Advertisement

ಅರಂಬೂರು ಸೇತುವೆ ಪೂರ್ಣಕ್ಕೆ ಜೂನ್‌ ಗಡುವು

04:44 AM Feb 24, 2019 | |

ಸುಳ್ಯ : ಬಹು ಬೇಡಿಕೆಯ ಅರಂಬೂರು ಸೇತುವೆ ಕಾಮಗಾರಿ ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಳೆಗಾಲದಲ್ಲಿ ಓಡಾಟಕ್ಕೆ ಮುಕ್ತ ಆಗಲಿದೆಯೇ ಎನ್ನುವುದು ಇನ್ನೂ ಖಾತರಿ ಆಗಿಲ್ಲ.

Advertisement

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಸೇತುವೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಕಾಮಗಾರಿ ವೇಗಕ್ಕೆ ಸೂಚನೆ ನೀಡಿದ್ದಲ್ಲದೆ ಜೂನ್‌ ಪ್ರಥಮ ವಾರದಲ್ಲಿ ಸಂಚಾರ ಮುಕ್ತವಾಗಬೇಕು ಎಂದು ಸೂಚಿಸಿದ್ದರು. ಕಳೆದ ಬಾರಿ ಮಳೆಗಾಲದ ಅನಂತರ ಸ್ಥಗಿತವಾಗಿದ್ದ ಕಾಮಗಾರಿ ಈಗ ಮತ್ತೆ ಆರಂಭಗೊಂಡಿದ್ದು, ಎರಡು ಪಿಲ್ಲರ್‌ಗಳಿಗೆ ಸ್ಲಾ éಬ್‌ ಜೋಡಿಸುವ ತಯಾರಿ ಕೆಲಸ ನಡೆಯುತ್ತಿದೆ.

4.90 ಕೋ.ರೂ. ವೆಚ್ಚ
ಆಲೆಟ್ಟಿ ಗ್ರಾಮದ ಪಯಸ್ವಿನಿ ನದಿಗೆ ಅರಂಬೂರು ಬಳಿ 4.90 ಕೋ.ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗುತ್ತಿದೆ. 2015-16ನೇ ಸಾಲಿನ ಆಯವ್ಯಯದಲ್ಲಿ 4.90 ಕೋಟಿ ರೂ. ಅನುದಾನ ಬಿಡುಗಡೆಗೊಂಡು ಕಾಮಗಾರಿ ಆರಂಭಗೊಂಡಿತ್ತು. ಸೇತುವೆಯ ಐದು ಅಂಕಣಗಳ ಕಾಮಗಾರಿ ಪೂರ್ತಿಗೊಂಡಿದ್ದು, ಕೊನೆ ಪಿಲ್ಲರ್‌ನ ಸ್ಲ್ಯಾಬ್‌ ಕೆಲಸ ಪ್ರಗತಿಯಲ್ಲಿದೆ. 82.54 ಮೀ. ಉದ್ದ, 7.5 ಮೀ. ಮೇಲ್ಭಾಗದ ಅಗಲ ಮತ್ತು 9 ಮೀ. ಎತ್ತರವಿದೆ. ನೀರು ಹರಿಯಲು 15 ಮೀ. ಅಗಲದ ಐದು ಕಿಂಡಿಗಳಿವೆ. ನಾಲ್ಕು ಪಿಯರ್‌ ಮತ್ತು ಎರಡು ಅಬೆಟ್‌ಮೆಂಟ್‌ ಒಳಗೊಂಡಂತೆ ಸುಸಜ್ಜಿತ ಆರ್ಸಿಸಿ ಟಿ ಬೀಮ್‌ ಬ್ರಿಡ್ಜ್ ಇದಾಗಿದೆ.

ವಿಸ್ತರಿತ ಅವಧಿ ಮುಗಿದಿದೆ
2017 ಜನವರಿ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾರ್ಚ್‌ ತಿಂಗಳಲ್ಲಿ ಸೇತುವೆ ಕಾಮಗಾರಿ ಆರಂಭಗೊಂಡಿತ್ತು. ಕಾಮಗಾರಿ ಮುಗಿಸಲು 11 ತಿಂಗಳ ಅವಧಿ ನೀಡಲಾಗಿದ್ದು, ಅದರಂತೆ 2018 ಮಾರ್ಚ್ ಗೆ ಅವಧಿ ಮುಗಿದಿದೆ. ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು 2019ರ ಮಾರ್ಚ್‌ ತನಕ ಅವಧಿ ವಿಸ್ತರಿಸುವಂತೆ ಕೋರಿಕೆ ಸಲ್ಲಿಸಿದ್ದರು. ಈ ಅವಧಿ ಮುಗಿಯಲು ಇನ್ನೂ 1 ತಿಂಗಳಿದೆ. ಹಾಗಾಗಿ ಅದರೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಆದರೆ ಇದು ಅನುಮಾನವೆನಿಸಿದೆ.

ಬಹುಕಾಲದ ಬೇಡಿಕೆ
ಆಲೆಟ್ಟಿ ಗ್ರಾಮದ ಅರಂಬೂರು, ನೆಡಿcಲ್‌, ಕೂಟೇಲು ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಕುಟುಂಬಗಳು ನಗರದ ಸಮೀಪವೇ ಇದ್ದರೂ, ಸೇತುವೆ ಇಲ್ಲದ ಕಾರಣ ಸುಳ್ಯಕ್ಕೆ ಬರಬೇಕಾದರೆ ಆಲೆಟ್ಟಿಗೆ ತೆರಳಿ ಸುತ್ತು ಬಳಸಿ ಸುಮಾರು 16 ಕಿ.ಮೀ. ಪ್ರಯಾಣಿಸಬೇಕಿತ್ತು. ಇಲ್ಲದಿದ್ದರೆ ದೋಣಿ ಬಳಸಿ ನದಿ ದಾಟಬೇಕಿತ್ತು. ಪದ್ಮಶ್ರೀ ಪುರಸ್ಕೃತ ಗಿರೀಶ್‌ ಭಾರದ್ವಾಜ್‌ ಅವರು 1989ರಲ್ಲಿ ತೂಗು ಸೇತುವೆ ನಿರ್ಮಿಸಿ ಪಾದಚಾರಿ ನಡಿಗೆಗೆ ವ್ಯವಸ್ಥೆ ಕಲ್ಪಿಸಿದ್ದರು. ಇದರಿಂದ ದೋಣಿಯಲ್ಲಿ ದಾಟುವ ಪ್ರಮೇಯ ತಪ್ಪಿತ್ತು.

Advertisement

ಬವಣೆಗೆ ಮುಕ್ತಿ ಆದರೆ ವಾಹನ ಓಡಾಟಕ್ಕೆ ಸಾಧ್ಯವಾಗದ ಕಾರಣ ಜನರು ದೈನಂದಿನ ಅಗತ್ಯತೆಗಳಿಗೆ ಬೇಕಾದ ಎಲ್ಲ ವಸ್ತುಗಳನ್ನು ತಲೆಯಲ್ಲಿ ಹೊತ್ತು ತೂಗು ಸೇತುವೆ ದಾಟುವ ಸ್ಥಿತಿ ಈಗಲು ಮುಂದುವರಿದಿದೆ.

ಕೃಷಿಕರು ಕೃಷಿ ಉತ್ಪನ್ನಗಳನ್ನು ತಲೆಯಲ್ಲಿ ಹೊತ್ತು ತೂಗು ಸೇತುವೆ ದಾಟಿ ಪೇಟೆಗೆ ಬರಬೇಕು. ಅರಂಬೂರು ಸೇತುವೆ ಪೂರ್ಣಗೊಂಡರೆ ಈ ಬವಣೆಗೆ ಮುಕ್ತಿ ಸಿಗಲಿದೆ. ಆಲೆಟ್ಟಿ, ಪೆರಾಜೆ ಗ್ರಾಮಕ್ಕೆ, ಆಲೆಟ್ಟಿ ಮೂಲಕ ಬಡ್ಡಡ್ಕ-ಕಲ್ಲಪ್ಪಳ್ಳಿ, ಆಲೆಟ್ಟಿ-ಕೋಲ್ಚಾರ್‌ -ಬಂದಡ್ಕ, ಬಡ್ಡಡ್ಕ-ಕೂರ್ನಡ್ಕ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.

ಪೂರ್ಣಕ್ಕೆ ಸೂಚನೆ
ಸೇತುವೆ ನಿರ್ಮಾಣ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದೇನೆ. ಜೂನ್‌ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಿಸಲು ಸಂಬಂಧಿಸಿದ ಎಂಜಿನಿಯರ್‌ ಅವರಿಗೆ ಸೂಚನೆ ನೀಡಿದ್ದೇನೆ.
– ಯು.ಟಿ. ಖಾದರ್‌,
ಜಿಲ್ಲಾ ಉಸ್ತುವಾರಿ ಸಚಿವ 

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next