Advertisement

ವಿದ್ಯಾರ್ಥಿಗಳಿಂದ ಹನ್ನೆರಡು ತಾಸು ರಸ್ತೆ ತಡೆ

04:33 PM Jan 26, 2021 | Team Udayavani |

ಕಲಘಟಗಿ: ಜೋಡಳ್ಳಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕಲಘಟಗಿ-ಧಾರವಾಡ ಜಿಲ್ಲಾ ಮುಖ್ಯರಸ್ತೆಯ ಜೋಡಳ್ಳಿ ಕ್ರಾಸ್‌ನಲ್ಲಿ ಸೋಮವಾರ ಬೆಳಗ್ಗೆ 6ರಿಂದ ಸಂಜೆ 6ರ ವರೆಗೂ ರಸ್ತೆತಡೆ ನಡೆಸಿದರು.

Advertisement

ಪ್ರೌಢಶಾಲೆಯ ಆಡಳಿತ ಮಂಡಳಿಗೆ ನೀಡಿದ್ದ ವೇತನಾನುದಾನವನ್ನು ಸರ್ಕಾರ ಹಿಂಪಡೆದಿರುವುದಲ್ಲದೇ, ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಬೇರೆಡೆಗೆ ನಿಯುಕ್ತಿಗೊಳಿಸಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಅವರ ಪ್ರತಿಭಟನೆಗೆ ಜೋಡಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರೂ ಸಾಥ್‌ ನೀಡಿದ್ದರಿಂದ ಪ್ರತಿಭಟನೆ ಕಾವು ಏರುತ್ತಲೇ ಸಾಗಿತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರೂ ವಿದ್ಯಾರ್ಥಿಗಳು ತಮಗಾಗುತ್ತಿರುವ ಸಮಸ್ಯೆಗಳನ್ನು ಅವರಲ್ಲಿ ತೋಡಿಕೊಂಡರು.

ತಮ್ಮ ಹೋರಾಟಕ್ಕೆ ವ್ಯತ್ಯಯ ಮಾಡದಂತೆ ಮನವಿ ಮಾಡಿದರು. ರಸ್ತೆ ತಡೆ ಹೋರಾಟ ಸಂಜೆಯವರೆಗೂ ಸಾಗಿದ್ದರಿಂದ ಇಕ್ಕೆಲಗಳಲ್ಲಿ ಕಿಲೋಮೀಟರ್‌ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಊಟ, ತಿಂಡಿ, ನೀರಿಗೂ ಬೆಳಗಿನಿಂದ ಸಾಯಂಕಾಲದವರೆಗೆ ಪರದಾಡುವಂತಾಯಿತು.

ಇದನ್ನೂ ಓದಿ:ಬಡಮನೆ ಗುಡ್ಡ ಕುಸಿತ ಪ್ರಕರಣ:ಮುಂದುವರಿದ ಮಣ್ಣಿನಡಿ ಸಿಲುಕಿದ ವಿದ್ಯಾರ್ಥಿ ತೆರವು ಕಾರ್ಯಾಚರಣೆ

ಪಟ್ಟು ಬಿಡದ ಮಕ್ಕಳು: ತಹಶೀಲ್ದಾರ್‌ ಅಶೋಕ ಶಿಗ್ಗಾವಿ, ಜಿಲ್ಲಾ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಸಿಪಿಐ ಪ್ರಭು ಸೂರಿನ್‌, ತಾಲೂಕು ಶಿಕ್ಷಣ ಸಂಯೋಜಕ ಪುಟ್ಟಪ್ಪ ಭಜಂತ್ರಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಮನವೊಲಿಕೆಗೆ ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಲಿಖೀತ ಭರವಸೆ ನೀಡುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದು ಹೋರಾಟ ಮುಂದುವರಿಸಿದರು. ಬಳಿಕ ಶಾಸಕ ಸಿ.ಎಂ. ನಿಂಬಣ್ಣವರ ಸ್ಥಳಕ್ಕಾಗಮಿಸಿ ಮನವೊಲಿಕೆಗೆ ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

Advertisement

ಅಪರ ಆಯುಕ್ತರಿಂದ ಮನವೊಲಿಕೆ: ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇ| ಸಿದ್ಧಲಿಂಗಯ್ಯ ಹಿರೇಮಠ ಆಗಮಿಸಿ ಮಾತನಾಡಿ, ವೀರರಾಣಿ ಕಿತ್ತೂರು ಚನ್ನಮ್ಮ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಡಿ ಕಾರ್ಯ ನಿರ್ವಹಿಸುತ್ತಿರುವ ಪ್ರೌಢಶಾಲೆಯನ್ನು ಸರ್ಕಾರದ ಆದೇಶದನ್ವಯ 2006ರಲ್ಲಿ  ಕೆಲ ಕಟ್ಟಳೆಗಳೊಂದಿಗೆ ವೇತನಾನುದಾನಕ್ಕೆ ಒಳಪಡಿಸಲಾಗಿತ್ತು. ಆದರೆ ಆಡಳಿತ ಮಂಡಳಿಯು ಸರ್ಕಾರದ ನಿಭಂದನೆಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 2020ರ ಆ. 8ರ ಆದೇಶದನ್ವಯ ವೇತನಾನುದಾನ ಹಿಂಪಡೆಯಲಾಗಿದೆಯೇ ವಿನಃ ಶಾಲೆಯನ್ನು ಮುಚ್ಚುತ್ತಿಲ್ಲ ಎಂದು ಹೇಳಿದರು. ಅಲ್ಲದೇ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಅಗತ್ಯವಿರುವ ಅನುದಾನಿತ ಸಂಸ್ಥೆಗಳಿಗೆ ನಿಯಮಾನುಸಾರ ಸ್ಥಳ ನಿಯುಕ್ತಿಗೊಳಿಸಲಾಗಿದೆ.  ವಿದ್ಯಾರ್ಥಿಗಳು ಧೃತಿಗೆಡುವುದು ಬೇಡ. ಎಂದಿನಂತೆ ವಿದ್ಯಾರ್ಜನೆಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿ, ಹೋರಾಟ ಹಿಂಪಡೆಯುವಂತೆ ಪ್ರತಿಭಟನಾ ನಿರತರ ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಗ್ರಾಮದ ಪ್ರಮುಖರಾದ ಯಲ್ಲನಗೌಡ ಪಾಟೀಲ, ಅಶೋಕ ಉಣಕಲ್‌, ಅಜ್ಜಪ್ಪ ಗೌರಿ, ಬಸಪ್ಪ ಮೂಶೆಣ್ಣವರ, ಉಮೇಶ ಗೌರಿ, ಜಮನಿಂಗಪ್ಪ ಅಂಗಡಿ, ಮಾರುತಿ ಅಂಗಡಿ, ಪರಮೇಶ್ವರ ಬ್ಯಾಹಟ್ಟಿ, ಮಾರುತಿ ಕೋಳಿ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next