Advertisement

ರೋಚಕ ಜಗತ್ತಿನ ಕನ್ನಡತಿ ಸುಭದ್ರಾಮಾತಾ

01:55 AM Feb 05, 2021 | Team Udayavani |

ಉತ್ತರ ಭಾರತದ ಗಂಗೋತ್ರಿಯಿಂದ ಗೋಮುಖಕ್ಕೆ 19 ಕಿ.ಮೀ. ದೂರ ಇದೆ. ಗೋಮುಖದಿಂದ ಸುಮಾರು 2,000 ಅಡಿ, ಸಮುದ್ರ ಮಟ್ಟದಿಂದ 14,640 ಅಡಿ ಎತ್ತರದಲ್ಲಿರುವ ತಪೋವನದ ಗುಹೆಗೆ ಪ್ರವಾಸಿಗರು ಹೋಗುವುದು ಕೆಲವೇ ತಿಂಗಳು. ಜುಲೈಯಿಂದ ಆಗಸ್ಟ್‌, ಸೆಪ್ಟಂಬರ್‌ವರೆಗೆ ಹಿಮಕರಗಿ ನೆಲ ತೋರುತ್ತದೆ. ಅದು ಬಿಟ್ಟರೆ ಸದಾ ಹಿಮಪಾತ. ಈ ತಪೋವನದ ಗುಹೆಯಲ್ಲಿ 9 ವರ್ಷ ಇದ್ದು ತಪಸ್ಸು ಮಾಡಿದ ಸಾಧಕಿ ತಪೋವನಿ ಮಾತಾ ಎಂದು ಉತ್ತರ ಭಾರತದಲ್ಲಿ ಪ್ರಸಿದ್ಧರಾದರು. ಇವರಿಗೆ ತಂದೆ ತಾಯಿ ಇಟ್ಟ ಹೆಸರು ವಾರಿಜಾಕ್ಷಿ, ಆಧ್ಯಾತ್ಮಿಕ ಮಂತ್ರೋಪದೇಶ ನೀಡಿದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಕೊಟ್ಟ ಹೆಸರು ಸುಭದ್ರಾ. ಹಿಮಾಲಯದ ಪ್ರದೇಶದಲ್ಲಿ ರೋಚಕ ಕಥೆಯನ್ನೇ ಕಟ್ಟಿಕೊಟ್ಟ ಸುಭದ್ರಾ ಮಾತಾ ಇನ್ನು ಕೇವಲ ನೆನಪು ಮಾತ್ರ…

Advertisement

1930ರ ದಶಕದಲ್ಲಿ ಆದಿಉಡುಪಿ ಪಂದು ಬೆಟ್ಟುವಿನಲ್ಲಿ ಆದಿಉಡುಪಿ ಶಾಲೆಯ ಶಿಕ್ಷಕರಾಗಿ, ತಾಳಮದ್ದಲೆ ಅರ್ಥಧಾರಿಗಳಾಗಿದ್ದ ಶೀನಪ್ಪ ಶೆಟ್ಟಿ ಮತ್ತು ಸುಂದರಿ ದಂಪತಿಯ ಮೊದಲ ಮಗಳಾಗಿ ಜನಿಸಿದ ವಾರಿಜಾಕ್ಷಿ ಈ ಮಟ್ಟಕ್ಕೆ ಬೆಳೆದವರು. ಆದಿಉಡುಪಿ ಶಾಲೆಯಲ್ಲಿ ಓದುವಾಗ ಮುಖ್ಯ ಶಿಕ್ಷಕರಾಗಿದ್ದ ಟಿ.ಕೆ. ಶ್ರೀನಿವಾಸ ರಾಯರಿಗೂ ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದರು. “ಆಕೆ ಕಪಟವರಿಯದವಳು’ ಎಂದು ಕೊನೆಯವರೆಗೂ ರಾವ್‌ ನೆನಪಿಸಿಕೊಳ್ಳುತ್ತಿದ್ದರು.

ವಾರಿಜಾಕ್ಷಿ ಆರಂಭದಿಂದಲೂ ಭಜನೆ, ಹರಿಕಥೆ ಇದ್ದಲ್ಲಿ ಹೋಗಿ ಕಾಲ ಕಳೆಯುತ್ತಿದ್ದರು. ಶ್ರೀಕೃಷ್ಣಮಠ ದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 2ನೇ ಪರ್ಯಾಯದಲ್ಲಿ (1968-69) ಬಂದು ಹೋಗು ತ್ತಿದ್ದರು. ಮಹಾಭಾರತ, ರಾಮಾಯಣಾದಿ ಪ್ರವಚನ ಗಳೂ ಜ್ಞಾನದಾಹ ತಣಿಸುತ್ತಿತ್ತು. ಭಜನೆಯಲ್ಲಿ ಸಕ್ರಿಯ ವಾಗಿದ್ದ ಯಶೋದಮ್ಮನವರ ತಂಡದಲ್ಲಿದ್ದರು. ಯಶೋದಮ್ಮನವರ ಜತೆ ತೀರ್ಥಕ್ಷೇತ್ರ ಪರ್ಯಟನೆ ಮಾಡಿದ್ದರು. ಶ್ರೀಗಳು ಸಂಚರಿಸುವಲ್ಲಿ ತಮ್ಮದೇ ಸ್ವಂತ ಖರ್ಚಿನಲ್ಲಿ ಪ್ರತ್ಯೇಕವಾಗಿ ಹೋಗುತ್ತಿದ್ದರು. ಇದೇ ಸಂದರ್ಭ ಶ್ರೀಪಾದರು ಮಂತ್ರೋಪದೇಶವನ್ನು ನೀಡಿ ಅನುಗ್ರಹಿಸಿದರು.

ಬದರಿ ಆಕರ್ಷಣೆ
1980ರ ದಶಕದ ಆರಂಭದಲ್ಲಿ ಬದರಿ ಕ್ಷೇತ್ರದಲ್ಲಿ ಪೇಜಾವರ ಶ್ರೀಗಳು ಅನಂತಮಠವನ್ನು ಸ್ಥಾಪಿಸಿ ಉದ್ಘಾಟಿಸುವ ಸಂದರ್ಭ ಕರೆದೊಯ್ದ ಭಕ್ತ ವರ್ಗದಲ್ಲಿ ಸುಭದ್ರಾ ಮಾತಾ ಅವರೂ ಇದ್ದರು. ಅಲ್ಲಿಯೇ ಇರುತ್ತೇನೆಂದ ಸುಭದ್ರಾ ಅವರನ್ನು ಒತ್ತಾಯಿಸಿ ಉಡುಪಿಗೆ ಕರೆತಂದರು. ಆಗ ಉಡುಪಿಗೆ ಬಂದದ್ದೇ ಕೊನೆ. ಸುಭದ್ರಾ ಮನೆ ಸಂಪರ್ಕ ಬಿಟ್ಟದ್ದು ಸುಮಾರು 20 ವರ್ಷ ಪ್ರಾಯದಲ್ಲಿ, ಉಡುಪಿ ಬಿಟ್ಟದ್ದು ಸುಮಾರು 40 ವರ್ಷ ಪ್ರಾಯದಲ್ಲಿ. ಬಳಿಕ ಉತ್ತರ ಭಾರತಕ್ಕೆ ಹೋಗಿ ವಿವಿಧೆಡೆಗಳಲ್ಲಿ ಸಂಚರಿಸಿದರು.

ಇವರ ಸಾಧನಾಪಥದ ಹಾದಿಯಲ್ಲಿ ಎದುರಿಸಿದ ಅನುಭವಗಳನ್ನು ಇತ್ತೀಚೆಗೆ ಬಿಡುಗಡೆಗೊಂಡ “ಸಾಧ ನೆಯ ಪ್ರತಿಮೂರ್ತಿ ತಪೋವನೀ ಮಾ- ಕಡಲ ತಡಿಯಿಂದ ಹಿಮಗಿರಿಯ ತನಕ’ ಕನ್ನಡದ ಅವತ ರಣಿಕೆಯಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇವರ ಅಸಾಧ್ಯ ಸಾಧನೆಯನ್ನು ನಾಟಕಕಾರ, ಸಾಹಿತಿ, ಸಾಗರ ಮೂಲದ ಬೆಂಗಳೂರು ನಿವಾಸಿ ಡಾ|ಗಜಾನನ ಶರ್ಮ, ಉಡುಪಿ ಹಿರಿಯಡಕ ಗಾಯತ್ರೀ ಧ್ಯಾನ ಮಂದಿರದ ರಾಜಗೋಪಾಲ ಎಂ. ಗ್ರಂಥಗಳಲ್ಲಿ ಉಲ್ಲೇಖೀಸಿದ್ದಾರೆ.

Advertisement

ಫ್ರೆಂಚ್‌ ಅನುಯಾಯಿ ಸೇವೆ
2000ನೆಯ ಇಸವಿ ಬಳಿಕ ಅವರು ತಪೋವನದಿಂದ ಹಿಂದಿರುಗಿ ಸಮಾಜ ಸೇವೆಗೆ ಜೀವನವನ್ನು ಮುಡಿಪಿಟ್ಟರು. ಮನುಷ್ಯರಾರೂ ಖಾಯಂ ಆಗಿ ಉಳಿದುಕೊಳ್ಳಲಾಗದ ತಪೋವನದಲ್ಲಿ ಸುಭದ್ರಾ ಅವರು ಮಾತ್ರ ಹೇಗೆ ಉಳಿದುಕೊಂಡಿದ್ದರು ಎಂಬ ಕುತೂಹಲದ ವಿಷಯವನ್ನು ಫ್ರಾನ್ಸ್‌ನ ಮೆಲೋನ್‌ ಸ್ಟನ್‌ಕ್ಲೋವ್‌ ಅಲ್ಲಿ ಶಿಲೆಯಲ್ಲಿ ಬರೆಸಿಟ್ಟಿದ್ದಾರೆ. ತಪೋವನದಿಂದ ಹಿಂದಿರುಗಿದ ಬಳಿಕ ಗಂಗೋತ್ರಿ ಬಳಿ ಧರಾಲಿಯಲ್ಲಿ ಒಬ್ಬರು ಆಶ್ರಮ ನಿರ್ಮಿಸಿಕೊಟ್ಟರು. ಅಲ್ಲಿ ಯಾತ್ರಾರ್ಥಿ ಸಾಧುಸಂತರ ಸೇವೆ ಮಾಡಿದರು. ಚಳಿಗಾಲದಲ್ಲಿ ಉಳಿದುಕೊಳ್ಳಲು ಕಷ್ಟವಾದ ಬಳಿಕ ಭಕ್ತರ ಸಹಕಾರದಿಂದ ಉತ್ತರಕಾಶಿಯ ಗಂಗೂರಿಯಲ್ಲಿ ಆಶ್ರಮ ನಿರ್ಮಿಸಿದರು. ಈ ಆಶ್ರಮದಲ್ಲಿ ವೈದ್ಯಕೀಯ ಶಿಬಿರ, ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ.

ವರ್ಷಗಳ ಹಿಂದೆ ಆಡಿದ್ದು, ಕೇಳಿದ್ದು….
ಭಕ್ತಿಗೆ ಕಲಿಯಬೇಕಿಲ್ಲ: ಪೇಜಾವರ ಶ್ರೀಗಳು ಐದನೆಯ ಬಾರಿಗೆ ಪರ್ಯಾಯ ಪೀಠವೇರುವ ಮುನ್ನ (2015ರಲ್ಲಿ) ಅವರು ಹರಿದ್ವಾರದ ಮಠಕ್ಕೆ ಬಂದಾಗ ನಾನು ಮತ್ತು ನಮ್ಮ ಭಕ್ತರು ಹೋಗಿ ನೋಡಿದ್ದೆವು. ನಾನು ಹೆಚ್ಚೇನೂ ಕಲಿಯಲಿಲ್ಲ. ಶಾಲೆಯಲ್ಲಿ ಆರೋ ಏಳ್ಳೋ ತರಗತಿಗೆ ಮಾತ್ರ ಹೋಗಿದ್ದೆ. ಆಗ ಶಾಲೆಯನ್ನು ಬಿಡಬೇಕಾಯಿತು. ದೇವರ ಭಕ್ತಿ ಮಾಡಲು ಕಲಿಯಬೇಕೆಂದಿಲ್ಲವಲ್ಲ ಎಂದು ಸುಭದ್ರಾ ಮಾತಾ ಹೇಳಿದ್ದರು.

ಅಪಾರ ಭಕ್ತಿ
ಗಂಗೂರಿಯಲ್ಲಿ ನಿರ್ಮಿಸಿದ ಆಶ್ರಮಕ್ಕೆ ಹೋಗಿ ಪೂಜೆ ಸಲ್ಲಿಸಿದ್ದೆ. ಹರಿದ್ವಾರದಲ್ಲಿ ನಿರ್ಮಿಸಿದ ಆಶ್ರಮವನ್ನು ನಾವೇ ಉದ್ಘಾಟಿಸಿದ್ದೆವು. ಸುಭದ್ರಾ ಅವರು ಬಹಳ ವರ್ಷ ಎಲ್ಲಿದ್ದರೆಂದೇ ಗೊತ್ತಿರಲಿಲ್ಲ. ಕೊನೆಗೊಂದು ದಿನ ತಪೋವನಕ್ಕೆ ಹೋದ ಉಡುಪಿಯ ಗೌಡ ಸಾರಸ್ವತ ಬ್ರಾಹ್ಮಣರು ಅಲ್ಲಿದ್ದಾರೆಂದು ನಮಗೆ ತಿಳಿಸಿದ್ದರು. ಉತ್ತರ ಭಾರತದಲ್ಲಿ ಅವರಿಗೆ ಒಳ್ಳೆಯ ಹೆಸರು ಇದೆ. ಅವರು ಆರಂಭದಿಂದಲೂ ಸಾಧು ಸ್ವಭಾವದವರು, ದೇವರ ಮೇಲೆ ಅಪಾರ ಭಕ್ತಿ ಇದೆ. ಉತ್ತರ ಭಾರತದವರು ಮಾತ್ರವಲ್ಲದೆ ವಿದೇಶಗಳ ಭಕ್ತರೂ ಇದ್ದಾರೆ ಎಂದು ಪೇಜಾವರ ಶ್ರೀಗಳು ಅಭಿಮಾನ ವ್ಯಕ್ತಪಡಿಸಿದ್ದರು.

ನಮಗೇಕೆ ಪ್ರಚಾರ?
ಹುಟ್ಟಿದ ಮನೆ, ಕಲಿತ ಶಾಲೆ, ಶ್ರೀಕೃಷ್ಣಮಠ- ಪೇಜಾವರ ಮಠ, ಪೂರ್ವಾಶ್ರಮದ ಬಂಧುಗಳು ಹೀಗೆ ತನ್ನ ಹಳೆಯ ನೆನಪುಗಳನ್ನು ಒಂದೊಂದಾಗಿ ನೆನಪಿಸಿಕೊಂಡಿದ್ದರು. “ಹಿಂದೆ ದಿನಚರಿ ಬರೆಯುವ ಪುಸ್ತಕವಿತ್ತು. ಈಗ ಅದಿಲ್ಲ. ಹೀಗಾಗಿ ಇಸವಿಗಳಾವುದೂ ನೆನಪಾಗುತ್ತಿಲ್ಲ. ನನಗೆ ಏಕೆ ಪ್ರಚಾರ’ ಎಂದು ಮಾತಾಜಿ ಪ್ರಶ್ನಿಸಿದ್ದರು.

ಸಂಸಾರ ಇಲ್ಲಿಗೂ ಬಂತೆ?
ನಾನು ಸಂಸಾರವನ್ನು ಬಿಟ್ಟು ಇಷ್ಟು ದೂರಕ್ಕೆ ಬಂದೆ. ಸಂಸಾರ ಇಲ್ಲಿಗೂ ಬಂತಾ? (ತಪೋವನದಲ್ಲಿರುವುದು ಗೊತ್ತಾಗಿ ಮಾತನಾಡಿಸಲು ಹೋದಾಗ ತಮ್ಮನಿಗೆ ಹಾಸ್ಯಮಿಶ್ರಿತವಾಗಿ ಹೇಳಿದ್ದ ಮಾತು.)

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next