Advertisement

ಜಿಎಸ್‌ಟಿ ಅರಿತು ಲಾಭ ಪಡೆಯಲು ಸಲಹೆ

03:24 PM May 02, 2019 | Team Udayavani |

ಗದಗ: ಎಲ್ಲ ಹಂತದಲ್ಲಿ ತೆರಿಗೆ ಸೋರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ಉದ್ದೇಶದಿಂದ ದೇಶದಾದ್ಯಂತ ಏಕರೂಪದ ತೆರಿಗೆ ನೀತಿ(ಜಿಎಸ್‌ಟಿ) ಜಾರಿಗೆ ತರಲಾಗಿದೆ. ವರ್ತಕರು ಜಿಎಸ್‌ಟಿಯನ್ನು ಸಮಪರ್ಕವಾಗಿ ಅರಿತುಕೊಂಡು, ಅದರ ಲಾಭ ಪಡೆದುಕೊಳ್ಳಬೇಕು ಎಂದು ಜಿಎಸ್‌ಟಿ ಸಲಹೆಗಾರ ಶ್ರೀಧರ ಪಾರ್ಥಸಾರಥಿ ಹೇಳಿದರು.

Advertisement

ಜಿಲ್ಲಾ ತೆರಿಗೆ ಸಲಹೆಗಾರರ ಸಂಘ ಹಾಗೂ ಚಾಪ್ಟರ ಆಫ್‌ ಚಾರ್ಟರ್ಡ್‌ ಅಕೌಂಟಂಟ್ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಎಸ್‌ಟಿ ಸರಳೀಕರಣದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು.

ಈ ಮೊದಲು 1976ರಲ್ಲಿ ಜಿಎಸ್‌ಟಿ ಪರಿಕಲ್ಪನೆಯಾಗಿ, ಮುಂದೆ 1996ರಲ್ಲಿ ಜಿಎಸ್‌ಟಿ ಜಾರಿಗೆ ತರುವ ಬಗ್ಗೆ ಕಾರ್ಯಪ್ರವೃತ್ತರಾಗಿ ಬಳಿಕ 2017ರಲ್ಲಿ ಅದು ಜಾರಿಗೆ ತರಲಾಗಿದೆ. ಅಂದಿನಿಂದ ಇಂದಿನವರೆಗೂ ಜಿಎಸ್‌ಟಿಯನ್ನು ಸರಳೀಕರಣ ಮಾಡುತ್ತಾ ಬರಲಾಗಿದೆ. ಆದರೂ ಜಿಎಸ್‌ಟಿಯಲ್ಲಿ ಇನ್ನೂ ಅನೇಕ ತೊಂದರೆ ಮತ್ತು ನ್ಯೂನತೆಗಳಿವೆ. ಅವುಗಳನ್ನು ಮತ್ತುಷ್ಟು ಸರಳೀಕರಣಗೊಳಿಸಿ ವ್ಯಾಪಾರಸ್ಥರಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲ ವಾಗಬೇಕಾಗಿದೆ. ಜಿಎಸ್‌ಟಿ ಸರಳೀಕರಣವೆಂದರೆ ಸರಕಾರ, ಉತ್ಪಾದಕ, ಮಾರಾಟಗಾರ ಹಾಗೂ ಗ್ರಾಹಕರ ಇವುಗಳ ಮಧ್ಯ ಸುಗಮವಾಗಿ ಸಾಗಿದರೆ ಅದೇ ಸರಳೀಕರಣ ಎಂದರು.

ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸುರಕೋಡ, ದೇಶದಾದ್ಯಂತ ಜಿಎಸ್‌ಟಿ ಜಾರಿಯಾದಾಗಿನಿಂದ ಈವರೆಗೆ ಸಾಕಷ್ಟು ಬದಲಾವಣೆಗಳಾಗಿವೆ. ಈ ಕುರಿತು ಕಾಲಕಾಲಕ್ಕೆ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ವರ್ತಕರು, ಉದ್ಯಮಿಗಳಿಗೆ ವಿಚಾರ ಸಂಕಿರಣಗಳ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದೆ ಎಂದು ವಿವರಿಸಿದರು.

ಮಧುಸೂದನ ಪುಣೇಕರ, ವಿ.ಎಸ್‌. ಮಾಟಲದನ್ನಿ, ಶರಣಬಸಪ್ಪ ಗುಡಿಮನಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next