Advertisement

ಕೇಂದ್ರದಿಂದ ವಿವಿಧ ಯೋಜನೆಗಳ ಅನುದಾನ ಕಡಿತ: ಕೃಷ್ಣ ಭೈರೇಗೌಡ

06:00 AM Jun 13, 2018 | Team Udayavani |

ಬೆಂಗಳೂರು: ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ ಕಡಿಮೆ ಮಾಡಿರುವುದು ಮತ್ತು ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಕ್ಕೆ 1,054 ಕೋ. ರೂ. ಬಾಕಿ ಉಳಿಸಿಕೊಂಡಿರುವ ಬಗ್ಗೆ ಕೇಂದ್ರದ ವಿರುದ್ಧ ಕಿಡಿ ಕಾರಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಭೈರೇಗೌಡ, ಕೇಂದ್ರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಸರಕಾರ ಅನುದಾನ ಕಡಿಮೆ ಮಾಡಿಕೊಂಡೇ ಬಂದಿದೆ. 2013ರಲ್ಲಿ ರಾಜ್ಯದ ಪಾಲು 868 ಕೋ. ರೂ. ಇದ್ದರೆ, ಕೇಂದ್ರದ ಪಾಲು 960 ಕೋ. ರೂ. ಇತ್ತು. ಆದರೆ 2017-18ರಲ್ಲಿ ಕೇಂದ್ರದ ಪಾಲು 290 ಕೋ.ರೂ. ಆಗಿದ್ದು, ರಾಜ್ಯದ ಪಾಲು 2,094 ಕೋ. ರೂ.ಗಳಾಗಿದ್ದು, 3 ವರ್ಷಗಳಲ್ಲಿ ಶೇ. 50-50ರಷ್ಟಿದ್ದ ಪಾಲು ಈಗ ಕೇಂದ್ರದಿಂದ ಶೇ. 12 ಮತ್ತು ರಾಜ್ಯದಿಂದ ಶೇ. 88ಕ್ಕೆ ಬಂದಿದೆ ಎಂದು ಹೇಳಿದರು.

ಅದೇ ರೀತಿ ಉದ್ಯೋಗ ಖಾತರಿ ಯೋಜನೆಯಲ್ಲೂ ಕೇಂದ್ರ ರಾಜ್ಯಕ್ಕೆ 1,054 ಕೋ. ರೂ. ಬಾಕಿ ಉಳಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಸಾಲಗಾರನಾಗಿದೆ. ಈ ಕುರಿತು ಪತ್ರ ಬರೆದು ಹಣ ಬಿಡುಗಡೆಗೆ ಕೋರಿದರೂ ಕೇಂದ್ರದಿಂದ ಪ್ರತಿಕ್ರಿಯೆ ಇಲ್ಲ ಎಂದು ಆರೋಪಿಸಿದ ಅವರು, ಶೀಘ್ರವೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಕೇಂದ್ರವನ್ನು ಆಗ್ರಹಿಸಿದರು. ಆನ್‌ಲೈನ್‌ ಮಾನಿಟರಿಂಗ್‌ ವ್ಯವಸ್ಥೆ ರಾಜ್ಯದ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳ ಆನ್‌ಲೈನ್‌ ಮಾನಿಟರಿಂಗ್‌ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next