Advertisement

ಜಾರಿ ಬೇಡ: ಐಎಂಎ ಘಟಕದಿಂದ ಸರಕಾರಕ್ಕೆ ಆಗ್ರಹ

10:07 AM Jan 05, 2019 | Team Udayavani |

ಸುಳ್ಯ : ಕೇಂದ್ರ ಸರಕಾರವು ಗ್ರಾಹಕರ ಹಿತರಕ್ಷಣಾ ಮಸೂದೆಯ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಕ್ಕೆ ಉದ್ದೇಶಿಸಿದ್ದು, ಇದರಿಂದ ದೇಶದ ಆರೋಗ್ಯ ಕ್ಷೇತ್ರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಇದನ್ನು ಭಾರತೀಯ ವೈದ್ಯಕೀಯ ಸಂಘವು ವಿರೋಧಿಸುವುದಾಗಿ ಐಎಂಎ ಸುಳ್ಯ ಶಾಖೆಯ ಅಧ್ಯಕ್ಷೆ ಡಾ| ಗೀತಾ ದೊಪ್ಪ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಡಾ| ವೀಣಾ ತಿಳಿಸಿದ್ದಾರೆ.

Advertisement

ಗ್ರಾಹಕರ ಹಿತರಕ್ಷಣಾ ಮಸೂದೆಯ ತಿದ್ದುಪಡಿ ಕಾಯ್ದೆ ಜಾರಿಗೆ ವಿರೋಧಿಸಿ ತಾ| ಕಚೇರಿ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಈಗಾಗಲೇ ಆರೋಗ್ಯ ಕ್ಷೇತ್ರಕ್ಕೆ ಮಾರಕ ವಾಗಿರುವ 2 ಕಾಯ್ದೆಗಳನ್ನು ಐಎಂಎ ವಿರೋಧಿಸಿದೆ. ಆದರೂ ಅದು ಜಾರಿ ಹಂತದಲ್ಲಿದೆ. ಈಗ ಈ ಕಾಯ್ದೆಯನ್ನು ಕೂಡ ವಿರೋಧಿಸುತ್ತಿದೆ. 1986ರಲ್ಲಿ ಸಂಸತ್‌ ಸಭೆಯಲ್ಲಿ ಮಂಡಿಸಲಾದ ಗ್ರಾಹಕ ಹಿತರಕ್ಷಣಾ ಮಸೂದೆಯಲ್ಲಿ ವೈದ್ಯಕೀಯ ವೃತ್ತಿ ಒಳಗೊಂಡಿರಲಿಲ್ಲ. 1994ರಲ್ಲಿ ವೈದ್ಯಕೀಯ ವೃತ್ತಿಯನ್ನು ಸೇರ್ಪಡೆ ಗೊಳಿಸಲಾಯಿತು. ಈ ಕಾಯ್ದೆಯಲ್ಲಿ ಅನುಮೋದಿಸಿದ ತಿದ್ದುಪಡಿಗಳು ದೇಶದ ಆರೋಗ್ಯ ಕ್ಷೇತ್ರಕ್ಕೆ ಮಾರಕವಾಗಿವೆ ಎಂದು ಅವರು ತಿಳಿಸಿದರು.

ಕಾಯ್ದೆ ಪ್ರಕಾರ ಜಿಲ್ಲಾ ಗ್ರಾಹಕ ಹಿತರಕ್ಷಣಾ ವೇದಿಕೆಯ ವ್ಯಾಪ್ತಿಯನ್ನು 20 ಲಕ್ಷ ರೂ. ನಿಂದ 1 ಕೋಟಿಗೆ ಏರಿಸಲಾಗಿದೆ. ರಾಜ್ಯ ಗ್ರಾಹಕ ಹಿತರಕ್ಷಣಾ ವೇದಿಕೆಯ ವ್ಯಾಪ್ತಿಯನ್ನು 1 ಕೋಟಿಯಿಂದ 10 ಕೋಟಿಗೆ ಏರಿಸಲಾಗಿದೆ. ಈ ತಿದ್ದುಪಡಿಯಿಂದಾಗಿ ಗ್ರಾಹಕ ಹಿತರಕ್ಷಣಾ ವೇದಿಕೆಯಲ್ಲಿ ನ್ಯಾಯಾಧೀಶರ ಸದಸ್ಯರ ಕಡ್ಡಾಯವಿಲ್ಲ.

ತೊಂದರೆಗೊಳಗಾದವರು ಮಾತ್ರವಲ್ಲದೆ ಘಟನೆಗೆ ಸಂಬಂಧವಿಲ್ಲದ ಇತರ ಸಂಘಟನೆಗಳು ದೂರು ಸಲ್ಲಿಸಲು ಅವಕಾಶವಿದೆ. ಇದು ಸುಳ್ಳು ದೂರುಗಳಿಗೆ ಕಾರಣವಾಗುತ್ತದೆ ಎಂದರು.

Advertisement

ಈಗಾಗಲೇ ಕಾರಣವಿಲ್ಲದೆ ಹಣಕ್ಕಾಗಿ ಮತ್ತು ಬೆದರಿಕೆ ತಂತ್ರವಾಗಿ ವೈದ್ಯರ ಮತ್ತು ಆಸ್ಪತ್ರೆಗಳ ಮೇಲೆ ವ್ಯಾಜ್ಯಗಳು ನಡೆಯುತ್ತಿವೆ. ವೈದ್ಯರ ದಾಖಲೆಗಳ ಅಗತ್ಯಕ್ಕಾಗಿ ಮತ್ತು ಸ್ವರಕ್ಷಣೆಗಾಗಿ ಹಲವಾರು ಪರೀಕ್ಷೆಗಳನ್ನು ಮಾಡಿಸಬೇಕಾಗಿದ್ದು, ಇದರಿಂದ ಪರೀಕ್ಷಾ ಮತ್ತು ಚಿಕಿತ್ಸಾ ವೆಚ್ಚಗಳು ಮತ್ತಷ್ಟು ದುಬಾರಿಯಾಗಲಿವೆ. ಹಾಗಾಗಿ ಈ ಮಸೂದೆ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.

ಒಂದು ವೇಳೆ ಜಾರಿ ಮಾಡುವುದಿದ್ದರೆ ಐಎಂಎ ಮುಂದಿರಿಸಿದ ಸಲಹೆಗಳನ್ನು ಪರಿಗಣಿಸಬೇಕು. ಸಮಿತಿಗೆ ನ್ಯಾಯಾಧೀಶರೇ ಅಧ್ಯಕ್ಷರಾಗಬೇಕು. ತೊಂದರೆಗೆ ಒಳಗಾದವರಿಗೆ ಹೊರತು ಬೇರೆ ಯಾರಿಗೂ ದೂರು ಸಲ್ಲಿಸಲು ಅವಕಾಶವಿರಬಾರದು. ಸಂಧಾನ ಸಮಿತಿಗಳು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರದ ಗ್ರಾಹಕ ಹಿತರಕ್ಷಣಾ ಮಂಡಳಿಗಳಲ್ಲಿ ತಜ್ಞ ವೈದ್ಯರ ಪ್ರಾತಿನಿತ್ಯ ಇರಬೇಕು. ಸುಳ್ಳು ಮೊಕದ್ದಮೆಗಳಿಗೆ ಸೂಕ್ತ ಪ್ರಮಾಣದಲ್ಲಿ ದಂಡ ವಿಧಿಸುವ ಕ್ರಮವನ್ನು ಅಳವಡಿಸಬೇಕು ಎನ್ನುವುದು ಐಎಂಎ ಆಗ್ರಹವಾಗಿದೆ ಎಂದು ತಿಳಿಸಿದರು.

ಮನವಿ ಸಲ್ಲಿಸುವ ಸಂದರ್ಭ ಡಾ| ಕೆ.ವಿ.ಚಿದಾನಂದ, ಐಎಂಎ ಪೂರ್ವಾಧ್ಯಕ್ಷೆ ಡಾ| ಸಾಯಿಗೀತ, ಪ್ರ.ಕಾರ್ಯದರ್ಶಿ ಡಾ|ಭರತ್‌ ಶೆಟ್ಟಿ, ಡಾ| ರವಿಕಾಂತ್‌, ಡಾ| ಶಕುಂತಲಾ ಮೊದಲಾದವರು ಉಪಸ್ಥಿತರಿದ್ದರು.

ಆರೋಗ್ಯ ಕ್ಷೇತ್ರಕ್ಕೆ ಮಾರಕ ಮಧ್ಯವರ್ತಿ ಘಟಕಗಳಗೆ ಅನುವು ಮಾಡಿಕೊಟ್ಟು ವೈದ್ಯರನ್ನು ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಬೆದರಿಸಿ ಈ ಘಟಕಗಳು ವಸೂಲಿ ಕೇಂದ್ರಗಳಾಗಿ ಕೆಲಸ ಮಾಡುವ ಸಾಧ್ಯತೆಗಳಿವೆ. ಪರಿಣತ ವೈದ್ಯಕೀಯ ಅಭಿಪ್ರಾಯಗಳನ್ನು ಪಡೆಯದೆ ತೀರ್ಮಾನ ಕೈಗೊಳ್ಳುವ ಅವಕಾಶಗಳಿವೆ. ಘಟಕದ ಅಧ್ಯಕ್ಷರ ಮತ್ತು ಸದಸ್ಯರ ಅರ್ಹತೆಗಳನ್ನು ಕೇಂದ್ರ ಸರಕಾರವೇ ನಿಗದಿಪಡಿಸಲಿದ್ದು, ಅಧ್ಯಕ್ಷರು ಮತ್ತು ಸದಸ್ಯರಲ್ಲಿ ನ್ಯಾಯಾಧೀಶರು ಇರಬೇಕೆಂಬ ನಿಯಮವಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಈ ಕಾಯ್ದೆ ಆರೋಗ್ಯ ಕ್ಷೇತ್ರಕ್ಕೆ ಮಾರಕವಾಗಿದೆ ಎಂದು ಡಾ| ವೀಣಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next