Advertisement

ಸುದಿನ ಸಂದರ್ಶನ: ‘ಅಭಿವೃದ್ಧಿ- ಆದಾಯ ಸಂಗ್ರಹ’ಕ್ಕೆ ವಿಶೇಷ ಒತ್ತು 

05:46 PM Mar 10, 2017 | Team Udayavani |

ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಕೆಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಬಯಸಿದ್ದ ಕವಿತಾ ಸನಿಲ್‌ರಿಗೆ ಈಗ ನಗರದ ಪ್ರಥಮ ಪ್ರಜೆಯ ಅಧಿಕಾರದ ದಂಡ ದೊರಕಿದೆ.ಈ ಸಂದರ್ಭದಲ್ಲಿ  ನಾಗರಿಕರು ಹತ್ತು ಹಲವು ನಿರೀಕ್ಷೆಗಳನ್ನು ಸಹಜವಾಗಿಯೇ ಇಟ್ಟುಕೊಂಡಿದ್ದಾರೆ. ಈ ಕುರಿತು ಇಲ್ಲಿ ಹಂಚಿಕೊಂಡಿದ್ದಾರೆ.

Advertisement

ನಗರದ ಸಮಗ್ರ ಅಭಿವೃದ್ಧಿಗೆ ನಿಮ್ಮ ಅವಧಿಯಲ್ಲಿ ಏನು ಮಾಡುತ್ತೀರಿ? 
ಈ ಬಗ್ಗೆ ಇನ್ನಷ್ಟೇ ಯೋಚಿಸಬೇಕಿದೆ. ಆದರೂ, 60 ವಾರ್ಡ್‌ಗಳನ್ನು ಒಂದೇ ದೃಷ್ಟಿಯಿಂದ ಪರಿಗಣಿಸಿ, ಮೂಲ ಸೌಕರ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ಯಾವುದೇ ರೀತಿಯಲ್ಲಿ ಬಾಧಿಸದ ಹಾಗೆ ಮುನ್ನೆಚ್ಚರಿಕೆ ವಹಿಸಲಾಗುವುದು. ನಗರದ ಆಯ್ದ ಭಾಗದಲ್ಲಿ ಬಸ್‌ ನಿಲ್ದಾಣ ಹಾಗೂ ಅಗತ್ಯವಿರುವಲ್ಲಿ ಫುಟ್‌ಪಾತ್‌ ನಿರ್ಮಾಣ ಹಾಗೂ ಪ್ರೀಮಿಯಂ ಎಫ್‌.ಎ.ಆರ್‌.ನಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಮುಗಿಸಲಾಗುವುದು. ವಿಶೇಷವಾಗಿ ದೊಡ್ಡ ರಸ್ತೆಗಳನ್ನು ಆದ್ಯತೆಯ ಮೇರೆಗೆ ಈ ಅನುದಾನದಲ್ಲಿ ಕೈಗೊಳ್ಳಲಾಗುವುದು. ಸಂಪೂರ್ಣವಾಗಿ ಮಂಗಳೂರು ಪ್ಲಾಸ್ಟಿಕ್‌ ಮುಕ್ತ ಮಾಡಲು ಪಣ ತೊಡಲಾಗುವುದು.

ಸ್ಮಾರ್ಟ್‌ಸಿಟಿ ಅನುಷ್ಠಾನ ಪ್ರಕ್ರಿಯೆ ಸದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಆಲೋಚನೆ ಏನಾದರೂ ಇದೆಯೇ?
ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಲು ಕಳುಹಿಸಿದ ಪ್ರಸ್ತಾಪವನ್ನು ಜಾರಿಗೆ ತರಲು ಉನ್ನತ ಮಟ್ಟದ ಸಮಿತಿ, ಅಧಿಕಾರಿಗಳ ನೇತೃತ್ವದಲ್ಲಿ ಕೆಲಸ ಮಾಡಲಾಗುವುದು. ಪ್ರಸ್ತಾಪವನ್ನು ಹೊರತುಪಡಿಸಿ ಸದ್ಯಕ್ಕೆ ಹೊಸದೇನೂ ಇಲ್ಲ.

ನಗರಕ್ಕೆ ಕುಡಿಯುವ ನೀರು ಸದ್ಯಕ್ಕೆ ಇದ್ದರೂ, ಭವಿಷ್ಯದಲ್ಲಿ ಸಮಸ್ಯೆಯಾಗದಂತೆ ಏನು ಮಾಡುತ್ತೀರಿ?
ಮೊದಲಿಗೆ ತುಂಬೆ ಡ್ಯಾಂನ ನೀರಿನ ಇರುವಿಕೆಯ ಬಗ್ಗೆ ಅಧಿಕಾರಿಗಳಿಂದ ಸ್ಥಳ ಸಮೀಕ್ಷೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಪ್ರತಿ ದಿನ ನೀರು ಕೊಡಲಾಗುತ್ತಿದೆ. ಒಂದು ವೇಳೆ ಸಮಸ್ಯೆ ಎದುರಾದರೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲು ಯೋಚಿಸಲಾಗುವುದು. ಅಂತೂ ಜನರಿಗೆ ಈ ಬಾರಿ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಮಳೆಕೊಯ್ಲು, ಕೆರೆಗಳ ಅಭಿವೃದ್ಧಿಗೆ ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.

ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪವಿದೆ. ಇದಕ್ಕೇನು ಮಾಡುತ್ತೀರಿ? 
ಹೌದು. ಇದನ್ನು ಬಗೆಹರಿಸಲು ಕೋಳಿ ತ್ಯಾಜ್ಯ ಹಾಗೂ ಸೀಯಾಳ ತ್ಯಾಜ್ಯವನ್ನು ಬೇರೆ ಬೇರೆಯಾಗಿ ವಿಂಗಡಿಸಿ ನಿರ್ವಹಿಸಲಾಗುವುದು. ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷಳಾಗಿ ಕಾರ್ಯ ನಿರ್ವಹಿಸಿದ ಅನುಭವದಲ್ಲಿ ತ್ಯಾಜ್ಯ ನಿರ್ವಹಣೆಗೆ ವಿಶೇಷ ಗಮನ ನೀಡಲಾ ಗುವುದು. ಪ್ರತಿ ದಿನ ಮನೆ ಮನೆಯಿಂದ ಕಸ ಸಂಗ್ರಹಕ್ಕೆ ಗಮನ ಕೊಡಲಾಗುವುದು.

Advertisement

ಈಗಿನ ತ್ಯಾಜ್ಯ ನಿರ್ವಹಣೆಯ ಮಾದರಿಯನ್ನು ಕೈಬಿಟ್ಟು, ಹಿಂದಿನ ರೀತಿಯಲ್ಲಿ ಕಸ ಸಂಗ್ರಹ ಮಾಡಲಾಗುವುದೆಂಬ ಮಾತು ಕೇಳಿಬರುತ್ತಿದೆಯಲ್ಲ?
ಈ ಬಗ್ಗೆ ನಮ್ಮ ಶಾಸಕರು, ಕಾರ್ಪೊರೇಟರ್‌ಗಳ ಜತೆಗೆ ಮಾತನಾಡಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು.

ಬಹುನಿರೀಕ್ಷಿತ ಪಂಪ್‌ವೆಲ್‌ ಬಸ್‌ನಿಲ್ದಾಣ ಕನಸು ಈ ಬಾರಿಯಾದರೂ ನನಸಾಗುವುದೇ?
ಬಸ್‌ ನಿಲ್ದಾಣಕ್ಕೆ ಜಾಗ ಕೊಡುವುದಾ? ಅಥವಾ ಬೇಡವಾ? ಎಂಬುದು ಸ್ಪಷ್ಟವಾಗಬೇಕಿದೆ. ಯಾಕೆಂದರೆ ಎರಡು ವರ್ಷದಿಂದ ಜಾಗ ಖರೀದಿ ಮಾಡುವುದೇ ಬೇಡವೇ ಎಂಬುದಕ್ಕೆ ಸ್ಪಷ್ಟತೆಯೇ ದೊರಕುತ್ತಿಲ್ಲ. ಹೀಗಾಗಿ ಶಾಸಕರು, ಕಾರ್ಪೊರೇಟರ್‌ಗಳ ಉಪಸ್ಥಿತಿಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.

ನಗರದ ಮುಖ್ಯ ಸಮಸ್ಯೆ ವಾಹನ ದಟ್ಟಣೆ. ಈ ಒತ್ತಡ ಕಡಿಮೆ ಮಾಡಲು ನಿಮ್ಮ ಆಲೋಚನೆ?
ನಿಜಕ್ಕೂ ಇದು ನಗರದ ಬಹುದೊಡ್ಡ ಸಮಸ್ಯೆ. ಇದಕ್ಕಾಗಿ ಶೀಘ್ರವೇ ಟ್ರಾಫಿಕ್‌ ಪೊಲೀಸರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಿ ಮಾರ್ಗೋಪಾಯ ಹುಡುಕಲಾಗುವುದು.

ಫುಟ್‌ಪಾತ್‌ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೀರಿ?
ನಗರದ ಹಲವೆಡೆ ರಸ್ತೆಯಲ್ಲೇ ನಡೆದು ಹೋಗುವ ಪರಿಸ್ಥಿತಿ ಇದೆ. ಜನರಿಗೆ ಬಹುಮುಖ್ಯವಾಗಿ ಬೇಕಾಗಿರುವ ಫುಟ್‌ಪಾತ್‌ ನಿರ್ಮಾಣಕ್ಕೆ ಆದ್ಯತೆ ಕೊಡಲಾಗುವುದು.

ಪುರಭವನದ ಬಾಡಿಗೆ ಹೆಚ್ಚಾಗಿದೆ ಎಂಬ ಕಲಾವಿದರ ನೋವಿಗೆ ಸ್ಪಂದಿಸುತ್ತೀರಾ?
ಇದರ ಬಗ್ಗೆ ಪರಿಶೀಲಿಸಲಾಗುವುದು. ಬಾಡಿಗೆ ಕಡಿಮೆ ಮಾಡಲು ಸಾಧ್ಯವಿದ್ದರೆ ಕ್ರಮ ಕೈಗೊಳ್ಳಲಾಗುವುದು. ನನ್ನ ಅವಧಿಯಲ್ಲಿ ಯಾರಿಗೂ ಅನ್ಯಾಯ ಆಗದಂತೆ ಎಚ್ಚರ ವಹಿಸುವೆ.

ಆದಾಯ ಸಂಗ್ರಹಕ್ಕೆ ಪಾಲಿಕೆ ಒತ್ತು ನೀಡಿದರೂ, ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹ ಆಗುತ್ತಿಲ್ಲ ಎಂಬ ಅಪವಾದವಿದೆ. ಯಾವ ಕ್ರಮ ಜರಗಿಸುತ್ತೀರಿ?
ಆದಾಯ ಸಂಗ್ರಹಕ್ಕೆ ವಿಶೇಷ ಒತ್ತು ನೀಡಬೇಕಿದೆ. ಪಾಲಿಕೆ ಆದಾಯದಲ್ಲಿ ಯಾವುದೇ ಸೋರಿಕೆ ಆಗದಂತೆ ನೋಡಿಕೊಳ್ಳಬೇಕಿದೆ. ಟ್ರೇಡ್‌ ಲೈಸೆನ್ಸ್‌ ನವೀಕರಣ ಸಹಿತ ಆದಾಯ ಸಂಗ್ರಹಕ್ಕೆ ನಾನು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆಯಾಗಿದ್ದಾಗ ಅಂಗಡಿಗಳಿಗೆ ದಾಳಿ ಮಾಡಲಾಗುತ್ತಿತ್ತು. ಇದನ್ನು ಮುಂದುವರಿಸಲಾಗುವುದು. ತೆರಿಗೆ ಪಾವತಿಸದವರ ವಿರುದ್ದ ಕಠಿನ ಕಾನೂನು ಕ್ರಮ ಜರಗಿಸಲಾಗುವುದು.

ವಿರೋಧ ರಾಜಕೀಯದಲ್ಲಿ ಸಹಜ. ಎಲ್ಲ ಪಕ್ಷದಲ್ಲೂ ಇದ್ದದ್ದೇ. ಹಾಗೆಯೇ ಆಕಾಂಕ್ಷಿಗಳ ಪಟ್ಟಿಯೂ ಸಹಜ. ಆದರೆ ಪಕ್ಷದ ನಿಯಮದಂತೆ ಹಿರಿಯ ನಾಯಕರ ಮತ್ತು ಕಾರ್ಪೊರೇಟರ್‌ಗಳ ನೇತೃತ್ವದಲ್ಲಿ ನಡೆದ ಆಂತರಿಕ ಮತದಾನದಲ್ಲಿ ನಾನು ಆಯ್ಕೆಯಾಗಿದ್ದೇನೆ.

ಸುರತ್ಕಲ್‌ನಲ್ಲೊಂದು ‘ಪುರಭವನ’ 
ಸುರತ್ಕಲ್‌ನಲ್ಲಿ ಸೂಕ್ತ ಸ್ಥಳವೊಂದು ಯಾವುದೇ ತಕರಾರು ಇಲ್ಲದೆ ದೊರೆತರೆ, ಪುರಭವನ ನಿರ್ಮಿಸುವ ಯೋಚನೆ ಇದೆ. ಮಂಗಳೂರು ಪುರಭವನದ ಹಾಗೆ ಆ ವ್ಯಾಪ್ತಿಯವರಿಗೆ ಕಾರ್ಯಚಟುವಟಿಕೆ ನಡೆಸಲು ಅನುಕೂಲವಾಗಲಿದೆ. ಅದೇ ರೀತಿ ಪಾಲಿಕೆ ವ್ಯಾಪ್ತಿಯ ನಿರ್ದಿಷ್ಟ ಸ್ಥಳಗಳನ್ನು ಸ್ಪಷ್ಟವಾಗಿ ಗುರುತಿಸುವಂತಹ ಹಾಗೂ ಜನರಿಗೆ ಸುಲಭವಾಗುವ ನೆಲೆಯಲ್ಲಿ ನಾಮಫಲಕಗಳನ್ನು ಅಳವಡಿಸಲು ಗಮನನೀಡಲಾಗುವುದು.

ಸಮಗ್ರ ಅಭಿವೃದ್ಧಿಗೆ ಆದ್ಯತೆ
ಆಂತರಿಕ ಮತದಾನದ ಮೂಲಕ ನಾನೇ ಗೆದ್ದಿದ್ದೇನೆ. ಹೀಗಾಗಿ ವಿರೋಧದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇವತ್ತಿಗೆ ಅದೆಲ್ಲ ಮುಗಿದ ಅಧ್ಯಾಯ. ಇನ್ನೇನಿದ್ದರೂ ಮಂಗಳೂರಿನ ಸಮಗ್ರ ಅಭಿವೃದ್ಧಿ ಮಾತ್ರ ನನ್ನ ಮಾನದಂಡ. ನನ್ನನ್ನು ವಿರೋಧಿಸಿದವರೂ ಸಹಿತ ಎಲ್ಲ ಪಕ್ಷಗಳ ಸದಸ್ಯರನ್ನು ಒಂದೇ ರೀತಿಯಲ್ಲಿ ಪರಿಗಣಿಸಿ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು.

– ದಿನೇಶ್‌ ಇರಾ
– ಚಿತ್ರ- ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next