತ್ರೆಗಳು, ಕೋವಿಡ್ ಚಿಕಿತ್ಸೆಗೆ ದುಬಾರಿ ಶುಲ್ಕ ವಿಧಿಸುತ್ತಿದ್ದು, ಶುಲ್ಕದ ಮೇಲೆ ನಿಯಂತ್ರಣ ಹೇರುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅವರ ನೇತೃತ್ವದ ನ್ಯಾಯಪೀಠ, ಖಾಸಗಿ ಚಾರಿಟೆಬಲ್‌ ಆಸ್ಪತ್ರೆಗಳು ಸರಕಾರದಿಂದ ಸಂಪೂರ್ಣ ಉಚಿತವಾಗಿ ಇಲ್ಲವೇ ಅತ್ಯಂತ ಕನಿಷ್ಠ ಬೆಲೆಗೆ ಭೂಮಿಯನ್ನು ಪಡೆದಿರುತ್ತವೆ.

ನ್ಯಾಯವಾಗಿ ನೋಡುವುದಾದರೆ ಈ ಆಸ್ಪತ್ರೆಗಳು ಕೋವಿಡ್ ವೈರಸ್‌ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು. ಆದರೆ ದುಬಾರಿ ಶುಲ್ಕ ವಸೂಲಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ. ದಾನ‌ ಅಥವಾ ದತ್ತಿ ರೂಪದಲ್ಲಿ ಭೂಮಿಯನ್ನು ಪಡೆದು ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ, ಉಚಿತ ಚಿಕಿತ್ಸೆ ನೀಡುವ ಕುರಿತಂತೆ ಆ ಆಸ್ಪತ್ರೆಗಳ ನಿಲುವೇನು ಎಂಬ ಬಗ್ಗೆ ಒಂದು ವಾರದೊಳಗೆ ವರದಿ ನೀಡುವಂತೆ ಸಾಲಿಸಿಟರ್‌ ಜನರಲ್‌ ತುಶಾರ್‌ ಮೆಹ್ತಾ ಅವರಿಗೆ ನ್ಯಾಯಪೀಠ ಸೂಚಿಸಿದೆ.

ವೈದ್ಯರಿಗೆ 14 ಕ್ವಾರಂಟೈನ್‌ ರದ್ದತಿ ಪ್ರಶ್ನಿಸಿ ಸುಪ್ರಿಂಗೆ ಅರ್ಜಿ
ಆರೋಗ್ಯ ಸಿಬ್ಬಂದಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್‌ ನಿಲ್ಲಿಸಿರುವ ಕೇಂದ್ರ ಸರಕಾರದ ಹೊಸ ಮಾರ್ಗಸೂಚಿಯನ್ನು ಪ್ರಶ್ನಿಸಿ, ವೈದ್ಯರೊಬ್ಬರು ಸುಪ್ರಿಂ ಕೋರ್ಟಿನ ಮೆಟ್ಟಿಲೇರಿದ್ದಾರೆ. ಕೇಂದ್ರ ಸರಕಾರ ಇದಕ್ಕೆ ವಾರದೊಳಗೆ ಸೂಕ್ತ ದಾಖಲೆಗಳೊಂದಿಗೆ ಉತ್ತರಿಸುವಂತೆ ಸುಪ್ರಿಂ ಸೂಚಿಸಿದೆ.

Advertisement

ವೈದ್ಯೆ ಆರುಷಿ ಜೈನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರಾದ ಅಶೋಕ್‌ ಭೂಷಣ್‌, ಎಸ್‌.ಕೆ. ಕೌಲ್‌ ಮತ್ತು ಎಂ.ಆರ್‌. ಶಹಾ ವಿಚಾರಣೆಗೆ ಕೈಗೆತ್ತಿಕೊಂಡಿದ್ದರು. ‘ಅರ್ಜಿ ವಿಚಾರಣೆಗೆ ಇನ್ನಷ್ಟು ದಾಖಲೆಗಳ ಅಗತ್ಯವಿದೆ. ಕೇಂದ್ರ ಸರ್ಕಾರದ ಪರ ವಕೀಲರು ಮುಂದಿನ ವಾರದೊಳಗೆ ಇದನ್ನು ಸಲ್ಲಿಸಬೇಕು’ ಎಂದು ನ್ಯಾಯಪೀಠ ಸೂಚಿಸಿದೆ.

ಅರ್ಜಿಯಲ್ಲೇನಿದೆ?: ‘ಕೇಂದ್ರ ಆರೋಗ್ಯ ಸಚಿವಾಲಯ ಮೇ 15ರಂದು ಪರಿಷ್ಕರಿಸಿರುವ ಮಾರ್ಗಸೂಚಿಯಲ್ಲಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಇತಿಶ್ರೀ ಹಾಡಿದೆ. ವೈದ್ಯರ ಆರೋಗ್ಯದ ಹಿತ ಕಾಪಾಡುವುದೂ ಸರಕಾರಗಳ ಕೆಲಸವಾಗಬೇಕು. ಕ್ವಾರಂಟೈನ್‌ ರದ್ದು ಮಾಡಬಾರದು’ ಎನ್ನುವುದು ಅರ್ಜಿದಾರರ ಪ್ರಶ್ನೆ. ಕರ್ನಾಟಕ ಸರಕಾರ ಮೇ 16ರಂದು ಹೊರಡಿಸಿದ್ದ ಸುತ್ತೋಲೆಯನ್ನು ಅರ್ಜಿದಾರರು ಮುಖ್ಯವಾಗಿ ಪ್ರಸ್ತಾಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next