Advertisement

ಸೂಯೆಜ್‌: ಸಾಗರದ ಶತಮಾನಗಳ ಪ್ರಮುಖ ಕೊಂಡಿ

01:17 AM Mar 30, 2021 | Team Udayavani |

ಈಜಿಪ್ಟಿನ ಸೂಯೆಜ್‌ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಬೃಹತ್‌ ಸರಕು ಸಾಗಣೆ ನೌಕೆ ಮುಕ್ತವಾಗಿ ಈಗ ಸಂಚಾರ ಸಹಜ ಸ್ಥಿತಿಗೆ ಬಂದಿದೆ. ಇದರಿಂದಾಗಿ ಹಲವು ದಿನಗಳಿಂದ ಜಾಗತಿಕ ವ್ಯಾಪಾರ ವಲಯದ ಹಣೆಯಲ್ಲಿ ಮೂಡಿದ್ದ ಚಿಂತೆಯ ಗೆರೆಗಳು ದೂರವಾಗಿವೆ. ಆದರೆ ಈ ಘಟನೆ, ಸೂಯೆಜ್‌ ಕಾಲುವೆ ವಿಶ್ವ ವ್ಯಾಪಾರ ವಲಯಕ್ಕೆ ಎಷ್ಟು ಅಮೂಲ್ಯವಾದದ್ದು ಎನ್ನುವ ಸಂದೇಶ ಸಾರುತ್ತಿದೆ. ಇದರ ನಡುವೆಯೇ ಸೂಯೆಜ್‌ ಎಂಬ ಕಾಲುವೆಯ ಹಿಂದಿನ ನಿರ್ಮಾಣದ ಕಥನವೂ ಮತ್ತೂಮ್ಮೆ ಜಗತ್ತಿಗೆ ನೆನಪಾಗುತ್ತಿದೆ.

Advertisement

ವ್ಯಾಪಾರದ ಪ್ರಮುಖ ಮಾರ್ಗ
ಅಮೆರಿಕದ ಎನರ್ಜಿ ಇನಾ#ರ್ಮೇಶನ್‌ ಅಡ್ಮಿನಿಸ್ಟ್ರೇಷನ್‌ನ ಪ್ರಕಾರ, ಜಗತ್ತಿನ 10 ಪ್ರತಿಶತದಷ್ಟು ತೈಲೋತ್ಪನ್ನಗಳು ಹಾಗೂ 8 ಪ್ರತಿಶತ ದಷ್ಟು ನೈಸರ್ಗಿಕ ಅನಿಲ ಸೂಯೆಜ್‌ ಕಾಲುವೆಯ ಮೂಲಕವೇ ಪ್ರಪಂಚಕ್ಕೆ ಸರಬರಾಜಾಗುತ್ತದೆ. ಇದರಲ್ಲಿ ಅತೀ ಹೆಚ್ಚು ಕಚ್ಚಾತೈಲವು ಮಧ್ಯಪ್ರಾಚ್ಯದಿಂದ ಯೂರೋಪ್‌ ಮತ್ತು ಅಮೆರಿಕಕ್ಕೆ ಸರಬ ರಾಜಾದರೆ, ರಷ್ಯಾದ ತೈಲವು ಏಷ್ಯನ್‌ ರಾಷ್ಟ್ರಗಳಿಗೆ ಸರಬರಾಜಾ ಗುವುದಕ್ಕೂ ಈ ಕಾಲುವೆ ಮುಖ್ಯ. ಯುರೋಪ್‌ ಮತ್ತು ಏಷ್ಯಾ ನಡುವಿನ ಸರಕು ಸಾಗಣೆಗೂ ಸೂಯೆಜ್‌ ಮುಖ್ಯ ಮಾರ್ಗ. ಜಾಗತಿಕ ವ್ಯಾಪಾರದ ಸುಮಾರು 12 ಪ್ರತಿಶತದಷ್ಟು ಪ್ರಮಾಣ ಸೂಯೆಜ್‌ ಕಾಲುವೆಯ ಮೂಲಕವೇ ಹಾದು ಹೋಗುತ್ತದೆ. ದೈನಂದಿನ ಕಂಟೇನರ್‌ ಸರಕು ಸಾಗಣೆಯ ಸಂಚಾರ ದಲ್ಲಿ ಈ ಕಾಲುವೆಯ ಪಾಲು 30 ಪ್ರತಿಶತದಷ್ಟಿದೆ.
ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ 19 ಸಾವಿರ ಹಡಗು ಗಳು ಈ ಕಾಲುವೆಯ ಮೂಲಕವೇ ಹಾದುಹೋಗಿವೆ. ಅಂದರೆ ಒಟ್ಟು 1.17 ಶತಕೋಟಿ ಟನ್‌ಗಳಷ್ಟು ಸರಕುಗಳ ಸಾಗಣೆಯಾ ಗಿದ್ದು, ಇಷ್ಟು ದೊಡ್ಡ ಪ್ರಮಾಣದ ಸಾಗಣೆ ಕಡೆಯ ಬಾರಿ ಆದದ್ದು 1984ರಲ್ಲಿ! ಪ್ರತೀ ದಿನ ಸೂಯೆಜ್‌ ಕಾಲುವೆಯ ಮೂಲಕ 9.5 ಶತಕೋಟಿ ಡಾಲರ್‌ ಮೌಲ್ಯದ ಸರಕು ಸಾಗಣೆ ಯಾಗು ತ್ತದೆ. ಸೂಯೆಜ್‌ ಈಜಿಪ್ಟಿನ ಬೊಕ್ಕಸಕ್ಕೆ 2017 ರಲ್ಲಿ 5.3 ಶತಕೋಟಿ ಡಾಲರ್‌ ಆದಾಯ ತಂದುಕೊಟ್ಟಿತ್ತು!

ಗಂಟೆಗೆ 400 ದಶಲಕ್ಷ ಡಾಲರ್‌ ನಷ್ಟ!
ಕೆಲವು ದಿನಗಳಿಂದ ಆಗಿದ್ದ ನಿಲುಗಡೆಯು ಜಾಗತಿಕ ವ್ಯಾಪಾರಕ್ಕೆ ಅತೀ ದುಬಾರಿಯಾಗಿಯೂ ಪರಿಣಮಿಸಿತು. ಒಂದು ಅಂದಾಜಿನ ಪ್ರಕಾರ, ಕಳೆದ ಕೆಲವು ದಿನಗಳಿಂದ ಸಾಗಣೆ ಉದ್ಯಮ ಮತ್ತು ವಿಮಾ ಕಂಪೆನಿಗಳಿಗೆ ಪ್ರತೀ ಗಂಟೆಗೆ 400 ದಶಲಕ್ಷ ಡಾಲರ್‌ಗಳಷ್ಟು ಹೊರೆಯಾಗಿದೆ. ಇನ್ನು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸೂಯೆಜ್‌ ಮೂಲಕ ಸಾಗಣೆಯ ವೆಚ್ಚ ಮೂರು ಪಟ್ಟು ಅಧಿಕವಾಗಿದ್ದು, ಇತ್ತೀಚಿನ ಬಿಕ್ಕಟ್ಟೂ ವ್ಯಾಪಾರ ವಲಯಕ್ಕೆ ಪೆಟ್ಟು ನೀಡಿತು.

ಬ್ರಿಟಿಷರ ಬೆಳವಣಿಗೆಯ ಹಿಂದೆ…
ಸೂಯೆಜ್‌ ಕಾಲುವೆಯ ಉಗಮದ ಕಥನವು ನಮ್ಮನ್ನು ಶತಮಾನಗಳ ಹಿಂದಕ್ಕೆ ಕರೆದೊಯ್ಯುತ್ತದೆ. ಕ್ರಿ.ಪೂ. 1874ರಲ್ಲೇ ಈಜಿಪ್ಟಿನ ಸೇನೌಸರ್ಟ್‌ ಆಳ್ವಿಕೆಯ ವೇಳೆಯಲ್ಲೇ ಜಲಮಾರ್ಗವನ್ನು ಅಗೆಯಲಾಗಿತ್ತು. ಆದರೆ ಕಾಲಾಂತರದಲ್ಲಿ ಹೂಳಿನ ಪ್ರಮಾಣ ಅಧಿಕವಾಗಿ, ಅದರ ಬಳಕೆಯನ್ನು ನಿಲ್ಲಿಸಲಾಗಿತ್ತು. ತದನಂತರದ ಶತಮಾನಗಳಲ್ಲಿ ಅನೇಕ ಬಾರಿ ಈ ಜಲಮಾರ್ಗ ವನ್ನು ತೆರೆಯಲಾಗಿದೆ ಮತ್ತು ಮುಚ್ಚಲಾಗಿದೆ. ಫ್ರೆಂಚ್‌ ಹಾಗೂ ಬ್ರಿಟಿಷರ ಪ್ರಯತ್ನದ ಫ‌ಲವಾಗಿ ಆಧುನಿಕ ಸೂಯೆಜ್‌ ಕಾಲುವೆಯ ನಿರ್ಮಾಣ 19ನೇ ಶತಮಾನದ ಮಧ್ಯಭಾಗದಲ್ಲಾಯಿತು. 1869ರ ನವೆಂಬರ್‌ 17ರಂದು ಇದನ್ನು ಸಂಚಾರಕ್ಕೆ ತೆರೆಯಲಾಯಿತು. ಈ ಆಧುನಿಕ ಕಾಲುವೆಯು ಜಾಗತಿಕ ಕಡಲ ಸಂಪರ್ಕದಲ್ಲಿ ಪಲ್ಲಟವೆನ್ನುವಂಥ ಬದಲಾವಣೆಗೆ ಕಾರಣವಾಯಿತು. ಬ್ರಿಟಿಷ್‌ ವಸಾಹತುಶಾಹಿಯ ಬೆಳವಣೆಗೆಯ ಹಿಂದೆಯೂ ಈ ವ್ಯಾಪಾರ ಮಾರ್ಗದ ಕೊಡುಗೆ ಬಹಳ ಇದೆ. ಈ ಕಾಲುವೆ ಉದ್ಘಾಟನೆಯಾದ ಅನಂತರದಿಂದ ಐದು ಬಾರಿ ಮುಚ್ಚಲಾಗಿದೆ. ಮುಖ್ಯವಾಗಿ ಅರಬ್‌ ಇಸ್ರೇಲ್‌ ಸಂಘರ್ಷದ ಸಮಯದಲ್ಲಿ. ಅಂದರೆ 1967-1975ರ ವರೆಗೆ ಎಂಟು ವರ್ಷಗಳ ವರೆಗೆ ಈ ಕಾಲುವೆಯು ಬಂದಾಗಿ ಜಾಗತಿಕ ವ್ಯಾಪಾರ ಕ್ಷೇತ್ರಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿತ್ತು.

ಸೂಯೆಜ್‌ ಮತ್ತು ಪನಾಮಾ
ಸೂಯೆಜ್‌ ಮತ್ತು ಪನಾಮಾ(ಪೆಸಿಫಿಕ್‌ ಮತ್ತು ಅಟ್ಲಾಂಟಿಕ್‌ ಸಾಗರಗಳನ್ನು ಬೆಸೆಯುವ ಬಿಂದು) ಕಾಲುವೆಗಳು ಜಾಗತಿಕ ಕಡಲ ಕ್ಷೇತ್ರದಲ್ಲಿ ಅತ್ಯಂತ ಮಹತ್ತರ ಕಾಲುವೆಗಳಾಗಿವೆ. ಪನಾಮಾ ಕಾಲು ವೆಯ ಅಗಲ ಬಹಳ ಇದ್ದರೆ, ಸೂಯೆಜ್‌ನದ್ದು ಕಿರಿದಾಗಿದೆ. ಇವೆರಡೂ ಕಾಲುವೆಗಳಂತೆಯೇ ಜಾಗತಿಕ ವ್ಯಾಪಾರಕ್ಕೆ ವೋಲ್ಗಾ ಡಾನ್‌ ಮತ್ತು ಗ್ರ್ಯಾಂಡ್‌(ಚೀನ) ಕಾಲುವೆಗಳೂ ಸಹ ಮುಖ್ಯ ವಾಗಿವೆ. ಪ್ರತಿಯೊಂದು ಕಾಲುವೆಗೂ ತನ್ನದೇ ಆದ ಸಂಚಾರ ಸವಾಲುಗಳು ಮತ್ತು ನಿಯಮಾವಳಿ ಗಳಿವೆ. ಹೆಚ್ಚಿನ ಸಂದರ್ಭಗಳಲ್ಲಿ ಸುರಕ್ಷಿತ ಸಾಗಣೆಯನ್ನು ಖಾತ್ರಿಪಡಿಸಲು ಈ ಮಾರ್ಗಗಳ ಮೂಲಕ ಸಾಗುವ ಹಡುಗಗಳಿಗೆ ಒಂದೆರಡು ಚಿಕ್ಕ ಸ್ಥಳೀಯ ಹಡಗುಗಳನ್ನೂ ನಿಯೋಜಿಸಲಾಗಿರುತ್ತದೆ.

Advertisement

1.30 ಲಕ್ಷ ಈಜಿಪ್ಟಿಯನ್ನರ ಬಲಿ ಪಡೆದ ಕಾಲುವೆ
ಸೂಯೆಜ್‌ ನಿರ್ಮಾಣ ಜಗತ್ತಿನ ಅತ್ಯಂತ ಅಪಾಯಕಾರಿ ಕಾಮಗಾರಿಗಳ ಪಟ್ಟಿಯಲ್ಲಿ ಮೊದಲೈದು ಸ್ಥಾನಗಳಲ್ಲಿ ಜಾಗಪಡೆದಿದೆ. 1859ರಿಂದ 1869ರ ನಡುವೆ ಈ ಕಾಲುವೆ ನಿರ್ಮಾಣದಲ್ಲಿ ತೊಡಗಿದ್ದ 15 ಲಕ್ಷ ಈಜಿಪ್ಟ್ ಕೆಲಸಗಾರರಲ್ಲಿ 1.30 ಲಕ್ಷ ಜನ ಬಲಿಯಾದರು. ಕಾಲುವೆ ತೋಡುವಾಗ ಮಣ್ಣು ಕುಸಿದು ಬಹುತೇಕರು ಸತ್ತರು ಎಂದು ಈಜಿಪ್ಟಿನ ಇತಿಹಾಸ ಪುಸ್ತಕಗಳು ಹೇಳುತ್ತವಾದರೂ, ವಾಸ್ತವ ಬೇರೆಯೇ ಇತ್ತು ಎನ್ನುತ್ತದೆ ಫ್ರೆಂಚ್‌ ಸಂಶೋಧಕಿ ಮಾಂಟೆಲ್‌ 1859ರಲ್ಲಿ ಬರೆದ ಪುಸ್ತಕ Le Chantier du Canal de Suez . ಚರ್ಮ ಸುಡುವಂಥ ಬಿಸಿಲಿನಲ್ಲಿ ಗಂಟೆಗಟ್ಟಲೇ ದುಡಿದರೂ ಕೆಲಸಗಾರರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲವಂತೆ. ದಾಹ, ಹಸಿವು, ಬಿಡುವಿಲ್ಲದ ಕೆಲಸಗಳ ಜತೆಗೆ, ಹೆಪಟೈಟಿಸ್‌, ಸ್ಮಾಲ್‌ ಪಾಕ್ಸ್‌, ಟಿಬಿಯಂಥ ರೋಗಗಳೂ ಕೆಲಸಗಾರರನ್ನು ಕಂಗೆಡಿಸಿದವು. ಅದರಲ್ಲೂ 1865ರಲ್ಲಿ ಎದುರಾದ ಕಾಲರಾ ಮಹಾಮಾರಿ ಕೆಲಸಗಾರರಿಗೆ ಮೃತ್ಯುಕೂಪವಾಗಿ ಬದಲಾಯಿತಂತೆ. ಒಂದು ಹಂತದಲ್ಲಿ ಯಾವ ಮಟ್ಟಕ್ಕೆ ಕೆಲಸಗಾರರು ಮೃತಪಟ್ಟರೆಂದರೆ, ಶವಗಳನ್ನು ಹೊರಲೂ ಜನರು ಸಾಕಾಗಲಿಲ್ಲವಂತೆ. ಆದರೆ ಅಪಾರ ಬಡತನದಿಂದ ಬಳಲುತ್ತಿದ್ದ ಈಜಿಪ್ಟಿಯನ್ನರಿಗೆ ಈ ಕಾಲುವೆಯ ನಿರ್ಮಾಣ ಜೀವನಾದಾಯಕ್ಕೆ ಮಾರ್ಗವೂ ಆಗಿತ್ತು. ಹೀಗಾಗಿ ನಿರ್ಮಾಣ ಸ್ಥಳದಲ್ಲಿನ ಅಮಾನವೀಯ ಪರಿಸ್ಥಿತಿಯ ಕಥೆ ತಿಳಿದಿದ್ದರೂ, ಪ್ರತೀ ತಿಂಗಳೂ 25 ಸಾವಿರಕ್ಕಿಂತಲೂ ಹೆಚ್ಚಿನ ಕೆಲಸಗಾರರು ನಿರ್ಮಾಣಕ್ಕೆ ಸೇರ್ಪಡೆಯಾಗುತ್ತಿದ್ದರು. ಮುಖ್ಯವಾಗಿ ಕೆಲಸಗಾರರನ್ನು ಅಲ್‌ ಜಕಾಝೀಕ್‌ ಎನ್ನುವ ಪಟ್ಟಣದಲ್ಲಿ ಆಯ್ಕೆ ಮಾಡಲಾಗುತ್ತಿತ್ತು. ಸದೃಢವಾಗಿರುವವರನ್ನು ಆಯ್ಕೆ ಮಾಡಿದ ಅನಂತರ, ನಾಲ್ಕು ದಿನಗಳು ಅವರು ಮರುಭೂಮಿಯ ಮೂಲಕ ಕಾಲುವೆಯ ವರೆಗೂ ನಡೆದು ಬರಬೇಕಾಗಿತ್ತು. ಇವರಿಗೆಲ್ಲ ಒಂದು ಚರ್ಮದ ಚೀಲದಲ್ಲಿ ನೀರು ಹಾಗೂ ಒಂದಿಷ್ಟು ಬ್ರೆಡ್‌ ತುಣುಕುಗಳನ್ನಷ್ಟೇ ನೀಡಲಾಗುತ್ತಿತ್ತಂತೆ.

Advertisement

Udayavani is now on Telegram. Click here to join our channel and stay updated with the latest news.

Next