ಕುಷ್ಟಗಿ: ತಾಲೂಕಿನಿಂದ ನೂರು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಸಕ್ಕರೆ ಕಾರ್ಖಾನೆಗಳಿಲ್ಲ. ಆದರೂ ಈ ಭಾಗದ ರೈತರು ವಾಣಿಜ್ಯ ಬೆಳೆ ಕಬ್ಬು ಬೇಸಾಯಕ್ಕೆ ಮನಸ್ಸು ಮಾಡಿರುವುದು ಗಮನಾರ್ಹ ಎನಿಸಿದೆ.
ತಾಲೂಕಿನಲ್ಲಿ 50ರಿಂದ 60 ಹೆಕ್ಟೇರ್ಗೆ ಸೀಮಿತವಾಗಿದ್ದ ಕಬ್ಬು ಬೆಳೆ ಕಳೆದ ವರ್ಷ 200 ಹೆಕ್ಟೇರ್ಗೆ ವಿಸ್ತರಿಸಿದೆ. ಕಳೆದ ವರ್ಷ ಉತ್ತಮ ಮಳೆಯಿಂದ ಅಂತರ್ಜಲ ಖಾತ್ರಿಯಾಗುತ್ತಿದ್ದಂತೆ ಅಂತರ್ಜಲ ಲಭ್ಯತೆಯನ್ನಾಧರಿಸಿ 1 ಎಕರೆಯಿಂದ 5 ಎಕರೆಯವರೆಗೆ ಕಬ್ಬು ಬೆಳೆದಿದ್ದಾರೆ. ಸದ್ಯ ಕಬ್ಬು ಕಟಾವು ಸಂದರ್ಭವಾಗಿದ್ದು, ಈ ಪ್ರದೇಶದಲ್ಲಿ ಪ್ರತಿ ಎಕರೆಗೆ ಸರಾಸರಿ 40 ಟನ್ ಹಾಗೂ ಉತ್ತಮ ನಿರ್ವಹಣೆಯಿಂದ 50 ಟನ್ ವರೆಗೂ ಇಳುವರಿ ನಿರೀಕ್ಷಿಸಬಹುದಾಗಿದೆ.
ತಾಲೂಕಿನ ತಳವಗೇರಾ, ಕಡೇಕೊಪ್ಪ, ಹಿರೇಬನ್ನಿಗೋಳ, ಗುಮಗೇರಿ, ಹಿರೇಮನ್ನಾಪುರ, ಹುಲಿಯಾಪುರ ಇತರೆಡೆಗಳಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ತಳವಗೇರಾ ವ್ಯಾಪ್ತಿಯಲ್ಲಿ ವೀರಭದ್ರಯ್ಯ ಹಿರೇಮಠ ಅವರು, ತಮ್ಮ ಒಂದೂವರೆ ಎಕರೆಯಲ್ಲಿ 86,032 ತಳಿಯ ಕಬ್ಬನ್ನು ಬೆಳೆದಿದ್ದು, ಈ ಬೆಳೆ ಎರಡನೇ ಬೆಳೆಯಾಗಿದೆ. ನಾಟಿ ಮಾಡಿದ ವರ್ಷದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ 15 ಸಾವಿರ ರೂ. ಕೊಟ್ಟಿಗೆ ಗೊಬ್ಬರ, 10 ಸಾವಿರ ರೂ. ಅಂಗಾಂಶ ಕೃಷಿಯ ಕಬ್ಬು 2.25 ಪ್ರತಿ ಸಸಿಗೆ ಖರೀ ದಿಸಿದ ಖರ್ಚು ಸೇರಿದಂತೆ 60 ಸಾವಿರ ರೂ. ಖರ್ಚಾಗಿದೆ. ಈ ಭಾಗದಲ್ಲಿ ಬಿಸಿಲು ಹೆಚ್ಚಿದ್ದರಿಂದ ಸಕ್ಕರೆ ಅಂಶ ಜಾಸ್ತಿ ಇರುತ್ತದೆ. ಪ್ರತಿ ಎಕರೆಗೆ 50 ಟನ್ ಇಳುವರಿ ಬಂದಿದ್ದು, ಪ್ರತಿ ಟನ್ ಗೆ 2,300 ರೂ. ಲಭಿಸಿತ್ತು. ಪ್ರಸಕ್ತ ವರ್ಷದಲ್ಲಿ ಎಕರೆಗೆ 40 ಟನ್ ನಿರೀಕ್ಷಿಸಿದ್ದು, ಟನ್ಗೆ 2,380 ರೂ. ಸಿಗಲಿದೆ ಎಂದರು.
ಲಗಾಣಿ ಹೊರೆ: ಕಬ್ಬು ಕಟಾವಿಗೆ ಸಕ್ಕರೆ ಕಾರ್ಖಾನೆ ಒಪ್ಪಂದದನ್ವಯ ಮಹಾರಾಷ್ಟ್ರದ ಕಾರ್ಮಿಕರಿಗೆ 1 ಟನ್ಗೆ 250 ರೂ. ಲಗಾಣಿ ರೈತರೇ ಕೊಡಬೇಕು. ಕಬ್ಬು ಕಟಾವು ವಿಳಂಬವಾಗುತ್ತಿದ್ದಂತೆ ಲಗಾಣಿ ಹೆಚ್ಚು ಕೇಳುತ್ತಿದ್ದು, ರೈತರಿಗೆ ಇದು ಹೊರೆ ಎನಿಸಿದೆ. ಈ ಅಂಶ ಹೊರತುಪಡಿಸಿದರೆ ಬೆಳೆ ನಿರ್ವಹಣೆ ವೆಚ್ಚ ಕಡಿಮೆ.