Advertisement

ಪ್ರವೀಣ್‌ ನೆಟ್ಟಾರು ಪ್ರಕರಣಕ್ಕೆ ಒಂದು ವರುಷ

08:17 AM Jul 26, 2023 | Team Udayavani |

ಸುಳ್ಯ: ಬಿಜೆಪಿಯ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು (30) ಹತ್ಯೆಯಾಗಿ ಜುಲೈ 26ಕ್ಕೆ ಒಂದು ವರ್ಷ ತುಂಬುತ್ತಿದ್ದು, ತಲೆಮರೆಸಿಕೊಂಡಿರುವ ಹಲವು ಆರೋಪಿಗಳ ಬಂಧನ ಬಾಕಿಯಾಗಿಯೇ ಇದೆ.

Advertisement

ನೆಟ್ಟಾರಿನ ಪ್ರವೀಣ್‌ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಅಕ್ಷಯ ಫ್ರೆಶ್‌ ಚಿಕನ್‌ ಫಾರ್ಮ್ ನಡೆಸುತ್ತಿದ್ದರು. 2022ರ ಜುಲೈ 26ರ ರಾತ್ರಿ ಸುಮಾರು 8.30ಕ್ಕೆ ವ್ಯಾಪಾರ ಮುಗಿಸಿ ಅಂಗಡಿ ಬಾಗಿಲು ಹಾಕಿ ಸ್ಕೂಟರ್‌ನಲ್ಲಿ ಕುಳಿತು ಮನೆಗೆ ಹೊರಡಲು ಸಿದ್ಧರಾಗಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ಎರಗಿ ಹತ್ಯೆ ನಡೆಸಿದ್ದರು.

ಮರುದಿನ ಪ್ರವೀಣ್‌ ಮೃತ ಶರೀರದ ಮೆರವಣಿಗೆ ಪುತ್ತೂರಿನಿಂದ ಬೆಳ್ಳಾರೆಗೆ ಸಾಗಿ ಬಂತು. ಬೆಳ್ಳಾರೆಯ ಬಸ್‌ ನಿಲ್ದಾಣದ ಬಳಿ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಭುಗಿಲೆದ್ದ ಆಕ್ರೋಶ
ಬೆಳ್ಳಾರೆಗೆ ಆಗಮಿಸಿದ್ದ ಜನಪ್ರತಿನಿಧಿಗಳಿಗೆ ಜನರು ದಿಗ್ಬಂಧನ ವಿಧಿಸುವ ಮೂಲಕ ಬಿಜೆಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಕಾರನ್ನು ಅಲುಗಾಡಿಸಿ, ಕಾರಿನ ಚಕ್ರಗಳನ್ನು ಪಂಕ್ಚರ್‌ ಮಾಡಿ, ಪಲ್ಟಿ ಮಾಡಲು ಯತ್ನಿಸಿದ್ದರು. ಬಳಿಕ ಪ್ರವೀಣ್‌ ಮನೆಗೆ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು ಬಂದು ಮನೆಯವರಿಗೆ ಸಾಂತ್ವನ ಹೇಳಿ ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದರು.

ಪೊಲೀಸರು ಬೆಳ್ಳಾರೆಯ ಶಫೀಕ್‌(27), ಸವಣೂರಿನ ಝಾಕೀರ್‌, ಶಿಹಾಬುದ್ದೀನ್‌ ಸುಳ್ಯ(31), ಬಶೀರ್‌ ಎಲಿಲೆ(29), ರಿಯಾಸ್‌ ಅಂಕತ್ತಡ್ಕ ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದರು.

Advertisement

ಪ್ರಕರಣ ಎನ್‌ಐಎಗೆ;
ಹೊರ ರಾಜ್ಯದ ಆರೋಪಿಗಳ ಕೈವಾಡ ಇರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಪ್ರಕರಣವನ್ನು ಎನ್‌ಐಗೆ ವಹಿಸಿತ್ತು. ಅದರಂತೆ ಆಗಸ್ಟ್‌ ನಲ್ಲಿ ರಾಷ್ಟಿÅàಯ ತನಿಖಾ ದಳ(ಎನ್‌ಐಎ) ಪ್ರಕರಣವನ್ನು ಕೈಗೆತ್ತಿಕೊಂಡಿತು. ಪಿಎಫ್ಐ ಇಂತಹ ಉದ್ದೇಶಿತ ದ್ವೇಷದ ಹತ್ಯೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಎನ್‌ಐಎ ಪ್ರಕರಣ ಕೈಗೆತ್ತಿಕೊಂಡ ವೇಳೆ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ 21 ಮಂದಿಯ ವಿರುದ್ಧ ಎನ್‌ಐಎ ಇದುವರೆಗೆ ಆರೋಪ ಪಟ್ಟಿ ಸಲ್ಲಿಸಿದೆ.

ಎಂಟು ಮಂದಿ ನಾಪತ್ತೆ
ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ ಎಂದು ಎನ್‌ಐಎ ತಿಳಿಸಿದೆ. ಕೊಡಗಿನ ಅಬ್ದುಲ್‌ ನಾಸಿರ್‌, ಅಬ್ದುಲ್‌ ರೆಹಮಾನ್‌ ಮತ್ತು ಬೆಳ್ತಂಗಡಿಯ ನೌಷದ್‌ ಹಾಗೂ ಐವರು ಸೇರಿದಂತೆ 8 ಮಂದಿ ತಲೆಮರೆಸಿಕೊಂಡಿದ್ದಾರೆ. ತುಫೈಲ್‌, ಮೊಹಮ್ಮದ್‌ ಮುಸ್ತಾಫ‌ ಸುಳಿವಿಗೆ ತಲಾ 5 ಲಕ್ಷ ರೂ. ಉಮರ್‌ ಫಾರೂಕ್‌, ಅಬೂಬಕ್ಕರ್‌ ಸಿದ್ದಿಕ್‌ ಸುಳಿವಿಗೆ ತಲಾ 2 ಲಕ್ಷ ಬಹುಮಾನ ಘೋಷಿಸಲಾಗಿದೆ.

ಆರೋಪಿಗಳಿಗೆ ಗಡುವು;
ತಲೆಮರೆಸಿಕೊಂಡಿರುವ ಆರೋಪಿಗಳಿಗೆ ನ್ಯಾಯಾಲಯದ ಸೂಚನೆಯ ಮೇರೆಗೆ ಶರಣಾಗುವಂತೆ ಎನ್‌ಐಎ ಸೂಚಿಸಿದೆ. ಆ. 18 ರ ಮೊದಲು ಶರಣಾಗದಿದ್ದರೆ ಅವರ ಆಸ್ತಿ ಜಪ್ತಿ ಮಾಡುವುದಾಗಿ ಎಚ್ಚರಿಸಿದೆ. ಇದು ಎರಡನೆ ಬಾರಿಯ ಗಡುವಾಗಿದ್ದು, ಆರೋಪಿಗಳ ಮನೆಗಳಿಗೆ ಆದೇಶ ಪ್ರತಿ ಅಂಟಿಸಲಾಗಿದೆ.

ಪಿಎಫ್ಐ ನಿಷೇಧ;
ಪ್ರವೀಣ್‌ ಹತ್ಯೆ ಬಳಿಕ ಪಿಎಫ್ಐ ನಿಷೇಧಕ್ಕೆ ಹೆಚ್ಚಿನ ಆಗ್ರಹ ಕೇಳಿಬಂದಿತ್ತು. ಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿ, 5 ವರ್ಷಗಳ ಅವಧಿಗೆ ನಿಷೇಧಿಸಿ 2022ರ ಸೆಪ್ಟೆಂಬರ್‌ 28ರಂದು ಕೇಂದ್ರ ಸರಕಾರ ಆದೇಶಿಸಿತ್ತು.

ನೆರವು
ಮನೆಗೆ ಆಧಾರ ಸ್ತಂಭವಾಗಿದ್ದ ಪ್ರವೀಣ್‌ ನಿಧನದಿಂದ ಮನೆಯ ಆಧಾರ ಸ್ತಂಭವೇ ಕಳಚಿತ್ತು. ಕುಟುಂಬದ ನೆರವಿಗೆ ಅಂದು ಹಲವರು ಸಹಕರಿಸಿದ್ದರು. ಬಿಜೆಪಿ ವತಿಯಿಂದ ಮನೆ ನಿರ್ಮಿಸಿ ಕೊಡಲಾಯಿತು. ಪ್ರವೀಣ್‌ ಪತ್ನಿ ನೂತನಾ ಅವರಿಗೆ ಸರಕಾರಿ ಕಚೇರಿಯಲ್ಲಿ ಉದ್ಯೋಗ ನೀಡಲಾಗಿತ್ತು.

 ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next