Advertisement

ಸುಬ್ಬು-ಶಾಲಿನಿ ಪ್ರಕರಣಂ-11

06:00 AM Jun 10, 2018 | |

ಫ್ಯಾಕ್ಟ್ರಿ ಕ್ಯಾಂಟೀನಿನಲ್ಲಿ ಅಧೋವದನನಾಗಿ ಕುಳಿತಿದ್ದ ಸುಬ್ಬು ಪಕ್ಕ ಹೋಗಿ ಕೂತೆ. 
“”ಜೀವನ ಎಷ್ಟು ಅನಿಶ್ಚಿತ ಅಲ್ವಾ?” ವೇದಾಂತಿಯಾಗಿದ್ದ ಸುಬ್ಬು!
“”ಅತ್ತಿಗೆ ಜೊತೆ ಜಗಳ ಆಡಿದ್ಯಾ?” ಕೇಳಿದರೆ ಉತ್ತರವಿಲ್ಲ.
“”ಕಂಸ ಗೊತ್ತಾ?” ಇದುವರೆಗೂ ತಟ್ಟೆಯಲ್ಲಿ ಖಾಲಿ ಚಮಚವಾಡಿಸುತ್ತಿದ್ದ ಸುಬ್ಬು, ತಟ್ಟೇಗೆ ಅನ್ನ ಬಡಿಸಿಕೊಳ್ಳುತ್ತ ಕೇಳಿದ.

Advertisement

“”ಹೂ… ಕಂಸ, ಕನ್ನಡ ವ್ಯಾಕರಣದಲ್ಲಿದೆ. ಇಂಗ್ಲಿಶ್‌ನಲ್ಲಿ ಅದು ಬ್ರಾಕೆಟ್ಟು”
“”ನಿನ್ನ ತಲೆ! ಆ ಕಂಸ ಅಲ್ಲ. ಮಹಾಭಾರತದ ಕಂಸ. ಶ್ರೀಕೃಷ್ಣನ ಮಾವ ಕಂಸ.”
“”ತೊಲಗು, ನೀನು ಮಿತ್ರನಲ್ಲ ಶತ್ರು!” ಸುಬ್ಬು ಕೋಪ ನೆತ್ತಿಗೆ ಏರಿತ್ತು!
ಸುಬ್ಬು ಸ್ವಭಾವ ನನಗೆ ಹೊಸದಲ್ಲ! ಸುಬ್ಬೂನ ಸಹಿಸಲೇಬೇಕಾಗಿತ್ತು! ಅವನ ವಿಚಿತ್ರ ಮಾತುಗಳನ್ನು ತಿಣುಕಿ ಅರ್ಥಮಾಡಿಕ್ಕೊಳ್ಳಬೇಕಾಗಿತ್ತು. 
“”ಸರಿ, ಈಗ ಕಂಸ, ಶ್ರೀಕೃಷ್ಣ ಮತ್ತು ಸುಬ್ಬು ಇವರ ನಡುವಿನ ಸಂಬಂಧಗಳೇನು?” ಈಗಲಾದರೂ ವಿಷಯ ಹೇಳಬಹುದೆನ್ನಿಸಿತು.

“”ಕಂಸನ ಸೋದರಳಿಯ ಕೃಷ್ಣ. ನನ್ನ ಸೋದರಳಿಯ ಇವತ್ತು ಬಂದ. ಚಿಂತೆ ತಂದ”
ಸುಬ್ಬು ಮಾತಿನಲ್ಲಿ ಒಗಟಿತ್ತು. ಜಿಗುಟಿತ್ತು. ಅದನ್ನು ನನ್ನ ತಲೆಗೆ ವರ್ಗಾಯಿಸುವ ಲೆಕ್ಕಾಚಾರ ಕಂಡಿತು. ಹುಷಾರಾದೆ. ಸದಾ, ಅವನ ತಲೆನೋವುಗಳಿಗೆ ನಾನು ಟಾರ್ಗೆಟ್ಟಾಗುತ್ತಿದ್ದೆ.
“”ಅಂದ್ರೆ?”
“”ಈಗಿಷ್ಟು ಸಾಕು. ನಿನ್ನ ದರಿದ್ರ ಮೀಟಿಂಗು ಮುಗಿಸಿ ಬಾ”
ತಲೆಯೊಳಗೆ ಹುಳಬಿಟ್ಟ ಸುಬ್ಬು ಎರಡನೆಯ ಸಲ ನುಗ್ಗೇಕಾಯಿ ಸಾಂಬಾರ್‌ ಬಡಿಸಿಕೊಂಡು ಚಪ್ಪರಿಸಿದ. ಮೀಟಿಂಗಿಗೆ ಸಮಯವಾಗುತ್ತಿತ್ತು. ನಾನು ಎದ್ದು ಹೊರಟೆ.
“”ಕಂಸನ ಸೋದರಳಿಯ ಕೃಷ್ಣ. ನನ್ನ ಸೋದರಳಿಯ ಇವತ್ತು ಬಂದ. ಚಿಂತೆ ತಂದ. ಈ ಒಗಟು ಬಿಡಿಸಿಕೊಂಡು ಬಾ. ಬಾಸುಗಳನ್ನ ಬುಟ್ಟಿಗೆ ಹಾಕಿಕೊಂಡು ಎರಡು ಪ್ರಮೋಶನ್ನು ನನಗಿಂತ ಮೊದಲೇ ಗಿಟ್ಟಿಸಿದ ಹಾಗಲ್ಲ.”  ಸುಬ್ಬು ಅಣಕಿಸಿದ.
ಮೀಟಿಂಗಿನಲ್ಲಿ ವಾದ-ವಿವಾದ, ಅಸ್ತ್ರ-ಪ್ರತ್ಯಸ್ತ್ರ, ವಾಗ್ಬಾಣಗಳ ಪ್ರಯೋಗಗಳು ಮುಗಿದಾಗ ಫ್ಯಾಕ್ಟ್ರಿ ಕೆಲಸದ ಸಮಯ ಮುಗಿಯುತ್ತಿತ್ತು. ಎಲ್ಲಾ ಹಿರಿಯಧಿಕಾರಿಗಳು ಫ್ಯಾಕ್ಟ್ರಿ ಸಮಯ ಮುಗಿಯುತ್ತಲೇ ಮನೆಗೆ ಹೋಗಬಾರದೆಂಬ ಅಲಿಖೀತ ಶಾಸನ. ಅದನ್ನು ಮೆಟ್ಟಿ ಹೋಗುವ ಸಾಹಸ ಸಾಮಾನ್ಯವಾಗಿ ಯಾರೂ ಮಾಡುತ್ತಿರಲಿಲ್ಲ-ಸುಬ್ಬು ಹೊರತಾಗಿ.
ನನ್ನ ಡಿಪಾರ್ಟ್‌ಮೆಂಟಿಗೆ ಬಂದೊಡನೆ ಸುಬ್ಬುಗೆ ಫೋನಾಯಿಸಿದೆ.

“”ಸುಬ್ಬು ಸಾರ್‌ ಮನೆಗೆ ಹೋದ್ರು. ಪಾಪ ತುಂಬಾ ಬೇಜಾರಲ್ಲಿದ್ರು” ಸುಬ್ಬು ಕಿರಿಯ ಸಹೋದ್ಯೋಗಿ ಹೇಳಿದ. 
ಸುಬ್ಬು ಪ್ರಸ್ತಾಪಿಸಿದ ಕಂಸನ ವಿಷಯ ನಿಜಕ್ಕೂ ಅವನನ್ನು ಚಿಂತೆಗೆ ಈಡುಮಾಡಿರುವುದು ಖಚಿತವಾಯಿತು! ಆದರೆ ಯಾಕೆ? ಸುಬ್ಬು ಸೋದರಳಿಯ ಮನೆಗೆ ಬಂದರೆ ಸುಬ್ಬುಗೆ ಯಾಕೆ ಚಿಂತೆ? ಸುಬ್ಬು ಒಬ್ಬನೇ ಮಗನಾಗಿದ್ದು ತನ್ನ ತಂಗಿಗೆ ತೌರು ನಡೆಸುತ್ತಿದ್ದ. ಆಕೆಗೆ ಮೊನ್ನೆ ಗಂಡು ಮಗುವಾಯಿತು. ಅದನ್ನು ನನ್ನವಳು ಹೇಳಿದ್ದಳು. ಅದಕ್ಕೇಕೆ ಇವನಿಗೆ  ಆತಂಕ? ಕಂಸ ಮತ್ತು ಕೃಷ್ಣನ ಹೆಸರೇಕೆ ಹೇಳಿದ? ಸುಬ್ಬು ಹರಳೆಣ್ಣೆ ಮುಖ ಕಣ್ಮುಂದೆ ಬಂತು. ನಿಜಕ್ಕೂ ಕೆಟ್ಟದೆನಿಸಿತು. 
ಎಷ್ಟೇ ಕಷ್ಟವಾದರೂ ಅವನಿಗೆ ಸಹಾಯ ಮಾಡಲೇಬೇಕು ಎಂದು ನಿಶ್ಚಯಿಸಿದೆ. ಫ್ಯಾಕ್ಟ್ರಿಯಲ್ಲಿ ಎಷ್ಟೇ ಟೈಟ್‌ ಕೆಲಸವಿದ್ದರೂ ಸುಬ್ಬೂ ಸ್ಥಿತಿಗೆ ಉಪೇಕ್ಷೆ ಮಾಡಬಾರದು. ಆದರೆ ಸುಬ್ಬು ಸಮಸ್ಯೆ ಏನೆಂದೇ ತಿಳಿದಿಲ್ಲ. ಎಲ್ಲಾ ಒಗಟು. 

ಸುಬ್ಬುವಿನ ಮನೆಗೆ ಹೋದರೆ ಆತ ಮನೆಯಲ್ಲಿ ಇರಲೇ ಇಲ್ಲ! 
“”ನಿಮ್ಮ ಸ್ನೇಹಿತನಂಥ ಬೇಜವಾಬ್ದಾರಿ ಮನುಷ್ಯನ್ನ ನಾನು ನೋಡೇ ಇಲ್ಲ. ತಂಗಿ ಬಂದಿದಾಳೆ. ಮನೆಗೆ ಮಗು ಬಂದಿದೆ. ಇವರು ಬೆಳಿಗ್ಗೆ ಹೋದವರು ಇನ್ನೂ ಬಂದಿಲ್ಲ. ಫ್ಯಾಕ್ಟ್ರಿ ಬಿಟ್ಟವರು ಸೀದಾ ಮನೇಗಲ್ವೇ ಬರಬೇಕು? ಪುಂಡು ದನದಂತೆ ಎಲ್ಲಿ ತೊಂಡು ಮೇಯೋಕೆ ಹೋದ್ರೋ? ನೀವಾದ್ರೂ ಸ್ವಲ್ಪ$ಬುದ್ಧಿª ಹೇಳಿ” ಕಣ್ಣಲ್ಲೇ ಬೆಂಕಿ ಕಾರುತ್ತ¤ ಶಾಲಿನಿ ಅತ್ತಿಗೆ ಹೇಳಿದಾಗ ಉಗುಳು ನುಂಗಿದೆ. ಸುಬ್ಬು ಇಂತಹ ಕೆಲಸ ಯಾಕೆ ಮಾಡಿದ? ಬೇಗನೆ ಫ್ಯಾಕ್ಟ್ರಿ ಬಿಟ್ಟವನು ಇನ್ನೆಲ್ಲಿ ಹೋಗಿರಬೇಕು? ಯೋಚಿಸಿದೆ. ಕ್ಲಬ್ಬು ನೆನಪಾಯಿತು. 
ಸುಬ್ಬು ವಿಚಿತ್ರ ಪ್ರಾಣಿ! ನನ್ನ ತಲೆಯಲ್ಲಿ ಹುಳಬಿಟ್ಟು ತಾನು ಕ್ಲಬ್ಬಿನಲ್ಲಿ ಸೊಂಪಾಗಿ ಬಿಯರ್‌ ಸೇವಿಸುತ್ತ, ನಡುನಡುವೆ ಮಸಾಲೆ ಕಡಲೆಬೀಜ ಬಾಯಿಗೆಸೆದುಕ್ಕೊಳ್ಳುತ್ತಿದ್ದ. ಮುಖದ ಮೇಲೆ ಚಿಂತೆ ದಟ್ಟವಾಗಿತ್ತು. 

Advertisement

“”ಫ್ಯಾಕ್ಟ್ರಿ ತಲೆ ಮೇಲಿಂದ ಇಳಿಸಿಬಿಟ್ಯಾ? ಕುಕ್ಕರಿಸು” ಸ್ವಾಗತಿಸಿದ ಸುಬ್ಬು.
ಅವನ ವ್ಯಂಗ್ಯ ನನ್ನನ್ನು ಘಾಸಿ ಮಾಡಲಿಲ್ಲ.
“”ಫ್ಯಾಕ್ಟ್ರಿಯಿಂದ ಯಾಕೆ ಬೇಗ ಹೊರಟೆ? ಮನೆಗೆ ಹೋಗದೆ ಗುಂಡು ಹಾಕ್ತಾ ಕೂತಿದ್ದೀಯಲ್ಲ? ಯಾಕೆ ಈ ಅವತಾರ?” ಕೇಳಿದೆ.
“”ಎಲ್ಲಾದಕ್ಕೂ ಇಲ್ಲಿದೆ ಉತ್ತರ ತಗೊ” ಸುಬ್ಬು ತೊದಲುತ್ತ ಜೇಬಿಂದ ಮಡಿಚಿದ ಒಂದು ಪೇಪರ್‌ ಕೊಟ್ಟ.
ಬಿಡಿಸಿ ನೋಡಿದೆ. ಅದೊಂದು ಜನ್ಮ ಕುಂಡಲಿ.
“”ನಿನ್ನ ಜನ್ಮ ಕುಂಡಲಿ ಯಾವಾಗ್ಲೂ ಜೇಬಲ್ಲೇ ಇಟ್ಕೊಂಡಿರ್ತಿàಯ?” ಅಚ್ಚರಿಯಿಂದ ಕೇಳಿದೆ. 
“”ನನ್ನ ಕುಂಡಲಿಯಿಂದ ಇನ್ನೇನು ಪ್ರಯೋಜನ? ಇದು ನಂದಲ್ಲ”
“”ಮತ್ತಿನ್ಯಾರದ್ದು?”
“”ನನ್ನ ಸೋದರಳಿಯಂದು”
“”ಯೂ ಮೀನ್‌…?”
“”ಮೀನು ಮೊಸಳೇ ಏನೂ ಇಲ್ಲ! ನನ್ನ ತಂಗಿ ಯೋಶದಾ ಮಗೂದು. ಕುಂಡಲಿ ಓದೋಕೆ ಬರುತ್ತಾ?” 
 ಕುಂಡಲಿಯನ್ನ ತುಸು ದೀರ್ಘ‌ವಾಗಿ ನೋಡಿದೆ. ಚೆನ್ನಾಗಿತ್ತು. “”ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದೆ ಮಗು. ಒಳ್ಳೇ ಭವಿಷ್ಯ. ಇದಕ್ಕೆ ಸಂತೋಷ ಪಡೋದು ಬಿಟ್ಟು ಕೊರಗ್ತಿದ್ದೀಯ?”
“”ಕೊರಗದೆ ಇನ್ನೇನು ಡ್ಯಾನ್ಸು ಮಾಡಲೇನೋ? ಶ್ರೀಕೃಷ್ಣ ಕೂಡ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ್ದು”
“”ಒಳ್ಳೇದೇ ಅಲ್ವಾ? ಶ್ರೀಕೃಷ್ಣನಷ್ಟು ಫೇಮಸ್‌ ಆಗೋ ಅಳಿಯ ಅಂದ್ರೆ ಹೆಮ್ಮೆ ಅಲ್ವಾ?”
“”ಆದ್ರೆ… ಶ್ರೀಕೃಷ್ಣ ತನ್ನ ಸೋದರಮಾವ ಕಂಸನ್ನೇ ಕೊಂದನಲ್ಲ.”

ಸುಬ್ಬು ಮಾತಿಗೆ ಬೆಕ್ಕಸಬೆರಗಾದೆ.
“”ಅಂದ್ರೇನು… ನಿನ್ನ ಸೋದರಳಿ¿å ನಿನ್ನನ್ನ…”
“”ಕೊಲ್ಲೋದಿಲ್ಲ. ಆದ್ರೆ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ ಮಕ್ಕಳಿಂದ ಮಾವಂದಿರಿಗೆ ಕೆಟ್ಟದ್ದು ಆಗುತ್ತಂತೆ”
“”ಯಾರು ಇದೆಲ್ಲಾ ಹೇಳಿದ್ದು?”
“”ಯಾರು ಯಾಕೆ ಹೇಳಬೇಕು? ಪುರಾಣವೇ ಹೇಳ್ತಿದೆ”
“”ಇದೇನಾ ನಿನ್ನ ಚಿಂತೆಗೆ ಕಾರಣ?” ಫ‌‌ಕ್ಕನೆ ಗೊತ್ತಾಯಿತು ಸುಬ್ಬು ಚಿಂತೆಗೆ ಕಾರಣ. “”ಇದಕ್ಕೆ ಪರಿಹಾರ ಇದೆ ಕಣೊ. ನಿನಗೆ ಯಾವ ತೊಂದರೇನೂ ಆಗದ ಹಾಗೆ ಒಂದು ಉಪಾಯ ಇದೆ. ಇದು ಟೈಮ್‌ ಟೆಸ್ಟೆಡ್‌” ಮುಂದುವರಿಸಿದೆ.
ಸುಬ್ಬೂನ ನನ್ನ ಮರ್ಜಿಗೆ ಸಿಕ್ಕಿಸಿಕೊಂಡಿದ್ದಕ್ಕೆ ಒಂಥರಾ ಖುಷಿಯಾಯ್ತು. ಅವನನ್ನು ಇನ್ನಷ್ಟು ಗೋಳಾಡಿಸಲೇ ಎನ್ನಿಸಿತು. ಆದರೆ ಮನಸ್ಸು ಬರಲಿಲ್ಲ. 
“”ಈ ಪರಿಸ್ಥಿತಿಗೆ ನಮ್ಮ ಹಿರಿಯರು ಒಂದು ಪರಿಹಾರ ಸೂಚಿಸಿದ್ದಾರೆ. ಮೊದಲ ಸಲ ನೀನು ಮಗೂನ ನೇರವಾಗಿ ನೋಡಬಾರದು!”
“”ಮತ್ತೆ?”
“”ಎಣ್ಣೆಯಲ್ಲಿ ಮಗುವಿನ ಪ್ರತಿಬಿಂಬ ನೋಡಿ ಆಮೇಲೆ ಮಗುವನ್ನ ನೋಡಬೇಕು. ಹೀಗ್ಮಾಡಿದ್ರೆ ಯಾವ ದೋಷವೂ ನಿನ್ನನ್ನ ಕಾಡಿಸೋದಿಲ್ಲ. ಯೂ ವಿಲ್‌ ಬಿ ಸೇಫ್. ಪಾಪ ಕಂಸನಿಗೆ ಹೀಗೆ ಮಾಡೋಕೆ ವಾಸುದೇವ ಛಾನ್ಸ್‌ ಕೊಡಲಿಲ್ಲ”
ಸುಬ್ಬು ಮುಖದಲ್ಲಿ ಇನ್ನೂರು ವಾಟ್‌ ಬಲ್ಬಿನ ಬೆಳಕು ಫ‌ಳ್ಳೆಂದಿತು. ನಗು ಮಿಂಚಿತು.
“”ಅದ್ಸರಿ… ನೀನು ವಿಚಾರವಾದಿ, ಇಂಥಾವೆಲ್ಲಾ ನಂಬೋಲ್ಲ ಅಂತ ಕೊಚೊRàತಿದ್ದೆ?”
“”ಈಗಲೂ ನಂಬೋಲ್ಲ. ನೀನು ನಂಬಿ¤àಯಲ್ಲ ಅದಕ್ಕೇ ನಿನಗೆ ಹೇಳಿದ್ದು” ಸುಬ್ಬು ಬಾಯಿ ಮುಚ್ಚಿಸಿದೆ !

ಎಸ್‌. ಜಿ. ಶಿವಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next