Advertisement

ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಗೆ ಡಾ|ಸುದರ್ಶನ ಬಲ್ಲಾಳ ಆಯ್ಕೆ

08:05 PM Mar 12, 2021 | Team Udayavani |

ಬಾಳೆಹೊನ್ನೂರು : ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಿಂದ ಪ್ರತಿ ವರ್ಷ ಕೊಡಲ್ಪಡುವ ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿಗೆ ಈ ವರ್ಷ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗಳ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಸುದರ್ಶನ ಬಲ್ಲಾಳ ಭಾಜನರಾಗಿದ್ದಾರೆ.

Advertisement

ಪ್ರಶಸ್ತಿ ಒಂದು ಲಕ್ಷ ರೂ. ನಗದು, ಕಂಚಿನ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಮಾ.26ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಶ್ರೀಮದ್‌ ರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ| ಸುದರ್ಶನ ಬಲ್ಲಾಳ ಅವರುಮೂಲತಃ ಉಡುಪಿ ಜಿಲ್ಲೆ ಹೆಬ್ರಿಯವರು. ತಂದೆ ಬೇಲಂಜೆ ಸಂಜೀವ ಹೆಗಡೆ, ತಾಯಿ ಪ್ರಫುಲ್ಲಾ ಹೆಗಡೆ. ಜಮೀನಾªರ ಹಾಗೂ ವ್ಯಾಪಾರಸ್ಥ ಮನೆತನದಲ್ಲಿ ಡಾ| ಬಲ್ಲಾಳವರು 15-09-1954 ರಲ್ಲಿ ಜನಿಸಿದರು. ಹೆಬ್ರಿಯಲ್ಲಿ ಪ್ರಾಥಮಿಕ, ಪ್ರೌಢ ಅಧ್ಯಯನ ನಡೆಸಿ ಎಂ.ಬಿ.ಬಿ.ಎಸ್‌ ಮತ್ತು ಎಂ.ಡಿ ಪದವಿಗಳನ್ನು ಬಂಗಾರ ಪದಕಗಳೊಡನೆ ಮತ್ತು ಬ್ಲೂರಿಬ್ಬನ್‌ ಪ್ರಶಸ್ತಿಯೊಂದಿಗೆ ಮಣಿಪಾಲ್‌ ವೈದ್ಯಕೀಯ ಮಹಾವಿದ್ಯಾಲಯದಿಂದ ಉತ್ತೀರ್ಣರಾದರು. ನಂತರ ಅಮೆರಿಕಾದಲ್ಲಿ ವ್ಯಾಸಂಗ ಮುಂದುವರಿಸಿ ಅಮೆರಿಕದ ಟ್ರಿಪಲ್‌ ಬೋರ್ಡ್‌ನಿಂದ ಇಂಟರ್‌ನಲ್‌ ಮೆಡಿಸಿನ್‌, ನೆಪೋಲಾಜಿ ರೋಗಗಳಿಗೆ ಸಂಬಂಧಪಟ್ಟ ವಿಜ್ಞಾನ ಮತ್ತು ತುರ್ತುಚಿಕಿತ್ಸೆ ವಿಜ್ಞಾನಗಳಲ್ಲಿ ಪರಿಣಿತರಾಗಿ ತೇರ್ಗಡೆ ಹೊಂದಿದರು.

ನಂತರ ಅಮೆರಿಕಾದ ಸೇಂಟ್‌ ಲೂಯಿಸ್‌ ವಿಶ್ವವಿದ್ಯಾಲಯದ ವೈದ್ಯಕೀಯ ಶಾಸ್ತ್ರದಲ್ಲಿ ಮೂತ್ರಪಿಂಡ ಮತ್ತು ಮೂತ್ರಪಿಂಡದ ಕಸಿಯಲ್ಲಿ ಪರಿಣಿತ ವೈದ್ಯರಾದರು. ಅದೇ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದರು. ಡಾ| ಬಲ್ಲಾಳರು ಮುಂದೆ ತಾಯ್ನಾಡಿಗೆ ಮರಳಿ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಗೊಂಡರು. ಇವರ ಸೇವೆಯನ್ನು ಗಮನಿಸಿ ಬ್ರಿಟಿಷ್‌ ಸರ್ಕಾರ ಫೆಲೋ ಆಫ್‌ ರಾಯಲ್‌ ಕಾಲೇಜ್‌ ಆಫ್‌ ಯುಜಿಸಿಯನ್ಸ್‌ ಎಂಬ ಫೆಲೊಶಿಪ್‌ನಿಂದ ಗೌರವಿಸಿತು. ಇದು ಭಾರತೀಯ ವೈದ್ಯ ಜಗತ್ತಿಗೆ ಸಂದ ಗೌರವವೆಂದೇ ಹೇಳಬಹುದಾಗಿದೆ.

ಮಣಿಪಾಲ್‌ ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾದ ಡಾ| ಬಲ್ಲಾಳರು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗಳ ಸಮೂಹ ಮತ್ತು ಸಂಶೋಧನಾ ಕೇಂದ್ರಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಉತ್ಕೃಷ್ಟ ಶಿಕ್ಷಕರು, ಸಂಶೋಧಕರು, ವೈದ್ಯರಾಗಿ ರೋಗಿಗಳಿಗೆ ತೋರುವ ಅನುಕಂಪ ಇತರರಿಗೆ ಮಾದರಿಯಾಗಿದೆ. ಡಾ| ಬಲ್ಲಾಳರು ಸಮಾಜಕ್ಕೆ ಸಲ್ಲಿಸಿದ ಸರ್ವತೋಮುಖ ಸೇವೆಗಾಗಿ ಹಲವು ಪ್ರಶಸ್ತಿ- ಇವರನ್ನು ಅರಸಿ ಬಂದಿವೆ. 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ಆರ್ಯಭಟ ಇಂಟರ್‌ನ್ಯಾಷನಲ್‌ ಅವಾರ್ಡ್‌, 2010ರಲ್ಲಿ ಡಾ| ಬಿ.ಸಿ.ರಾಯ್‌ ಪ್ರಶಸ್ತಿ, 2017ರಲ್ಲಿ ದೂರದರ್ಶನ ಚಂದನ ಪ್ರಶಸ್ತಿ ಹಾಗೂ 2018ರಲ್ಲಿ ಜೀವಮಾನ ಶ್ರೇಷ್ಠ ಪ್ರಶಸ್ತಿ ಸೇರಿದಂತೆ 15ಕ್ಕೂ ಹೆಚ್ಚು ಪ್ರಶಸ್ತಿಗೆ ಭಾಜನರಾಗಿದ್ದು ಶ್ಲಾಘನೀಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next