Advertisement

ಸಬ್‌ ಅರ್ಬನ್‌ ಶುರುವಾತಿಗೆ ಸಕಾಲ!

12:24 PM Dec 12, 2017 | Team Udayavani |

ಬೆಂಗಳೂರು: ಚುನಾವಣೆ ಹತ್ತಿರಾಗುತ್ತಿರುವ ಕಾರಣ ಈಗ ಕಾಮಗಾರಿಗಳ ಪರ್ವ. ನಮ್ಮ ಮೆಟ್ರೋ, ವೈಟ್‌ಟಾಪಿಂಗ್‌, ಸಿಗ್ನಲ್‌ ಫ್ರೀ ಕಾರಿಡಾರ್‌, ಮೇಲ್ಸೇತುವೆ ಸೇರಿ ಹತ್ತಾರು ಅಭಿವೃದ್ಧಿ ಕೆಲಸಗಳು ನಗರದ ಮೂಲೆ ಮೂಲೆಯನ್ನೂ ಆವರಿಸಿವೆ. ಹೀಗೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಹೀಗಾಗಿ ಟ್ರಾಫಿಕ್‌ ಕಿರಿಕಿರಿ ಅನುಭವಿಸುತ್ತಿರುವ ಜನರಿಗೆ ತಕ್ಷಣವೇ ಪರ್ಯಾಯ ಕಲ್ಪಿಸಲು ಒಂದು ಅವಕಾಶವಿದೆ. ಅದುವೇ ಉಪನಗರ ರೈಲು ಸೇವೆ.

Advertisement

ಹೌದು, ಸಬ್‌ ಅರ್ಬನ್‌ ರೈಲು ಸೇವೆ ವಿಸ್ತರಣೆಗೆ ಇದು ಸಕಾಲ. ರೈಲ್ವೆ ಅಧಿಕಾರಿಗಳು ಮನಸು ಮಾಡಿದರೆ, ತಕ್ಷಣದಿಂದಲೇ 8ರಿಂದ 10 ಉಪನಗರ ರೈಲುಗಳ ಸೇವೆ ಆರಂಭಿಸಬಹುದು. ಇದಕ್ಕೆ ಅಗತ್ಯ ಸೌಕರ್ಯಗಳೂ ಇವೆ. ವೈಟ್‌ಫೀಲ್ಡ್‌ ಸೇರಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳಿಗೆ ಇದು ಪರಿಹಾರವಾಗಬಲ್ಲದು ಎಂಬುದು ರೈಲ್ವೆ ಹೋರಾಟಗಾರರ ವೇದಿಕೆ ಅಭಿಪ್ರಾಯ.

ಈಗಾಗಲೇ ಬಹುನಿರೀಕ್ಷಿತ ಬೆಂಗಳೂರು-ಮೈಸೂರು ರೈಲು ಮಾರ್ಗಗಳ ವಿದ್ಯುದೀಕರಣ ಮುಗಿದಿದೆ. ಹೆಚ್ಚುವರಿ ಬೋಗಿಗಳು ಬಂದಿರುವ ಕಾರಣ ಬೋಗಿಗಳ ಕೊರತೆಯಿಲ್ಲ. ಪ್ರತ್ಯೇಕ ಸಬ್‌ ಅರ್ಬನ್‌ ಟರ್ಮಿನಲ್‌ ಪ್ಲಾಟ್‌ಫಾರಂ ಕೂಡ ಸಿದ್ಧವಿದೆ. ಈ ಅವಕಾಶಗಳ ಬಳಸಿಕೊಂಡು ರೈಲುಗಳ ಸೇವೆ ಹೆಚ್ಚಿಸಿದರೆ ಲಕ್ಷಾಂತರ ಜನರಿಗೆ ಅನುಕೂಲವಿದೆ.

ಪರ್ಯಾಯಗಳಿವು: ಚೆನ್ನೈ-ಮೈಸೂರು ಶತಾಬ್ದಿ, ಚೆನ್ನೈ-ಮೈಸೂರು ಕಾವೇರಿ ಎಕ್ಸ್‌ಪ್ರೆಸ್‌, ತಿರುಪತಿ-ಮೈಸೂರು ಪ್ಯಾಸೆಂಜರ್‌ ಸೇರಿ ನಿತ್ಯ ವೈಟ್‌ಫೀಲ್ಡ್‌ ಮಾರ್ಗವಾಗಿ ನಾಲ್ಕೈದು ರೈಲುಗಳು ನಗರಕ್ಕೆ ಬರುತ್ತವೆ. ಎಲೆಕ್ಟ್ರಿಕ್‌ ಎಂಜಿನ್‌ ಹೊಂದಿರುವ ಈ ರೈಲುಗಳು ಮೈಸೂರಿಗೆ ತೆರಳುವಾಗ ಬೆಂಗಳೂರಿನಲ್ಲಿ ಡೀಸೆಲ್‌ ಎಂಜಿನ್‌ಗೆ ಪರಿವರ್ತನೆ ಆಗಲು ಒಂದೊಂದು ರೈಲು ಕನಿಷ್ಠ ಅರ್ಧಗಂಟೆ ಕಾಯಬೇಕಿತ್ತು.

ಪ್ರಸ್ತುತ ಮೈಸೂರು ಮಾರ್ಗ ವಿದ್ಯುದೀಕರಣಗೊಂಡಿರುವ ಕಾರಣ ಆ ಕಿರಿಕಿರಿ ಇಲ್ಲ. ಇದಕ್ಕೆ ಪೂರಕವಾಗಿ ಹಾಲಿ ಇರುವ ಮೆಮು ಬೋಗಿಗಳನ್ನು ಬಳಸಿಕೊಂಡು, ವೈಟ್‌ಫೀಲ್ಡ್‌ಗೆ ಮೆಮು ರೈಲು ಸೇವೆ ಹೆಚ್ಚಿಸಲು ಅವಕಾಶವಿದೆ. “ವೈಟ್‌ಫೀಲ್ಡ್‌ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾರಣ, ಭಾರಿ ಸಂಚಾರ ದಟ್ಟಣೆಯಾಗುತ್ತಿದ್ದು, ರೈಲು ಸೇವೆ ವಿಸ್ತರಿಸುವ ಅಗತ್ಯವಿದೆ. ಪ್ರಸ್ತುತ ಈ ಮಾರ್ಗದಲ್ಲಿ ಎಂಟು ರೈಲುಗಳ ಸೇವೆಯಿದೆ,’  ಎಂದು ಪ್ರಜಾ ರಾಗ್‌ ಸದಸ್ಯ ಸಂಜೀವ ದ್ಯಾಮಣ್ಣವರ ತಿಳಿಸುತ್ತಾರೆ.

Advertisement

ಸೇವೆ ವಿಸ್ತರಣೆಗೆ ಒತ್ತಾಯ: “ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ಲಾಟ್‌ಫಾರಂನಲ್ಲಿ ನಿಲ್ಲುವ ಬೆಂಗಳೂರು-ಹಿಂದೂಪುರ ರೈಲಿನ ಬೋಗಿಗಳನ್ನು ಬೆಂಗಳೂರು-ರಾಮನಗರ-ಚನ್ನಪಟ್ಟಣಕ್ಕೆ ವಿಸ್ತರಿಸಬಹುದು. ಈ ಮಾರ್ಗದಲ್ಲೂ ಮೆಟ್ರೋ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಹೆಚ್ಚುವರಿ ರೈಲು ಸೇವೆಯಿಂದ ಟ್ರಾಫಿಕ್‌ ಕಿರಿಕಿರಿ ತಪ್ಪುತ್ತದೆ,’ ಎನ್ನುತ್ತಾರೆ ದ್ಯಾಮಣ್ಣವರ.

ಮೈಸೂರಿಗೆ ವಿಸ್ತರಣೆ?: “ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಪ್ಯಾಸೆಂಜರ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳನ್ನು ಎಲೆಕ್ಟ್ರಿಕ್‌ ರೈಲುಗಳಾಗಿ ಪರಿವರ್ತಿಸುವುದು ನಮ್ಮ ಮೊದಲ ಆದ್ಯತೆ. ಬೆಂಗಳೂರು-ರಾಮನಗರ ನಡುವೆ ಇರುವ ಉಪನಗರ ರೈಲು ಸೇವೆಯನ್ನು ಮೈಸೂರಿನವರೆಗೆ ವಿಸ್ತರಿಸುವ ಚಿಂತನೆ ಇದೆ. ಈಚೆಗೆ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನಡುವೆ ಈಚೆಗೆ ಒಂದು ರೈಲು ಸೇವೆ ಆರಂಭಿಸಿದ್ದು, ಇದರ ಪ್ರಗತಿ ಗಮನಿಸಿ ಹಂತ ಹಂತವಾಗಿ ಸೇವೆ ವಿಸ್ತರಿಸುವುದಾಗಿ ನೈರುತ್ಯ ರೈಲ್ವೆ ಉಪ ಪ್ರಧಾನ ವ್ಯವಸ್ಥಾಪಕಿ ಇ. ವಿಜಯಾ ಹೇಳುತ್ತಾರೆ.

ಪ್ರಸ್ತುತ ಸೇವೆಗಳು: ಪ್ರಸ್ತುತ ಬೆಂಗಳೂರಿನಿಂದ ತುಮಕೂರಿಗೆ 3, ಹೊಸೂರಿಗೆ 3, ವೈಟ್‌ಫೀಲ್ಡ್‌ಗೆ 8, ರಾಮನಗರಕ್ಕೆ 4 ರೈಲುಗಳ ಸೇವೆ ಲಭ್ಯವಿದೆ. ಬೆಳಗಿನಜಾವ ಬೆಂಗಳೂರಿನಿಂದ ಮತ್ತು ತಡರಾತ್ರಿ ರಾಮನಗರದಿಂದ ಕಾರ್ಯಾಚರಣೆ ಮಾಡುವ ರೈಲಿಗೆ ಅಷ್ಟೇನೂ ಬೇಡಿಕೆಯಿಲ್ಲ. ಹಾಗೇ ತುಮಕೂರು-ಬೆಂಗಳೂರು ನಡುವೆ ಸಂಜೆ 6ರ ನಂತರ ರೈಲು ಸೇವೆಯೇ ಇಲ್ಲ. 

ಫ‌ಲನೀಡಿದ ಒಪ್ಪಂದ: ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ನಡುವೆ 2017ರ ಜನವರಿಯಲ್ಲಿ ಬೋಗಿಗಳ ಖರೀದಿ, ಸಿಗ್ನಲ್‌ಗ‌ಳನ್ನು ಮೇಲ್ದರ್ಜೆಗೇರಿಸುವುದೂ ಸೇರಿ ಹಲವು ಯೋಜನೆಗಳ ಅನುಷ್ಠಾನಕ್ಕೆ ಒಪ್ಪಂದವಾಗಿತ್ತು. ಈ ಒಪ್ಪಂದದಡಿ ಈಗಾಗಲೇ ಬೋಗಿಗಳ ಖರೀದಿ ಆಗಿದೆ.

ಇದಕ್ಕೆ ರಾಜ್ಯ ಸರ್ಕಾರ ರೈಲ್ವೆ ಇಲಾಖೆಯಲ್ಲಿ ಹಣ ಠೇವಣಿ ಇಡಲಿದ್ದು, ಪ್ರತಿಯಾಗಿ ಬೋಗಿಗಳನ್ನು ತಯಾರಿಸುವುದು, ಸೇವೆ, ಪ್ರಯಾಣ ದರ, ಅದರಿಂದಾಗಬಹುದಾದ ಲಾಭ-ನಷ್ಟ ಸೇರಿದಂತೆ ಎಲ್ಲವನ್ನೂ ರೈಲ್ವೆ ಇಲಾಖೆ ನೋಡಿಕೊಳ್ಳುತ್ತದೆ. ಪ್ರಸ್ತುತ ಎರಡು ತಿಂಗಳಲ್ಲಿ 3 ಬೋಗಿಗಳ ಖರೀದಿಯಾಗಿದೆ.

ಹಾಗೇ ಒಡಂಬಡಿಕೆ ಭಾಗವಾಗಿ ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ವೈಟ್‌ಫೀಲ್ಡ್‌ ನಡುವಿನ ಸಿಗ್ನಲ್‌ಗ‌ಳ ಅಟೋಮೇಷನ್‌ ಕಾರ್ಯ ಚುರುಕಾಗಬೇಕು ಎಂಬ ಒತ್ತಾಯ ರೈಲ್ವೆ ಹೋರಾಟಗಾರರಿಂದ ಕೇಳಿಬರುತ್ತಿದೆ. ಈ ಮಧ್ಯೆ ಉಪನಗರ ರೈಲು ಯೋಜನೆ ಸಂಬಂಧ ಎಸ್‌ಪಿವಿ (ವಿಶೇಷ ಉದ್ದೇಶ ವಾಹನ) ಸ್ಥಾಪನೆಯು ಪಾಲುದಾರಿಕೆ ಗೊಂದಲದಿಂದ ನೆನೆಗುದಿಗೆ ಬಿದ್ದಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next