Advertisement

ಮಕ್ಕಳ ಕೈಯ್ಯಲ್ಲಿ ಆಭರಣವಾದ ತರಕಾರಿ 

06:00 AM Aug 31, 2018 | Team Udayavani |

ಮಕ್ಕಳ ಪ್ರತಿಭೆಗಳನ್ನು ಒರೆಗೆ ಹಚ್ಚಿ ಮಾರ್ಗದರ್ಶನ ನೀಡುವಂತಹ ಕೆಲಸ ಶಾಲೆಗಳಲ್ಲಿ ನಿರಂತರ ಆಗದಿದ್ದಲ್ಲಿ ಪ್ರತಿಭೆ ಪೋಲಾಗಿ ಭವಿಷ್ಯ ಮಸುಕಾಗಬಹುದು. ಅವರಲ್ಲಿ ಮೊಳಕೆಯೊಡೆಯುತ್ತಿರುವ ಸೃಜನಾತ್ಮಕ ಕಲೆ-ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಬಹುಮುಖವಾಗಿ ಬೆಳೆಯುತ್ತಾರೆ. ಆದರೆ ಇಂದಿನ ಕಂಪ್ಯೂಟರ್‌ ಯುಗದಲ್ಲಿ ಮೊಬೈಲ್‌, ಇಂಟರ್ನೆಟ್‌ನ ಆಕರ್ಷಣೆಯಿಂದ ಮಕ್ಕಳ ಮನಸ್ಸನ್ನು ವಿಕರ್ಷಿಸಿ ಅವರ ಸೃಜನಶೀಲತೆ ಬೆಳೆಸಲು ಸೂಕ್ತ ತರಬೇತಿಯನ್ನು ನೀಡುವುದೆಂದರೆ ಸುಲಭದ ಕೆಲಸವಲ್ಲ. ಉತ್ಸಾಹಿ ಶಿಕ್ಷಕರು, ಪ್ರೋತ್ಸಾಹಿಸುವ ಆಡಳಿತ ಮಂಡಳಿ ಆಕರ್ಷಕ ಶಿಬಿರಗಳು ನಡೆದಾಗ ಮಾತ್ರ ಅದು ಸಾಧ್ಯ. ಅಂತಹ ವಿಶಿಷ್ಟ ಕಾರ್ಯಕ್ರಮವೊಂದು ಇತ್ತೀಚೆಗೆ ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆಯಿತು. ಮಕ್ಕಳು ತಮ್ಮ ಕೈಚಳಕವನ್ನು ಪ್ರದರ್ಶಿಸಿ ತಾವೇ ಪುಳಕಿತಗೊಂಡರು.

Advertisement

ಯಾವಾಗಲೂ ಪೈಂಟಿಂಗ್ಸ್‌, ಗ್ರೀಟಿಂಗ್‌, ಕ್ಲೇಮಾಡೆಲಿಂಗ್‌, ಕೊಲ್ಯಾಜ್‌, ಮಾಸ್ಕ್, ಪೇಪರ್‌ ಕ್ರಾಫ್ಟ್, ಎಂಬೋಸಿಂಗ್‌, ಗೂಡುದೀಪ ರಚನೆ, ಎಂಬ್ರಾಯಡರಿ ಇತ್ಯಾದಿ ರಚನೆಗಳನ್ನು ಮಾಡಿ ತರಬೇತಿಗೊಂಡಿದ್ದ ಮಕ್ಕಳ ಮನಸ್ಸಿಗೆ ತರಕಾರಿಗಳಿಂದ ಆಭರಣ ರಚನೆಯ ಹೊಸ ಶಿಬಿರ ಬಹಳಷ್ಟು ಮುದಕೊಟ್ಟಿತು. ಕ್ರಾಫ್ಟ್ ಶಿಕ್ಷಕಿ ಪದ್ಮಾ ಆರೂರು ಸಂಪನ್ಮೂಲ ವ್ಯಕ್ತಿಯಾಗಿ ತರಕಾರಿಯಿಂದ ಆಭರಣ ರಚಿಸುವ ಬಗ್ಗೆ ಮಕ್ಕಳಿಗೆ ಸಾಕಷ್ಟು ತರಬೇತಿ ನೀಡಿದರು. ಚಿತ್ರಕಲಾ ಶಿಕ್ಷಕರೂ ಮಾರ್ಗದರ್ಶನವಿತ್ತರು. ಶಿಕ್ಷಕರು ಮಕ್ಕಳೊಂದಿಗೆ ಬೆರೆತು ಆಕರ್ಷಕ ಕಲಾಕೃತಿಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡಿದರು. ನಿತ್ಯೋಪಯೋಗಿ ತರಕಾರಿಗಳಾದ ಬೆಂಡೆ, ತೊಂಡೆ, ಅಲಸಂಡೆ, ಪಡುವಲ, ಕ್ಯಾರೆಟ್‌, ಮೂಲಂಗಿ, ಬಟಾಟೆ, ನೀರುಳ್ಳಿ, ಬೆಳ್ಳುಳ್ಳಿಗಳನ್ನು ಬಳಸಿಕೊಂಡು ಅವುಗಳ ಆಕಾರ ಮತ್ತು ಗಾತ್ರಕ್ಕೆ ಅನುಗುಣವಾಗಿ ತ್ರಿಕೋನ, ಚೌಕ, ಅಂಡಾಕಾರವಾಗಿ ಕತ್ತರಿಸಿ ಕಾಗದದ ಮೇಲೆ ಅರ್ಧವೃತ್ತಾಕಾರವಾಗಿ ಅಂಟಿಸಿ ತಾವು ಬಯಸುವ ಆಭರಣದ ರೂಪವನ್ನು ರಚಿಸಿದರು. 

ಮಧ್ಯೆ ಮಧ್ಯೆ ಶಿಕ್ಷಕಿಯೊಂದಿಗೆ ಸಮಾಲೋಚಿಸಿಕೊಂಡು ಆಕಾರಕ್ಕೆ ಸ್ಪುಟ ನೀಡಿದರು. ಬೇಕಾದೆಡೆ ಧವಸಧಾನ್ಯಗಳಾದ ಅಕ್ಕಿ, ತೊಗರಿ, ಕಡ್ಲೆ, ಅವರೆ, ಹೆಸರು, ಬಟಾಣಿ, ಉದ್ದು, ಸಾಸಿವೆಯನ್ನು ಅವುಗಳ ಬಣ್ಣಕ್ಕೆ ಅನುಗುಣವಾಗಿ ಅಂಟಿಸಿ ವೈಶಿಷ್ಟ್ಯಪೂರ್ಣ ತರಕಾರಿ ಆಭರಣಗಳನ್ನು ಆಸಕ್ತಿಯಿಂದ ರಚಿಸಿದರು. ವಿವಿಧ ನಮೂನೆಯ ಕಿವಿಯೋಲೆ, ಸರ, ಪದಕ , ನೆಕ್ಲೆಸ್‌ಗಳು ತಮ್ಮ ಕೈಯ್ಯಿಂದ ಮೂಡಿದ್ದನ್ನು ಕಂಡು ಪುಳಕಿತಗೊಂಡರು. ಒಬ್ಬರಿಗೊಬ್ಬರು ತೋರಿಸಿಕೊಂಡು ಸಂಭ್ರಮಿಸಿದರು. ಹುಡುಗಿಯರಂತೆ ಹುಡುಗರು ಸಹಾ ಸಕ್ರಿಯರಾಗಿ ಪಾಲ್ಗೊಂಡರು. ಶಿಬಿರದ ಕೊನೆಯಲ್ಲಿ ರಚನೆಗೊಂಡ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಹೆತ್ತವರು, ಶಿಕ್ಷಕರು ಇದನ್ನು ಕಂಡು ವಿದ್ಯಾರ್ಥಿಪ್ರತಿಭೆಗೆ ಮನದೂಗಿದರು. ಈ ಶಿಬಿರಕ್ಕೆ ಇಂಬುಕೊಡುವಂತೆ ಮತ್ತೂಂದು ವಾರದಲ್ಲಿ ಆಭರಣ ಜುವೆಲ್ಲರ್ನವರು ಶಾಲಾ ಮಕ್ಕಳಿಗೆ ತರಕಾರಿಗಳಿಂದ ಆಭರಣ ರಚಿಸುವ ಸ್ಫರ್ಧೆಯನ್ನು ಏರ್ಪಡಿಸಿದ್ದು ಮಕ್ಕಳಲ್ಲಿ ಮತ್ತಷ್ಟು ಕುಶಲತೆ ತುಂಬಿತು. 

ಉಪಾಧ್ಯಾಯ ಮೂಡುಬೆಳ್ಳೆ 

Advertisement

Udayavani is now on Telegram. Click here to join our channel and stay updated with the latest news.

Next